ಮನಸ ಮಾತುಗಳ ಇಲ್ಲಿ ಬರೆದಿಡಬೇಕು
ಭಾವಗಳ ಬಿಚ್ಚಿ ಪದಗಳಲಿ ಕುಣಿಸಬೇಕು,
ಕನಸುಗಳ ಇಲ್ಲಿ ಕರೆತರಬೇಕು
ಒಲವಿನ ಪದಗಳಲಿ ಬಂಧಿಸಿಡಬೇಕು.
ನೋವು ನಲಿವುಗಳ ಬಿಚ್ಚಿಡಬೇಕು
ಹಸಿವೆಯಾ ದುಖಃವನು ಮರೆಸಬೇಕು,
ಬರಿದಾದ ಮನಗಳಲಿ ಒಲವನ್ನು ಬಿತ್ತಬೇಕು
ಸೋತ ಬದುಕಲಿ ಸ್ಥೈಯ೯ವ ತುಂಬುತಿರಬೇಕು.
ನಾಳೆಗಳ ಆಗಸವನು ಇಂದು ತೆರೆದಿಡಬೇಕು
ಆಸೆ ಕಂಗಳ ನಕ್ಷತ್ರಗಳು ಮಿನುಗುತಿರಬೇಕು,
ನಂಬಿಕೆಯ ಗೂಡನೂ ಮತ್ತೆ ಕಟ್ಟಬೇಕು
ಬದುಕ ಪ್ರೀತಿಗೆ ಮುನ್ನುಡಿ ಬರೆಯಬೇಕು.
ಅನುದಿನವು ಹೊಸತನವ ತೋರಬೇಕು
ಕಲ್ಲು ಹೃದಯಗಳಲೂ ಪ್ರೀತಿಯ ಹೂವು ಬೆಳೆಯಬೇಕು,
ದ್ವೇಷ ಅಸೂಯೆಗಳ ಕರಗಿಸಿ ನಗುತಿರಬೇಕು
ಕದನವಿಲ್ಲದ ಬದುಕ ಬರೆದುಬಿಡಬೇಕು.
ಸವಿನೆನಪುಗಳ ಇಲ್ಲಿ ಮೆರೆಸಬೇಕು
ಕಹಿನೆನಪುಗಳ ಮೆಟ್ಟಿ ನಿಲ್ಲಬೇಕು,
ಹೊಸ ಜೀವನಕೆ ಮುನ್ನುಡಿಯ ಬರೆಯಬೇಕು
ಬದುಕಿನ ಕವಿತೆಯೊಂದ ಬರೆಯಬೇಕು...