30 September, 2018

ಉತ್ತರಿಸು ನೀ ಓ ಬ್ರಹ್ಮ...

ಹಣೆಬರಹ ಬರೆದ ಓ ಬ್ರಹ್ಮ
ನಿನಗಿಲ್ಲಿದೆ ನೂರು ಪ್ರಶ್ನೆಗಳು,
ಉತ್ತರಬೇಕಿದೆ ನಿನ್ನಿಂದ
ಬದುಕಲಿ ಯಾಕೆ ಬರೆದೆ ಗೋಜಲುಗಳನ್ನು...

ಪ್ರೀತಿಯ ಬರೆದೆ ನೀ ಬದುಕಲ್ಲಿ
ಸಂಶಯವಾ ಯಾಕೆ ಹುಟ್ಟಿಸಿದೆ,
ಸಂಬಂಧಗಳ ಇಲ್ಲಿ ಜೋಡಿಸಿದೆ
ಅಸೂಯೆಯಾ ಯಾಕೆ ನೀ ಕರುಣಿಸಿದೆ...

ನಂಬಿಕೆಯನು ನೀನಿಲ್ಲಿ ಬರೆದಿಟ್ಟೆ
ಅಪನಂಬಿಕೆಗೇಕೆ ಇಲ್ಲಿ ಜಾಗವ ಕೊಟ್ಟೆ,
ಆಸೆಗಳನ್ನೆನೋ ಕರುಣಿಸಿದೆ
ವಾಮಮಾರ್ಗಗಳನ್ನೇಕೆ ಪರಿಚಯಿಸಿದೆ...

ಸ್ನೇಹವ ಬರೆದಾ ಓ ಬ್ರಹ್ಮ
ಹಿತ ಶತ್ರುಗಳನ್ನೇಕೆ ಹುಟ್ಟಿಸಿದೇ,
ಮಿಡಿಯುವ ಮನಸ ನೀ ಕೊಟ್ಟೆ
ಪರರಿಗೆ ಆಡಲು ಜಾಗ ಯಾಕೆ ಬಿಟ್ಟೆ...

ಸೃಷ್ಟಿಯನೇನೋ ಮಾಡಿಬಿಟ್ಟೆ
ಮನಸಿನ ಮರೆಯಲಿ ಯಾಕೆ ನಿಂತುಬಿಟ್ಟೆ,
ಬದುಕಿನ ಗುರಿಯನು ಮರೆಸಿಬಿಟ್ಟು
ಮೋಕ್ಷದ ದಾರಿಯ ಯಾಕೆ ಬಚ್ಚಿಟ್ಟೆ...

21 September, 2018

ಜೀವನ ಚಕ್ರ....

ಮುದ್ದು ಮನಸೇ ಓ ಪೆದ್ದು ಮನಸೇ
ನಗುನಗುತಾ ನೀ ಸಾಗು ಮನಸೇ,
ಹುಟ್ಟಿನರಮನೆಯಿಂದ ಸಾವಿನ ಮೆರವಣಿಗೆವರೆಗೂ
ನಗುತಾ ಸಾಗಬೇಕು ನೀ ಹುಚ್ಚು ಮನಸೇ...

ನಿನ್ನೆ ಯಾರೋ ಇಂದು ಇನ್ಯಾರೋ
ನಾಳೆಯೆಂಬುದು ನೀನೇ ಆಗಿರಬಹುದು,
ಹುಟ್ಟು ಮಾತ್ರ ಸ್ವಂತ ಇಲ್ಲಿ
ಸಾವಿಗ್ಯಾರೂ ಹೊಣೆ ಇಲ್ಲಾ ಇಲ್ಲಿ...

ಹೋಗೊ ಮುಂಚೆ ಹೇಳೊರು ಇಲ್ಲಾ
ಹೋಗೊವಾಗ ತಡೆಯೋರು ಇಲ್ಲಾ,
ಇಂದು ಇಲ್ಲಿ ಎಲ್ಲಾರೂ ಜೊತೆಗಿರೆ
ನಗುನಗುತಾ ಕೂಡು ಮನಸೇ...

ಬದುಕಿನಲ್ಲಿ ಭವಣೆ ತಪ್ಪದೂ ಎಂದೂ
ಸಾವೆಂಬ ಸತ್ಯ ಸುಳ್ಳಾಗದಿಲ್ಲಿ,
ಜೀವನ ಚಕ್ರ ಸಾಗುತಿರಲು ಇಲ್ಲಿ
ಸಾವೆಂಬ ಮಿತ್ರ ಕರೆಯದೇ ಬರುವನಿಲ್ಲಿ...

ನಗುನಗುತಾ ಬಾಳಬೇಕು ಮನಸೇ ನೀನಿಲ್ಲಿ
ಜೀವನ ಸತ್ಯ ಕಹಿಯೂ ಎಂದೂ,
ನಗುವೇ ಶಕ್ತಿ ಈ ಬದುಕಿಗಿಲ್ಲಿ
ನೋವನು ಮರೆಸೋ ಶಾಂತಿಗೀತೆಯಿಲ್ಲಿ...

09 September, 2018

ಮರೀಚಿಕೆ...

ಬದುಕಿಲ್ಲಿ ಭರವಸೆಯು
ನಂಬಿಕೆಯ ನೆರಳಿರೋವರೆಗೂ,
ಕನಸಿಲ್ಲಿ ಜೀವಂತ
ಒಲವು ಹಸಿರಾಗಿರೋವರೆಗೂ...

ಭಯವಿಲ್ಲಿ ನೆರಳಾಗಿ ಕಾಡಲು
ನಂಬಿಕೆಯ ದೀಪವಾರುತಿದೆ,
ಆತ್ಮವಿಶ್ವಾಸದ ಪರದೆ ಜಾರುತಿರೆ
ನಾಳೆಗಳು ಮರೀಚಿಕೆಯಾಗುತಿದೆ...

ಸಂಬಂಧಗಳ ಸಂಕೋಲೆಯಿಲ್ಲಿ
ಬಂಧಿಸುವ ಭೀತಿ ಎದುರಾಗಿರಲು,
ಸ್ವಚ್ಚಂದ ಮನಸಿನ ಬಾನು
ಕಾರ್ಮೋಡಗಳ ನೆಲೆಯಾಗಿದೆ...

ಕನಸುಗಳು ಕಾಲಗರ್ಭ ಸೇರುತಿರಲು
ಮನಸೊಳಗೆ ಅಂಧಕಾರ,
ಭೂತ ಭವಿಷ್ಯಗಳು ಕಾಡುತಿರಲು
ಬದುಕಿಲ್ಲಿ ಮರೀಚಿಕೆ...