30 June, 2014

ಹವಿಸ್ಸು...



ಎಲುಬಿನ ಗೂಡಿಗೆ ಚರ್ಮದ ಹೊದಿಕೆಯ ಮಾಡಿಹ
ಪಂಚಭೂತಗಳಿಗೆ ಹವಿಸ್ಸನ್ನರ್ಪಿಸಬೇಕು,
ಅರಿಷಡ್ವರ್ಗಗಳ ದಮನಿಸೆ ನಾನು
ದೇಹವ ಯಜ್ಞಕುಂಡವಾಗಿಸಬೇಕು.

ಮನಸಿನ ಹಿಡಿತವ ತಪ್ಪಿಸುವ ಕಾಮವ
ಅಗ್ನಿಗೆ ಅರ್ಪಿಸಬೇಕು,
ಕಾಮದಹನ ಮಾಡುತ ಜೊತೆಯಲಿ
ಮನುಜತೆಯ ಪ್ರೀತಿಯ ಬೆಳಗಬೇಕು.

ಮನಸನು ಸುಡುವ ಕ್ರೋಧದ ಬೆಂಕಿಗೆ
ನೀರನು ಸುರಿಯಬೇಕು,
ಹೊತ್ತಿ ಉರಿಯುವ ಮನಸನು ಇಂದು
ಶಾಂತಗೊಳಿಸಬೇಕು.

ಮನಸಲಿ ಮಂಡಿಗೆ ತಿನ್ನುವ ಮದವನು
ಮಣ್ಣಲಿ ಹೂತು ಬಿಡಬೇಕು,
ಮತ್ತೆ ಚಿಗುರಿ ಬರದಿರುವಂತೆ
ಅಷ್ಟಬಂಧವ ಬಿಗಿಯಬೇಕು.

ಪರರ ನೋಡಿ ಕರುಬುವ ಮಾತ್ಸರ್ಯವ
ಗಾಳಿಯಲಿ ತೇಲಿ ಬಿಡಬೇಕು,
ಉಸಿರಿಗೂ ಸಿಗದ ಎತ್ತರಕೆ
ಅದರ ಕಳುಹಿಸಿಕೊಡಬೇಕು.

ಮನಸಲಿ ಕಳವಳಗೈಯ್ಯುತಲಿರುವ
ಲೋಭ ಮೋಹಗಳ ಆಕಾಶಕೆ ತೇಲಿಬಿಡಬೇಕು,
ದುರಾಸೆಯ ದೂರ ಸರಿಸುತಾ
ಮೋಹದ ಛಾಯೆಯಿಂದ ಪಾರಾಗಬೇಕು.

ನಿವೇದನೆ...



ನೀನೊಂದು ಯುಗಳದ ಗೀತೆ
ಪದವಾಗಬಹುದೇ ನಾ ನಿನ್ನೊಳು.

ಅರಿಯಲಾರೆ ನಾ ನಿನ್ನಂತರಂಗವ
ತುಂಬಬಹುದೇ ನಾನದನು ಭಾವದಿಂದಲಿ.

ಪ್ರೇಮಿಯಾಗಬಲ್ಲೆನು ನಾ ನಿನ್ನೊಲವಿಗೆ
ಜೀವ ತುಂಬಬೇಕಿದೆ ಪ್ರೀತಿಯೆದೆಯೊಳಗೆ.

ನೀನೊಂದು ಕಾವ್ಯಕನ್ನಿಕೆ
ಇಂದ್ರ ಚಂದ್ರನಾಗಬಲ್ಲೆನೇ ನಾ ನಿನ್ನೊಳಗೆ.

ಹೊತ್ತು ತರಬಲ್ಲೆ ನಾ ಮೇಘ ಸಂದೇಶ
ಬರಬಹುದೇ ಬಾಳಿನೊಳು ಪ್ರೀತಿ ಮುಂಗಾರು.

ಮೌನ ಮೆರೆದ ಗೆಳತಿಯೇ
ಕಲಿಸಬಹುದೇ ನಾನೀಗ ಪ್ರೀತಿಯ ಭಾಷೆಯ.

ನನ್ನೊಳು ಉಸಿರಾಗಿ ಬೆರೆತ ಮನಸೇ
ಬಂದು ಸೇರಬಹುದೇ ನಿನ್ನೊಲವಪ್ಪುಗೆಯಲಿ.

ಹೃದಯ ಮಂದಿರದಿ ವಿರಾಜಿಪ ಪ್ರೇಮ ದೇವತೆಯೇ
ಸಿಗಬಹುದೇ ನನಗಪ್ಪಣೆ ನಿನ್ನೊಲವ ಪೂಜೆಗೆ.

13 June, 2014

ಪುಣ್ಯಭೂಮಿಗೆ...



ಬೆಳಗೆದ್ದು ಮೊದಲ ನಮನ
ಈ ಪುಣ್ಯಭೂಮಿಗೆ,
ಮನುಜ ಜನ್ಮವನಿತ್ತ
ಈ ಕರ್ಮಭೂಮಿಗೆ.
ಪ್ರಕೃತಿಯಲಿ ದೇವರ ತೋರಿದ
ಪವಿತ್ರ ಭೂಮಿಗೆ,
ಕರವ ಜೋಡಿಸುವೆ ನಾನು
ಈ ದೇವ ಭೂಮಿಗೆ.
ಸಂಸ್ಕೃತಿಯ ತೊಟ್ಟಿಲು
ನನ್ನ ಮಣ್ಣಿದು,
ಜಗಕೆ ಬೆಳಕ ತೋರಿದ
ಪುಣ್ಯ ಭೂಮಿಯೂ.
ಋಷಿ ಪುಂಗವರ ತಪೋಭೂಮಿ
ನನ್ನ ನಾಡಿದು,
ಶಿರವ ಭಾಗಿ ನಮಿಸುವೆನು
ಈ ಭುವಿಯ ಸ್ವರ್ಗಕೆ.
ವೇದಗಳ ತವರು ಇದು
ಜ್ಞಾನ ಭೂಮಿಯೂ,
ಯೋಗ,ಆಯುರ್ವೇದಕೆ
ತವರು ನಾಡಿದು.
ಕೋಟಿ ದೇವರುಗಳ ಪೂಜಿಪ
ದೇವಮಂದಿರವೂ,
ಹೆಜ್ಜೆ ಹೆಜ್ಜೆಗೂ ನಮಿಪೆ
ಈ ಪುಣ್ಯಭೂಮಿಗೆ.
ವೀರ ಧೀರರಾಳಿದ
ಭರತ ಭೂಮಿಗೆ,
ಹೆಮ್ಮೆಯಿಂದ ನಮಿಸುವೆ
ಶೌರ್ಯ ಮೆರೆದ ಮಣ್ಣಿಗೆ.

ಹಾಗೇ ಸುಮ್ಮನೆ...



ಮಾಯೆಯಂಥ ಬದುಕಲಿ
ಮನಸಿಗೇನೋ ನೂರು ಹಂಬಲ,
ಬುದ್ಧನಾಗಲು ಬಿಡದ ಮನಸಲಿ
ಕನಸುಗಳ ಸಪ್ತ ಸಾಗರ.
ಭಾವ ರಾಗಗಳ ಮಿಲನದಿ
ಬದುಕೇ ಏನೋ ಸುಂದರ,
ಪ್ರಬುದ್ಧನಾಗಲು ಹಂಬಲಿಸುವ
ಮನಸಿಗಿಲ್ಲುಂಟು ನೂರು ಕಳವಳ.
ಬಿಡದೆ ಕಾಡುವ ಕನಸಿಗೂ
ಬಿಡುವು ಬೇಡಿದೆ ಮನಸೀಗ,
ನೆನಪುಗಳ ಜೊತೆಗಿನ ಪಯಣಕೆ
ಒಲ್ಲೆ ಎಂದಿದೆ ಬದುಕೀಗ.
ಹುಟ್ಟು ಸಾವಿನ ಅನಿವಾರ್ಯದಂತೆ
ಜೊತೆಯಾಗಿದೆ ಮನಸಿನ ತುಮುಲ,
ಯಾಕೋ ಏನೋ ತಿಳಿಯದಾಗಿದೆ
ಈ ಹೊಸ ಬಗೆಯ ತಳಮಳ.
ಭಾವ ಮರೆತ ಕಾವ್ಯವಾಗಿದೆ
ಮನಸು ತನ್ನ ಹಂಬಲಕೆ,
ವಿರಹ ತುಂಬಿದ ಕಾದಂಬರಿಯಂತೆ
ಕಾಡುತಿದೆ ಈ ಬದುಕು ಚಂಚಲ.
ಭರವಸೆ ಬೆರೆತ ಕನಸುಗಳು
ದೂರ ಸರಿದಿವೆ ಸುಮ್ಮನೆ,
ಬದುಕ ಬರೆಯುವ ಪ್ರೀತಿಗೂ
ಹೇಳಬೇಕಿದೆ ಕೈ ಹಿಡಿದು ಮುನ್ನಡೆಸಲು.