ಕಡಲಿಗಿಂತಲೂ ಅಗಾಧ ಮನಸ ಪರಿಧಿ
ಭೋರ್ಗರೆವ ಭಾವಗಳು ಅಲೆಗಳಿಗಿಂತ ಭಾರಿ,
ಮನಸಿಲ್ಲಿ ಭೂಮಿ ಬಾನಿಗೂ ಎತ್ತರ
ಭಾವಗಳಿಲ್ಲಿ ಗುಡುಗು ಸಿಡಿಲಿನಂತೆ ಎಚ್ಚರ...
ಬಿರುಸಾಗಿ ಸುರಿವ ಮಳೆಯು ಕೂಡ
ತೊಳೆಯಲಾರದು ಕೊಳೆಯಾ,
ಜೋರಾಗಿ ಬೀಸೊ ಬಿರುಗಾಳಿ ಕೂಡ
ಹೊತ್ತೊಯ್ಯಲಾರದು ಮನಸ ಕೊಳೆಯಾ...
ಸುಡುವ ಸೂರ್ಯ ಕಿರಣಗಳಿಗೂ
ಕರಗಲಾರದು ಅಂಧಕಾರ,
ಭೂಮಿಯೇ ಬಾಯ್ತೆರೆದರು ಕೂಡ
ಮಣ್ಣಾಗದು ಮನಸ ವಿಷವೂ...
ತಂಪಾಗಿ ಬೀಸೊ ತಂಗಾಳಿ ಕೂಡ
ತಣಿಸಲಾರದು ಈ ಉರಿಯಾ,
ಮುತ್ತಂತೆ ಸುರಿವ ಮಂಜು ಕೂಡ
ಮಣಿಸಲಾರದು ಮನಸ ನಂಜನೂ...
ಆಗಸದೆತ್ತರದ ಮನಸ ಕಟ್ಟಿ ಹಾಕಬೇಕಿದೆ,
ಪ್ರೀತಿಯೆಂಬ ಜಗದ ಹುಣ್ಣಿಮೆಯ ಬೆಳಕಿನಿಂದ,
ತೊಳೆಯಬೇಕಿದೆ ಮನಸ ಕೊಳೆಯಾ
ಬೆಳಗಬೇಕಿದೆಯಿಲ್ಲಿ ಮನುಜತೆಯ ಜ್ಯೋತಿಯೊಂದ...
No comments:
Post a Comment