ಎತ್ತೆತ್ತಲೀಗ ಕಗ್ಗತ್ತಲೀಗ ನೀನು ಬರುವೆ ಯಾವಾಗ
ಮನುಜನಿಂದು ಮೃಗವಾಗುತಾ ತನ್ನೆಲ್ಲ ಬುದ್ಧಿಯಾ ಮರೆತಿಹ,
ಶಾಂತಿದೂತರು ಯಾರು ಇಲ್ಲ ಇಲ್ಲಿ ಈ ಸೃಷ್ಟಿಯಾ ಕಾಯಲು
ಉರಿವ ಬೆಂಕಿಗೆ ತುಪ್ಪ ಸುರಿಸುವಾ ಬರೀ ಧೂರ್ತರೇ ಎಲ್ಲೆಲ್ಲಿಯೂ.
ಇನ್ನೆಷ್ಟು ದಿನ ಈ ಕಲಿಯುಗ ಇನ್ನೆಂಥ ಘೋರವು ಕಾದಿದೆ
ವಾಮನ ರೂಪಿಯಾದರು ಸರಿ ಮೃಗವಾಗಿಯಾದರೂ ಸರಿ ನೀನು ಬೇಗ ಬಾ,
ಹೊತ್ತಿ ಉರಿಯುತಿದೆ ಧರೆಯು ನೋಡು ಈ ದ್ವೇಷ ಭಾವದಿ
ಧರ್ಮದ ಅಮಲು ನೆತ್ತಿಗೇರಿ ಮಾನವನಾಗಿಹ ದಾನವ.
ಸತ್ಯ ಧರ್ಮ ನ್ಯಾಯ ನೀತಿಗಳು ಬೆತ್ತಲಾಗುತಿವೆಯಿಲ್ಲಿ ನೋಡು ಬಾ
ಹೆಸರು ಹೇಳಿ ಕರೆಯಲಾರೆನು ನಾ ನಿನ್ನ ಓ ಸರ್ವಶಕ್ತನೇ,
ನಿನ್ನ ಸೃಷ್ಟಿಯಾ ತಾನೇ ಆಳುತಿಹ ಮನುಜನಿಂದು ಸ್ವಾರ್ಥದಿ
ದುಷ್ಟ ಸಂಹಾರವ ಮಾಡು ಬಾ ಪಂಚಭೂತಗಳಲಿ ಲೀನಗೊಳಿಸು ಬಾ.
ದ್ವೇಷದಾ ಕಿಡಿಯಿಂದ ಹಬ್ಬಿರುವ ಜ್ವಾಲೆಯಾ ನೀ ಆರಿಸು ಬಾ
ಮನುಜತೆಯ ಮರೆತ ಹೃದಯದೀ ಪ್ರೀತಿ ದೀಪವಾ ಹಚ್ಚು ಬಾ,
ಶಾಂತಿದೂತನಾಗಿಯಾದರೂ ಸರಿ ಪ್ರಚಂಡ ರೂಪಿಯಾದರೂ ಸರಿ ನೀ ಒಮ್ಮೆ ಬಾ
ಈ ಜಗವ ಕಾಯಲು ನ್ಯಾಯನೀತಿ ಹೇಳಲು ಗುರುವಾಗಿ ನೀ ಬಾ.
ಭೂಗರ್ಭದಿಂದಲಾದರೂ ಬಾ ಸಪ್ತಸಾಗರಗಳ ಒಡಲೊಳಗಿಂದಾದರೂ ಬಾ
ದಾನವತೆಯ ಮಟ್ಟ ಹಾಕಿ ಮಮತೆಯನ್ನು ತೋರು ಬಾ,
ಜಾತಿ ಧರ್ಮಗಳ ಅಮಲನು ನೀನು ಇಳಿಸು ಬಾ
ಜಗದೊದ್ಧಾರಕೆ ನೀನು ಮತ್ತೆ ರೂಪ ತಾಳಿ ಬಾ.
No comments:
Post a Comment