30 April, 2022

ಭಾರ...

ಕನಸುಗಳ ಭಾರ ಹೆಚ್ಚಾಗಿರಲು
ತೇಲಿಬಿಡಿ ಮಾನಸ ಗಂಗೆಯಲಿ,
ನಿರಂತರ ಹರಿವಿಗೆ ಮೈಯೊಡ್ಡಿ
ಹಗುರವಾಗಲಿ ಕವಿತೆಗಳ ಸಾಲಾಗಿ...

ಮನಸಿನ ಭಾರವು ಹೆಚ್ಚಾಗಿರಲು
ದೇಹಕ್ಕೂ ಸ್ವಲ್ಪ ಹೊರಿಸಿಬಿಡಿ,
ದಣಿವಿನ ಕಾರಣಕೇ ಸೋತು
ನಿದ್ದೆಯಲಿ ವಿರಮಿಸಲೀ ಮನಸು...

ಬದುಕಲಿ ಭಾರವು ಹೆಚ್ಚಾಗಿರಲು
ನಗುವಿನ ಕಡಲಲಿ ಮುಳುಗಿಬಿಡಿ,
ನೋವುಗಳೆಲ್ಲಾ ಅಲೆಗಳಾಗಿ ಭೊರ್ಗರೆಯುತ್ತಿರೆ
ತಣಿಯಲಿ ಮನಸು ಮರೆಯಲಿ...

ಭಾರಗಳೆಲ್ಲ ಹೆಚ್ಚಾದರೂ ಕೂಡ
ಬಾಳಿನ ದೋಣಿಯು ತೇಲಲೇಬೇಕು,
ನಗುವಿನ ಕಡಲಿನ ಮಡಿಲಲ್ಲೇ
ದೂರದ ತೀರವ ಸೇರಲೇಬೇಕು...

20 April, 2022

ಬದುಕಿನ ಚಿತ್ತಾರ...

ಮರುಳು ಮರುಳು ಮನಸೇ
ನಡೆಸಿಹೆ ಯಾಕೆ ಚಿಂತೆಯಾ ಸಂತೆ,
ಬದುಕು ಬೇಯುವುದು ಇಲ್ಲಿ
ಕಾಣದ ಬೆಂಕಿಯಾ ಚಿತೆಗೆ...

ಒಂದೇ ಒಂದು ಜನ್ಮವಿಹುದು ಇಲ್ಲಿ
ಮನುಜನಾಗೇ ಬದುಕಬೇಕು,
ಕರುಣೆ ಮರೆತು ಹೋದಮೇಲೆ 
ಬದುಕಿನೊಳು ಪ್ರೀತಿ ಮೂಡಬಹುದೇ...

ಭುವಿಯು ಇಲ್ಲಿ ಪಾಠಶಾಲೆ
ನೋವಿನಿಂದ ಕಲಿಯಬೇಕು,
ನಲಿವಿನಿಂದ ಬೆಳೆಯಬೇಕು
ಬೀಗಬೇಕು ಮತ್ತೆ ಬಾಗಬೇಕು ಇಲ್ಲಿ...

ಬದುಕು ಗೀಚಿದ ನೋವಿನ ಗೆರೆಗಳನ್ನು
ಅಳಿಸಬೇಕು ನಗುವಿನಿಂದ,
ನೋವು ನಲಿವಿನ ಚಿತ್ತಾರದಲ್ಲಿ
ಬದುಕು ಅರಳಿ ನಗುತಿರಬೇಕು...