28 December, 2015

ಏನೆಂದು ಹೆಸರಿಡಲಿ...


ಪ್ರೀತಿಗೆ ತಾಜಮಹಲನು ಕಟ್ಟಬಹುದು
ನೆನಪಿಗೆ ಗೋರಿಯಾ ಕಟ್ಟಬಹುದೇ,
ಉಸಿರಿಗೆ ನಿನ್ನಯಾ ಹೆಸರನು ಬರೆಯಬಹುದು
ಆತ್ಮಕೆ ಏನೆಂದು ಹೆಸರಿಡಲಿ.

ಕವಿತೆಯಾ ನಿನ್ನ ಹೆಸರಿಗೆ ಬರೆಯಬಹುದು
ಪ್ರೀತಿಯಿಲ್ಲದೆ ಪದಗಳನು ಜೋಡಿಸಬಹುದೇ,
ಕನಸಿಗೂ ಕಾರಣವೊಂದ ಕೊಡಬಹುದು
ಮನದ ಭಾವಕೆ ಏನೆಂದು ಹೆಸರಿಡಲಿ.

ನೆನಪಿಗೂ ಪ್ರೀತಿಯ ಹೆಸರಿಡಬಹುದು
ಸರಸಕೂ ನಿನ್ನಯಾ ಹೆಸರಿಡಬಹುದೇ,
ಮುನಿಸಿಗೂ ನೂರು ಕಾರಣ ಕೊಡಬಹುದು
ಮೌನಕೆ ಏನೆಂದು ಹೆಸರಿಡಲಿ.

ಬದುಕಿಗೂ ಬಂಧನದ ಹೆಸರಿಡಬಹುದು
ಖುಷಿಗೂ ಹೆಸರೊಂದ ಇಡಬಹುದೇ,
ನೋವಿಗೆ ಕಾರಣವ ಕೊಡಬಹುದು
ಬದುಕ ಹಂಬಲಕೆ ಏನೆಂದು ಹೆಸರಿಡಲಿ.

ಬಯಕೆಗೂ ಅಂತ್ಯವಾ ಹೇಳಬಹುದು
ನಿರಾಸೆಗೂ ಹೆಸರೊಂದ ಇಡಬಹುದೇ,
ಪ್ರೀತಿಗೂ ಕಾರಣವ ಕೊಡಬಹುದು
ನಾಳೆಗೆ ಏನೆಂದು ಹೆಸರಿಡಲಿ...

19 December, 2015

ಓ ಹೆಣ್ಣೇ ನಿನಗೆ ನಮನ...


ಪ್ರೀತಿಯಲಿ ಎಲ್ಲವು ಸಹಜ ಇಲ್ಲಿ
ತ್ಯಾಗವೇ ಮೆರೆಯುವುದು ಓ ಹೆಣ್ಣೇ ನಿನ್ನ ಬಾಳಲಿ
ಮಮತೆಗೆ ಉಸಿರು ನೀನು
ನಿಸ್ವಾರ್ಥಕೂ ನಿನ್ನದೇ ಹೆಸರು ಈ ಸೃಷ್ಟಿಯಲಿ.

ವನವಾಸ  ನಿನಗೆ ಖಾಯಮ್ಮು
ನೀ ರಾಮನ ಸೀತೆಯಾದರೆ,
ಸಹನೆಯಲಿ ನೀನು ಭೂಮಿಯಾದವಳು
ಬಚ್ಚಿಟ್ಟೆ ನೋವುಗಳ ತನ್ನವರ ಹಿತಕಾಯಲು.

ವಿರಹದ ನೂರು ನೋವು ಗ್ಯಾರಂಟಿ
ನೀನು ಮುರಳಿಯ ರಾಧೆಯಾದರೂ,
ಪ್ರೀತಿಯನು ಮೊಗೆ ಮೊಗೆದು ಕೊಡುವೆ
ನಾಲ್ಕು ಗೋಡೆಗಳ ನಡುವೆ ನೀ ನಿಂತರೂ.

ಕಲ್ಲಾಗಲೇಬೇಕು ನಿನ್ನ ಯ ಮನಸು
ನೀನು ಗೌತಮನ ಅಹಲ್ಯೆಯಾಗುವುದಾದರೆ,
ಸೃಷ್ಟಿಯ ಸೌಂದರ್ಯ ತನ್ನೊಳಗೆ ಬಚ್ಚಿಟ್ಟೆ
ಪ್ರಕೃತಿಯು ನೀನಾದೆ ಜಗ ಕಾಯಲು.

ಅವಮಾನಗಳ ಸಹಿಸಲೇಬೇಕು ನೀನು
ಧರ್ಮಜನ ಅರ್ಧಾಂಗಿಯಾದರೂ,
ನೋವು ಅವಮಾನಗಳ ನೀ ಮೆಟ್ಟಿ ನಿಂತೆ
ಈ ಜಗದ ಕಣ್ಣಾಗಲು...

12 December, 2015

ಮರೆವು ಕರುಣಿಸು...


ಬದುಕೇ ಒಮ್ಮೆ ನೂಕಿಬಿಡು ನೆನಪ ಮಡಿಲೊಳಗೆ
ಸಾಕೆನಿಸಿದೆ ಈಗ ಜಗದ ಜಂಜಾಟ,
ಮರೆಯಬೇಕು ನಾನು ಕಾಡೋ ನೂರು ನೋವುಗಳ
ಪಡೆಯಬೇಕು ಸುಖನಿದ್ದೆ ನೆನೆಪ ಮಡಿಲೊಳಗೆ.

ಕರುಣಿಸು ಬದುಕೇ ಮರೆವೆಂಬ ವರವ
ಕುದಿಯುತಿರುವ ಮನಸ ಶಾಂತಗೊಳಿಸಬೇಕು,
ಒಲವ ಸುಳಿಯಿಂದ ಮುಕ್ತವಾಗಿಸು ಎನ್ನ
ಜಾರಬೇಕಿದೆ ಈಗ ಮರೆವ ತೆಕ್ಕೆಯೊಳಗೆ.

ಹರಸಿದ್ದು ಸಾಕಿಲ್ಲಿ ಈ ಒಲವ ಯಾತ್ರೆಯಲ್ಲಿ
ಒಂಟಿ ಪಯಣ ಬೇಕೆನಿಸಿದೆ ಕರುಣಿಸು ಬದುಕೇ,
ಪ್ರೀತಿಯಿದು ಸುಂದರ ನೋಡೋ ನೋಟಕ್ಕಷ್ಟೇ
ಅನುಭವಿಸಲಾರೆ ನಾ ಅದರ ಆಳ ಅಗಲ.

ಬತ್ತಿ ಹೋದ ಕನಸುಗಳ ಮತ್ತೆ ಕರುಣಿಸು ಬದುಕೇ
ಚಂದ್ರ ತಾರೆಗಳ ಜೊತೆಗೂಡಿ ನಗಬೇಕು ನಾನು,
ನೋವ ಮರೆಸುವ ಕನಸುಗಳು ಬೇಕು ಬದುಕಿಗೆ
ಹರಸು ನೂರು ಹೊಸ ಕನಸುಗಳ ಬದುಕ ಕಟ್ಟೋಕೆ.

ಕನಸುಗಳಿರಲಿ ಬೆಚ್ಚಗೆ ಎದೆಯಾಳದೊಳಗೆ
ಪ್ರೇಮಿಯಾಗಿಸದಿರು ಎನ್ನ ಬದುಕ ಜಾತ್ರೆಯಲಿ,
ನಗಬೇಕು ನಕ್ಕು ಅಳುವ ಮರೆಯಬೇಕು
ಕರುಣಿಸು ಬದುಕೇ ನೆನಪುಗಳ ಚಿಂತೆ ಮರೆಸೋಕೆ.

02 December, 2015

ಮರೀಚಿಕೆ....



ಹುಟ್ಟುತ್ತಾ ಜೀವಿಯದು ದೈವೀ ಸ್ವರೂಪ
ಬೆಳೆಯುತ್ತಾ ಹೊದಂತೆ ಬೆಳದಿಂಗಳಾ ರೂಪ,
ಬುದ್ಧಿ ಬೆಳೆಯುವವರೆಗೆ ಸೃಷ್ಟಿಯ ಅದ್ಭುತ ರೀತಿ
ಎದ್ದು ನಿಂತ ಮೇಲೆ ಬದಲಾಯ್ತು ದಾನವನ ರೀತಿ.

ತಾಯಾದಳು,ಗುರುವಾದಳು ಪ್ರಕೃತಿಯು ಜೀವಿಗೆ
ಬದುಕುವ ಪಾಠವನ್ನಷ್ಟೇ ಹೇಳಿಕೊಡುವಳು ತಾನಿಲ್ಲಿ,
ಪ್ರಕೃತಿಯನೇ ದಂಡಿಸುವ ಗುಣವೆಲ್ಲಿಂದ ಬಂತು
ತನ್ನತನವನು ಮರೆವ ಧೂರ್ತ ಬುದ್ಧಿಯ ಹುಟ್ಟು.

ಉಸಿರು ನೀಡಿದ ವಾಯು ಬದುಕನ್ನು ಹರಸಿದಾ
ಉಸಿರ ಕೊಲ್ಲುವ ಗುಣವೆಲ್ಲಿಂದ ಬಂತು ಈ ಜೀವಿಗೆ,
ನೀರಡಿಕೆ ಇಂಗಿಸಿ ಪ್ರಾಣವನು ಉಳಿಸಿದಾ ವರುಣ
ವಿಷವಕಾರುವ ಬುದ್ಧಿಯಾ ಕಲಿಯಿತೆಲ್ಲಿ ಜೀವಿಯು.

ಬದುಕ ಚೈತನ್ಯಗೊಳಿಸುವ ಬಿಸಿಯನ್ನಷ್ಟೇ ನೀಡಿದನು ಅಗ್ನಿ
ಸುಡುವ ಗುಣವದುವು ಹೇಗೆ ಆವರಿಸಿತೋ ಒಮ್ಮೆಲೇ,
ಬದುಕುವ ಅನಂತ ಅವಕಾಶವ ತೋರಿತು ಆಗಸ
ಅಕಾಶವನೇ ಮೀರಿ ಬೆಳೆಯಿತು ತನ್ನೊಳಗಿನ ಅಹಂಕಾರವೇತಕೋ.

ಯಾರು ಕರುಣಿಸಲಿಲ್ಲ ದ್ವೇಷದಾ ಕಿಡಿಯ
ಹೊತ್ತಿ ಉರಿಯುತಿದೆ ಯಾಕೆ ಜೀವಿ ಜೀವಿಗಳ ನಡುವೇ,
ತಿಂದನ್ನ ಆಹಾರಗಳಲ್ಲಿ ಇರಲಿಲ್ಲ ವಿಷವೂ
ಮರೀಚಿಕೆಯಾಯ್ತಿಲ್ಲಿ  ಜೀವನದ ಗುಟ್ಟು.