07 June, 2026

ಮಾಯಾವಿ...

ಅರಳು ಮರಳು ಮನಸಿಗಿಲ್ಲಿ ಬದುಕೇ 
ನೀನೆಷ್ಟು ದಿನದ ಸಂತೆಯೆಂಬುದ ಮರೆತೇ,
ಏನು ಮಾಯೆಯೋ ಏನು ಲೀಲೆಯೋ ಮನಸೇ 
ಇರುವುದೆಲ್ಲವ ಮರೆತು ಏನೋ ಚಿಂತೆ...

ಜಗದ ಭಾರವ ಹೊತ್ತ ತರದಿ ಇಲ್ಲಿ  
ಮನಸ ಭಾರವ ಹೊರುವುದೇ ದೇಹ,
ಬದುಕೇ ನೀನಿಲ್ಲಿ ಭಾರವಾದಂತೆ 
ಏಕೆ ಮಾಡುತೀ ಇಲ್ಲಿ ಚಿಂತೆಯ ಸಂತೆ...

ನಗುನಗುತಾ ತಿರುಗಬೇಕು ಭೂಮಿ ಮೇಲೆ 
ಒಂದಷ್ಟು ಭಾರಗಳ ಇಳಿಸಿ ಹೆಗಲ ಮೇಲಿಂದ,
ಎದೆಯ ಮೇಲೆ ಖುಷಿಯ ಹೂಗಳ ಇರಿಸಿ 
ನಿನ್ನೆಗಳು ಕೂಡ ಹಿಂತಿರುಗಿ ನಗುವಂತೆ ...

ಉಸಿರು ಭಾರವಾದಿತು ದೇಹಕೇ 
ಮೌನದಲ್ಲಿ ಮನಸು ಕಳೆದುಹೋದಂತೆಲ್ಲಾ,
ಹೊಸದೊಂದು ಹುಟ್ಟು ಬೇಕಾಗಿದೆ ಇಲ್ಲಿ 
ನಗುನಗುತಾ ಮಾಡಲಿಲ್ಲಿ ಮೂರು ದಿನದ ಸಂತೆ...

No comments:

Post a Comment