30 May, 2021

ಕುರುಕ್ಷೇತ್ರ...

ಪ್ರೀತಿಯಿದು ಸ್ನೇಹವಿದು
ಬದುಕಿನಾ ಪರಿಪಾಠವಿದು,
ಬಂಧಗಳ ಸಂಬಂಧಗಳ ಸರಪಳಿಯೊಳಗೆ
ಜೀವನವಿದು ಸಂಘರ್ಷವೂ...

ನಿನ್ನೆಗಳ ನೆನಪು ಇದು
ನಾಳೆಗಳ ಕನಸು ಇದು,
ಈ ಲೋಕದಾ ಪಯಣವಿದು
ಸುಖ ದುಃಖಗಳ ಹೋರಾಟವೂ...

ತಪಸ್ಸಿದು ಮನಸೊಳಗೆ
ಭಾವಗಳ ಮಂಥನವೂ,
ನೂರಾರು ಗೊಂದಲದೇ
ಮನಸ್ಸಿಲ್ಲಿ ಕುರುಕ್ಷೇತ್ರವೂ...

ಧರ್ಮವಿದೆ ಇಲ್ಲಿ ಅಧರ್ಮವಿದೆ
ಮನಸೊಳಗೆ ಸತ್ಯವಿದೆ,
ಆಸೆ ಆಕಾಂಕ್ಷೆಗಳ ಸುಳಿಯೊಳಗೆ
ಬದುಕೇ ಇಲ್ಲಿ ಮಹಾಭಾರತ...

14 May, 2021

ಮೇಲೊಬ್ಬನಿರುವ...

ನೂರಾರು ರೂಪ ಹಲವಾರು ಹೆಸರು
ಈ ಸೃಷ್ಠಿಯೊಳಗೆ ನಿನ್ನ ಕಾಣಲು,
ಜಗವೇ ನೀನಾಗಿರಲು ನೋಡಲಿಲ್ಲ ಇಲ್ಲಿ
ನಾನು ನನ್ನದೆಂಬ ಹಮ್ಮಿನೊಳಗೆ...

ನೂರಾರು ಪೂಜೆ ವೃತಗಳೆಲ್ಲಾ ನಿನ್ನ ಹೆಸರಲಿ
ಪ್ರೀತಿ ಇರಲೇ ಇಲ್ಲ ಅಲ್ಲಿ ನಿನ್ನ ಸ್ಮರಣೆಯೊಳು,
ಭಕ್ತಿ ಸೋತು ಹೋಯ್ತು ಅಡಂಭರದೊಳು
ಮನದ ಬಾಗಿಲ ತೆರೆಯಲಿಲ್ಲ ನಾನೆಂಬ ಹುಚ್ಚಿನೊಳು...

ಬೆಳಗಿ ನಿಂತೆ ದೀಪವೊಂದ ಕತ್ತಲೆಯೊಳು 
ಮನದ ಪರದೆ ಸರಿಸ ಮರೆತೆ ಅಲ್ಲಿ ನಾನು,
ಮನದ ತುಂಬಾ ಕತ್ತಲೆ ಇರಲು ನಿನ್ನ ಹುಡುಕಿದೆ
ನಿನ್ನ ಗೈರು ಕತ್ತಲೆಯೆಂಬ ಸತ್ಯ ಮರೆತೇ ಹೋಗಿದೆ...

ಕಾಯಲೆಂದೇ ನೀನಿರುವೆಯೆಂದು ಸುಮ್ಮನಿದ್ದೆ ನಾನು
ಕರ್ಮದೊಳಗೆ ನೀನಿರುವೆಯೆಂಬ ಸತ್ಯ ಮರೆತು,
ಪರೀಕ್ಷೆ ನಿನ್ನದು ಪರಿಹಾರ ನೀನೆಂಬ ಜಂಭದೊಳು
ನನ್ನತನವ ಮರೆತು ಮುಳುಗಿ ಹೋದೆ ಅಂಧಕಾರದೊಳು...