28 November, 2020

ಸಂಘರ್ಷ...

ಕರ್ಮಭೂಮಿಯಿದು ಇಳೆಯಿಲ್ಲಿ
ಕರ್ಮಯೋಗಿಗಳಾಗಬೇಕು ನಾವಿಲ್ಲಿ,
ಧರ್ಮ ಭೂಮಿಯಿದು ಈ ಜಗವೂ
ದಾರ್ಶನಿಕರಾಗಬೇಕಿದೆ ನಾವಿಲ್ಲಿ...

ಧರ್ಮ ಅಧರ್ಮಗಳ ಯುದ್ಧವಿದು
ನಮ್ಮ ಬದುಕು ಈ ಭುವಿಯೊಳಗೆ,
ಸತ್ಯ ಅಸತ್ಯಗಳ ಸಂಘರ್ಷವಿದು
ಕಾಲದ ಜೊತೆಗಿನ ನಮ್ಮೀ ಪಯಣವಿದು...

ನ್ಯಾಯ ಅನ್ಯಾಯಗಳ ನಡುವಿನ ಹೋರಾಟ
ಕರ್ಮಗಳ ಜೊತೆಗಿನ ಒಡನಾಟ,
ಸತ್ಯ ಅಸತ್ಯಗಳ ಜೊತೆಗೆ ಜೂಟಾಟ
ಮನದ ಒಳಗಿನ ಈ ಹೊಯ್ದಾಟ...

ಸತ್ಯ ಧರ್ಮಗಳ ಈ ಹಾದಿಯಲಿ
ಅನ್ಯಾಯ ಅನೀತಿಗಳ ಕಂದರವೂ,
ಕರ್ಮಯೋಗದ ಈ ಪಥದೊಳಗೆ
ಎಲ್ಲರೂ ಬಂಧಿಯಿಲ್ಲಿ ಕಾಲದ ಪರಿಧಿಯೊಳು...

08 November, 2020

ಕನ್ನಡ ಡಿಂಡಿಮ...

ಭರತ ಭೂಮಿಯ ಪುಣ್ಯದ ಮಣ್ಣೊಳು
ಮೆರೆಯುತಿರುವ ಗಂಧದ ಬೀಡು,
ಶ್ರೀಗಂಧದ ಗುಡಿಯಾ ಕನ್ನಡ ಕಂಪಲಿ
ಉಸಿರಾಡುತಿರುವ ಕೂಸು ನಾನಿಲ್ಲಿ...

ಪಂಪ ರನ್ನರ ಚಂದದ ನಾಡಲಿ
ಅಕ್ಕ ಬಸವರ ಭಾವೈಕ್ಯದ ಬೀಡಿದು,
ಬೇಲೂರಿನ ಶಿಲೆಗಳ ವೈಭವದಿ
ಅರಳ ಬಯಸುವ ಹೂವು ನಾ...

ಕನ್ನಡಮ್ಮನ ಜಾತ್ರೆಯಿಲ್ಲಿ ನಿತ್ಯವೂ
ಮಂತ್ರ ಘೋಷಗಳಿಲ್ಲದ ನುಡಿ ನಮನವೂ,
ಕನ್ನಡಮ್ಮನ ತೇರು ಎಳೆಯುವ ಹಾದಿಯಲಿ
ಹೂವಿನ ಹಾಸು ನಾನಾಗ ಬಯಸುವೆನಿಲ್ಲಿ ...

ಕಲ್ಪವೃಕ್ಷದ ನಾಡಲಿ ಕನ್ನಡಮ್ಮನಿಗೆ ಆರತಿ
ಕೋಟೆ ಕೊತ್ತಲುಗಳ ಬೀಡಲಿ ಅವಳದೇ ಕೀರುತಿ,
ಇತಿಹಾಸ ಬರೆದ ಸಾಮ್ರಾಜ್ಯಗಳ ಶೌರ್ಯದಿ
ಬೆಳೆಯಬೇಕು ನಾ ಈ ಕನ್ನಡಮ್ಮನ ಮಡಿಲಲಿ...