27 August, 2023

ಮಾನಸ ಸರೋವರ...

ಕಾಣದಿರುವ ಲೋಕಕೆ
ಪಯಣಿಸೋಕೆ ತವಕವೂ,
ಇರುವ ಒಂದು ಮನಸಿಗೂ
ನೂರ ಒಂದು ಬಾಗಿಲು...

ಕೋಪ ತಾನು ಉರಿಯಲು
ಮನಸು ಇಲ್ಲಿ ಯಜ್ಞಕುಂಡವೂ,
ಅನುಮಾನವಿಲ್ಲಿ ಕಾಡಲು
ಮನಸು ಮರುಭೂಮಿಯೂ...

ಅವಮಾನವನ್ನು ಸಹಿಸುತಾ
ಮನಸು ಮುಚ್ಚಿದ ಕೆಂಡವೂ,
ಸುಳ್ಳಿಗೆ ಸಾಕ್ಷಿಯಾಗುತಾ ಸಾಗುತಾ
ನಿತ್ಯವೂ ಸಾವು ಆತ್ಮಕೆ...

ಕನಸುಗಳು ಇಲ್ಲಿ ಕಾಡಲು
ಮನಸು ನೀಲ ಸಾಗರ,
ಕನಸ ನೆರಳಲ್ಲಿ ನಗಲು
ಬದುಕಿಗೆ ಚೈತನ್ಯವೂ... 

14 August, 2023

ನುಡಿ ನಮನ...

ಜಯತು ಜಯತು ತಾಯಿ ಭಾರತಿ
ನಿನಗೆ ಪ್ರೀತಿಯ ಆರತಿ,
ಸಿಂಧು ಗಂಗೆ ಯಮುನೆಯಿಂದ
ಪ್ರತಿನಿತ್ಯ ನಿನಗೆ ಅಭಿಷೇಕವೂ...

ಹಿಮಾಲಯವೇ ಮುಕುಟಮಾಲೆ
ಹಿಮವೇ ನಿನ್ನ ಮುಕುಟ ರತ್ನವೂ,
ಮಹಾ ಸಾಗರವೇ ಪಾದ ತೊಳೆಯುತಿರಲು
ಪರಮ ಪುನೀತೆ ನೀನು ಭಾರತಿ...

ಭರತನನ್ನು ಪಡೆದ ಪುಣ್ಯಗರ್ಭ ನಿನ್ನದು
ರಾಮ ಕೃಷ್ಣ ಬುದ್ಧ ಮಹಾವೀರರ ಜನ್ಮದಾತೆ ಭಾರತಿ,
ವೀರಪುತ್ರರಿಗೆ ಜನ್ಮವಿತ್ತ ವೀರಮಾತೆಗೆ ವಂದನೆ
ಭುವಿಯ ಬೆಳಗೊ ಪುಣ್ಯವಂತೆ ನೀನೇ ವಸುಂಧರೇ...

ವೇದಗಳಿಗೆ ತೊಟ್ಟಿಲಾದೆ ನೀನು
ಅರಳಿದವು ನಿನ್ನ ಮಡಿಲೊಳು ಮಹಾಕಾವ್ಯಗಳು,
ಜಗಕೆ ಜ್ಞಾನ ಹಂಚಿ ನೀನಾದೆ ಜ್ಞಾನವಿಶಾರದೇ
ಶಾಂತಿಯಿಂದ ಕ್ರಾಂತಿ ಮಾಡಿ ಗುರುವು ನೀ ವಿಶ್ವಕೆ...