27 January, 2017

ಮಂಥನ....

ಬದುಕೇ ನಿನ್ನೊಳಗೆ ಈಗ ಪರ್ವಕಾಲ
ಮನಸ ಮಥಿಸಲು ಇದು ಪುಣ್ಯಕಾಲ,
ಒಳಗ ವಿಷವನು ಹೊರ ತೆಗೆಯಲಿಂದು ಸಕಾಲ
ಆತ್ಮಾವಲೋಕನಕೆ ಕೂಡಿ ಬಂದಿದೆ ಇಲ್ಲಿ ಕಾಲ...

ಸದ್ಗುಣ ದುರ್ಗುಣಗಳ ಎದುರು ನಿಲ್ಲಿಸಬೇಕಿದೆಯಿಲ್ಲಿ
ಯುದ್ಧಕ್ಕಲ್ಲ ಬರೀಯ ಮನದ ಮಂಥನಕೆ,
ಹೊರ ಬರಲೇಬೇಕು ನಾನು ನೀನೆಂಬ ಕಾರ್ಕೊಟಕ
ಪಡೆಯಲೇಬೇಕು ಶಾಂತಿಯೆಂಬ ಅಮೃತವಾ...

ಸಂಧಾನ ಮಾಡಿಕೊಳ್ಳಲೇಬೇಕು ಅಹಂಮ್ಮಿನ ಜೊತೆಗೆ
ಜೊತೆಗೆ ಸೇರಿಸಿ ನಡೆಯಲೇಬೇಕು ನಮ್ಮೆಲ್ಲಾ ಭಾವಗಳ,
ವಿಷಕಂಠರಾಗಬೇಕು ಇಲ್ಲಿ ನಮ್ಮೆಲ್ಲಾ ದ್ವೇಷ ಅಸೂಯೆಗಳಿಗೆ
ಮನಸ ಕಡಲೊಳಗಿನ ಅಮೂಲ್ಯ ರತ್ನಗಳ ಪಡೆಯಲು...

ನಡೆಯಲಿಲ್ಲಿ ಪ್ರತಿದಿನವೂ ಮನಸೊಳಗೊಂದು ಮಂಥನ
ಮನುಜತೆಯು ಬೆಳಗಲು ಮನಸಿಗೆ ಮಹಾಯಜ್ಞ,
ಬದುಕಾಗಲಿ ಸಾಕ್ಷಿ ಮನಸ ಮಂಥನಕೆ
ಪಡೆಯಲೇಬೇಕು ಪ್ರೀತಿ ಸ್ನೇಹಗಳ ಅಮೃತವಾ...

No comments:

Post a Comment