24 January, 2014

ತಾಯಿ ಭಾರತಿ ನಮೋಸ್ತುತೆ...



ಹಿಮಾಲಯವನೆ ಮುಕುಟವಾಗಿಸಿ
ಗಂಗೆ ತುಂಗೆಯನೆ ಧರಿಸಿಹ ಮಹಾಮಾಯೆ ನೀನು
ಜಗಕೆ ಶಕ್ತಿಯಾಗಿ ನಿಂತಿಹ ನಿನಗಿದೋ ಶರಣು.

ನೂರು ಭಾಷೆಗಳ ಒಡಲಲ್ಲಿ ತುಂಬಿ ನಿಂತಿಹೆ
ಹತ್ತಾರು ಧರ್ಮಗಳ ಜನನಿ ನೀನು
ಶಿರಬಾಗಿ ನಮಿಪೆನು ತಾಯಿ ಭಾರತಿಯೇ.

ಜಗದಗಲ ವಿಶ್ವ ಶಾಂತಿಯ ತೋರಿ
ಸೌಮ್ಯಭಾವದಿ ನಿಂತ ಮಹಾಮಾತೆ
ಕರಮುಗಿದು ನಮಿಸುವೆನು ಶಾಂತಿಧಾತೆಯೆ.

ಮಹಾಪುರುಷರ ಜನನಿ ನೀನು
ಮಹಾಕಾವ್ಯಗಳಿಗೆ ಗರ್ಭವೂ ನೀನು
ತುತ್ತರಸಿ ಬಂದವರ ಸಲಹಿದ ಮಹಾಮಾತೆಗಿದೋ ನಮನ.

ಕೋಟಿ ಸೂರ್ಯರ ಪ್ರಭೆಯು ನೀನು
ನೂರು ಚಂದ್ರರ ಶೀತಲತೆಯು ನೀನು
ಮಮತೆಯನು ಮೆರೆದ ವಿಶ್ವಮಾತೆಗಿದೋ ನಮನ.

ಕೋಟಿ ದೇವರುಗಳ ಹೊತ್ತವಳೆ ಮಾತೆ
ಮೇರುಗಿರಿ ಶಿಖರಗಳ ಉಟ್ಟವಳು ನೀನು
ಜಗದಾದಿ ವಂದ್ಯಳೇ ಆದಿಶಕ್ತಿಗಿದೋ ನಮನ.

ಓ ಮನುಜಾ...



ಬಣ್ಣವಿಲ್ಲದ ಹರಿಯುವ ನೀರಿಗೆ
ಅಂದ ಚಂದದಾ ಹೆಸರನ್ನಿಟ್ಟೆ,
ಬದುಕುವ ಒಂದೇ ಭುವಿಯಲಿ
ಈ ಗಡಿಗಳ ಯಾಕೆ ಕೊರೆದಿಟ್ಟೆ.

ಎಲ್ಲರು ಒಂದೇ ಎನ್ನುವ ನೀನು
ಮತ ಪಂಥಗಳ ಗೋಡೆಯನೇ ಕಟ್ಟಿಸಿದೆ,
ನಿನ್ನಲ್ಲೇ ಇರುವ ದೇವರುಗಳನು
ಕಲ್ಲು ಮಣ್ಣುಗಳಲಿ ಬಂಧಿಸಿದೆ.

ಜಾತಿಯಲೇನೊ ಒಡೆದಿಹೆ ನೀನು
ನಿನ್ನಯ ಸ್ವಂತ ಕುಲವನ್ನೇ,
ಭಾಷೆಯ ಮೇಲ್ಯಾಕೆ ಮತ್ತೆ ಒಡೆಯುವೆ
ನಿನ್ನಯ ಕರುಳು ಸಂಬಂಧಗಳ.

ಯಾರೂ ಅರಿಯದ ರೀತಿ ನೀತಿಗಳಲಿ
ನಿನ್ನಯ ನೀನೇ ಬಂಧಿಸಿದೆ,
ನಿನ್ನಯ ಅಹಂಮ್ಮಿನ ಕಾರಣಕೇನು
ಸೃಷ್ಟಿಯ ನೀನು ಹಂಗಿಸಿದೆ.

ಪ್ರಕೃತಿಯ ಹಂಗಲ್ಲಿ ನೀನು ಬದುಕಿರುವೆ
ತಿಳಿದುಕೋ ಮೊದಲು ಓ ಮನುಜ,
ಸ್ವಾರ್ಥದಿ ಏತಕೆ ಬಾಳುವೆ ಹೇಳು
ನಿನಗಿರುವುದು ಇಲ್ಲಿ ಮೂರೇ ದಿನ.

ಜೀವನ ಪ್ರೀತಿಯಾಗಬೇಕು...





ತುತ್ತು ಅನ್ನಕೆ ಪರದಾಡುವ
ಜನರ ಹಸಿವು ನೀಗಬೇಕು,
ಉಸಿರ ತುಂಬುವ ಅನ್ನಕೆ
ಬೆಳೆವ ಹೊಲವಾಗಬೇಕು.

ನೂರು ನೋವುಗಳಿಗೆ ಬಲಿಯಾಗಿಹ
ಜೀವಗಳ ಜೀವನಾಡಿಯಾಗಬೇಕು,
ಕರಗಿದ ಕನಸುಗಳಿಗೆ ಜೀವ ತುಂಬುವ
ಹೊಂಗನಸು ನಾನಾಗಬೇಕು.

ಅಜ್ಞಾನದ ಕೊಳೆ ಕಳೆಯಲು
ಸುಜ್ಞಾನದ ಬೆಳಕ ಹರಿಸಬೇಕು,
ಅಂಧಕಾರವ ದೂರಮಾಡುವ
ಪ್ರಣತಿಯ ಜ್ಯೋತಿಯಾಗಬೇಕು.

ತುಂಬಿತುಳುಕುತ್ತಿರುವ ಮೌಢ್ಯತೆಯ
ಕಸವ ಗುಡಿಸಬೇಕು,
ಮನದಂಗಳವ ಶುಚಿಯಾಗಿಸೆ
ವಿವೇಕದ ಬರಳು ನಾನಾಗಬೇಕು.

ಭಾವನೆಗಳೇ ಬರಿದಾದ ಎದೆಗಳಲಿ
ಮನುಜತೆಯ ಬೆಳಗಬೇಕು,
ಬದುಕ ರೂಪಿಸುವ ನಂಬಿಕೆಯಲಿ
ಜೀವನ ಪ್ರೀತಿ ನಾನಾಗಬೇಕು.

11 January, 2014

ಸ್ವಾರ್ಥದ ಪರಿಧಿಯ ಮೀರಿ...



ದೂರ ದಿಗಂತದಾಚೆ ಸರಿದು
ಚುಕ್ಕಿಗಳ ಲೋಕದಲಿ ಮಿನುಗುವಾಸೆ,
ಯಾರೂ ಇರದ ಆ ಲೋಕದಲಿ
ಪುಟ್ಟ ಗೂಡು ಕಟ್ಟುವಾಸೆ.

ಮತ್ತೆ ತಿರುಗಿ ನೋಡಿದರಲ್ಲಿ
ಸ್ವರ್ಗ ಸದೃಶ ಈ ಧರೆಯು,
ಹಿಂತಿರುಗಿ ಬರುವ ಆಸೆ ನನ್ನವರ ನೋಡಲು
ಮನಸೇಕೋ ಅಂಜುತಿದೆ ಇರುವ ಜಂಜಡಗಳ ನೆನೆದು.

ಏಕಾಂಗಿಯಾಗೇ ಇರಬಲ್ಲೆ ಉಸಿರು ಇರುವವರೆಗೂ
ಬೆರೆಯಲಾರೆ ನಾ ಸ್ವಾರ್ಥದಲೆಗಳ ನಡುವೆ,
ಏನೂ ಅರಿಯದ ಮುಗ್ಧತೆ ನನದಲ್ಲ
ಆದರೂ ಅಳುಕುತಿದೆ ಮನಸು ಗೋಮುಖ ವ್ಯಾರ್ಘಗಳ ನೆನೆದು.

ಸ್ವಾರ್ಥದ ಮನೆಯಂಗಳದೊಳು
ನಂಬಿಕೆಯ ಹೂವು ಅರಳಬಲ್ಲುದೇ,
ನಂಬಿಕೆಯಿಲ್ಲದ ಬದುಕು
ಸಿಹಿಯ ಫಲವ ನೀಡುವುದೇ.

ಚುಕ್ಕಿ ಚಂದ್ರಮರ ಮಂದ ಬೆಳಕೇ ವಾಸಿ
ಸ್ವರ್ಗಸದೃಶ ಭುವಿಯೊಳಗಿನ ನರಕಕ್ಕಿಂತ,
ಪ್ರೀತಿಯಿರದಿದ್ದರೂ ಸರಿಯೇ
ಸ್ವಾರ್ಥದ ನೆರಳಿಲ್ಲದ ಸಾರ್ಥಕತೆಯಿದ್ದರೆ ಸಾಕು.

ಹಂಗೇತಕೆ...



ಎದೆಹಾಲಲೇ ಪ್ರೀತಿಯಿತ್ತವಳು ಹೆತ್ತತಾಯಿ
ಶಾಂತಿಮಂತ್ರವ ಕಲಿಸಿದ ಮೊದಲಗುರು,
ಏತಕೆ ಬೇಕು ಬುದ್ಧ ಗಾಂಧಿಯ
ಶಾಂತಿ ಅಹಿಂಸೆಯ ತತ್ವದ ಹಂಗು.

ಹಸಿದ ಹೊಟ್ಟೆಗೆ ತುತ್ತು ನೀಡಿದ್ದು
ಅಪ್ಪನ ಬೆವರ ಹನಿ,
ಯಾತಕೆ ಬೇಕು ಹಸಿವು ನೀಗದ
ಜಾತೀಯತೆಯ ಹಂಗು.

ಪ್ರೀತಿಯನ್ನೇ ದೇವರಾಗಿಸಿಹೆನು
ಹೃದಯ ಮಂದಿರದಲ್ಲಿ,
ಕೋಟಿ ದೇವತೆಗಳ ಕರೆದು
ಅವಮಾನಿಸಲೇಕೆ ನಾನಿಲ್ಲಿ.

ಧರ್ಮ ಮಾರ್ಗದಲಿ ನಡೆಯಲು
ಸಂಸ್ಕೃತಿಯು ಜೊತೆಯಿರಲು,
ನೂರು ನಾಯಕರ ಮಾರ್ಗದರ್ಶನವಂತೆ
ಹಂಗೇತಕೆ ಬೇಕೆನಗೆ ಬಾಳಿ ಬದುಕೋಕೆ.

ಕಲ್ಲು ಬಂಡೆಯನೇ ಕರಗಿಸುವುದಂತೆ
ಈ ಜೀವನ ಪ್ರೀತಿ,
ಬರಿದಾದ ಎದೆಗಳಲಿ ಮನುಜತೆಯ ಬೆಳಗಲು
ಕ್ರಾಂತಿಯ ಹಂಗೇತಕೆ ಎನಗೆ.