31 August, 2015

ಲೈಫು ಇಷ್ಟೇನೇ....


ಕನವರಿಸೋಕೆ ಕನಸುಗಳಿಲ್ಲಾ
ಮನಸ ತುಂಬೆಲ್ಲಾ ಮೌನದ ಛಾಯೆ,
ಎದೆಯೊಳಗೆ ಆರದ ಗಾಯ
ನೋವಾದರೂ ಮುಲಾಮು ಹಚ್ಚುವಂತಿಲ್ಲ.

ತಡವರಿಸೋಕೆ ಭಾವನೆಗಳಿಲ್ಲಾ
ಖಾಲಿ ಪುಟಗಳ ತುಂಬಿಸೋಕೆ ಅಕ್ಷರಗಳಿಲ್ಲಾ,
ನೋವುಗಳೆಲ್ಲಾ ಪದಗಳಾಗೊದಿಲ್ಲ
ಕಣ್ಣೀರಿಗೂ ಕೂಡ ಕಾರಣ ತಿಳಿಯಲೇ ಇಲ್ಲ.

ಅಳುವ ಮನಸಿಗೆ ಲಾಲಿ ಹಾಡೊರಿಲ್ಲ
ನಗುವ ಮುಖವ ಮರೆಸುವಂತಿಲ್ಲಾ,
ಕೊರೆಯೋ ನೋವಿಗೂ ಕಾರಣವಿಲ್ಲ
ನೋವ ಭಾವವಾಗಿಸೋ ಜೊತೆಯೂ ಇಲ್ಲಾ.

ಸುಮ್ಮನಿದ್ದರೂ ಕೇಳುವರೆಲ್ಲಾ
ಎದೆಯೊಳಗಿನ ಕಳವಳ ಕಾಣಿಸೋದಿಲ್ಲಾ,
ಮರೆವಿಗೂ ಶಾಪವು ನೋವು
ನೆನಪುಗಳ ಅಭಿಶಾಪವಾಗಿದೆ ಬದುಕು.

ಕರಗುತಿದೆ ಕಲ್ಲು ಮನಸೂ ಇಲ್ಲಿ
ಮರೆಯಾಗುತಿದೆ ಮಿಡಿಯುವ ಭಾವ,
ಸೋತಿದೆ ಎದ್ದು ನಿಲ್ಲುವ ಛಲವೂ
ಮೆರೆಯುತಿದೆ ಸ್ಮಶಾನ ಮೌನ ಬದುಕ ಅಂಗಳದೊಳು.

24 August, 2015

ಅವಳಿಗೆ....



ಇಂದಿನ ಕನಸದು ನಾಳೆಯ ಬಯಸಿದೆ
ಹಿಂದಿನ ಕನಸದು ಇಂದು ಮೈ ಮರೆತಿದೆ,
ಬದುಕೇ ಕನಸಮ್ಮಾ ಬದುಕೊಳಗೆ ಕನಸಮ್ಮಾ
ನಿನ್ನ ಪ್ರೀತಿ ಪಡೆಯೊಕೆ ಪ್ರೇಮಿ ನಾನಮ್ಮಾ.

ದೂರದಿ ನಿಂತರೂ ಸರಿ ಹತ್ತಿರ ಆದರೂ ಸೈ
ನಾನು ನಿನ್ನವನಾಗೋಕೆ ನಿನ್ನಾ ನಗೆಯದು ಸಾಕಮ್ಮಾ,
ಪ್ರೀತಿ ಹೆಸರಲಿ ನನ್ನೆದೆಯ ದೀಪವು ನೀ
ಬೆಳಗು ನಿತ್ಯವೂ ನೀ ಎನ್ನ ಕನಸಾಗಿ.

ಉಸಿರು ನಿಂತರೂ ಸರಿ ನನ್ನೇ ಮರೆತರೂ ಸೈ
ನಾನು ನಿನ್ನವನು ಈ ಪ್ರೀತಿ ಪರಧಿಯಲಿ,
ಹರಸು ನೀ ಬಂದು ನನ್ನಾ ಕನಸುಗಳ
ನೀ ಬೇಕೇ ಬೇಕಮ್ಮಾ ನನ್ನಾ ಬದುಕಾ ನಾಳೆಯಲಿ.

ಮುನಿದು ನಿಂತರೂ ಸರಿ ಕಾದು ಕೂರುವೆ ನಾ
ಒಲಿದು ನೀ ಬರುವರೆಗೂ ಒಂಟಿಯೂ ನಾ ಬದುಕಲ್ಲಿ,
ಮುನಿಸನು ಕರಗಿಸು ಲಜ್ಜೆಯ ಮರೆಯಿಸು
ನಾನು ಎಂದೂ ನಿನ್ನವನು ನಿನಗಾಗೇ ಕಾಯುವೆನು.

ಪ್ರೀತಿಯ ನಗುವೇ ನೀ ಒಲವಿನ ಚಿತ್ತಾರವೇ
ಬದುಕಲಿ ಕನಸನು ಬೆರೆಸಲು ಬಾರೆಯಾ,
ಒಲವ ಹುಡುಗಿಯೇ ಪ್ರೀತಿಯ ದೇವತೇ
ಬಾಳು ಬೆಳಗೋಕೆ ಜೊತೆಯಾಗಿ ಬಾರೆ ನೀ.

17 August, 2015

ನಮೋ ನಮೋ ತಾಯಿ ಭಾರತಿ....


ತಾಯಿ ಭಾರತಿ ಲೋಕ ವಂದಿತೆ
ಜೀವದಾತೆ ನಮೋಸ್ತುತೆ,
ದೇವಮಾತೆಯೇ ಪುಣ್ಯದಾತೆಯೇ
ವಿಶ್ವ ಗುರುವೇ ನಮೋಸ್ತುತೆ.

ವೀರ ಪುತ್ರರ ಹಡೆದ ತಾಯಿಯೇ
ನಮಿಪೆನಮ್ಮಾ ಭಾರತಿ,
ಯೋಗ ಪುರುಷರ ಪಡೆದ ಮಾತೆಯೇ
ನಿನ್ನ ಚರಣ ಕಮಲಕ್ಕಿದೋ ವಂದನೆ.

ನಿತ್ಯ ಸಲಹೋ ಮಾತೆಯೇ
ವಿಶ್ವ ಶಾಂತಿಯ ಮೂರ್ತಿಯೇ,
ಸತ್ಯ ಅಹಿಂಸೆಯ ಜ್ಯೋತಿಯೇ
ತಾಯಿ ಭಾರತಿ ನಮೋಸ್ತುತೆ.

ರಾಮ ಕೃಷ್ಣಗೆ ಜನ್ಮ ನೀಡಿದ ಯೋಗ ಮಾಯೆಯೇ
ಭಕ್ತಿಯಿಂದಲಿ ಭಜಿಪೆನಮ್ಮಾ ತಾಯಿ ಭಾರತಿ,
ಋಷಿ ಸಂತರಿಗೆ ಜನ್ಮವಿತ್ತ ದಿವ್ಯ ಗರ್ಭವೇ
ಶಿರವ ಬಾಗಿ ನಮಿಪೆನಮ್ಮಾ ನಿನ್ನ ಪಾದಕೇ.

ಅಧರ್ಮವನ್ನಳಿಸೋ ದುರ್ಗೆಯೇ
ಸತ್ಯ ಧರ್ಮವ ಕಾಯೋ ವೈಷ್ಣವೀ
ವಿಶ್ವಕೆ ಬೆಳಕ ತೋರಿದ ಜ್ಞಾನದಾತೆ ಶಾರದೆ
ತಾಯಿ ಭಾರತಿ ನಮೋಸ್ತುತೆ

09 August, 2015

ಅನುಮಾನ...


ಗೊಂದಲದ ಹುತ್ತ ಮನಸು ಇಲ್ಲಿ
ಸಂಶಯದ ಹಾವು ಹೆಡೆಯಾಡುತಿದೆಯಲ್ಲಿ,
ವಿಷವೇ ವಿಷವೂ ಮನಸು ಮೈಯು ಈಗ
ಕಚ್ಚಬೇಕೆಂದೇ ಇಲ್ಲ ಭಾವನೆಗಳು ಸಾಯಲು.

ಹತ್ತಾರು ಬಣ್ಣ ಈ ಅನುಮಾನಕೇ
ಜಾತಿ ವರ್ಣಗಳು ಬೇಕು ಕಾರಣ ಹುಡುಕೋಕೆ,
ಧರ್ಮ ಅಧರ್ಮಗಳ ಅರಿವು ಇಲ್ಲದೆ
ಮನುಜತೆಯು ಸಾಯುತಿದೆ ಈ ವಿಷಬೀಜಕೇ.

ನೂರಾರು ಮುಖವಾಡ ಇಲ್ಲಿ ವಿಜ್ರಂಭಿಸುತಿದೆ
ಮನಸು ತನ್ನೊಳಗೆ ತಾನು ಕೊಳೆಯುತಿದೆ,
ಕಳೆಯುತ್ತಿದೆ ತನ್ನ ಪುಣ್ಯದಾ ಫಲವಾ
ತುಂಬುತ್ತಿದೆ ಮನಸಲ್ಲಿ ಪಾಪದಾ ಕರ್ಮಗಳಾ.

ಪ್ರೀತಿಯದು ಸಾಯುತ್ತಿದೆ ಅನುಮಾನಕೆ
ಮನಸೀಗ ಬೆತ್ತಲೆಯು ಸಂಶಯಕೆ,
ಉಸಿರ ಮರೆತ ಮನಸೀಗ ಕೊಲೆಯಾಗಿದೆ
ಹೊತ್ತಿಸುತ್ತಿದೆ ಅನುಮಾನದ ಕಿಡಿಯ ಜೀವಗಳೊಳಗೆ.

ಭಾವನೆಗಳು ಸತ್ತು ಇಲ್ಲಿ ನಾರುತ್ತಿವೆ
ರಣಹದ್ದುಗಳ ಕೇಕೆ ಮುಗಿಲು ಮುಟ್ಟುತ್ತಿದೆ,
ಸ್ವರ್ಗ ನರಕಗಳು ಬರೇಯ ಕಲ್ಪನೆಯಾಗದೆ
ಸುತ್ತಮುತ್ತಲೂ ಸೃಷ್ಟಿಯಾಗಿವೆ ಬದುಕಿನೊಳಗೆ.