12 March, 2014

** ದ್ವಂದ್ವ **



ಮನಸ ಆವರಿಸಿದೆ ಯಾಕೋ
ಬುದ್ಧನ ಶಾಂತಿಯ ಮಂತ್ರ,
ನೆಲದ ಮಹಿಮೆಯೋ ಅರಿಯಲಾರೆ
ಆಗುತ್ತಿರುವೆ ನಾನೇತಕೋ ಅದಕೇ ಬದ್ಧ.

ಬುದ್ಧನಿದ್ದ ನಾಡಿನಲ್ಲಿ
ಜನಿಸಿದ ವಿವೇಕನು,
ಸ್ವಾಭಿಮಾನಿಯಾದ ಕಿಚ್ಚಿನ ಕಿಡಿಯಾದ
ಪುರುಷ ಸಿಂಹನವನು.

ಮೈಗೂಡಲಿಲ್ಲ ಏಕೋ ಕಾಣೆ
ಕಿಚ್ಚಿನ ಸ್ವಭಾವವದು ಜೊತೆಯಲ್ಲಿ,
ಕಿವಿಗಳವು ಕೇಳಿದರೂ
ಬಗ್ಗಲಿಲ್ಲ ಮನಸೇಕೋ ಸ್ವಾಭಿಮಾನದ ನುಡಿಗೆ.

ಬುದ್ಧನಾದರೂ ಸಿದ್ಧನಾಗಬೇಕಿದೆ
ನಾಳೆಯ ಬದುಕಿನ ಕಡೆಗೆ,
ಕಿಡಿಯೊಂದ ಹೊತ್ತಿಸಬೇಕಿದೆ
ಸ್ವಾಭಿಮಾನದ ನಡಿಗೆಗೆ.

ಬೇಕಿದೆ ಮನಸಿಗೀಗ
ಎಂದೂ ಆರದ ಗಾಯ,
ಸ್ವಾಭಿಮಾನದ ಕಿಚ್ಚು ಹಚ್ಚುವ
ನಿತ್ಯ ನಿರಂತರ ಭಾವ.

ಇದು ಹೃದಯದ ಮಾತು...



ಹೃದಯದ ಗೋಡೆಯ ತುಂಬಾ
ಪ್ರೀತಿಯ ಚಿತ್ರಗಳೇ,
ಮೂಡಿಸಿದೆ ಈಗ
ಮನಸ ಹಾಳೆಯ ತುಂಬಾ
ನೆನಪುಗಳ ಚಿತ್ತಾರ.

**********

ಹೃದಯದ ಗೂಡಿನ ಒಳಗೆ
ನೂರೆಂಟು ಭಾವನೆಗಳ ಕಲರವ
ಕನಸನು ಹೊಸೆದು ಪ್ರೀತಿಯ ಹಕ್ಕಿ
ಉಲಿಯಬಹುದೇ
ಒಲವಿನ ಕುಹೂ ಕುಹೂ.

**********

ಹೃದಯ ಮಂದಿರದಿ
ಢವ ಢವ ಘಂಟಾನಾದ
ಎದೆಗೆ ಕಿವಿಯಾನಿಸಿ ನೋಡು
ಕೇಳುತಿಹುದಲ್ಲಿ
ಪ್ರೀತಿಯ ಸುಮಧುರ ನಾದ.

ಅವಳ ಒಲವಿಗೆ...



ಬರೆಯುವೆ ನಾ
ಕವಿತೆಗಳ
ನಿನ್ನ ಹೆಸರಿಗೆ
ಕಾರಣವಿಷ್ಟೆ
ಅವಕ್ಕೂ ಬೇಕಿದೆ
ನಿನ್ನೊಲವು ಅಷ್ಟೆ.

**********

ಚಂದ್ರ ತಾನು
ಕರಗುತಿರುವ
ನಿನ್ನ ನೋವಿಗೆ
ಗೆಳತಿ,
ನೀನು ನಕ್ಕರೆ
ತಾನು ನಲಿವ
ಪೂರ್ಣ ಹೊಳಪಲಿ.

**********

ಕನಸುಗಳಿಗೆ
ನಾನು
ಕಾವಲಾಗುವೆ
ಹುಡುಗಿ,
ನೆನಪುಗಳಿಗೆ
ನೀನು
ಬೇಲಿಯಾಗುವೆಯಾದರೆ.