29 May, 2014

ಹುಡುಕಾಟ...


ಭಾವನೆಗಳು ಬತ್ತಿದೆದೆಯಲಿ
ಪ್ರೀತಿಯನರಸಿ ಹೊರಟಿರುವೆ
ಸತ್ತ ನರನಾಡಿಗಳಿಗೆ
ಮತ್ತೆ ಚೈತನ್ಯ ತುಂಬುವಾಸೆಯಲಿ.

ಅಘೋರಿಗಳ ಅಜ್ಞಾತವಾಸದಲಿ
ನಿರ್ವಿಕಾರಿ ನಿರ್ದಯಿಗಳೆದೆಗಳಲಿ
ಸತ್ತ ಭಾವನೆಗಳ ಬಡಿದೆಚ್ಚರಿಸುವ
ತುಂತುರು ಸಿಂಚನ ಈ ಪ್ರೀತಿಯ.

ನಂಬಿಕೆಗೆ ಗೋರಿ ಕಟ್ಟಿ
ಅಪನಂಬಿಕೆಯಲೇ ಬದುಕುತ್ತಿರುವ
ಅಜ್ಞಾನಿಗಳೆದೆಯಲ್ಲಿ
ವಿಶ್ವಾಸವ ಬೆಳೆಸುವ ಚಿರಸ್ಮರಣೀಯ ಪ್ರೀತಿಯ.

ದ್ವೇಷದಿಂದ ಕತ್ತಿ ಮಸೆಯುತಿರುವ
ರಕ್ತಕ್ಕಾಗಿ ಹಪಹಪಿಸುತಿರುವ
ಮೂಢ ಮನಸುಗಳಲಿ
ಸ್ನೇಹದಾ ಸಣ್ಣ ಚಿಲುಮೆಯೊಂದ.

ಜಾತಿ ಧರ್ಮಗಳ ಗೋಡೆಯ ಕಟ್ಟಿರುವ
ಮತಾಂಧ ಮನಸುಗಳೊಳಗೆ
ಮಾನವೀಯತೆಯ ತತ್ವ ಬೆಳಗುವ
ನಿತ್ಯ ನೂತನ ಜೀವನ ಪ್ರೀತಿಯ...

ಯಾರವಳು...



ಮನಸಿನೊಳಗಿನ ಭಾವವದು
ಹೇಳಿ ಹುಟ್ಟಲೇ ಇಲ್ಲ,
ಪ್ರೀತಿಯ ಅರ್ಥವದ
ತಾನು ಹುಡುಕುತಿತ್ತು.

ಭುವಿಗೆ ತಾಯಿಯ ಹೆಸರ
ಕೊಟ್ಟಿಹ ಮನಸದು,
ಮನಸ ಕೂಸಿಗೆ ಒಂದು
ಹೆಸರ ಹುಡುಕುತಿತ್ತು.

ಹೆಣ್ತನವ ತುಂಬಿದ ಭಾವವದು
ತನಗೊಂದು ಹೊಸ ಹೆಸರ ಹಂಬಲಿಸುತಿತ್ತು,
ಮನಸ ಆ ಪ್ರೀತಿಗೆ ನಾನು
ಅವಳ ಹೆಸರನ್ನೇ ಇಟ್ಟುಬಿಟ್ಟೆ.

ರೆಕ್ಕೆಬಿಚ್ಚಿ ಹಾರುವ
ಕನಸುಗಳವು ಹರಡಿದವು,
ಮನದಗಲ ಅವಳದೇ ಹೆಸರ
ಜೊತೆಯಲ್ಲಿ ಹೊತ್ತು.

ನಾನೆಂದೂ ಹುಡುಕಲಿಲ್ಲ
ಮನಸ ತುಂಬಿದ ಆ ಭಾವವ,
ಒಲುಮೆಯಾ ಹೆಸರೊಂದ ಬಿಟ್ಟು
ಜೊತೆಯಾಗ ಬಯಸುವ ಜೀವವೊಂದ.

ನನ್ನೊಳಗಿನ ಅವಳು ಅದು
ಬರೀಯ ಸ್ನೇಹವಷ್ಟೇ,
ಸಲುಗೆ ಮೀರದ ಅವಳು
ನನ್ನ ಮನಸ ಪ್ರೀತಿಯಷ್ಟೇ.

ಹುಡುಕಾಟ...


ಪ್ರೀತಿಯ ಮಕರಂ
ವ ಚೆಲ್ಲುತಾ
ನನಗಾಗಿ ಅರಳೋ ಸುಮವದು ಯಾವುದೋ

ತುಟಿಯಂಚಲಿ ಮಿನುಗುವಾ
ನಸುನಗೆಯದು ಯಾವುದೋ


ಕಣ್ಣಂಚಲಿ ನೂರುಭಾವವ ಬೆರೆಸಿದ
ಒಲವ ನೋಟವು ಯಾವುದೋ

ಸುಮ್ಮ ಸುಮ್ಮನೆ ನಗಿಸುವಾ
ನೆನಪ ಕಚಗುಳಿಯದು ಯಾವುದೋ

ನೋವಿಗೆ ನಗುವ ಬೆರೆಸಿ
ಹರಸೋ ಮನಸದು ಯಾವುದೋ

ಮನಸ ತುಂಬುವ ಕನಸಿಗೆ
ಸ್ಪೂರ್ತಿಯ ಸೆಲೆಯದುವು ಯಾವುದೋ

ಎನ್ನೆದೆಯಾ ಸಾಗರದ ಭೊರ್ಗರೆತವ ಮೀರಿ
ಒಡಲ ಸೇರುವ ನದಿಯದು ಯಾವುದೋ.

ದ್ವೇಷ...


ಮುಷ್ಟಿಯಗಲದ ಹೃದಯದೊಳಗೆ
ದ್ವೇಷದ ಬೀಜವ ಬಿತ್ತಿದವರಾರು,
ಹರಿಯುತಿದೆ ನರನಾಡಿಗಳಲಿ
ದ್ವೇಷದ ಬೆಂಕಿಯದು ಅಜ್ಞಾತವಾಗಿ.

ತಿನ್ನುವ ಅನ್ನವದು ಕಲಿಸಿತೆ ಮನುಜಗೆ
ಮಣ್ಣಿನ ಗುಣವದು ಇರಬೇಕಿತ್ತಲ್ಲಾ,
ಸತ್ತರು ಬಿಡದ ದ್ವೇಷದ ಬೆಂಕಿ
ಬೂದಿಯಾಗಬೇಕಿತ್ತು ಮಣ್ಣಿನ ಗುಣದೊಳು.

ಹರಿಯುವ ನೀರದು ಕುಡಿಸಿತೆ ವಿಷವ
ದ್ವೇಷವೆಂಬ ಅಜ್ಞಾನದ ಹಾಲಾಹಲ,
ಕುಂತರೂ ನಿಂತರೂ ಕುದಿಯುವ ಜ್ವಾಲೆಯು
ಆರಿ ಹೋಗಬೇಕಿತ್ತು ನೀರಿನ ಗುಣಕೆ.

ಉಸಿರಾಡೋ ಗಾಳಿಯು ಬೆರೆಸಿತೆ
ಮಂದ ಬುದ್ಧಿಯ ದ್ವೇಷದ ಭಾವವ,
ಹಿಂಸೆಯ ಹರಡುವ ಧೂರ್ತ ಬುದ್ಧಿಯನು
ತಂಪಾಗುವ ಗುಣ ಜೊತೆಗೇ ಇರಲು ಗಾಳಿಯು ತಾನು ಹೇಗೆ ಹರಡೀತು.

ಮಣ್ಣು ಅನ್ನ ನೀರು ಗಾಳಿ ಇವು ಯಾವುವು ಹರಡಲೇ ಇಲ್ಲ
ಮತ್ತೆ ಹೇಗೆ ತಾನೇ ಹರಡುತಿಹುದು ದ್ವೇಷದ ಜ್ವಾಲೆ,
ಮೂಢ ಮನುಜನ ಎದೆ ಎದೆಯೊಳಗೆ
ಪ್ರೀತಿಯ ಕೊರತೆಯ ಕಾರಣವಿದ್ದರೂ ಇರಬಹುದೇ.