10 November, 2015

ಬೆಳಗುತಿರಲಿ ದೀಪವೊಂದು....

ದೀಪಾವಳಿ ಹಬ್ಬದ ಶುಭಾಷಯಗಳೊಂದಿಗೆ...

ಜಗದ ಕತ್ತಲೆ ಕಳೆಯೆ ಇವೆಯಿಲ್ಲಿ
ಸೂರ್ಯ ಚಂದ್ರರ ಜೊತೆಗೆ ನೂರಾರು ದೀಪ,
ಮನದ ಕತ್ತಲೆಯಾ ಬೆಳಗೋಕೆ
ಹಚ್ಚಬೇಕಿದೆಯಿಲ್ಲಿ ಸುಜ್ಞಾನದಾ ದೀಪ.

ಮಾಡಬೇಕಿದೆ ಈಗ ತೈಲಾಭ್ಯಂಜನವ
ದೇಹದ ಕೊಳೆ ಕಳೆಯೋಕೆ ಅಲ್ಲಾ,
ಮನದ ಮೌಡ್ಯವ ತೊಳೆಯೋಕೆ
ಮಾಡಬೇಕಿದೆ ಇಲ್ಲಿ ಸತ್ಸಂಗದ ಸ್ನಾನ.

ಕರೆಯಬೇಕಿದೆ ಶ್ರೀಕೃಷ್ಣನ ಮನಸ ಮಂದಿರಕೇ
ನರಕನಂಥ ಅಸುರನ ವಧಿಸೋಕೆ ಅಲ್ಲ,
ನಮ್ಮೊಳಗಿನ ಮದ ಮಾತ್ಸರ್ಯಗಳ ಅಂತ್ಯಕ್ಕಾಗಿ
ಪಡೆಯಬೇಕಿದೆ ಆತ್ಮಬಲದಿಂದ ದೈವ ಸಾಕ್ಷಾತ್ಕಾರವನ್ನ.

ಹುಡುಕಬೇಕಿದೆ ಹರಿಯ ನಮ್ಮಂತರಂಗದೊಳಗೆ
ಬಲಿಯಂಥ ಬಲಾಡ್ಯನ ಎದುರಿಸೋಕೆ ಅಲ್ಲ,
ನಾನೆಂಬ ದುಷ್ಟ ರಕ್ಕಸನ ಮೆಟ್ಟಿನಿಲ್ಲೋಕೆ
ತ್ರಿವಿಕ್ರಮರಾಗಿ ನಿಲ್ಲಬೇಕಿದೆಯಿಲ್ಲಿ ಜಗವ ಬೆಳಗೋಕೆ.

ಹಚ್ಚಬೇಕಿದೆಯಿಲ್ಲಿ ಅರಿವಿನಾ ದೀಪವೊಂದ
ಜಗವ ಬೆಳಗುವಾ ನಿತ್ಯ ಜ್ಯೋತಿಯೊಂದಾ,
ನಮ್ಮೊಳಗಿನ ಅಂಧಕಾರವ ಅಳಿಸೋ ಹಣತೆಯೊಂದ
ಬೆಳಗಬೇಕಿದೆ ಜಗದ ನಾಳೆಯನ್ನ...




No comments:

Post a Comment