21 May, 2019

ಮುಕುಂದಾ...

ಹಾಡುವೆ ಬಾ ನಾನು ಲಾಲಿ ಪದ
ಮಗುವಾಗಿ ಮಡಿಲೇರು ನೀ ಇಲ್ಲಿ,
ನನ್ನೆದೆಯಾ ಬೃಂದಾವನದಿ ನಲಿದಾಡೆ
ಬಾ ಬೇಗ ನೀ ಓ ಮುದ್ದು ಕೃಷ್ಣಾ...

ನೀನಿಲ್ಲದೇ ಕತ್ತಲಾಗಿದೆ ಬದುಕೆಲ್ಲಾ
ಮತ್ತೊಮ್ಮೆ ನೀ ಬಾರೋ ಬೇಗ,
ಮುದ್ದಿಸಬೇಕು ನಾ ನಿನ್ನ ಮನಸಾರೆ
ಬಂದುಬಿಡು ಕಾಯಿಸದೆ ನೀನೀಗ...

ಮನಸೆಲ್ಲಾ ಬರಡಾಗಿದೆ ಈಗ
ನಿನ್ನಾ ನಗುವಾ ಕಾಣದೆ ಇಲ್ಲಿ,
ಹಚ್ಚು ಬಾ ನಗುವಿನ ದೀಪ
ಮನಸುಗಳ ಮನೆಯಲ್ಲಿ ನೀನು...

ನೀನೇ ಮಗುವಿಲ್ಲಿ ನೀನೇ ನಗುವಿಲ್ಲಿ
ನೀನೇ ಈ ಗೋಕುಲದ ಪರಪಂಚ,
ಪ್ರೀತಿಸೋ ಹೃದಯಗಳು ಕಾಯುತಿವೆ ನಿನಗಿಲ್ಲಿ
ಕಣ್ಣೀರು ಕರಗೋ ಮುಂಚೆ ಬರಬೇಕು ನೀನಿಲ್ಲಿ...

ಮಾಯೆಯನು ಕರಗಿಸಿ ಮಗುವಾಗು ಬಾ
ಮಡಿಲೇರಿ ಆಡು ಮುದದಿಂದ,
ಕಣ್ಣೀರ ಒರೆಸಿ ಪನ್ನೀರ ಚೆಲ್ಲಿ
ಪ್ರೀತಿಯ ಲೋಕವ ತೆರೆದಿಡು ಬಾ...

16 May, 2019

ವಿದಾಯ...

ಯಾವ ಜನ್ಮದ ಶಾಪವೋ
ಯಾರು ಮಾಡಿದ ಪಾಪವೋ,
ನಾಲ್ಕು ದಿನಕೆ ನೀನು ಬಂದೆ ಬಾಳಿಗೆ
ಹೊರಟು ಹೋದೆ ಮತ್ತೆ ಬಾರದ ನಿನ್ನೂರಿಗೆ...

ವಿಧಿಯ ಯಾವ ಕಳ್ಳಾಟವೋ
ನಿನ್ನ ಇಲ್ಲಿ ನರಳಾಡಿಸಿತೋ,
ಯಾವ ಕಣ್ಗಳ ಕ್ರೂರ ದೃಷ್ಟಿಯೋ
ಏಳು ಜನ್ಮಗಳ ನೋವನಿಲ್ಲಿ ಉಣಿಸಿತೋ...

ಯಾವ ಶಾಪದ ಮುಕ್ತಿಗೆ
ನೀನು ಧರೆಗಿಳಿದು ಬಂದೆಯೋ,
ಯಾರ ಕೇಳಲಿ ಈಗ ನಾ
ನೀನು ದೇವ ಯಕ್ಷ ಕಿಂ ಪುರುಷನೋ...

ನಾಲ್ಕು ದಿನದ ಮಮತೆ ಪಡೆಯಲು
ಬಂದು ನೀನು ಹೋದೆಯಾ,
ನೀನು ಆಡಿದ ಮಡಿಲದು
ಖಾಲಿಯಾಗಿದೆ ನೋಡು ಬಾ...

ವಿಧಿಯೇ ನಾನು ಏನು ಕೇಳಲಿ ನಿನ್ನಲಿ
ಕರುಳ ಹಿಂಡುವ ಈ ನೋವಲಿ,
ಬದುಕು ಇಲ್ಲಿ ನಶ್ವರ ಅನ್ನೊದಂತೂ ಸತ್ಯವೇ
ಆದರೂ ನಿನಗಿದೆಯಿಲ್ಲಿ ಕಣ್ಣೀರಿನ ಶಾಪವೂ...