29 March, 2015

ಕವಿತೆಯೊಂದು ಬರೆಯಬೇಕು...


ಮನಸ ಮಾತುಗಳ ಇಲ್ಲಿ ಬರೆದಿಡಬೇಕು
ಭಾವಗಳ ಬಿಚ್ಚಿ ಪದಗಳಲಿ ಕುಣಿಸಬೇಕು,
ಕನಸುಗಳ ಇಲ್ಲಿ ಕರೆತರಬೇಕು
ಒಲವಿನ ಪದಗಳಲಿ ಬಂಧಿಸಿಡಬೇಕು.


ನೋವು ನಲಿವುಗಳ ಬಿಚ್ಚಿಡಬೇಕು
ಹಸಿವೆಯಾ ದುಖಃವನು ಮರೆಸಬೇಕು,
ಬರಿದಾದ ಮನಗಳಲಿ ಒಲವನ್ನು ಬಿತ್ತಬೇಕು
ಸೋತ ಬದುಕಲಿ ಸ್ಥೈಯ೯ವ ತುಂಬುತಿರಬೇಕು.

ನಾಳೆಗಳ ಆಗಸವನು ಇಂದು ತೆರೆದಿಡಬೇಕು
ಆಸೆ ಕಂಗಳ ನಕ್ಷತ್ರಗಳು ಮಿನುಗುತಿರಬೇಕು,
ನಂಬಿಕೆಯ ಗೂಡನೂ ಮತ್ತೆ ಕಟ್ಟಬೇಕು
ಬದುಕ ಪ್ರೀತಿಗೆ ಮುನ್ನುಡಿ ಬರೆಯಬೇಕು.

ಅನುದಿನವು ಹೊಸತನವ ತೋರಬೇಕು
ಕಲ್ಲು ಹೃದಯಗಳಲೂ ಪ್ರೀತಿಯ ಹೂವು ಬೆಳೆಯಬೇಕು,
ದ್ವೇಷ ಅಸೂಯೆಗಳ ಕರಗಿಸಿ ನಗುತಿರಬೇಕು
ಕದನವಿಲ್ಲದ ಬದುಕ ಬರೆದುಬಿಡಬೇಕು.

ಸವಿನೆನಪುಗಳ ಇಲ್ಲಿ ಮೆರೆಸಬೇಕು
ಕಹಿನೆನಪುಗಳ ಮೆಟ್ಟಿ ನಿಲ್ಲಬೇಕು,
ಹೊಸ ಜೀವನಕೆ ಮುನ್ನುಡಿಯ ಬರೆಯಬೇಕು
ಬದುಕಿನ ಕವಿತೆಯೊಂದ ಬರೆಯಬೇಕು...

22 March, 2015

ಒಲವೊಂದೇ ಸಾಕು...


ಕಾರಣವಿನ್ನೂ ಬೇಕಿಲ್ಲಾ ಹುಡುಗಿ
ನಿನ್ನಾ ಮುಗ್ಧತೆಯೊಂದೇ ಸಾಕಲ್ಲ,
ಮನಸು ಮಿಡಿಯೋಕೆ, ತಕಧಿಮಿ ಕುಣಿಯೋಕೆ
ಕನಸು ಕಾಣೋಕೆ,ಒಲವು ಮೂಡೋಕೆ.
ಮಾತುಗಳಿನ್ನೂ ಬೇಕಿಲ್ಲಾ
ನಿನ್ನ ಮೌನದ ಪರಿಯಾ ನೋಡೋಕೆ,
ಮನಸು ಒಂದೇ ಸಾಕಿನ್ನೂ ನೂರು ಭಾವ ಮೂಡೋಕೆ
ನಿನ್ನ ಪ್ರೀತಿ ಮಾಡೋಕೆ,ಪ್ರೀತಿ ಅಂದ ಸವಿಯೋಕೆ.
ಚಂದದ ಹೂಗಳು ಬೇಕಿಲ್ಲಾ ಮಂತ್ರಮುಗ್ಧಗೊಳಿಸೋಕೆ
ನಿನ್ನ ನಗುವ ಪರಿಯೇ ಸಾಕಿನ್ನೂ,
ಜಗವ ಮರೆಸೋಕೆ,ಕನಸ ಮೆರೆಸೋಕೆ
ಒಲವ ತೊಟ್ಟಿಲಲಿ ಜಗವ ತೂಗೋಕೆ.
ತಂಗಾಳಿಯ ತಂಪು ಬೇಕಿಲ್ಲಾ ಮನಕೆ ಮುದವ ನೀಡೋಕೆ
ನಿನ್ನ ಮುಂಗುರುಳೇ ಸಾಕಿನ್ನೂ ನನ್ನೆದೆಗೆ ಕಚಗುಳಿಯಿಡೋಕೆ,
ನಿನ್ನ ಬಿಸಿಯುಸಿರ ಬುಗ್ಗೆಯೆಬೇಕು
ನನ್ನೆದೆಯಾ ತಣಿಸೋಕೆ,ಪ್ರೀತಿಯಲಿ ಜಗವ ಮರೆಸೋಕೆ.
ಮುಂಗಾರು ಮಳೆಯದುವೇ ಬೇಕಿಲ್ಲಾ ನಾ ತೋಯ್ದುಬಿಡಲು
ಪ್ರೀತಿಯ ಮುತ್ತದುವೇ ಸಾಕಿನ್ನು ನಾ ನೆನೆಯಲು
ನಿನ್ನ ಒಲವೆಂದೂ ಬೇಕು ನಾ ಪ್ರೇಮಿಯಾಗಿರಲು
ಜೊತೆಯೆಂದೂ ನೀನೇ ಬೇಕು ನಾ ಕನಸು ಕಾಣಲೂ...

ಧಮ೯ ಉಳಿಸು ತಾಯೇ...


ಭೂಮಿ ತಾಯಿಯೇ ಹೇಳಮ್ಮಾ
ಬರೀಯ ನೋವೇ ತುಂಬಿತೇ ನಿನ್ನ ಮಡಿಲಲ್ಲಿ,
ನ್ಯಾಯಕ್ಕೆ ನೆಲೆಯೇ ಕಳೆದೋಯ್ತೆ?
ಸತ್ಯಕ್ಕೆ ಬೆಲೆಯೇ ಇಲ್ಲವೇನಮ್ಮಾ.
ಕಂಸ,ಕೀಚಕರು ಮೆರೆಯುತಿಹರಮ್ಮಾ
ರಾಮ,ಕೃಷ್ಣರಿಗೇ ಜನ್ಮ ನೀಡಬಾರದೇ,
ಧಮ೯ದ ಅಥ೯ವೇ ಕಳೆದೋಯ್ತು
ಬದುಕಬೇಕೇ ಭಯದ ನೆರಳಿನಲಿ.
ರಾಕ್ಷಸರಾಳುತಿಹ ನಾಡಿನಲಿ
ನ್ಯಾಯನೀತಿಗೆ ಬೆಲೆಯೆಲ್ಲಿ,
ಭ್ರಷ್ಟ ದುಷ್ಟರ ಕೊನೆಗಾಣಿಸಿ
ಶಿಷ್ಟರ ಪೊರೆಯಲು ನೀನು ಬರಬಾರದೇ.
ಅಂಧಕಾರವೇ ಮೆರೆಯುತಿದೆ
ಮನುಜ ತತ್ವವ ಮರೆಸುತಿದೆ,
ದಾನವ ಗುಣವೇ ಮೇರೆ ಮೀರುತಿದೆ
ಜಗಜನನಿಯಾಗಿ ನೀ ಬರಬಾರದೇ.
ಕ್ರಾಂತಿಯ ಕಿಡಿಗೆ ನೀನು ಜನ್ಮ ನೀಡಬಾರದೇ
ಸತ್ಯ ಧಮ೯ಕೆ ನೆಲೆಯ ನೀಡಬಾರದೇ,
ಸಹನೆಯ ಸ್ವಲ್ಪ ನೀನು ಬದಿಗಿಡಬಾರದೇ
ಬಾಯ್ಬಿಟ್ಟು ದುಷ್ಟರ ದಮನ ಮಾಡಬಾರದೇ...

15 March, 2015

ಒಲವೇ...


ಕರಗಿಹೋದ ಕನಸಿಗೆ
ಬರೆಯಬೇಕು ಮುನ್ನುಡಿ,
ಮರೆತುಹೋದ ಭಾವಕೂ
ನೀಡಬೇಕಿದೆ ಜೀವನ.

ನೋವ ಪರದೆ ಸರಿದಿದೆ
ನಲಿವು ಕೈಯ ಹಿಡಿದಿದೆ,
ಮನದ ಕತ್ತಲೆಯ ಕರಗಿಸಿ
ಒಲವ ಬೆಳಕು ತುಂಬಬೇಕಿದೆ.
ಸುಟ್ಟುಹೋದ ಕನಸಿಗೆ
ಹೊಸ ಜನ್ಮವೊಂದು ಸಿಕ್ಕಿದೆ,
ಮನಸಿನಾಳದಿಂದ ತೆಗೆದ
ಹೊಸ ಉಡುಗೆಯೊಂದ ತೊಡಿಸಬೇಕಿದೆ.
ಸರಸ ವಿರಸದ ನಡುವಲಿ
ಕೊಚ್ಚಿಹೋದ ಭಾವಕೇ,
ಹೊಸ ಚೈತನ್ಯವ ತುಂಬಲು
ಸಂಭಂಧವೊಂದು ಬೇಕಿದೆ.
ಭಾವವದುವು ಚಿಗುರಲು
ಒಲವದುವು ಮತ್ತೆ ಮತ್ತೆ ಬೇಕಿದೆ,
ಕನಸುಗಳ ಮರುಹುಟ್ಟಿಗೆ
ನಿನ್ನೊಲವು ಸದಾ ಬೇಕಿದೆ...