26 January, 2020

ಭಾರತ...

ಸಾವಿರಾರು ವೇಷ ಭಾಷೆ ಇದ್ದರೂ
ಬೆಳಗುತಿಹುದು ಭಾರತ,
ನೂರಾರು ಜಾತಿ ಧರ್ಮ ಇದ್ದರೂ
ಬೆಳೆಯುತಿಹುದು ನನ್ನ ಭಾರತ...

ಶಾಂತಿಯಿಂದ ಜಗವ ಗೆದ್ದ
ಬುದ್ಧನಿದ್ದ ಭಾರತ,
ಕ್ರಾಂತಿಯಿಂದ ದಾಸ್ಯ ಮುಕ್ತಗೊಳಿಸೇ
ವೀರರಿದ್ದ ನನ್ನ ಭಾರತ...

ಅಹಿಂಸೆಯಿಂದ ಮನವ ಗೆದ್ದ
ಬಾಪುವಿದ್ದ ಭಾರತ,
ಸ್ವಾತಂತ್ಯ್ರ ಕಹಳೆ ಮೊಳಗಿಸಿದ
ನೇತಾಜಿ ಇದ್ದ ನನ್ನ ಭಾರತ...

ರಾಮಕೃಷ್ಣ ಪರಮಹಂಸ ನಡೆದಾಡಿದ
ಪುಣ್ಯ ಭೂಮಿ ಭಾರತ,
ಜಗಕೆ ಸನಾತನದ ಮಹಿಮೆ ಸಾರಿದ
ವೀರಸಂತ ವಿವೇಕರಿದ್ದ ನನ್ನ ಭಾರತ...

ಇದು ಋಷಿ ಮುನಿಗಳ ಭಾರತ
ವೇದ ಮಂತ್ರಗಳ ಭೂಮಿಯೂ,
ಸತ್ಯ ಧರ್ಮಗಳ ಮಡಿಲು ಈ ಭಾರತ
ಅಧರ್ಮ ಅನ್ಯಾಯಗಳ ಮೆಟ್ಟಿ ನಿಲ್ಲೋ ಭಾರತ...

11 January, 2020

ನೆರಳು...

ಕತ್ತಲು ಬೆಳಕಿನ  ಆಟವಿದು
ಬದುಕೇ ನೀ ನಡೆಸುವ ರೀತಿಯದು,
ಬೆಳಕ ಕಾಣಲು ಮನ ಹಂಬಲಿಸೇ
ಮಗ್ಗಲು ಬದಲಿಸುವೆ ನೀ ಏತಕೇ...

ಕತ್ತಲೆಂದರೆ ಭಯವೇನು ಇಲ್ಲಾ
ನಕ್ಷತ್ರಗಳ ನೋಡುವ ತವಕವಿದೆ,
ನೀ ತೋರಿಸೋ ಕತ್ತಲೆಯಲಿ
ಕೆಲವೊಮ್ಮೆ ನಕ್ಷತ್ರಗಳು ಮಿನುಗುವುದೇ ಇಲ್ಲಾ...

ಖಾಲಿತನದ ಕತ್ತಲದು
ನೆರಳು ಕೂಡ ಜೊತೆಯಾಗುವುದೇ ಇಲ್ಲಾ,
ಏನೂ ಕಾಣದೆ ಭ್ರಮೆಯೊಳಗೆ
ಮನಸು ಬೆದರುವುದು ಸುಮ್ಮನೆ...

ನೀ ತೋರಿಸೊ ಬೆಳಕದುವೇ
ಮಳೆಗಾಲದ ಕೋಲ್ಮಿಂಚಂತೆ,
ದೃಷ್ಟಿ ಹಾಯಿಸೋ ಮುಂಚೆನೇ
ಕರಗಿ ಹೋಗುವುದು ಅಂಧಕಾರದೊಳು...

ಕತ್ತಲ ಒಳಗೂ ಇಲ್ಲಿ ಬೆಳಕಂತೆ
ಬೆಳಕಿನ ಸುತ್ತಾ ಕತ್ತಲೆಯೂ,
ಬದುಕೇ ನೀ ತೆರೆದಿಡುವ ವಿಸ್ಮಯಕೆ
ಹಗಲು ಇರುಳಿನ ನೆರಳಿಲ್ಲಾ...