28 February, 2016

ಪ್ರಾಣಸಖಿ...


ಚಂದಿರನ ಕರೆದು ತರುವೆ ಓ ನನ್ನ ಚಂದ್ರಮುಖಿ
ಇಂದ್ರನ ಕಟ್ಟಿ ತರುವೆ ಓ ಚೆಲುವೆ ಕಮಲಮುಖಿ
ತಾರೆಗಳ ತೊಟ್ಟಿಲಲ್ಲಿ ನಾ ನಿನ್ನ ತೂಗುವೆ ಬಾರೇ ಸಖಿ.

ನವಿಲುಗಳ ಕೂಗಿ ಕರೆವೆ ಓ ನನ್ನ ಪ್ರೀಯ ಸಖಿ
ಕಾಜಾಣ ಕೋಗಿಲೆಗಳ ಕರೆವೆ ಸ್ವರಗಳ ಕಲಿಸೋಕೆ
ಹಂಸಗಳ ಕರೆದು ತರುವೆ ನಡಿಗೇನಾ ಕಲಿಸೋಕೆ.

ಮೇಘಗಳ ಒಲಿಸಿ ಬರುವೆ ಓ ನನ್ನ ಪ್ರಾಣ ಸಖಿ
ಮುಂಗಾರು ಮಳೆಯ ಕರೆದು ತರುವೆ ನಿನ್ನ ಪಾದ ತೊಳೆಯೋಕೆ
ಮಿಂಚುಗಳ ಕೂಗಿ ಕರೆವೆ ನಿನ್ನ ದಾರಿ ಬೆಳಗೋಕೆ.

ಸುಮಗಳ ಬಾಚಿ ತರುವೆ ನಿನ್ನ ಮುಡಿಗೆ ಮುಡಿಸೋಕೆ
ಇಬ್ಬನಿಯ ಕೂಗಿ ಕರೆವೆ ನಿನ್ನ ಮುಖದಿ ಮಿನುಗೋಕೆ
ದುಂಬಿಗಳ ಜೊತೆಗೆ ಬರುವೆ ಓ ನನ್ನ ಪ್ರೇಮ ಸಖಿ.

ತಂಗಾಳಿಯ ಕರೆದು ತರುವೆ ಚಾಮರವ ಬೀಸೋಕೆ
ನೇಸರನ ಓಲೈಸಿ ಬರುವೆ ಎಳೆ ಬಿಸಿಲು ನೀಡೋಕೆ
ಬಾರೆ ನೀ ಪ್ರಾಣ ಸಖಿ ನನ್ನೊಲವ ಊರಿಗೆ.

21 February, 2016

ವಂದೇಭಾರತಮಾತರಂ...


ಸುಡುವ ಬಿಸಿಲಲ್ಲೂ ಜಡಿ ಮಳೆಯಲ್ಲೂ
ಒಂದೇ ಮಂತ್ರ ಘೋಷ,
ಸುರಿವ ಮಂಜಲ್ಲೂ ಕೊರೆಯೋ ಚಳಿಯಲ್ಲೂ
ಮೊಳಗಿಹುದು ಮಾ ತುಜೇ ಸಲಾಮ್.

ತ್ರಿವರ್ಣ ಧ್ವಜಕೆ ಎದೆ ಉಬ್ಬಿಸಿ ಹಾಡಿದೆ
ವಂದೇ ಮಾತರಮ್ ಗೀತೆ,
ಬರೀಯ ಘೋಷವಲ್ಲವಿದು ಶತೃಗಳ ಎದೆನಡುಗಿಸುವ
ದಿವ್ಯ ಮಂತ್ರ ಗೀತೆ.

ಜಾತಿ ಧರ್ಮಗಳ ಮೇರೆ ಮೀರಿ ನಿಂತಿಹುದು
ಮೂರು ಬಣ್ಣಗಳ ಶಕ್ತಿ,
ದೇಶ ಭಕ್ತಿಯನು ಬಡಿದೆಬ್ಬಿಸಿ ಕುಣಿಸುವಾ
ಜಾದು ಕಣೋ ಈ ಶಕ್ತಿ.

ತ್ಯಾಗ ಪ್ರೀತಿ ಕರುಣೆಗೆ ಕಣ್ಣು ಕಣೋ
ಅದುವೇ ಭರತ ಭೂಮಿ,
ಮತಾಂಧ ದುರುಳರ ಮೆಟ್ಟಿ ನಿಂತು ಮಣ್ಣಾಗಿಸಿದ
ಇದುವೇ ವೀರ ಪುಣ್ಯ ಭೂಮಿ.

ಕೇಳಿ ಮೂಡರೇ ತ್ರಿವರ್ಣವೇ ಸ್ಪೂರ್ತಿಯಿಲ್ಲಿ
ಕೋಟಿ ಕೋಟಿ ಯೋಧರಿಗೆ ಶತ್ರು ಸಂಹಾರಕಾಗಿ,
ಶತ್ರುಗಳ ಗುಂಡಿಗೆ ಎದೆಯ ನೀಡುತಾ
ತಾಯ ಮಡಿಲಲ್ಲಿ ತಲೆ ಇಟ್ಟು ಮಲಗೋವರೆಗೆ.


13 February, 2016

ಒಲವಿಗಾಗಿ...


ನಿನ್ನ ಹಣೆಯ ಸಿಂಧೂರ ನಾನು
ನನ್ನೆದೆಯಾ ಮಂದಾರವಾಗು ನೀನು,
ಬದುಕು ಬರೆದ ಪ್ರೀತಿಯು ನೀನು
ಪ್ರತಿ ಹೆಜ್ಜೆ ಇಡುವೆ ನಿನ್ನ ಜೊತೆಯಲ್ಲೇ.

ಕನಸುಗಳ ಚಿಲುಮೆಯು ನೀನು
ಮನಸ ಬೆಳಗೋ ಚುಕ್ಕಿಯು ನೀನು,
ಚೆಲುವಿನಲಿ ಚಂದ್ರ ಸೋದರಿ ನೀನು
ಪ್ರತಿ ಜನುಮ ನಿನಗೆ ಮೀಸಲಿಡುವೆ.

ತುಂಟ ಮನಸಿನ ಕಿನ್ನರಿ ನೀನು
ತುಂಬು ನಗುವಿನಾ ಬೊಂಬೆಯೂ,
ನನ್ನುಸಿರಿಗೆ ಹೆಸರು ನೀನು
ಕಣ್ಣರೆಪ್ಪೆಯಾಗಿ ಕಾವಲಿರುವೆ ಪ್ರತಿಕ್ಷಣವೂ.

ವಿಧಿಯು ಹರಸಿದ ಸಂಗಾತಿ ನೀನು
ನನ್ನೆದೆಯೊಳಗಿನ ಕಚಗುಳಿಯೂ,
ನನ್ನ ಭಾವಕೆ ಉಸಿರು ನೀನು
ನನ್ನ ಕನಸುಗಳ ನಿನಗೆ ಮೀಸಲಿಡುವೆ.

ಒಲವಿಗೊಂದು ಪ್ರೇಮಕಾವ್ಯ ನೀನು
ನನಗೆ ಎಂದೂ ಶೃಂಗಾರ ಕಾವ್ಯವೂ,
ಪದಗಳಾಗಿ ಕರಗಿಬಿಡುವೆ ನಾನೇ
ಒಲವ ಯಾತ್ರೆಯಲಿ ಜೊತೆಯಾಗಿಬಿಡುವೆ.

05 February, 2016

ಓ ಮನಸೇ...


ನೂರೆಂಟು ರೆಕ್ಕೆಗಳಿಲ್ಲಿ ಮನಸೆಂಬ ಹಕ್ಕಿಗೆ
ಗರಿ ಬಿಚ್ಚಿ ಹಾರಿದೆಯಿಲ್ಲಿ ಕನಸ ಆಗಸದಿ,
ನೋವುಂಟು ನಲಿವುಂಟು ಈ ಪಯಣದಲಿ
ಆಸೆಯೊಂದೆ ಜೊತೆಗಾರ ದೂರ ಸಾಗೋಕೆ.

ಒಲವ ಗುಟುಕೊಂದೆ ಜೀವಜಲವಿಲ್ಲಿ
ಗಮ್ಯವದು ಮಾಯೆಯು ಪಯಣಕಿಲ್ಲಿ,
ಗುರಿಯುಂಟು ಇಲ್ಲಿ ಗುರುವಿಲ್ಲ ಜೊತೆಗೆ
ಆತ್ಮಸ್ತೈರ್ಯವೊಂದೇ ಭೀಮಬಲವಿಲ್ಲಿ ಮನಸಿಗೆ.

ನೆನಪುಗಳ ಮೂಟೆಯ ಭಾರವಿದೆ ಜೊತೆಗೆ
ಹೊತ್ತೊಯ್ಯಲೇಬೇಕು ಪಯಣ ಸಾಗುವವರೆಗೆ,
ದಣಿವಾರದ ಪಯಣ ಮನಸಿಗಿಲ್ಲಿ
ಒಮ್ಮೆ ನಿಂತರೂ ಸಾಕು ಬದಲಾಗುವುದು ದಿಕ್ಕು.

ಕಾಲದಾ ಹಂಗಿಲ್ಲದ ಪಯಣವಿದುವು
ಪ್ರತಿಕ್ಷಣವೂ ಹೋರಾಟ ಹೊಸತನಕ್ಕೆಂದು,
ಶತ್ರುಗಳು ಹೊರಗಿಲ್ಲ ಕಾಲು ಎಳೆಯೋಕೆ
ಮೋಹವೆಂಬ ಮಾಯೆ ಆವರಿಸಿಕೊಳ್ಳೊವರೆಗೆ.

ಬಂಧನವಿಲ್ಲ ಹಾರೊ ಹಕ್ಕಿಗೆ ಇಲ್ಲಿ
ಸಂಭಂದಗಳ ಜಾಲದಲಿ ಸಿಕ್ಕಿ ಬೀಳುವವರೆಗೆ,
ಮುಗಿಯದಾ ಪಯಣವಿದು ನಿತ್ಯನಿರಂತರ
ದೇಹವೆಂಬ ಗೂಡೊಳಗೆ ಉಸಿರ ಕಾಳು ಮುಗಿವವರೆಗೆ.