31 December, 2019

ಸಂವತ್ಸರ...

ಕಾಲ ಉರುಳಿ ಸಂವತ್ಸರಗಳಾದರೂ
ನಿನ್ನೊಲುಮೆಗೆ ನಾ ಕಾಯುವೆ,
ಸಂವತ್ಸರಗಳು ಉರುಳಿ ಯುಗವಾದರೂ
ನಿನ್ನ ನೆನಪಲ್ಲೇ ನಾ ಮಣ್ಣಾಗುವೇ...

ನಿನ್ನೊಲವಿಗೆ ಇಲ್ಲಿ ಸಾಟಿಯಿಲ್ಲಾ
ಯುಗ ಉರುಳಿ ಮನ್ವಂತರಗಳಾದರೂ,
ಮತ್ತೆ ಮತ್ತೆ ಹುಟ್ಟಿ ಬರುವೆ ನಿನಗಾಗಿಯೇ
ಕಾಯಬೇಕು ನೀನು ನನಗಾಗಿಯೇ...

ಜನುಮ ಜನುಮದಾ ಈ ಬಂಧ
ಇರಲಿ ಇನ್ನೂ ನೂರಾರು ಜನುಮ,
ಓ ಒಲವೇ ನೀ ನನ್ನ ಕನಸೂ ಎಂದಿಗೂ
ಮರೆಯಾಗಬೇಡ ಮನಸ ಅಂಗಳದಿ...

ಕಾಲದ ಓಟದಲಿ ಕಣ್ಣಿಂದ ಮರೆಯಾದರೂ
ಒಲವ ಹೂವೆಂದೂ ಬಾಡದಿರಲಿ,
ನಗುವ ನಿನ್ನಾ ನಯನದೊಳಗೆ
ನನ್ನ ಪ್ರತಿಬಿಂಬವೆಂದೂ ಮಾಸದಿರಲಿ...

09 December, 2019

ಒಲವ ಧ್ಯಾನ...

ಸೋಲು ಹಿತವಾಗಿತ್ತು ಒಲವೇ
ನಿನ್ನ ಹುಡುಕಾಟದ ಆಟದಲ್ಲಿ,
ಗೆಲ್ಲಲೇಬೇಕೆಂಬ ಹಠದೊಳಗೆ
ನಿನ್ನೇ ಮರೆತು ಹೋದೆ ಬದುಕಲಿ...

ಮತ್ತೆ ಮತ್ತೆ ಸೋಲುತ್ತಿರುವೆ ಬದುಕಲಿ
ನೀನು ನನ್ನೊಳಗಿಲ್ಲವೆಂಬ ವ್ಯಥೆಯಲಿ,
ಬದುಕನ್ನೇ ಗೆಲ್ಲುವ ಭರದಲಿ
ಕಳೆದುಕೊಂಡೆ ನನ್ನಯ ಭ್ರಮೆಯಲಿ...

ಒಲವೇ ನೀನೊಂದು ಕನಸು ಬದುಕಲಿ
ಜೊತೆಯಾಗಬೇಕೆಂಬ ಹಂಬಲವಿಲ್ಲ ಮನಸಲಿ,
ಕನಸಾಗಿಯೇ ಉಳಿದುಬಿಡು ಈ ಯಾತ್ರೆಯಲಿ
ಸೋಲುವುದ ಕಲಿತಿರುವೆ ನೀನಿಲ್ಲದೇ...

ಸೋಲಿರಲಿ ಗೆಲುವೇ ಬರಲಿ ಬದುಕಲಿ
ಕನಸೆಂದೂ ನನ್ನ ಜೊತೆಗಿದೆ ಹಗಲು ಇರುಳಲಿ,
ನೀನಿರದ ಕನಸಿಲ್ಲ ನನ್ನ ಜೊತೆಯಲಿ
ಪ್ರತಿಕ್ಷಣವೂ ಒಲವಾಗಿದೆ ಬದುಕಿನ ಯಾತ್ರೆಯಿಲ್ಲಿ...

25 November, 2019

ಪಯಣ...

ನನ್ನೊಳಗೆ ನಾನು ಮಿತಿಮೀರದಂತೆ
ಬದುಕಲ್ಲಿ ನೋವೊಂದು ಇರಬೇಕಿದೆ,
ಮನಸಿಗಾದರೂ ಸರಿ ದೇಹಕ್ಕಾದರೂ ಸರಿಯೇ
ಹಿತವಾದ ನೋವಿಲ್ಲಿ ಬೇಕಾಗಿದೆ...

ನೋವಲ್ಲೂ ನಗಲು ಕನಸೊಂದು
ಬದುಕಲ್ಲಿ ಇರಬೇಕು ಇಲ್ಲಿ,
ಕನಸಲ್ಲು ಕಾಡೋಕೆ ಈಗ
ಮನಸೊಳಗೆ ಪ್ರೀತಿ ಇರಬೇಕಿದೆ...

ಪ್ರೀತಿನ ಕಾಯೋಕೆ ಇಲ್ಲಿ
ಮನಸೊಳಗೆ ಭಾವಗಳ ಮೇಳ ನಡಿಬೇಕಿದೆ,
ಭಾವಗಳ ಜೊತೆಯಾಗಿ ಪೊಣಿಸೋದಕ್ಕೂ
ಖುಷಿಯ ಸಹಾಯ ಬೇಕಾಗಿದೆ...

ನನ್ನೊಳಗಿನ ನನ್ನ ಮರೆಸಿ
ಪ್ರೀತಿಯ ಹಂಚಿ ಮುಂದೆ ನಡಿಬೇಕಾಗಿದೆ,
ನಡಿಯೋ ಕಾಲಿಗೆ ತೊಡಕಾಗೊ
ಭಾವಗಳ ಇಲ್ಲೇ ಬಿಟ್ಟು ಮುಂದೆ ಸಾಗಬೇಕಿದೆ...

10 November, 2019

ಓ ಮನಸೇ...

ಜಗವ ಕಾಯುವಾ ದೇವನಿಗೂ
ತಪ್ಪಲಿಲ್ಲಾ ಲೋಕ ನಿಂದನೆ,
ಹುಟ್ಟಿ ಸಾಯುವ ಓ ಜೀವವೇ
ನಿನಗೆ ತಪ್ಪೀತೆ ಇಲ್ಲಿ ವಿಡಂಭನೆ...

ಜಗವು ತೋರದು ನಿನಗೆ ದಾರಿಯಾ
ತೂರಬಹುದು ಬರಿ ಮಾತಿನ ಬಾಣವ,
ನಡೆದು ತೋರಿಸೆ ನಿನ್ನದೇ ದಾರಿಯ
ಜಗವೇ ತಿರುಗಿ ನೊಡುವುದು ನಿನ್ನಯಾ...

ಹತ್ತಿ ನಿಲ್ಲು ಅವಮಾನಗಳ ಮೆಟ್ಟಿಲು
ಹೊತ್ತು ತಿರುಗುವುದು ಅವಕಾಶಗಳ ತೊಟ್ಟಿಲು,
ಎಡವಿ ಬೀಳದಿರು ಯಶಸ್ಸಿನ ಹೊಸ್ತಿಲು
ಜಗವು ನಗಲು ಸಾಕದುವೆ ಕಾರಣವೂ...

ನಿಂದಿಸಿ ಬೆಳೆದವರಿಲ್ಲಾ ಜಗದಲಿ
ನಿಂದನೆಯ ಸಹಿಸಿ ಬೆಳೆದವರೆ ಇಲ್ಲಿ,
ಹಸಿವು ಅವಮಾನಗಳೇ ಗುರುವು ಇಲ್ಲಿ
ತಲೆ ಎತ್ತಿ ನಡೆಯಲು ಬದುಕಲಿ...

25 October, 2019

ಯಾತ್ರೆ...

ಬದುಕೇ ಇಲ್ಲಿ ಮೌನ
ಮನಸೇ ನೀನು ಕನಸ ಮರೆತರೆ,
ಬದುಕು ಇಲ್ಲಿ ಮಹಾಕಾವ್ಯ
ಮನಸೇ ನೀನಿಲ್ಲಿ ಬೆರೆತು ನಡೆದರೆ...

ಬದುಕಿಲ್ಲಿ ಕಾಲದ ಜೊತೆಗಿನ ಓಟ
ಕನಸೇ ಅದಕ್ಕಿಲ್ಲಿ ಊಟ,
ಭರವಸೆಯೇ ದಾರಿದೀಪ
ನಡೆಯಬೇಕಷ್ಟೇ ನೀನಿಲ್ಲಿ ದೂರ...

ಭಾವಯಾನವಿದು ಬದುಕು
ಒಂಟಿಯಿಲ್ಲಿ ಪ್ರತಿಯೊಬ್ಬರೂ,
ಹುಟ್ಟು ಸಾವಿನ ನಿಲ್ದಾಣಗಳ ನಡುವೆ
ಸಿಗುವವರೆಲ್ಲ ನಮ್ಮವರೆಂಬ ಭ್ರಮೆಯಷ್ಟೇ...

ಮನಸೇ ನೀನು ನಗುತಿರು ಇಲ್ಲಿ
ನಿನ್ನಯ ಕನಸಿನ ಲೋಕದಲ್ಲಿ,
ಭಾವ ಸಾಗರದಲ್ಲಿ ಹೊಳೆಯುವ ಮುತ್ತಾಗಿ
ನಲಿಯುತಿರು ನೀ ಜೀವನ ಯಾತ್ರೆಯಲಿ...

09 October, 2019

ಭಾವಯಾನ...

ಎಷ್ಟೋ ಭಾವನೆಗಳಿಗೆ
ಹೆಸರಿಲ್ಲಾ ಇಲ್ಲಿ,
ಎಷ್ಟೋ ಪ್ರೀತಿಗೆ ಇಲ್ಲಿ
ಕನಸುಗಳೇ ಇಲ್ಲಾ...

ಎಷ್ಟೋ ಬದುಕಲಿ
ಭರವಸೆಯೂ ಇಲ್ಲಾ,
ಅದೆಷ್ಟೋ ಜೀವಗಳಿಗೆ ಇಲ್ಲಿ
ಬೆಳಕಿನ ಪರಿಚಯವೇ ಇಲ್ಲಾ...

ಎಷ್ಟೋ ಕಂಗಳಿಗೆ
ನಿದಿರೆಯೆ ಇಲ್ಲಿಲ್ಲಾ,
ಎಷ್ಟೋ ಮನಸುಗಳಿಗೆ
ನೆಮ್ಮದಿಯೂ ಇಲ್ಲಾ...

ಎಷ್ಟೋ ಒಡನಾಟಗಳಿಗೆ
ಸಂಬಂಧಗಳ ಹಂಗಿಲ್ಲಾ,
ಪ್ರೀತಿಸುವ ಜೀವಗಳಿಗೆ
ನೋವಿನ ಚಿಂತೆಯೇ ಇಲ್ಲಿಲ್ಲಾ...

ಕ್ಷಣ ನಿಲ್ಲದೆ ಓಡೋ ಕಾಲಕ್ಕೂ
ಕರುಣೆಯ ಮಾತೇ ಇಲ್ಲಾ,
ಬದುಕಲಿ ಬರುವ ತಿರುವುಗಳಿಗೆ
ಯಾವ ದಿಕ್ಷೂಚಿಯು ಇಲ್ಲಿಲ್ಲಾ...

26 September, 2019

ಹೃದಯ ಗೀತೆ...

ಮನಸು ಕೇಳಿದೆ ನಿನ್ನೇ ಓ ಪ್ರೀತಿಯೇ
ಹೃದಯ ಕರೆದಿದೆ ನಿನ್ನೇ ಬಾ ಪ್ರೀತಿಯೇ,
ಕನಸು ಹುಡುಕಿದೆ ಇಲ್ಲಿ ನಿನ್ನ ಸನಿಹ
ಭಾವನೆಗಳ ಜಾತ್ರೆಯಲಿ ಬಾ ತೇರನು ಏರಿ...

ಹೊಸದೊಂದು ಕನಸಿಲ್ಲಿ ಶುರುವಾಗಲಿ
ನಿನ್ನಾ ಜೊತೆ ಜೊತೆಯಲಿ ಈಗ,
ಒಲವಿನ ಹೊಸ ಹೆಜ್ಜೆ ನಿನ್ನಿಂದ
ಓ ಪ್ರೀತಿಯೇ ನಿನ್ನ ಸಹವಾಸದಿಂದ...

ಅರಳೋ ಮಲ್ಲಿಗೆಯಂತೆ ಅರಳು ನೀ
ಹೃದಯದ ನಂದನವನದಿ,
ನಗುವಾ ಗುಲಾಬಿಯಾಗು ಬದುಕಿಗೆ
ನೋವು ನಲಿವುಗಳ ಈ ಸಂತೆಯೊಳು...

ಪ್ರೀತಿಯೇ ಬದುಕಿದು ನಿನ್ನಯ ವರದಾನ
ನೀನಿಲ್ಲದೆ ಖಾಲಿ ಎಲ್ಲಾ ಇಲ್ಲಿ,
ಮೌನವು ಹಿತವಾಗಿಹುದು ನೀ ಜೊತೆಯಿರಲು
ಭಾವವೆಲ್ಲಾ ಸುಂದರ ಕಾವ್ಯ ನಿನ್ನಾ ಕನವರಿಕೆಲಿ...

11 September, 2019

ಗುರು...

 ಅರಿವೇ ಗುರುವು ಮರೆವಿನ ಮನಸಿಗೆ
ಅರಿಯದ ಮಾತನು ಮನಸಿಗೆ ಅರಹೇ,
ಮುರಿಯದ ಮೌನವು ತಾಳ್ಮೆಗೆ ಗುರುವು
ಮರೆಯದ ವ್ಯಥೆಯಾ ಮನಸಿಗೆ ತಿಳಿಸೇ...

ತಾಳ್ಮೆಯೇ ಗುರುವು ಬದುಕಿಗೆ ಇಲ್ಲಿ
ಸುಡುವ ಕೋಪವ ಸುಡಲು ಬದುಕಲಿ,
ನಗುವೇ ಗುರುವು ನೆಮ್ಮದಿಗೆ ಇಲ್ಲಿ
ಮನಸಿನ ಗಾಯಕೆ ಇದುವೇ ಮುಲಾಮು...

ಕರುಣೆಯೇ ಗುರುವು ಮನುಜತೆಗೆ ಇಲ್ಲಿ
ಪ್ರೀತಿಯ ಪಾಠವ ಹೃದಯಕೆ ಒಪ್ಪಿಸಲು,
ಮರೆತ ಮಾನವೀಯತೆಯ ಮನಸಿಗೆ ತಿಳಿಸೇ
ಪ್ರೀತಿ ಸ್ನೇಹಗಳೇ ಗುರುಗಳು ಇಲ್ಲಿ...

ಬದುಕಿನ ಪಯಣದಿ ಗುರಿಗಳು ಹಲವು
ಗುರಿಯ ತಲುಪಲು ಗುರುಗಳು ಕೆಲವು,
ಕಾಲಚಕ್ರದಲಿ ಕಾಲವೇ ಗುರುವೂ
ಹುಚ್ಚು ಮನಸಿಗೊಂದು ಲಗಾಮು ತೊಡಿಸಲು...

30 August, 2019

ಹಾಡು ಪಾಡು...

ಬದುಕಿನ ಈ ಯಾತ್ರೆಯಲಿ
ಪ್ರೀತಿಯ ಪುಟ್ಟ ಊರೊಳಗೆ,
ಕನಸಿನ ಬುತ್ತಿಯ ಕಟ್ಟಿಕೊಂಡ
ಅಲೆಮಾರಿಯ ಹಾಡುಪಾಡು ನನ್ನದು...

ನೆತ್ತಿಯ ಸುಡುತಿದೆ ನೆನಪಿನ ಕಿರಣಗಳು
ಆದರೂ ಹೃದಯದಿ ಬೀಸಿದೆ ತಂಗಾಳಿ,
ಪ್ರೀತಿಯ ಈ ಕನವರಿಕೆ
ಮರೆಸಿದೆ ಸವೆಸಿದ ದಾರಿಯ ಚಡಪಡಿಕೆ...


ಯಾವುದೋ ಊರು ಎಲ್ಲಿಗೋ ಪಯಣ
ಮನಸು ಮಾತ್ರ ಜೊತೆಗಿಲ್ಲಾ,
ಪ್ರೀತಿಯ ಗುಡಿಯಾ ಹುಡುಕುತ್ತಾ
ಹೊರಟಿಹ ಮನಸಿಗೂ ಪರಿಧಿಯ ಹಂಗಿಲ್ಲಾ...

ಕನಸಿನ ಬುತ್ತಿಯ ತುಂಬಾ ಹೊಸ ರುಚಿಯಿರಲು
ಮರೆತಿದೆ ಮನವು ಹಸಿವಿನ ಹಾಡು,
ಪ್ರೀತಿಯ ಕನಸಲಿ ಮನ ತೇಲಿರಲು
ಬದುಕಿನ ಪಾಡದು ಹಾಡಾಗಿದೆ...

20 August, 2019

ಕನವರಿಕೆ...

ಬದುಕು ಇಲ್ಲಿ ಭರವಸೆಯೂ
ನಾಳೆಯಾ ಕನಸಿಗೆ,
ಕನಸಿಲ್ಲಿ ತೋರಣವೂ
ನಾಳೆಗಳ ಪಯಣಕ್ಕೆ...

ನೆನಪುಗಳೆಲ್ಲಾ ಹಾಡಾಗಿ
ಗುನುಗುತಿವೆ ಸಂಗೀತ,
ಇಂದು ನಿನ್ನೆಗಳ ದಣಿವಿಲ್ಲಿ
ನಾಳೆಯಾ ಪಯಣಕ್ಕೆ ಅಡ್ಡಿಯಾಗದಿರಲೆಂದು...

ಕನವರಿಸು ಓ ಬದುಕೇ
ಪ್ರೀತಿಯನು ಎಂದೂ,
ನಡೆಯುತಿರಲಿ ಈ ಪಯಣ
ನಾಳೆಯಾ ನಾಳೆಗಳಲಿ ನಿತ್ಯ ನಿರಂತರ...

ಹರಸು ನೀನಿಲ್ಲಿ ಓ ಬದುಕೇ
ಭರವಸೆಯಾ ಕಿರಣಗಳ,
ಏಳು ಬೀಳುಗಳ ಕೋಟೆಯ ದಾಟಿ
ಮುನ್ನಡೆಯಬೇಕಿದೆ ಜಗದಲ್ಲಿ...

27 July, 2019

ನನ್ನ ಕನಸು...

ಮಗುವಾಗಿ ನಲಿಯಲು ನೀನು
ಮೈ ಮರೆತೆ ಬದುಕಲಿ ನಾನು,
ತುಂಟಾಟ ಆಡಲು ನೀನು
ಗುರುವಂತೆ ಗದರಿದೆ ನಾನು...

ನಂಬಿರುವಾ ದೈವವೇ ನೀನು
ಮಗುವಾಗಿ ಜೊತೆಯಾದೆಯಾ ಇಲ್ಲಿ,
ನೂರು ಸೋಜಿಗವೂ ನನಗೇ ಇಲ್ಲಿ
ನಿನ್ನಯಾ ಲೀಲೆಗಳಿಗೆ ಸಾಕ್ಷಿಯಾಗಿ...

ತುಸು ಕೋಪ ಮತ್ತೆ ನಗುವಲ್ಲಿ
ಸೋಲಿಸಲಾಗದ ಹಠವೂ ಜೊತೆಯಲ್ಲಿ,
ನಗಿಸಿ ನಗುವಾ ಜಾದು ನಿನ್ನದೂ
ಕಣ್ಣಂಚಲಿ ನೀರ ಜಿನುಗಿಸುವಾ ಪರಿಯಲ್ಲಿ...

ಮನೆಯೊಳಗೆ ನೀನೊಂದು ಪರಪಂಚ
ನಿನ್ನೊಳಗೆ ತುಂಬಿದೆ ಬ್ರಹ್ಮಾಂಡ,
ಮಗುವಲ್ಲಾ ನೀ ಮಾಯಾಜಾಲ
ಬದುಕ ಹರಸಿದಾ ಪುಟ್ಟ ಕಿನ್ನರೀ...

ಖುಷಿಯಲ್ಲಿ ಅರಳುತಿರು ನೀನು
ನಗೆಯಾ ದುಂಡು ಮಲ್ಲಿಗೆಯಾಗಿ,
ಉರುಳೋ ಕಾಲದ ಜೊತೆಗೆ
ಉಳಿದುಬಿಡು ಕರಗದ ಕನಸಂತೆ...

14 July, 2019

ಬದುಕಿನ ಪುಸ್ತಕ...

ಬದುಕಿನ ಪುಸ್ತಕ ತೆರೆದಾಗ
ಪ್ರೀತಿಯ ಪುಟವೇ ಹರಿದಿತ್ತು,
ಹುಡುಕಲು ನಾನು ಹೊರಟಾಗ
ಬರೆಯದೆ ಉಳಿದ ಮಾತುಗಳಲ್ಲಿ ತಡೆದಿದ್ವು...

ಸ್ನೇಹದ ಪುಟಗಳ ನಾ ತೆರೆದಿದ್ದೆ
ನೆನಪುಗಳಲ್ಲಿ ಅರಳಿದ್ವು,
ಮುಂದಿನ ಪುಟವ ಹೊರಳಿಸಲು
ಮನಸ್ಯಾಕೋ ಅಲ್ಲೇ ನಿಂತಿತ್ತು...

ಮನಸು ಸುಮ್ಮನೆ ನಗುತಿತ್ತು
ಅದರೆ ಒಳಗೊಳಗೆ ಅಲ್ಲಿ ಅಳುವಿತ್ತು,
ಸಂಬಂಧಗಳ ಪುಟವಾ ನಾ ತಿರುವಿದ್ದೆ
ಅಲ್ಲೆಕೋ ಜಾಗ ಇನ್ನೂ ಖಾಲಿ ಉಳಿದಿತ್ತು...

ಮುಂದಿನ ಪುಟವ ಓದಲು ನಾ
ಮನಸಲಿ ಯಾಕೋ ಅಳುಕಿತ್ತು,
ನಂಬಿಕೆಯಾ ಹಾಳೆಯಲ್ಲಿ ಕಿತ್ತೋಗಿತ್ತು
ನನಗರಿಯದೆ ಕಣ್ಣೀರಲ್ಲಿ ಜಾರಿತ್ತು...

ಖುಷಿಯಾ ಹಾಳೆಯಾ ಮನ ಹುಡುಕಿತ್ತು
ಪುಸ್ತಕ ಮುಗಿದರು ಅದು ಸಿಗಲಿಲ್ಲಾ,
ಬರೆಯದೆ ಉಳಿದಾ ಪುಟದೊಳಗೆ
ಖುಷಿಯೂ ಹಾಗೆ ಉಳಿದಿತ್ತು...

06 July, 2019

ಚಂದ್ರಬಿಂಬ...

ಮೋಡದ ಮರೆಯಲಿ ಆಡುವ ಚಂದಿರ
ನಿನ್ನಾ ಆಟ ನನಗಿಷ್ಟ,
ಬದುಕಲಿ ನೋವಿನ ಜೊತೆಯಲಿ ಹಾಗೆ
ಆಡುವುದಿಲ್ಲಿ ಬಲು ಕಷ್ಟ...

ನಿನ್ನಯ ಹುಣ್ಣಿಮೆ ಬೆಳದಿಂಗಳು
ಭೂಮಿಗೆ ಇಲ್ಲಿ ಬಲು ತಂಪು,
ಬಾಳಿನ ಪಯಣದಿ ಬರುವಾ ನಲಿವವು
ಹೃದಯಕ್ಕಿಲ್ಲಿ ಬಲು ಇಂಪು...

ಓಡಿ ದೂರ ಹೋಗುವವಲ್ಲಿ
ನಿನ್ನಾ ಜೊತೆಗಿಹ ಮೋಡಗಳು,
ಬಂದರೆ ಜೊತೆಯ ಬಿಡುವುದೆಯಿಲ್ಲಾ
ನನ್ನೀ ಚಿಂತೆಯ ಮೋಡಗಳು...

ಮೋಡಗಳ ಜೊತೆಗೆ ನಿನ್ನದು ಎಂದೂ
ಕಣ್ಣ ಮುಚ್ಚಾಲೆಯ ತುಂಟಾಟ,
ನೋವು ನಲಿವುಗಳ ಬದುಕಲ್ಲಿ
ನನ್ನದು ದಿನವೂ ಜೂಟಾಟ...

ಆದರೂ ನಮ್ಮಿಬ್ಬರದೂ ಒಂದೇ ಪಾಡು
ಒಂದೇ ಒಂದು ವಿಷಯದಲಿ,
ನೀನು ಉಬ್ಬುವೆ ನೀನು ಕುಗ್ಗುವೆ
ನನ್ನಯ ಹಾಗೆ ಕಾಲದ ಓಟದಲಿ...

19 June, 2019

ಬರಹ...

ಎಲ್ಲೋ ಕುಳಿತು ಬರೆದುಬಿಟ್ಟ
ನಮ್ಮ ನಿಮ್ಮ ಹಣೆಬರಹ,
ಏನೂ ಅಂತ ಬರೆದಾ ಕಾಣೆ
ನಮ್ಮೊಳಗೆ ಅದು ವಿಧಿ ಬರಹ...

ಹುಡುಕಲು ಹೊರಟರೆ ಸಿಗಲೇ ಇಲ್ಲಾ
ಬ್ರಹ್ಮನು ಬರೆದಾ ಆ ಬರಹ,
ಯಾವ ಭಾಷೆಯಾ ಲಿಪಿಯಲ್ಲಿದೆಯೋ
ಕಣ್ಣಿಗೆ ಕಾಣದ ಆ ಬರಹ...

ಯಾರಿಗೆ ಯಾರದೋ ಸಂಬಂಧ
ಕಟ್ಟಿಬಿಟ್ಟೆ ನೀ ಬರುವ ಮುಂಚೆನೇ,
ಎಲ್ಲೋ ಹುಟ್ಟಿದ ಜೀವಿಗೆ
ಇನ್ನೆಲ್ಲಿಯದೋ ನೀರಿನ ಋಣವಂತೆ...

ಬದುಕನು ಮಾಡಿದೆ ಪರದಾಟ
ನಮ್ಮನು ನಾವೇ ಹುಡುಕುವ ಹೋರಾಟ,
ನಿನ್ನಯ ಮಾಯೆಯ ಆ ಬರಹ
ತಿಳಿಯದೆ ಬದುಕಲಿ ನಡೆದಿದೆ ಹಾರಟ...

21 May, 2019

ಮುಕುಂದಾ...

ಹಾಡುವೆ ಬಾ ನಾನು ಲಾಲಿ ಪದ
ಮಗುವಾಗಿ ಮಡಿಲೇರು ನೀ ಇಲ್ಲಿ,
ನನ್ನೆದೆಯಾ ಬೃಂದಾವನದಿ ನಲಿದಾಡೆ
ಬಾ ಬೇಗ ನೀ ಓ ಮುದ್ದು ಕೃಷ್ಣಾ...

ನೀನಿಲ್ಲದೇ ಕತ್ತಲಾಗಿದೆ ಬದುಕೆಲ್ಲಾ
ಮತ್ತೊಮ್ಮೆ ನೀ ಬಾರೋ ಬೇಗ,
ಮುದ್ದಿಸಬೇಕು ನಾ ನಿನ್ನ ಮನಸಾರೆ
ಬಂದುಬಿಡು ಕಾಯಿಸದೆ ನೀನೀಗ...

ಮನಸೆಲ್ಲಾ ಬರಡಾಗಿದೆ ಈಗ
ನಿನ್ನಾ ನಗುವಾ ಕಾಣದೆ ಇಲ್ಲಿ,
ಹಚ್ಚು ಬಾ ನಗುವಿನ ದೀಪ
ಮನಸುಗಳ ಮನೆಯಲ್ಲಿ ನೀನು...

ನೀನೇ ಮಗುವಿಲ್ಲಿ ನೀನೇ ನಗುವಿಲ್ಲಿ
ನೀನೇ ಈ ಗೋಕುಲದ ಪರಪಂಚ,
ಪ್ರೀತಿಸೋ ಹೃದಯಗಳು ಕಾಯುತಿವೆ ನಿನಗಿಲ್ಲಿ
ಕಣ್ಣೀರು ಕರಗೋ ಮುಂಚೆ ಬರಬೇಕು ನೀನಿಲ್ಲಿ...

ಮಾಯೆಯನು ಕರಗಿಸಿ ಮಗುವಾಗು ಬಾ
ಮಡಿಲೇರಿ ಆಡು ಮುದದಿಂದ,
ಕಣ್ಣೀರ ಒರೆಸಿ ಪನ್ನೀರ ಚೆಲ್ಲಿ
ಪ್ರೀತಿಯ ಲೋಕವ ತೆರೆದಿಡು ಬಾ...

16 May, 2019

ವಿದಾಯ...

ಯಾವ ಜನ್ಮದ ಶಾಪವೋ
ಯಾರು ಮಾಡಿದ ಪಾಪವೋ,
ನಾಲ್ಕು ದಿನಕೆ ನೀನು ಬಂದೆ ಬಾಳಿಗೆ
ಹೊರಟು ಹೋದೆ ಮತ್ತೆ ಬಾರದ ನಿನ್ನೂರಿಗೆ...

ವಿಧಿಯ ಯಾವ ಕಳ್ಳಾಟವೋ
ನಿನ್ನ ಇಲ್ಲಿ ನರಳಾಡಿಸಿತೋ,
ಯಾವ ಕಣ್ಗಳ ಕ್ರೂರ ದೃಷ್ಟಿಯೋ
ಏಳು ಜನ್ಮಗಳ ನೋವನಿಲ್ಲಿ ಉಣಿಸಿತೋ...

ಯಾವ ಶಾಪದ ಮುಕ್ತಿಗೆ
ನೀನು ಧರೆಗಿಳಿದು ಬಂದೆಯೋ,
ಯಾರ ಕೇಳಲಿ ಈಗ ನಾ
ನೀನು ದೇವ ಯಕ್ಷ ಕಿಂ ಪುರುಷನೋ...

ನಾಲ್ಕು ದಿನದ ಮಮತೆ ಪಡೆಯಲು
ಬಂದು ನೀನು ಹೋದೆಯಾ,
ನೀನು ಆಡಿದ ಮಡಿಲದು
ಖಾಲಿಯಾಗಿದೆ ನೋಡು ಬಾ...

ವಿಧಿಯೇ ನಾನು ಏನು ಕೇಳಲಿ ನಿನ್ನಲಿ
ಕರುಳ ಹಿಂಡುವ ಈ ನೋವಲಿ,
ಬದುಕು ಇಲ್ಲಿ ನಶ್ವರ ಅನ್ನೊದಂತೂ ಸತ್ಯವೇ
ಆದರೂ ನಿನಗಿದೆಯಿಲ್ಲಿ ಕಣ್ಣೀರಿನ ಶಾಪವೂ...

27 April, 2019

ಮಾಯೆ...

 ನೀನೇ ಬರಿ ನೀನೇ
ಕಣ್ಣಿಗೆ ಕಾಣದ ಖಾಲಿತನ ನೀನೇ,
ನಂಬಿಕೆಗೆ ನೀನೇ ದೈವದಂತೆ
ಬಂಧುವು ನೀನೇ ತಂದೆ ತಾಯಿಯಂತೆ...

ಹಂಬಲಿಸಿದೆ ನಾನು ನೋಡಲು ಒಮ್ಮೆ
ಹುಡುಕಲೇ ಇಲ್ಲಾ ನನ್ನೊಳಗೊಮ್ಮೆ,
ಮರೆಸಿದೆ ನೀನು ನೋವಿನ ಭಾವ
ಕಾಣಲೇ ಇಲ್ಲಾ ಆದರೂ ನಿನ್ನಾ...

ನೀನೆಂದೂ ಕೈಗೆಟುಕದ ಆಕಾಶ
ನನ್ನೊಳಗೆ ನೀನು ಮತ್ತೊಂದು ಅವಕಾಶ,
ನಿನ್ನಾ ನಂಬಿಕೆಯೇ ನನಗಿಲ್ಲಿ ಔಷಧಿಯೂ
ನನ್ನೊಳಗೆ ನೀನೊಂದು ಪ್ರಪಂಚವೂ...

ದಾರಿ ತೋರಿ ಮುನ್ನಡೆಸೋ ಶಕ್ತಿಯೂ ನೀನು
ನನ್ನ ಪ್ರಾರ್ಥನೆಯೊಳಗೆ ಭಕ್ತಿಯೂ ನೀ,
ಜಗ ನಡೆಸೋ ಶಕ್ತಿಯೂ ನೀನು
ದೇವರೆನ್ನದೆ ನಿನ್ನ ಸಖನೆನ್ನಲೇ...

21 April, 2019

ಹೋರಾಟ...

ಹುಟ್ಟು ಒಂದು ಹೋರಾಟ
ಸಾವು ಬಂದು ಎದುರು ನಿಲ್ಲೋವರೆಗೂ,
ಜೀವನ ಒಂದು ಬಡಿದಾಟ
ಪ್ರೀತಿ ನಿನ್ನ ಹುಡುಕಾಟದೊಳಗೆಲ್ಲಾ...

ಜೀವನ ಒಂದು ಹುಡುಕಾಟ
ಸ್ನೇಹವೆಂಬ ಆಸರೆ ಸಿಗೋವರೆಗೂ,
ಕಳೆದುಕೊಳ್ಳೋ ಭೀತಿಯೊಳಗೆ
ಸಿಕ್ಕಿದ್ದೆಲ್ಲಾ ನನ್ನದೇ ಅನ್ನೊ ಅಹಂಕಾರ...

ಯಾರಿಗಿಲ್ಲಿ ಯಾರು ಇಲ್ಲಾ
ನಮ್ಮವರನ್ನೋರು ಜೊತೆಲಿ ಇದ್ರುನೂ ಕೂಡ,
ಜೀವನ ಇಲ್ಲಿ ಖಾಲಿ ಪಾತ್ರೆ
ನಂಬಿಕೆನೇ ಮರೆತು ಹೋದ ಮೇಲೆಲ್ಲಾ...

ಸಾವು ಬಂದು ಎದುರು ನಿಂತು ಕೇಳಿದಾಗ
ಉತ್ತರ ಕೊಡಲೇಬೇಕಲ್ಲಾ,
ಪ್ರೀತಿಯೇಯಿರಲಿ ಸ್ನೇಹವೇ ಇರಲಿ
ಬದುಕಿಗೊಂದಷ್ಟು ನಂಬಿಕೇನೂ ಇರಲೇಬೇಕಲ್ಲಾ... 

31 March, 2019

ಓ ಮಲ್ಲಿಗೆ...

ಅರಳು ಓ ಮಲ್ಲಿಗೆ ನೀನಿಲ್ಲಿ ಮೆಲ್ಲಗೆ
ಈ ನನ್ನ ಹೃದಯ ತೋಟದಿ,
ಪಸರಿಸು ನೀನಿಲ್ಲಿ ಪ್ರೀತಿಯ ಸುಗಂಧ
ಬದುಕು ಖಾಲಿಯೆನಿಸುವ ಮುನ್ನ...

ಬಾಡಿ ಹೋದರೂ ದಿನ ಮುಗಿದಾಗ
ಮೊಗ್ಗಾಗಿ ಮತ್ತೆ ಬಾ ನಾಳೆಗಳಲಿ,
ಪ್ರೀತಿಯೇ ನೀನು ಜೊತೆಗೆ ಇರುವವರೆಗೂ
ಬದುಕು ಸುಂದರ ತೋಟವಾಗಿರಲಿ...

ಅರಳು ನೀನಿಲ್ಲಿ ಮನದಂಗಳದಿ ನಗುವಾಗಿ
ಮರೆಸಿ ಬಿಡು ನೀನಿಲ್ಲಿ ನೂರು ಚಿಂತೆ,
ಮನದ ಮಲ್ಲಿಗೆ ನೀನು ಮಗುವಾಗು
ನೂರು ಕನಸಿಗೆ ನೀನಿಲ್ಲಿ ವರವಾಗು...

ಉರಿದು ಹೋಗದಿರು ಬದುಕ ತಾಪಕೆ
ಉದುರಿ ಹೋಗದಿರು ಇಲ್ಲಿ ಬದುಕ ಓಟಕೆ,
ಸೂರ್ಯ ಮುಳುಗಿದ ಮೇಲೆ ಚಂದ್ರ ಬರುವ
ಬದುಕ ತಾಪಕೆ ತುಸು ತಂಪನೆರೆವಾ...

08 February, 2019

ಹೃದಯವೇ ಕೇಳು...

ಬದುಕಲಿ ಏನೋ ಮರೆತಿರುವೆ
ಓ ಹೃದಯವೇ ದಾರಿ ತಿಳಿಸುವೆಯಾ,
ಪ್ರೀತಿಯ ಊರಿಗೆ ಹೊರಟಿರುವೆ
ಪಯಣದಿ ಜೊತೆ ನೀ ನೀಡುವೆಯಾ...

ನಿನಗಿಂತ ಮಿಗಿಲಾದ ಗೆಳೆಯರ ನಾ ಕಾಣೆ
ಪ್ರತಿ ಹೆಜ್ಜೆಗೂ ಜೊತೆ ನೀನಾಗುವೆಯಾ,
ನಂಬಿಕೆಯಾ ಅಂಬಿಗ ನೀ
ಓ ಹೃದಯವೇ ಬದುಕಿನ ದಡ ಸೇರಿಸುವೆಯಾ...

ಹೃದಯವೇ ನಿನ್ನ ಧ್ಯಾನದೊಳು
ಪ್ರೀತಿಯೇ ಸದಾ ತುಂಬಿರಲಿ,
ಕರುಣೆಗೆ ನೀನು ಕಡಲಾಗು
ಓ ಹೃದಯವೇ ಬದುಕಿಗೆ ಹೆಗಲಾಗು...

ಬಂಧನವಿಲ್ಲದ ಅನುಬಂಧ
ನನ್ನೊಳಗಿನ ನಿನ್ನಾ ಸಂಬಂಧ,
ನಿನ್ನೊಂದಿನ ನನ್ನ ಪಯಣದಲಿ
ಸ್ನೇಹವು ಸದಾ ಹಸುರಾಗಿರಲಿ...

23 January, 2019

ಅವತಾರ...

ಮತ್ಸ್ಯವಾಗಬೇಕು ಜಗದೊಳು
ಜ್ಞಾನದ ಕಡಲಲಿ ಈಜಲೂ,
ಕೂರ್ಮನಾಗಬೇಕಿದೆ ಬದುಕಲಿ
ಜವಾಬ್ದಾರಿಗಳೆಂಬ ಮಂದಾರವ ಹೊರಲು...

ವರಾಹ ರೂಪಿಯಾಗಬೇಕಿದೆಯಿಲ್ಲಿ
ಮನದ ಪಾತಳದೊಳಗಿನ ಮಲಿನ ಹೊರದೂಡಲು,
ನರಸಿಂಹನಂತೆ ಕಂಬವೊಡೆದು ಹೊರಬರಬೇಕು
ಅರಿಷಡ್ವರ್ಗಗಳ ಹೆಡೆಮುರಿಯೇ...

ವಾಮನ ಈಗ ತ್ರಿವಿಕ್ರಮನಾಗಬೇಕು
ಅಹಂಕಾರವ ತುಳಿದು ನಿಲ್ಲೋಕೆ,
ಭಾರ್ಗವ ರಾಮನಂತೆ ಭೋರ್ಗರಿಸಬೇಕಿಲ್ಲಿ
ಅನ್ಯಾಯ ಅನೀತಿಗಳ ದಂಡಿಸೋಕೆ...

ದಾಶರಥಿಯಾಗಬೇಕು ಭರತ ಭೂಮಿಯಲಿ
ರಾಮ ರಾಜ್ಯವ ಕಟ್ಟಿ ಜಗವ ಸಲಹೋಕೆ,
ವಸುದೇವ ಸುತ ವಾಸುದೇವನಾಗಬೇಕಿಲ್ಲಿ
ಜಗದ್ಗುರುವಾಗಿ ಲೋಕವ ಕಾಪಾಡೋಕೆ...

ಬುದ್ಧನಾಗಿ ಬದುಕ ಜೀವಿಸಬೇಕು
ಪ್ರೀತಿ ಪ್ರೇಮದಲಿ ಜಗಕೆ ಬೆಳಕು ತೋರಬೇಕು,
ಸತ್ಯ ಧರ್ಮ ನ್ಯಾಯ ನೀತಿಗಳ ಮೆರೆಸೋಕೆ
ಅವತಾರ ಪುರುಷರಾಗಬೇಕಿದೆಯಿಲ್ಲಿ...