27 November, 2015

ಮನದ ಮಾತು....


ಬನ್ನಿ ಕನಸುಗಳೇ ಬದುಕಿನೊಳು ನೀವು
ನೂರು ಆಸೆಗಳ ಹೊತ್ತು ತನ್ನಿ,
ಅರಳಿ ಭಾವಗಳೇ ನನ್ನೆದೆಯಾ ತೋಟದಲಿ
ಮುಗುಳುನಗೆಯಾ ಸವಿ ಜೇನಾಗಿ.

ಓಡದಿರಿ ನೆನಪುಗಳೇ ಮನದ ಅಂಗಳದಿಂದ
ಬಿದ್ದು ಮಾಡಿಕೊಂಡ ಗಾಯಗಳ ತೋರಿ ಬನ್ನಿ,
ಮರೆಯಾಗದಿರು ಓ ಎನ್ನ ಮುಗ್ಧತೆಯೆ
ಜಗವ ಪ್ರೀತಿಸಲು ಬೇಕೆನಗೆ ನಿನ್ನ ಸಂಗ.

ಬತ್ತಿ ಹೋಗದಿರು ನೀನು ತುಟಿಯಂಚಿನ ನಗುವೇ
ಬಾಳಪಯಣದಿ ಎಂದೂ ನೀನೆನ್ನ ಮಗುವೇ,
ಕರಗಿ ಹೋಗದಿರು ಓ ಮನಸ ಮರೆವೇ
ವರವೆನಗೆ ನೀನಿಲ್ಲಿ ನೂರು ದ್ವಂದ್ವ ಮರೆಸೋಕೆ.

ಕುಗ್ಗದಿರು ಓ ಎನ್ನ ಮನಸೇ ಸೋಲುಗಳ ಮುಂದೆ
ಎದ್ದು ನಿಲ್ಲಬೇಕು ನಾನೆಂದು ಸ್ವಾಭಿಮಾನಿಯಾಗಿ,
ಮುಗ್ಗರಿಸದಿರಿ ಕನಸುಗಳೇ ವ್ಯಾಮೋಹದೆದುರು
ಮಂಡಿಯೂರಲಾರೆ ನಾನೆಂದು ನಾಳೆಗಳ ಮುಂದೆ.

ಖುಷಿಯ ಕನವರಿಸು ಮನಸೇ ಪ್ರತಿಕ್ಷಣವೂ ನೀನಿಲ್ಲಿ
ಬರುವ ನಾಳೆಗಳ ಸ್ವಾಗತಿಸೋದಕ್ಕೆ,
ಒಲವನ್ನೇ ನೀ ಸುರಿಸು ಓ ಹೃದಯವೇ
ಜಗದ ನಾಳೆಗಳ ಸುಂದರಗೊಳಿಸೋಕೆ.


20 November, 2015

ಸಂಭವಾಮಿ ಯುಗೇ ಯುಗೇ...



ಎತ್ತೆತ್ತಲೀಗ ಕಗ್ಗತ್ತಲೀಗ ನೀನು ಬರುವೆ ಯಾವಾಗ
ಮನುಜನಿಂದು ಮೃಗವಾಗುತಾ ತನ್ನೆಲ್ಲ ಬುದ್ಧಿಯಾ ಮರೆತಿಹ,
ಶಾಂತಿದೂತರು  ಯಾರು ಇಲ್ಲ ಇಲ್ಲಿ ಈ ಸೃಷ್ಟಿಯಾ ಕಾಯಲು
ಉರಿವ ಬೆಂಕಿಗೆ ತುಪ್ಪ ಸುರಿಸುವಾ ಬರೀ ಧೂರ್ತರೇ ಎಲ್ಲೆಲ್ಲಿಯೂ.

ಇನ್ನೆಷ್ಟು ದಿನ ಈ ಕಲಿಯುಗ ಇನ್ನೆಂಥ ಘೋರವು ಕಾದಿದೆ
ವಾಮನ ರೂಪಿಯಾದರು ಸರಿ ಮೃಗವಾಗಿಯಾದರೂ ಸರಿ ನೀನು ಬೇಗ ಬಾ,
ಹೊತ್ತಿ ಉರಿಯುತಿದೆ ಧರೆಯು ನೋಡು ಈ ದ್ವೇಷ ಭಾವದಿ
ಧರ್ಮದ ಅಮಲು ನೆತ್ತಿಗೇರಿ ಮಾನವನಾಗಿಹ ದಾನವ.

ಸತ್ಯ ಧರ್ಮ ನ್ಯಾಯ ನೀತಿಗಳು ಬೆತ್ತಲಾಗುತಿವೆಯಿಲ್ಲಿ ನೋಡು ಬಾ
ಹೆಸರು ಹೇಳಿ ಕರೆಯಲಾರೆನು ನಾ ನಿನ್ನ ಓ ಸರ್ವಶಕ್ತನೇ,
ನಿನ್ನ ಸೃಷ್ಟಿಯಾ ತಾನೇ ಆಳುತಿಹ ಮನುಜನಿಂದು ಸ್ವಾರ್ಥದಿ
ದುಷ್ಟ ಸಂಹಾರವ ಮಾಡು ಬಾ ಪಂಚಭೂತಗಳಲಿ ಲೀನಗೊಳಿಸು ಬಾ.

ದ್ವೇಷದಾ ಕಿಡಿಯಿಂದ ಹಬ್ಬಿರುವ ಜ್ವಾಲೆಯಾ ನೀ ಆರಿಸು ಬಾ
ಮನುಜತೆಯ ಮರೆತ ಹೃದಯದೀ ಪ್ರೀತಿ ದೀಪವಾ ಹಚ್ಚು ಬಾ,
ಶಾಂತಿದೂತನಾಗಿಯಾದರೂ ಸರಿ ಪ್ರಚಂಡ ರೂಪಿಯಾದರೂ ಸರಿ ನೀ ಒಮ್ಮೆ ಬಾ
ಈ ಜಗವ ಕಾಯಲು ನ್ಯಾಯನೀತಿ ಹೇಳಲು ಗುರುವಾಗಿ ನೀ ಬಾ.

ಭೂಗರ್ಭದಿಂದಲಾದರೂ ಬಾ ಸಪ್ತಸಾಗರಗಳ ಒಡಲೊಳಗಿಂದಾದರೂ ಬಾ
ದಾನವತೆಯ ಮಟ್ಟ ಹಾಕಿ ಮಮತೆಯನ್ನು ತೋರು ಬಾ,
ಜಾತಿ ಧರ್ಮಗಳ ಅಮಲನು ನೀನು ಇಳಿಸು ಬಾ
ಜಗದೊದ್ಧಾರಕೆ  ನೀನು ಮತ್ತೆ ರೂಪ ತಾಳಿ ಬಾ.

10 November, 2015

ಬೆಳಗುತಿರಲಿ ದೀಪವೊಂದು....

ದೀಪಾವಳಿ ಹಬ್ಬದ ಶುಭಾಷಯಗಳೊಂದಿಗೆ...

ಜಗದ ಕತ್ತಲೆ ಕಳೆಯೆ ಇವೆಯಿಲ್ಲಿ
ಸೂರ್ಯ ಚಂದ್ರರ ಜೊತೆಗೆ ನೂರಾರು ದೀಪ,
ಮನದ ಕತ್ತಲೆಯಾ ಬೆಳಗೋಕೆ
ಹಚ್ಚಬೇಕಿದೆಯಿಲ್ಲಿ ಸುಜ್ಞಾನದಾ ದೀಪ.

ಮಾಡಬೇಕಿದೆ ಈಗ ತೈಲಾಭ್ಯಂಜನವ
ದೇಹದ ಕೊಳೆ ಕಳೆಯೋಕೆ ಅಲ್ಲಾ,
ಮನದ ಮೌಡ್ಯವ ತೊಳೆಯೋಕೆ
ಮಾಡಬೇಕಿದೆ ಇಲ್ಲಿ ಸತ್ಸಂಗದ ಸ್ನಾನ.

ಕರೆಯಬೇಕಿದೆ ಶ್ರೀಕೃಷ್ಣನ ಮನಸ ಮಂದಿರಕೇ
ನರಕನಂಥ ಅಸುರನ ವಧಿಸೋಕೆ ಅಲ್ಲ,
ನಮ್ಮೊಳಗಿನ ಮದ ಮಾತ್ಸರ್ಯಗಳ ಅಂತ್ಯಕ್ಕಾಗಿ
ಪಡೆಯಬೇಕಿದೆ ಆತ್ಮಬಲದಿಂದ ದೈವ ಸಾಕ್ಷಾತ್ಕಾರವನ್ನ.

ಹುಡುಕಬೇಕಿದೆ ಹರಿಯ ನಮ್ಮಂತರಂಗದೊಳಗೆ
ಬಲಿಯಂಥ ಬಲಾಡ್ಯನ ಎದುರಿಸೋಕೆ ಅಲ್ಲ,
ನಾನೆಂಬ ದುಷ್ಟ ರಕ್ಕಸನ ಮೆಟ್ಟಿನಿಲ್ಲೋಕೆ
ತ್ರಿವಿಕ್ರಮರಾಗಿ ನಿಲ್ಲಬೇಕಿದೆಯಿಲ್ಲಿ ಜಗವ ಬೆಳಗೋಕೆ.

ಹಚ್ಚಬೇಕಿದೆಯಿಲ್ಲಿ ಅರಿವಿನಾ ದೀಪವೊಂದ
ಜಗವ ಬೆಳಗುವಾ ನಿತ್ಯ ಜ್ಯೋತಿಯೊಂದಾ,
ನಮ್ಮೊಳಗಿನ ಅಂಧಕಾರವ ಅಳಿಸೋ ಹಣತೆಯೊಂದ
ಬೆಳಗಬೇಕಿದೆ ಜಗದ ನಾಳೆಯನ್ನ...




07 November, 2015

ಅವಳ ಪ್ರೀತಿಗೆ...


ಪಾಪ ಪುಣ್ಯಕೆ ನಾನು ಹೆದರಲಾರೆನೇ
ನಿನ್ನ ಬಿಟ್ಟು ಬಾಳುವ ಮನಸು ಇನ್ನು ಮಾಡಲಾರೆನು,
ಮನಸು ಕರಗಿ ಹೋಗಿದೆ ಹುಡುಗಿ ನಿನ್ನ ಹುಡುಕುತಾ
ನಿಂತಲ್ಲಿ ನಿಲ್ಲಲಾಗದೆ ತನುವು ಸೋತು ಹೋಗಿದೆ.

ದೂರ ನಿಂತರೆ ನಾನು ಸಹಿಸಲಾರೆನು
ಮನದ ಭಾವನೆ ನೀನು ಹೇಳಿಕೊಳ್ಳಬಾರದೆ,
ಪ್ರೀತಿ  ಹುಚ್ಚಿಗೆ ಮುಲಾಮು ಎಲ್ಲಿದೆ
ಮನದ ಗಾಯಕೆ ನೀನು ಆರೈಕೆ ಮಾಡಬಾರದೆ.

ನಿನ್ನ ನೋಡೊ ಬಯಕೆಯಾಗಿದೆ ಇಂದು ನನ್ನ ಕನಸಿಗೆ
ಸ್ನೇಹವಾಗಿದೆ ನನಗೆ ಇಂದು ನಿನ್ನ ನಗುವ ಜೊತೆಯಲಿ,
ಹುಚ್ಚು ಹಿಡಿದಿದೆ ಇಂದು ನನ್ನ ಕನಸಿಗೆ
ಮೂಕ ರೋಧನ ನಿನ್ನ ಕಣ್ಣ ತೆರೆಯದೆ.

ಜೊತೆಯ ಬೇಡಿದೆ ಬದುಕು ಮುಂದೆ ಸಾಗಲು
ನಿನ್ನ ಮುಗ್ಧ ಪ್ರೀತಿಯ ಸ್ಪರ್ಶ ಇನ್ನು ಬೇಕಿದೆ,
ನನ್ನ ಉಸಿರು ಇಲ್ಲಿದೆ ಹುಡುಗಿ ನಿನ್ನ ನಲಿವಿಗಾಗಿಯೇ
ನೋವು ಇಲ್ಲದಾ ಪ್ರೀತಿ ನಾನು ಹಂಚುವೆ.

ಈ ಕನಸು ನಿನ್ನವೇ ಹುಡುಗಿ ಒಮ್ಮೆ ನೋಡು ಬಾ
ನನ್ನ ಎದೆಯಲಿ ಪ್ರೀತಿ  ಲಾಲಿ ಕೇಳು ನೀ,
ಮುನಿಸು ಇಲ್ಲದಾ ಪ್ರೀತಿ ಜಗದಿ ಎಲ್ಲಿದೆ
ನೂರು ಜನುಮಕೂ ಒಲವ ಹಾಡು ನೀ ಹಾಡು ಬಾ.