31 October, 2017

ಧಣಿ ನೀನು ದನಿಯಾಗು...

ಜನ ಮಾನಸದ ದನಿಯಾಗಬೇಕು
ಪ್ರೀತಿಯಲಿ ಎಂದೂ ಧಣಿಯಾಗಬೇಕು,
ಗುಣದಲ್ಲಿ ಅಪ್ಪಟ ಚಿನ್ನದ ಗಣಿಯಾಗಬೇಕು
ಓ ಗೆಳೆಯಾ ನೀನೆಂದೂ ಸ್ನೇಹಕ್ಕೆ ಋಣಿಯಾಗಿರಬೇಕು...

ಹೆತ್ತ ತಾಯಿಗೆ ಮುದ್ದಿನ ಮಗನಾಗಬೇಕು
ಹೊತ್ತ ತಾಯಿಯ ಚೊಚ್ಚಲ ಮಗನಂತಿರಬೇಕು,
ನಾಡು ನುಡಿಗೆ ನೀ ಕಾವಲಾಗಬೇಕು
ಓ ಗೆಳೆಯಾ ನೀನು ತಾಯಿನಾಡಿನ ಸೇವಕನಾಗಿರಬೇಕು...

ಸಂಸ್ಕೃತಿಯಾ ಪ್ರತಿಬಿಂಬದಂತಿರಬೇಕು
ಸಂಸ್ಕಾರಕೆ ನೀನು ಗುರುವಾಗಬೇಕು,
ಧರ್ಮ ರಕ್ಷಣೆಗೆ ನೀನು ದಂಡನಾಯಕಬೇಕು
ಓ ಗೆಳೆಯ ನೀನು ನ್ಯಾಯ ನೀತಿಗೆ ನಾಯಕನಾಗಬೇಕು...

ಗಿರಿ ಶಿಖರವಾಗು ಕಷ್ಟಗಳ ಜೊತೆಗೆ
ಗುರಿಯಿರಲಿ ಮನುಜತೆಯ ಕಡೆಗೆ,
ಹುಲ್ಲಾಗು ನೋವಿನ ಹೃದಯಗಳಿಗೆ
ಓ ಗೆಳೆಯಾ ನೀನಾಗು ದೀನ ಬಂಧು...













21 October, 2017

ಆರಂಭ...

ತಂಪಾದ ಬದುಕಿಲ್ಲಿ ಕೆಂಪಾಗೋ ಮುನ್ನ
ಹುಡುಕಬೇಕಿಲ್ಲಿ ಸಾರ್ಥಕತೆಯ ನೆಲೆಯಾ,
ಹಣ್ಣು ಎಲೆಯದುವು ಉದುರಿ ಹೋಗೊ ಮುನ್ನ
ಸಾರ್ಥಕ್ಯಗೊಳಿಸಿದಂತೆ ತನ್ನಿರುವನ್ನ...

ಆರಂಭವದು ಅಂತ್ಯವಾಗುವ ಮೊದಲು
ಸಂಪಾದಿಸಬೇಕಿದೆ ಸ್ವಲ್ಪ ಪುಣ್ಯವನ್ನ,
ಭಯದಿಂದಲ್ಲ ಭಕ್ತಿಯಿಂದಲ್ಲ
ಹುಟ್ಟಿದ್ದು ಮನುಜನಾಗಿ ಎಂಬ ಕಾರಣದಿ...

ದ್ವೇಷವೆಂಬ ಕಿಡಿ ಬೆಂಕಿಯಾಗುವ ಮುನ್ನ
ಹಚ್ಚಬೇಕಿದೆ ಪ್ರೀತಿಯೆಂಬ ದೀಪ,
ಆರಂಭವು ಅಂತ್ಯದೊಳು ಮರೆಯಾಗುವ ಮೊದಲು
ಬೆಳಕಾಗಬೇಕು ಜಗದ ಕತ್ತಲೆಗೆ...

ಆರಂಭಕ್ಕೊಂದು ಅಂತ್ಯವಿದೆ ಎಂಬುವುದಿಲ್ಲಿ ಸತ್ಯ
ಅಂತ್ಯವಿದು ಹೊಸ ಆರಂಭವಿಲ್ಲಿ ನಿತ್ಯ ಸತ್ಯ,
ಬದಲಾವಣೆ ಇದು ಜಗದ ನಿಯಮ
ಬದಲಾಗಬೇಕಿದೆ ಮನಸೇ ನಿನ್ನ ಬದುಕ ನಿಯಮವಿಲ್ಲಿ ಈಗ...