ಉದ್ಧರಿಸು ನೀನೆನ್ನ ಓ ಸರ್ವಶಕ್ತ
ಅಂಧಕಾರವ ಕಳೆಯೀಗ ಈ ಮನಸಿಂದಾ,
ಸಣ್ಣದೊಂದು ಜ್ಯೋತಿಯನು ನೀ ಉರಿಸಿ
ಮುಂದೆ ನುಗ್ಗುವ ಛಲವನ್ನ ಅನುಗ್ರಹಿಸು.
ಎಡವಿ ಬೀಳುವ ಭಯವಂತು ಎನಗಿಲ್ಲ
ಕೈ ಹಿಡಿದು ನಡೆಸುವವ ನೀ ಜೊತೆಗಿರಲು,
ಅಜ್ಞಾನವನು ಕಳೆದು ಜ್ಞಾನವನು ಭೋದಿಸು
ಬೆಳಗುವೆನು ಮನದಲ್ಲಿ ನಿನಗೊಂದು ದೀಪ.
ನನ್ನೊಳು ಮನೆಮಾಡಿರುವ ವೈರಿಗಳ ಸೋಲಿಸೆ
ಶಕ್ತಿಯನು ನೀಡೆನಗೆ ಹೇ ಭಗವಂತ,
ಅರಿಷಡ್ವರ್ಗಗಳೆಂಬ ವೈರಿಗಳ ನಿನ್ನ ಪಾದದಡಿಗೆ ನೂಕುವೆ
ಮುಕ್ತಿಯನು ಅನುಗ್ರಹಿಸು ಕಾಮ ಕ್ರೋಧ ಮದ ಮೋಹ ಲೋಭಕೆ.
ಬೆಳಗುವೆನು ನನ್ನೆದೆಯಲಿ ನಿನಗೊಂದು ನಂದಾದೀಪ
ದಯಮಾಡಿ ನೆಲೆಸು ನೀನಿಲ್ಲಿ ಹೇ ಸರ್ವಾಂತರ್ಯಾಮಿ,
ಭಕ್ತಿಯೆಂಬ ನೈವೇದ್ಯ ಅರ್ಪಿಸುವೆನು ನಿನಗೆ
ಪ್ರೀತಿಯೆಂಬ ಐಶ್ವರ್ಯವ ಅನುಗ್ರಹಿಸಬೇಕು ನೀನು.
ನನ್ನೊಳಗೆ ಪ್ರತಿದಿನವು ಕಾಣುವೆನು ನಿನ್ನಾ
ಮನುಜತೆಯ ಪಥದೊಳಗೆ ನೀ ಇರಿಸು ಎನ್ನಾ,
ಸತ್ಯ ಧರ್ಮದ ರಥವನ್ನ ತೋರಿಸು
ಬದುಕಿನ ಯಾತ್ರೆಯೊಳು ನೀನೆನ್ನ ಗೆಲ್ಲಿಸು.