23 December, 2016

ಲೆಕ್ಕಾಚಾರ...

ಬದುಕು ಅನ್ನೋದು ಇಲ್ಲಿ ಪಾಠಶಾಲೆ
ಕೇಳು ಗೆಳೆಯಾ ನೀನು ಕೇಳು ಇಲ್ಲಿ,
ಜೀವನ ತುಂಬಾ ಇಲ್ಲಿ ಬರೀಯ ಲೆಕ್ಕಾಚಾರ
ಗುಣಾಕಾರ ಭಾಗಾಕಾರಗಳ ಸಂಗಮವಿಲ್ಲಿ ನೋಡ...

ಖುಷಿಯನ್ನಿಂದು ಇಲ್ಲಿ ಗುಣಿಸಬೇಕು
ವಿಶೇಷವಾಗುವವರೆಗೂ ಗುಣಾಕಾರ ಮಾಡಬೇಕು,
ನೋವುಗಳನ್ನೆಲ್ಲಾ ಭಾಗಿಸಬೇಕು
ಶೇಷ ಅಳಿಯೋವರೆಗೂ ಭಾಗಾಕಾರ ಮಾಡಬೇಕು...

ಸ್ನೇಹ ಪ್ರೀತಿಯನ್ನಿಲ್ಲಿ ಕೂಡಿಸಬೇಕು
ಮನಸು ಮನಸುಗಳು ಇಲ್ಲಿ ಜೊತೆಯಾಗಬೇಕು,
ಕೇಳು ಗೆಳೆಯಾ ನೀನು ಕೇಳು ಇಲ್ಲಿ
ಜೀವನ ಪಾಠಶಾಲೆ ತುಂಬ ಬರೀಯ ಲೆಕ್ಕಾಚಾರ...

ದ್ವೇಷ ಅಸೂಯೆಗಳ ಇಲ್ಲಿ ಕಳೆಯಬೇಕು
ಅಪನಂಬಿಕೆಯ ಬೇರನು ಕಿತ್ತೆಸೆಯಬೇಕು,
ಕೇಳು ಗೆಳೆಯಾ ನೀನು ಸ್ವಲ್ಪ ಕೇಳು ಇಲ್ಲಿ
ಜೀವನ ತುಂಬ ಇಲ್ಲಿ ಗುಣಾಕಾರ ಭಾಗಾಕಾರ...

ಒಡೆದುಹೋದ ಮನಸುಗಳ ಕೂಡಿಸಬೇಕು
ಜಾರಿ ಹೋದ ಕಣ್ಣೀರ ಹನಿಗಳ ಕಳೆದುಬಿಡಬೇಕು,
ಗುಣಗಳನ್ನ ಪ್ರೀತಿಯ ಜೊತೆಗೆ ಗುಣಿಸಬೇಕು
ಭಾವನೆಗಳ ಜೊತೆಗೆ ಒಂದಷ್ಟು ಬಾಗಬೇಕು...

16 December, 2016

ಹೇ ಭಗವಂತ...

ಬದುಕಿಗೆ ಪ್ರೀತಿಯೇ ಇಲ್ಲಿ ತಕಧಿಮಿತ
ಪ್ರೀತಿಗೆ ನಂಬಿಕೆಯೇ ಕಾಗುಣಿತ,
ನೆನಪನ್ನು ನೆಪವಾಗಿಸು ಭಗವಂತ
ಬದುಕಲ್ಲಿ ಕರುಣಿಸು ನೀ ಜೀವದಾ ಸೆಳೆತ...

ದೇಹದ ಜೊತೆಗಿದೆ ಉಸಿರಿನಾ ಕುಣಿತ
ಉಸಿರು ಇರುವರೆಗೂ ದೇಹದಾ ಮಿಡಿತ,
ಬದುಕನ್ನೇ ಭಕ್ತಿಯಾಗಿಸುವೆ ಹೇ ಭಗವಂತಾ
ಹರಸು ನೀನಿಂದು ಬದುಕಿನಾ ಈ ತುಡಿತ...

ಸ್ನೇಹಕ್ಕೂ ಪ್ರೀತಿಗೂ ಇಲ್ಲಿ ಒಡನಾಟ
ಬದುಕಿದು ಸಂಬಂಧಗಳ ಸರಿಗಮಪ,
ಮನಸನ್ನೇ ಸಂಗೀತವಾಗಿಸು ಹೇ ಭಗವಂತ
ಭಾವಗಳ ಬೆಸೆದು ಹರಸು ಈ ಜೊತೆಯಾಟ...

ಕನಸಿಗೂ ಮನಸಿಗೂ ಇಲ್ಲಿ ಕಣ್ಣಮುಚ್ಚಾಲೆ
ಕದ ತೆರೆದು ಒಳ ಕರೆಯುವೆ ಈ ಮನಸಿಗೆ,
ಮನಸಿನ ವ್ಯಥೆ ಕೇಳು ಓ ಭಗವಂತ
ಕನಸಿಗೆ ಕನಿಕರಿಸು ನೀ ಹೇ ವಿಧಾತ...

ಕತ್ತಲೆಗೂ ಬೆಳಗಿಗೂ ಜೊತೆಯಾಟ ಈ ಬದುಕು
ಉರಿಸಿಡುವೆ ಅದಕೆಂದೇ ಜ್ಞಾನದ ಬೆಳಕೊಂದ,
ಹರಸು ನೀ ಎಂದೂ ಹೇ ಭಗವಂತ
ಬೆಳಕಲ್ಲೇ ಮುನ್ನಡೆಸು ಈ ಬದುಕನ್ನ....


07 December, 2016

ಆಟ...

ಜೀವ ಇರುವರೆಗೂ ಆಟ ಹುಡುಕಾಟ
ಉಸಿರು ನಿಂತೋದ ಮೇಲೆ ಆತ್ಮದ ಪರದಾಟ,
ಬದುಕಿ ಇರುವರೆಗೂ ನಮ್ಮವರ ಹುಡುಕಾಟ
ಬದುಕು ಮುಗಿದಾಗ ಬಂಧುಗಳ ಗೋಳಾಟ...

ಬದುಕು ಇದು ನಿಲ್ಲದ ಕನಸುಗಳ ಹುಡುಕಾಟ
ಆಸೆಗಳ ಬೆನ್ನು ಹತ್ತಿ ಕೊನೆವರೆಗೂ ನರಳಾಟ,
ನಿರಂತರ ನೋವುಗಳ ಜೊತೆ ನಿತ್ಯ ಹೊಡೆದಾಟ
ಕೊನೆಯಿಲ್ಲದ ಸಮಸ್ಯೆಗಳೊಳಗೆ ನಿತ್ಯ ನೂಕಾಟ...

ಬದುಕು ಇರುವುದಿಲ್ಲಿ ಮೂರೇ ದಿನದ ಆಟ
ನಿನ್ನೆ ಇಂದು ನಾಳೆಗಳ ನಡುವೆ ನಿತ್ಯ ಹುಡುಕಾಟ,
ಪ್ರೀತಿ ಸ್ನೇಹ ಸಂಬಂಧಗಳ ನಿರಂತರ ತಾಕಲಾಟ
ನಾನು ನೀನೆಂಬ ಮೇಲು ಕೀಲಾಟ...

ಖುಷಿಯ ಹುಡುಕುತ್ತಾ ನಿತ್ಯ ನರಳಾಟ
ಗೊಂದಲದ ಬದುಕೊಳಗೆ ಶಾಂತಿಯ ಹುಡುಕಾಟ,
ಮರೆತೂ ಮರೆಯದ ಜೀವನದ ಪೀಕಲಾಟ
ಬದುಕು  ಆ ದೇವರು ಆಡಿಸುವ ಕಣ್ಣಮುಚ್ಚಾಲೆ ಆಟ...

01 December, 2016

ಓ ಮನಸೇ...

ಓ ಮನಸೇ ಮನಸೇ
ಜಾರಿ ಹೋಗದಿರು ನೀ ಮನಸೇ,
ಅನ್ಯರ ಭಾವಗಳಿಗೆ ನೀ ಗರ್ಭ ಧರಿಸಬೇಡ
ಅಕ್ರಮವಾದಿತು ಬದುಕು...

ಓ ಮನಸೇ ಮನಸೇ
ನಿಂತ ನೀರಾಗದಿರು ನೀನು,
ಭಾವನೆಗಳ ಬಚ್ಚಿಡಬೇಡ ಅಲ್ಲಿ
ಕೊಳೆತ ಶವವಾದೀತು ಬದುಕು...

ಓ ಮನಸೇ ಮನಸೇ
ಹಾರೋ ಚಿಟ್ಟೆಯಂತೆ ನೀನು,
ಬೀಳಬೇಡ ಅಪನಂಬಿಕೆಯ ಬೆಂಕಿಗೆ
ಕರಗಬಹುದು ಬದುಕು...

ಓ ಮನಸೇ ಮನಸೇ
ಭ್ರಮೆಯೆಂದೂ ಬದುಕಲ್ಲ ಇಲ್ಲಿ,
ಕಳಚಿಬಿಡು ಈ ಮುಖವಾಡ
ಬದುಕಾದೀತು ನಾಟಕರಂಗ...

ಓ ಮನಸೇ ಮನಸೇ
ಬದುಕೆಂಬುದು ಕವಿತೆಯಲ್ಲಾ,
ಬರೆಯದಿರು ನಿನ್ನಯ ಭಾವಗಳ
ಬರಿದಾದಿತು ಬದುಕಿಲ್ಲಿ...

26 November, 2016

ಹೇ ಸರ್ವಶಕ್ತ...



ಉದ್ಧರಿಸು ನೀನೆನ್ನ ಓ ಸರ್ವಶಕ್ತ
ಅಂಧಕಾರವ ಕಳೆಯೀಗ ಈ ಮನಸಿಂದಾ,
ಸಣ್ಣದೊಂದು ಜ್ಯೋತಿಯನು ನೀ ಉರಿಸಿ
ಮುಂದೆ ನುಗ್ಗುವ ಛಲವನ್ನ ಅನುಗ್ರಹಿಸು.

ಎಡವಿ ಬೀಳುವ ಭಯವಂತು ಎನಗಿಲ್ಲ
ಕೈ ಹಿಡಿದು ನಡೆಸುವವ ನೀ ಜೊತೆಗಿರಲು,
ಅಜ್ಞಾನವನು ಕಳೆದು ಜ್ಞಾನವನು ಭೋದಿಸು
ಬೆಳಗುವೆನು ಮನದಲ್ಲಿ ನಿನಗೊಂದು ದೀಪ.

ನನ್ನೊಳು ಮನೆಮಾಡಿರುವ ವೈರಿಗಳ ಸೋಲಿಸೆ
ಶಕ್ತಿಯನು ನೀಡೆನಗೆ ಹೇ ಭಗವಂತ,
ಅರಿಷಡ್ವರ್ಗಗಳೆಂಬ ವೈರಿಗಳ ನಿನ್ನ ಪಾದದಡಿಗೆ ನೂಕುವೆ
ಮುಕ್ತಿಯನು ಅನುಗ್ರಹಿಸು ಕಾಮ ಕ್ರೋಧ ಮದ ಮೋಹ ಲೋಭಕೆ.

ಬೆಳಗುವೆನು ನನ್ನೆದೆಯಲಿ ನಿನಗೊಂದು ನಂದಾದೀಪ
ದಯಮಾಡಿ ನೆಲೆಸು ನೀನಿಲ್ಲಿ ಹೇ ಸರ್ವಾಂತರ್ಯಾಮಿ,
ಭಕ್ತಿಯೆಂಬ ನೈವೇದ್ಯ ಅರ್ಪಿಸುವೆನು ನಿನಗೆ
ಪ್ರೀತಿಯೆಂಬ ಐಶ್ವರ್ಯವ ಅನುಗ್ರಹಿಸಬೇಕು ನೀನು.

ನನ್ನೊಳಗೆ ಪ್ರತಿದಿನವು ಕಾಣುವೆನು ನಿನ್ನಾ
ಮನುಜತೆಯ ಪಥದೊಳಗೆ ನೀ ಇರಿಸು ಎನ್ನಾ,
ಸತ್ಯ ಧರ್ಮದ ರಥವನ್ನ ತೋರಿಸು
ಬದುಕಿನ ಯಾತ್ರೆಯೊಳು ನೀನೆನ್ನ ಗೆಲ್ಲಿಸು.

20 November, 2016

ಒಲವೊಳಗೆ...


ಓ ಒಲವೇ ನೀನಿಂದು ಹರಸೆನ್ನನು
ಒಲವಿಂದ ಈ ಮನಸ ಮುನ್ನಡೆಸು ನೀ,
ಹರುಷಕ್ಕೆ ನಿನ್ನ ಹೆಸರು ನಾ ಕೊಡುವೆನು
ಮುನಿಸನ್ನ ನೀ ಮರೆತು ಬರಬೇಕಿದೆ...

ಜೊತೆಯಾಗು ಓ ಮನಸೇ ಈ ಪಯಣಕೆ
ನೋವಿಗೂ ನಲಿವಿಗೂ ನಾ ಹೆಗಲಾಗುವೆ,
ಪ್ರತಿಕ್ಷಣವೂ ನೀ ಅರಳು ಖುಷಿಯಿಂದಲೇ
ನಗುವಲ್ಲೇ ಮಗುವಾಗಿ ಜೊತೆಯಾಗುವೆ...

ಜಗವಿಲ್ಲಿ ಡೊಂಬರಾಟ ಈ ಪ್ರೀತಿಗೆ
ಕುಣಿಯೋಣ ಬಾ ಇಲ್ಲಿ ಜೊತೆಯಾಗಿಯೇ,
ಹುಸಿ ಕೋಪ ತುಂಟಾಟ ಕಣ್ಣಮುಚ್ಚಾಲೆಯೂ
ಈ ಪ್ರೀತಿಗೆ ಜಗವೆಂದೂ ಜಾಣ ಕುರುಡು...

ಬದುಕಿಲ್ಲಿ ಬೊಂಬೆಯಾ ಆಟದಂತೆ
ತಿಳಿದರೂ ತಿಳಿಯದಾ ಮಾಯೆಯಂತೆ,
ತಾಳ್ಮೆಯೂ ಇರಬೇಕು ಇಲ್ಲಿ ಈಸಲಿಕ್ಕೆ
ಧೈರ್ಯವೂ ಬೇಕಿಲ್ಲಿ ಜಗವ ಪ್ರೀತಿಸೋಕೆ...

ಖುಷಿಗೊಂದು ಕಾರಣವು ಯಾಕೆ ಬೇಕು
ಪ್ರೀತಿಯಾ ನೆಪವಿಲ್ಲಿ ಸಾಲದೇನು,
ಬದುಕೆಂಬುದೇ ಪ್ರೀತಿಯಾಗಿರಲು ಈ ಜಗದೊಳು
ನಾನು ನೀನಿಲ್ಲಿ ಒಲವಾ ರೀತಿಯಷ್ಟೇ...

13 November, 2016

ನನ್ನೊಲವೇ...

ನಿನ್ನ ಒಲವಿನ ಮುಂದೆ
ನಾನೆಂದೂ ಪ್ರೇಮಖೈದಿಯೂ,
ನಿನ್ನಾ ನಗುವಿನ ರೀತಿ
ನನಗೆಂದೂ ಆನಂದವೂ...

ಓ ಒಲವೇ ನಿನ್ನಯ ರೀತಿ
ಅದು ಎಷ್ಟು ಸುಂದರ,
ನಾನೆಂದು ನಿನಗಾಗಿ ಇಲ್ಲಿ
ಬೆಳದಿಂಗಳ ಚಂದಿರ...

ಮರೆಯುವೆ ನೂರು ನೋವ
ನಿನ್ನಾ ಪ್ರೀತಿಯ ರೀತಿಯಲಿ,
ಅಳುವೇ ಬರದು ಮುಂದೆ
ಈ ಜೀವನ ಜೋಕಾಲಿಯಲಿ...

ನೀನು ಇರಲು ಜೊತೆಗೆ
ಪ್ರತಿ ಕ್ಷಣವೂ ನನಗದು ಹಬ್ಬ,
ನಗುತಾ ಇರಲು ನೀನು
ಜೀವನವೆನಗೆ ನಗೆಹಬ್ಬ...

ಜೊತೆಗೆ ನೀನಿಡುವಾ ಹೆಜ್ಜೆ
ನನ್ನೆದೆಗೆ ಒಲವಾ ಕಚಗುಳಿಯೂ,
ಪ್ರತಿ ಹೆಜ್ಜೆಗೂ ಕಾವಲು ನಾನು
ನಿನ್ನೊಲವಿಗೆ ಸೇವಕನಾಗಿ...

ಚಂದದ ತೋರಣ ನೀನು
ಹೊಸ ಕನಸುಗಳ ಸ್ವಾಗತಕೆ,
ಓರಣಗೊಳಿಸು ಈಗ
ಈ ಬದುಕಿನ ರಥವನ್ನು...

06 November, 2016

ತೊಳಲಾಟ...


ಕನಸುಗಳು ಕರಗಿವೆ
ನೆನಪುಗಳ ಹುಡುಕುತಾ,
ಮನಸಿಲ್ಲಿ ಮೌನವೂ
ನೂರೊಂದು ತೊಳಲಾಟದಿ...

ಮನಸಿಂದೂ ಮರೆತಿದೆ
ಕನಸಿನಾ ಲೋಕವಾ,
ಕದವಿಲ್ಲಿ ಮುಚ್ಚಿದೆ
ಭಾವಗಳ ಮಿಲನಕೆ...

ಭಾವವೂ ಮೈನೆರೆದಿದೆ
ಒಂಟಿತನದಾ ನೋವಲಿ,
ಆಸೆಗಳು ದೂರಾಗಿವೆ
ನಾಳೆಗಳ ಹಂಗಿಲ್ಲದೇ...

ನಾಳೆಗೂ ಬೇಡವಾಗಿದೆ
ನಿನ್ನೆಗಳ ಕೈತುತ್ತದು,
ನಗುವಿಲ್ಲಿ ಮರೆತಿದೆ
ಕಾರಣ ಇಲ್ಲದೇ...

ಕಾಲದಾ ಓಟಕೆ
ಬದುಕಿಲ್ಲಿ ಮೈಮರೆತಿದೆ,
ಬದಲಾದ ಕಾಲವೂ
ಬದುಕನ್ನೇ ಮರೆತಿದೆ...

ಮುಳುವಾಗಿದೆ ಯಾತನೆ
ಹೃದಯದಾ ಹಾಡಿಗೆ,
ಮಿಡಿಯುವಾ ಹೃದಯವೂ
ಮೂಕವಾಗಿ ನಿಂತಿದೆ...

28 October, 2016

ದೀಪಾವಳಿ...

ದೀಪಗಳ ಸಾಲು ಬೆಳಗುತಿದೆ ನೋಡ
ತಾನುರಿದು ಬೆಳಕ ನೀಡುವ ಬತ್ತಿಯ ನೋಡ
ಜಗದಗಲ ಹರಡುತಿವೆ ಬೆಳಕ ಸಾಲು...

ಬೆಳಗು ನೀನೊಂದು ದೀಪ ಹೃದಯ ಮಂದಿರದಿ
ಬೆಳಗಲಿ ನಿನ್ನೊಳಗೂ ಜ್ಞಾನದಾ ಜ್ಯೋತಿ
ಕಳೆಯಲಿ ಅಜ್ಞಾನದ ಅಂಧಕಾರ...

ಹೊತ್ತಿ ಉರಿಯಲಿ ಜಾತಿ ಮತ ಭೇದ
ಒಡೆದು ಚೂರಾಗಲಿ ಮನಗಳ ನಡುವಿನ ಗೋಡೆ
ಬೆಳಗಲಿ ಜೊತೆಯಲ್ಲಿ ನಂಬಿಕೆಯ ನಂದಾದೀಪ...

ಹಚ್ಚಲಿ ಕಿಚ್ಚೊಂದು ಮನದ ಮೂಲೆ ಮೂಲೆಗಳಲ್ಲೂ
ಬೆಳಗಲಿ ಪ್ರೀತಿಯಾಗಿ ಹೃದಯದ ತುಂಬೆಲ್ಲಾ
ಹರಡಲಿ ಜಗದ ತುಂಬೆಲ್ಲಾ ದಾರಿ ತೋರೊ ಬೆಳಕಾಗಿ...

ಹಚ್ಚಬೇಕೀಗ ಕರುಣೆಯಾ ದೀಪವೊಂದಾ
ಹರಡಲು ಜಗದಗಲ ಭಾತೃತ್ವದ ಬೆಳಕನ್ನು
ದೀವಿಗೆಯಾಗಿರಲದೇ ಭವಿಷ್ಯದ ಹಾದಿಗೆ...

ಉರಿವ ಬತ್ತಿಯಾಗಲಿ ನಮ್ಮೊಳಗಿನ ಅಹಂಕಾರ
ರಾಗ ದ್ವೇಷಗಳೆಲ್ಲಾ ತೈಲವಾಗಲಿ ದೀಪಕೆ
ಬೆಳಗುತ್ತಲಿರಲಿ ಸದಾ ಮನುಜತೆಯ ದೀಪ...

22 October, 2016

ಹುಡುಕಾಟ....

ಒಲವೆಂಬ ಕಡಲೊಳಗೆ ಬದುಕೆಂಬ ದೋಣಿಯೊಳು
ದಾರಿ ತಿಳಿಯದ ನಾವಿಕನು ನಾನು,
ಹೆಚ್ಚೇನು ತಿಳಿದಿಲ್ಲ ಹುಚ್ಚು ಆಸೆಗಳಷ್ಟೇ ಇವೆಯಿಲ್ಲಿ
ತೀರ  ಸೇರಬಹುದೇ ಓ ಮನಸೇ...

ನಗುವೆಂಬ ಮುಖವಾಡ ಜೊತೆಗೆಯಿದೆಯಷ್ಟೇ
ನೂರು ನೋವುಗಳ ಪಯಣದೊಳಗೆ,
ಮೌನಕೊಪ್ಪಿದ ಭಾಷೆ ತನ್ನದಾಗಿರಲು
ನನ್ನವರು ಎಲ್ಲರೂ ಎಂಬುದು ಮರೀಚಿಕೆಯಷ್ಟೇ...

ರಾಗ ದ್ವೇಷಗಳ ಅಲೆಗಳು ದೂಡುತಿವೆ ಮುಂದೆ
ದಡ ಸೇರುವ ಚಿಂತೆಯಲಿ ಮನಸು ಮೌನ,
ಬದುಕೆಂಬ ದೋಣಿಯಿಲ್ಲಿ ಚಲಿಸುತಿದೆ ಮುಂದೆ
ಮುಳುಗೀತೆಂಬ ಭೀತಿಯಲ್ಲಿ ನಿತ್ಯ ಸತ್ಯ...

ಆಗಾಗ ಬೀಸುತಿದೆ ತಿಳಿಯಾದ ಓಲವ ತಂಗಾಳಿ
ಅನುಮಾನ ಅವಮಾನಗಳ ಬೇಗೆ ಕಳೆಯುವಂತೆ,
ಕಷ್ಟಗಳ ಕಾರ್ಮೊಡ ನೆರೆದಿದೆ ತಲೆ ಮೇಲೆ
ಹೊತ್ತುತರಬಹುದೇ ನೋವುಗಳ ಚಂಡಮಾರುತ...

ಭೋರ್ಗರೆಯುವ ಜಲಧಿಯಲಿ ಒಂಟಿ ಪಯಣ
ಬೆಳಕ ಕಂಡಾಗಲೆಲ್ಲಾ ನಾಳೆಗಳ ದಡವ ಸೇರುವ ಬಯಕೆ,
ಸೇರಬಹುದೇ ನಲಿವೆಂಬ ದಂಡೆಯನ್ನೂ
ಪಡೆಯಬಹುದೇ ಪ್ರೀತಿ ಸ್ನೇಹಗಳ ಮುತ್ತು ರತ್ನ...

09 October, 2016

ಮಾತಾಗದೆ ಉಳಿದ ಸಾಲುಗಳು...

ತುಸು ದೂರ ನಿಂತರೂ
ಅನುಮಾನವೇತಕೆ,
ಜೊತೆಯಲ್ಲೇ ಇದ್ದರೂ
ಈ ಮೌನವೇತಕೆ...

ಪ್ರೀತಿಯ ಬಲೆಯಲಿ
ನಾನೀಗ ಒಂಟಿಯೂ,
ನೀ ಮೌನ ಮುರಿದರೆ
ನಾವಿಲ್ಲಿ ಜಂಟಿಯೂ...

ನಗುವಿರದ ಕನಸಿಗೆ
ಕದ ಹೇಗೆ ತೆರೆಯಲಿ,
ನೆನಪಿನಾ ಅಲೆಯಲಿ
ನಾ ಹೇಗೆ ಬೆರೆಯಲಿ...

ಆಸೆ ಇರದ ಬದುಕಲಿ
ಅವಕಾಶ ಕೈ ಚೆಲ್ಲಿದೆ,
ನೀನೊಮ್ಮೆ ನಕ್ಕರೂ
ನೂರು ಮಿಂಚಿನಾ ಪುಳಕವೂ...

ನಾವಲ್ಲ ಇಬ್ಬರೂ
ಈ ಬದುಕಿನಾ ಪಯಣದಿ,
ಹೆಸರಷ್ಟೇ ಎರಡದು
ಉಸಿರಿಲ್ಲಿ ಅತಂತ್ರವೂ...

ಸೋತರೆ ಒಬ್ಬರೂ
ಶೋಕವದು ಮನಸಿಗೆ,
ಪ್ರೀತಿಯಿಲ್ಲಿ ಕೊನೆಯಾದರೇ
ಬದುಕಿಗಿಲ್ಲಿ ಕೊನೆಯಿರದಾ ಸೂತಕ....

30 September, 2016

ನವರಾತ್ರಿ...

ಪ್ರೀತಿಯನು ಹಂಚುವುದೇ ಬದುಕಾಗಿರಲಿ
ನಂಬಿಕೆಯ ಬೆಳೆಸೋ ಗೀಳು ಮನಸಿಗಿರಲಿ
ದ್ರೋಹವನೆಂದು ಖಂಡಿಸುವ ಶಕ್ತಿಯಿರಲಿ...

ಸತ್ಯಕ್ಕೆ ತಲೆಬಾಗುವ ಗುಣವಿರಲಿ
ಮಿಥ್ಯಕ್ಕೆ ವಿಷವುಣಿಸೋ ದಿಟ್ಟತನ ಬರಲಿ
ಅಹಂಕಾರವನು ಮೆಟ್ಟಿನಿಲ್ಲುವ ಒಲವು ಜೊತೆಗಿರಲಿ...

ಮನೊವೇಗದ ಜೊತೆಗೆ ಓಡುವವರಾರಿಲ್ಲ
ಮನೋಸ್ಥೈರ್ಯದ ಮುಂದೆ ಮಂಡಿಯೂರುವನು ಜವರಾಯ
ಆತ್ಮ ಸಾಕ್ಷಿಯ ಮುಂದೆ ಬೆತ್ತಲಾಗದಿರಲಿ ಬದುಕು...

ಅಸುರತೆಯು ಅಳಿಯಲಿ ಮನುಜತೆಯ ಜ್ಯೋತಿಯಲಿ
ಹೊತ್ತಿ ಉರಿಯಲಿ ಅಜ್ಞಾನದಾ ಅಂಧಕಾರ
ಪ್ರತಿ ದಿನವು ಬೆಳಗಲಿ ಜ್ಞಾನದ ದೀಪಾವಳಿ...

ಬದುಕುವಾ ಆಸೆಗೆ ಕಿಚ್ಚು ಹಚ್ಚಿದ ಮೇಲೆ
ನಡೆಯಲಿ ಅನ್ಯಾಯದ ಮಾರಣಹೋಮ
ಪ್ರತಿದಿನವೂ ನವರಾತ್ರಿ ಇಳೆಯಲ್ಲಿ ದುಷ್ಟ ದಮನಕ್ಕೆ...

07 August, 2016

ಸ್ನೇಹವೆಂದರೇ...


ಪ್ರೀತಿಯಾ ಹಂದರ ಈ ಸ್ನೇಹ
ಪ್ರೀತಿಗೆ ಚಂದಿರಾ ಇದು ಸ್ನೇಹಾ,
ಒಲುಮೆಯಾ ಕುಸುಮವೂ ಈ ಸ್ನೇಹ
ಅರಳುವಾ ಸುಮವದು ಈ ಸ್ನೇಹ...

ನಗುವಿನಾ ಭಾಷೆಯೂ ಈ ಸ್ನೇಹ
ಬದುಕಿನಾ ಭಾಷ್ಯವೂ ಇದು ಸ್ನೇಹಾ,
ನೋವಿಗೆ ಹೆಗಲಿದು ಈ ಸ್ನೇಹ
ಕಣ್ಣೀರನು ಒರೆಸುವಾ ಕೈ ಅದು ಸ್ನೇಹ...

ಆಸೆಗೆ ಮುಗಿಲಿದು ಈ ಸ್ನೇಹ
ಎಂದೂ ಮುಗಿಯದಾ ಆಕಾಶ,
ನೆನಪಿನಾ ಬುತ್ತಿಯೂ ಬರೀ ಸ್ನೇಹ
ಹಸಿವನು ಇಂಗಿಸೋ ಕೈ ತುತ್ತು ಇದು ಸ್ನೇಹ...

ಹಾರೋ ಹಕ್ಕಿಯು ಈ ಸ್ನೇಹ
ಮನಸಿಗೆ ರೆಕ್ಕೆಯೂ ಇದು ಸ್ನೇಹ,
ಉಸಿರಿನಾ ಹೆಸರಿದು ಈ  ಸ್ನೇಹ
ಜೀವದಾ ಸೊಗಡಿದು ಇದು ಸ್ನೇಹ...

ಓಡುವಾ ಕಾಲದ ಜೊತೆಗಾರ
ನೆರಳಂತೆ ಹರಸುವಾ ಮಹರಾಯ,
ಕನಸುಗಳ ಮೂಟೆಯೂ ಈ ಸ್ನೇಹ
ಜಗವನ್ನೇ ಜಯಿಸುವಾ ಮಹಾವೀರ...

31 July, 2016

ನಾನು (ಅಹಂ)...


ನನ್ನೊಳಗೆ ನಾನಿರಲು ನೀ ದೂರವೇ
ನಿನ್ನ ಪ್ರೀತಿಯೆಲ್ಲಾ ಬರಿ ಮಾಯೆಯೇ,
ಬರಿದಾಯ್ತು ಮನಸೂ ನೀನಿಲ್ಲದೆ
ತುಂಬೋಯ್ತು ಮನಸಲ್ಲಿ ಬರಿ ಕತ್ತಲೆ.

ಪ್ರೀತಿಗೂ ಜಾಗ ಇಲ್ಲಿ ಎಲ್ಲಿದೆ
ಕನಸೀಗು ಇನ್ನು ನಂಟೆಲ್ಲಿದೆ,
ಸ್ನೇಹಕ್ಕೂ ಮನಸೀಗ ಬರಿ ಬೆತ್ತಲೆ
ನನ್ನೊಳಗೆ ನಾನಿರಲು ಬರಿ ಕತ್ತಲೆ.

ಮನಸಿಲ್ಲಿ ಬರಡು ಕನಸಿಲ್ಲದೆ
ಕನಸಿಲ್ಲಿ ಕರಗೋಯ್ತು ಭಾವವಿಲ್ಲದೆ,
ಬಲಿಯಾದೆ ನೀನು ನನ್ನಿಂದಲೇ
ಬಾಡೋಯ್ತು ಮನಸು ನನ್ನಿಂದಲೇ.

ನಾನೇಕೆ ನಾನಾದೆ ನಿಜವರಿಯದೇ
ಮನಸೊಳಗೆ ಸುಡುವಾಗ್ನಿ ನಾ ತುಂಬಿದೆ,
ಪ್ರೀತಿಯು ಇಲ್ಲಿ ಮಳೆ ಸುರಿವುದೇ
ಸ್ನೇಹದಾ ನದಿಯಿಲ್ಲಿ ತುಂಬಿ ಹರಿವುದೇ.

ಬದುಕಿಲ್ಲಿ ವಿಷವೂ ನನ್ನಿಂದಲೇ
ಭರವಸೆಯ ಕಿರಣ ತಾ ಅರಳದೇ,
ಬಂಧಗಳೇ ಕರಗಿದವು ಈ ಬೆಂಕಿಗೆ
ಉಸಿರಿಲ್ಲಿ ಕೊನೆಯೂ ಅಹಂಕಾರಕೆ.

27 March, 2016

ಒಲವ ರಾಗ....


ನೀನು ವೀಣೆ ನಾನೇ ವೈಣಿಕ
ಬದುಕ ಪುಟವಿದು ಸಂಗೀತವೇ,
ಭಾವ ತಾಳಗಳ ಸಮ್ಮೇಳವಿರಲು
ಬದುಕು ಪ್ರತಿಕ್ಷಣ ಸಂತೋಷವೇ.

ಉಸಿರಿಗಿಲ್ಲಿ ಹೆಸರು ಇರಲು
ನುಡಿಯೋ ಪದಗಳವು ಉಲ್ಲಾಸವೇ,
ಒಲವು ಮಿಡಿದಿದೆ ಹೃದಯ ರಾಗದಿ
ಬದುಕು ಪ್ರತಿಕ್ಷಣ ಸಂಭ್ರಮವೇ.

ಸರಸವಿಲ್ಲಿ ಸಮರಸವಾಗಿರಲು
ವಿರಸ ತಾನೇ ಮೈ ಮರೆತಿದೆ,
ನಗುವು ಸದಾ ಜೊತೆಗೆ ಇರಲು
ಬದುಕು ಪ್ರತಿಕ್ಷಣ ಅನುರಣಿಸಿದೆ.

ಕೋಟಿ ಕಂಠದ ಹಾರೈಕೆಯಿರಲು
ಬಾಳಗೀತೆಯು ಸುಶ್ರಾವ್ಯವೇ,
ಮುತ್ತಿನಂಥ ಮಾತು ಇರಲು
ಬದುಕು ಪ್ರತಿಕ್ಷಣ ಮಾಧುರ್ಯವೇ.

ನವರಸಗಳ ಝೇಂಕಾರವಿರಲು
ಒಲವ ರಾಗವು ಮೈ ಮರೆಸಿದೆ,
ಭಾವ ಸಂಗಮಕೆ ಮನಸು ತೆರೆದು
ಬದುಕು ಪ್ರತಿಕ್ಷಣ ಜಾತ್ರೆಯೇ.

15 March, 2016

ಧರ್ಮ....


ಸ್ವರ್ಗ ನರಕ ಮೇಲೆ ಕೆಳಗೆಲ್ಲೂ ಇಲ್ಲ
ಪಾಪ ಪುಣ್ಯ ಪುಸ್ತಕದೊಳಗೆ ಅಲ್ಲ,
ನೀ  ನಡೆಯೋ ದಾರಿಲಿ ಧರ್ಮವಾ ಮರಿಬೇಡ
ಪಾಪವೋ ಪುಣ್ಯವೋ ಕರ್ಮವು ನಡಿಬೇಕು.

ಪಾಪ ಬೆನ್ನು ಬಿಡೋದಿಲ್ಲ ನೀ  ಸಾಗೋ ದಾರಿಲಿ
ಕರ್ಮವೂ ಕೈಗೂಡೊದಿಲ್ಲ ಪುಣ್ಯವಾ ಮರೆತಲ್ಲಿ,
ತಾನೆಂದು ಮೆರೆಯೋದು ಮನುಜತೆಗೆ ಹಿತವಲ್ಲ
ಕಲಿಬೇಕು ನೀನಿಲ್ಲಿ ಬದುಕಿನಾ ಮರ್ಮವನು.

ಉಸಿರಿಲ್ಲಿ ನಿನದಲ್ಲಾ ನೀನದಕೆ ಒಡೆಯನೂ ಅಲ್ಲ
ಬಂದಾಗ ತಂದಿದ್ರೂ ಹೋಗೋವಾಗ ಒಯ್ಯೊದಿಲ್ಲ,
ಕರ್ಮಫಲವೇ ರಕ್ಷಣೆಯು ಈ ಭುವಿಯಾ ಮೇಲೀಗ
ಮರೆತಾಗ ಮರ್ಕಟ ನೀನೆಂದು ಇಳೆಯಲ್ಲಿ.

ಪ್ರೀತಿನೇ ಆಧಾರ ನಿನ್ನ ಇರುವಿಗೆ ಇಲ್ಲೆಲ್ಲಾ
ದ್ವೇಷಾನೇ ಅಪರಾಧ ನೀ ಬಾಳೋ ಬದುಕಲ್ಲಿ,
ಜ್ಞಾನಾನೇ ಬೆಳಕಿಲ್ಲಿ ನೀ ಸಾಗೋ ದಾರಿಗೆ
ಅಜ್ಞಾನದ ಕತ್ತಲೇಲಿ ನಿನ್ನಾ  ನೀ  ಕಳಿಬೇಡ.

ಗೋಡೆಗಳ ಒಡೆದುಬಿಡು ಈ ಜಗವೆಲ್ಲಾ ಸುಂದರ
ಕಣ್ಣುಗಳ ತೊಳೆದುಬಿಡು ಈ ಸಂಸಾರ ನಿನದೆಲ್ಲಾ,
ನಿನಗೊಂದು ಧರ್ಮವಿದೆ ನಡೆಯಿಲ್ಲಿ ನೀ ಮುಂದೆ
ಪುಣ್ಯದಾ ಹಾದಿಲಿ ನೀ ಸಾರೋ ಮನುಜ ಮತ.

13 March, 2016

ನೇಗಿಲ ಯೋಗಿಗೆ....


ಪ್ರಕೃತಿಯ ವರಪುತ್ರ
ಉಳುವ ನೇಗಿಲ ಯೋಗಿ
ನೀ  ಜಗದ ದೈವ ಕಣೋ.

ಮಳೆಯೊಡನೆ ಜೂಟಾಟವಾಡುತ್ತಾ
ದಣಿವರಿಯದ ಧಣಿ ನೀನು
ಈ ಜಗದ ಉಸಿರು ಕಣೋ.

ನೆತ್ತರನೇ ಬಸಿದು ಬೆವರನ್ನು  ಸುರಿಸಿ
ಸೂರ್ಯನನ್ನೇ ದಿಟ್ಟಿಸಿ ನೋಡುವ ನೀನು
ಈ ಜಗಕೆ ಕಣ್ಣು ಕಣೋ.

ಬೆನ್ನಿಗಂಟಿದ ಹೊಟ್ಟೆಯಾ ಹಿಡಿದು
ಮನ್ವಂತರಗಳನ್ನೆದುರಿಸುತ್ತಿರುವ ನೀನು
ಈ ಜಗದ ಬೆಳಕೂ ಕಣೋ.

ಮಣ್ಣಿಂದ ತೆಗೆವೆ ಹೊನ್ನಂಥ ಬೆಳೆಯಾ
ಜಗದ ಹಸಿವ ತಣಿಸೋ ನೀನು
ಈ ಸೃಷ್ಟಿಯ ಜಾದುಗಾರ ಕಣೋ.

ಪ್ರತಿ ಕಾಳಿನಲ್ಲೂ ತುಂಬಿದೆ ಧನ್ಯತೆಯ ಭಾವ
ಪ್ರಕೃತಿ ಹಿತ ಕಾಯೋ ವೀರ
ನೀನೊಬ್ಬ ನಿಜ ಯೋಧ ಕಣೋ.

28 February, 2016

ಪ್ರಾಣಸಖಿ...


ಚಂದಿರನ ಕರೆದು ತರುವೆ ಓ ನನ್ನ ಚಂದ್ರಮುಖಿ
ಇಂದ್ರನ ಕಟ್ಟಿ ತರುವೆ ಓ ಚೆಲುವೆ ಕಮಲಮುಖಿ
ತಾರೆಗಳ ತೊಟ್ಟಿಲಲ್ಲಿ ನಾ ನಿನ್ನ ತೂಗುವೆ ಬಾರೇ ಸಖಿ.

ನವಿಲುಗಳ ಕೂಗಿ ಕರೆವೆ ಓ ನನ್ನ ಪ್ರೀಯ ಸಖಿ
ಕಾಜಾಣ ಕೋಗಿಲೆಗಳ ಕರೆವೆ ಸ್ವರಗಳ ಕಲಿಸೋಕೆ
ಹಂಸಗಳ ಕರೆದು ತರುವೆ ನಡಿಗೇನಾ ಕಲಿಸೋಕೆ.

ಮೇಘಗಳ ಒಲಿಸಿ ಬರುವೆ ಓ ನನ್ನ ಪ್ರಾಣ ಸಖಿ
ಮುಂಗಾರು ಮಳೆಯ ಕರೆದು ತರುವೆ ನಿನ್ನ ಪಾದ ತೊಳೆಯೋಕೆ
ಮಿಂಚುಗಳ ಕೂಗಿ ಕರೆವೆ ನಿನ್ನ ದಾರಿ ಬೆಳಗೋಕೆ.

ಸುಮಗಳ ಬಾಚಿ ತರುವೆ ನಿನ್ನ ಮುಡಿಗೆ ಮುಡಿಸೋಕೆ
ಇಬ್ಬನಿಯ ಕೂಗಿ ಕರೆವೆ ನಿನ್ನ ಮುಖದಿ ಮಿನುಗೋಕೆ
ದುಂಬಿಗಳ ಜೊತೆಗೆ ಬರುವೆ ಓ ನನ್ನ ಪ್ರೇಮ ಸಖಿ.

ತಂಗಾಳಿಯ ಕರೆದು ತರುವೆ ಚಾಮರವ ಬೀಸೋಕೆ
ನೇಸರನ ಓಲೈಸಿ ಬರುವೆ ಎಳೆ ಬಿಸಿಲು ನೀಡೋಕೆ
ಬಾರೆ ನೀ ಪ್ರಾಣ ಸಖಿ ನನ್ನೊಲವ ಊರಿಗೆ.

21 February, 2016

ವಂದೇಭಾರತಮಾತರಂ...


ಸುಡುವ ಬಿಸಿಲಲ್ಲೂ ಜಡಿ ಮಳೆಯಲ್ಲೂ
ಒಂದೇ ಮಂತ್ರ ಘೋಷ,
ಸುರಿವ ಮಂಜಲ್ಲೂ ಕೊರೆಯೋ ಚಳಿಯಲ್ಲೂ
ಮೊಳಗಿಹುದು ಮಾ ತುಜೇ ಸಲಾಮ್.

ತ್ರಿವರ್ಣ ಧ್ವಜಕೆ ಎದೆ ಉಬ್ಬಿಸಿ ಹಾಡಿದೆ
ವಂದೇ ಮಾತರಮ್ ಗೀತೆ,
ಬರೀಯ ಘೋಷವಲ್ಲವಿದು ಶತೃಗಳ ಎದೆನಡುಗಿಸುವ
ದಿವ್ಯ ಮಂತ್ರ ಗೀತೆ.

ಜಾತಿ ಧರ್ಮಗಳ ಮೇರೆ ಮೀರಿ ನಿಂತಿಹುದು
ಮೂರು ಬಣ್ಣಗಳ ಶಕ್ತಿ,
ದೇಶ ಭಕ್ತಿಯನು ಬಡಿದೆಬ್ಬಿಸಿ ಕುಣಿಸುವಾ
ಜಾದು ಕಣೋ ಈ ಶಕ್ತಿ.

ತ್ಯಾಗ ಪ್ರೀತಿ ಕರುಣೆಗೆ ಕಣ್ಣು ಕಣೋ
ಅದುವೇ ಭರತ ಭೂಮಿ,
ಮತಾಂಧ ದುರುಳರ ಮೆಟ್ಟಿ ನಿಂತು ಮಣ್ಣಾಗಿಸಿದ
ಇದುವೇ ವೀರ ಪುಣ್ಯ ಭೂಮಿ.

ಕೇಳಿ ಮೂಡರೇ ತ್ರಿವರ್ಣವೇ ಸ್ಪೂರ್ತಿಯಿಲ್ಲಿ
ಕೋಟಿ ಕೋಟಿ ಯೋಧರಿಗೆ ಶತ್ರು ಸಂಹಾರಕಾಗಿ,
ಶತ್ರುಗಳ ಗುಂಡಿಗೆ ಎದೆಯ ನೀಡುತಾ
ತಾಯ ಮಡಿಲಲ್ಲಿ ತಲೆ ಇಟ್ಟು ಮಲಗೋವರೆಗೆ.


13 February, 2016

ಒಲವಿಗಾಗಿ...


ನಿನ್ನ ಹಣೆಯ ಸಿಂಧೂರ ನಾನು
ನನ್ನೆದೆಯಾ ಮಂದಾರವಾಗು ನೀನು,
ಬದುಕು ಬರೆದ ಪ್ರೀತಿಯು ನೀನು
ಪ್ರತಿ ಹೆಜ್ಜೆ ಇಡುವೆ ನಿನ್ನ ಜೊತೆಯಲ್ಲೇ.

ಕನಸುಗಳ ಚಿಲುಮೆಯು ನೀನು
ಮನಸ ಬೆಳಗೋ ಚುಕ್ಕಿಯು ನೀನು,
ಚೆಲುವಿನಲಿ ಚಂದ್ರ ಸೋದರಿ ನೀನು
ಪ್ರತಿ ಜನುಮ ನಿನಗೆ ಮೀಸಲಿಡುವೆ.

ತುಂಟ ಮನಸಿನ ಕಿನ್ನರಿ ನೀನು
ತುಂಬು ನಗುವಿನಾ ಬೊಂಬೆಯೂ,
ನನ್ನುಸಿರಿಗೆ ಹೆಸರು ನೀನು
ಕಣ್ಣರೆಪ್ಪೆಯಾಗಿ ಕಾವಲಿರುವೆ ಪ್ರತಿಕ್ಷಣವೂ.

ವಿಧಿಯು ಹರಸಿದ ಸಂಗಾತಿ ನೀನು
ನನ್ನೆದೆಯೊಳಗಿನ ಕಚಗುಳಿಯೂ,
ನನ್ನ ಭಾವಕೆ ಉಸಿರು ನೀನು
ನನ್ನ ಕನಸುಗಳ ನಿನಗೆ ಮೀಸಲಿಡುವೆ.

ಒಲವಿಗೊಂದು ಪ್ರೇಮಕಾವ್ಯ ನೀನು
ನನಗೆ ಎಂದೂ ಶೃಂಗಾರ ಕಾವ್ಯವೂ,
ಪದಗಳಾಗಿ ಕರಗಿಬಿಡುವೆ ನಾನೇ
ಒಲವ ಯಾತ್ರೆಯಲಿ ಜೊತೆಯಾಗಿಬಿಡುವೆ.

05 February, 2016

ಓ ಮನಸೇ...


ನೂರೆಂಟು ರೆಕ್ಕೆಗಳಿಲ್ಲಿ ಮನಸೆಂಬ ಹಕ್ಕಿಗೆ
ಗರಿ ಬಿಚ್ಚಿ ಹಾರಿದೆಯಿಲ್ಲಿ ಕನಸ ಆಗಸದಿ,
ನೋವುಂಟು ನಲಿವುಂಟು ಈ ಪಯಣದಲಿ
ಆಸೆಯೊಂದೆ ಜೊತೆಗಾರ ದೂರ ಸಾಗೋಕೆ.

ಒಲವ ಗುಟುಕೊಂದೆ ಜೀವಜಲವಿಲ್ಲಿ
ಗಮ್ಯವದು ಮಾಯೆಯು ಪಯಣಕಿಲ್ಲಿ,
ಗುರಿಯುಂಟು ಇಲ್ಲಿ ಗುರುವಿಲ್ಲ ಜೊತೆಗೆ
ಆತ್ಮಸ್ತೈರ್ಯವೊಂದೇ ಭೀಮಬಲವಿಲ್ಲಿ ಮನಸಿಗೆ.

ನೆನಪುಗಳ ಮೂಟೆಯ ಭಾರವಿದೆ ಜೊತೆಗೆ
ಹೊತ್ತೊಯ್ಯಲೇಬೇಕು ಪಯಣ ಸಾಗುವವರೆಗೆ,
ದಣಿವಾರದ ಪಯಣ ಮನಸಿಗಿಲ್ಲಿ
ಒಮ್ಮೆ ನಿಂತರೂ ಸಾಕು ಬದಲಾಗುವುದು ದಿಕ್ಕು.

ಕಾಲದಾ ಹಂಗಿಲ್ಲದ ಪಯಣವಿದುವು
ಪ್ರತಿಕ್ಷಣವೂ ಹೋರಾಟ ಹೊಸತನಕ್ಕೆಂದು,
ಶತ್ರುಗಳು ಹೊರಗಿಲ್ಲ ಕಾಲು ಎಳೆಯೋಕೆ
ಮೋಹವೆಂಬ ಮಾಯೆ ಆವರಿಸಿಕೊಳ್ಳೊವರೆಗೆ.

ಬಂಧನವಿಲ್ಲ ಹಾರೊ ಹಕ್ಕಿಗೆ ಇಲ್ಲಿ
ಸಂಭಂದಗಳ ಜಾಲದಲಿ ಸಿಕ್ಕಿ ಬೀಳುವವರೆಗೆ,
ಮುಗಿಯದಾ ಪಯಣವಿದು ನಿತ್ಯನಿರಂತರ
ದೇಹವೆಂಬ ಗೂಡೊಳಗೆ ಉಸಿರ ಕಾಳು ಮುಗಿವವರೆಗೆ.

29 January, 2016

ಅವಳಿಗೆ...



ನೀನು ಕನಸುಗಳ ಕಾಮನಬಿಲ್ಲು
ನನ್ನೆದೆಯಾ ಆಗಸದಿ,
ನಕಲು ಮಾಡಲು ಮರೆತೆ ನಾನೇ
ಈ ಒಲವ ಕುಂಚದಲಿ.

ಸ್ವಾತಿ ಮಳೆಯಾ ತುಂತುರು ನೀನು
ನನ್ನೊಲವಾ ಬಾಂದಳದಿ,
ಬೊಗಸೆ ತೆರೆದು ನಿಂತಿರುವೆ ನಾನು
ಪ್ರೀತಿ  ಮುತ್ತನು ಹಿಡಿಯೋಕೆ.

ಚಂದ್ರ ಚೆಲ್ಲಿದ ಬೆಳದಿಂಗಳು ನೀನು
ನನ್ನ ಬದುಕ ಪಯಣದಲಿ,
ಕಣ್ಮುಚ್ಚಿ ನಡೆಯುತಲಿರುವೆನು ನಾನು
ನೀ ಕರಗಿ ಹೋಗುವೆಯೆಂಬ ಭಯದಿಂದ.

ನನ್ನೊಲವಾ ಕಲರವ ನೀನು
ನನ್ನೊಳಗೆ ನದಿಯಾಗಿ ಹರಿಯುತಲಿರುವೆ,
ಭೋರ್ಗರೆವ ಸಾಗರವಾದೆ ನಾನು
ನಿನ್ನೊಲವ ಕಚಗುಳಿಗೆ.


24 January, 2016

ಇತಿಹಾಸ...


ಧರಣಿಯೊಳಗಿದೆ ನೂರಾರು ವ್ಯಥೆಯ ಕತೆಯೂ
ಕೆದಕಿ ನೋಡು ಇತಿಹಾಸವ,
ರಕುತ ಚೆಲ್ಲಿದ ನೂರು ಕತೆಯಾ
ದಾನವತೆಯು ಮೆರೆದ ದುರಂತ ವ್ಯಥೆಯಾ.

ಜಾತಿಗಾಗಿ ನಡೆಯಿತಿಲ್ಲಿ ಕಲಹ
ಪ್ರೀತಿ ಹೆಸರಲೂ ಹರಿಯಿತಿಲ್ಲಿ ರಕುತ,
ಅಮಾಯಕರ ರುಂಡವಿಲ್ಲಿ ಉರುಳಾಡಿತು
ಕೇಳು ನೀನು ಮನುಜತೆಯ ಮರೆತ ಕತೆಯಾ.

ಭೂಮಿಗಾಗಿ ನಡೆಯಿತಿಲ್ಲಿ ಘೋರ ಕಾಳಗ
ಸ್ವಾತಂತ್ರ್ಯದ ಹೆಸರಲ್ಲು ಭುವಿಯು ಕೆಂಪಾಯಿತು,
ಯುಗ ಯುಗಗಳು ಉರುಳಿ ನಿಂತವು
ಕೇಳು ನೀನು ಭೂಮಿ ಕಂಡ ವ್ಯಥೆಯ ಕತೆಯಾ.

ದ್ವೇಷಕಾಗಿ ಹೊತ್ತಿ ಉರಿಯಿತಿಲ್ಲಿ ಬದುಕು
ಮನದ ಬೆಂಕಿಗೆ ಭಸ್ಮವಾದವು ತಲೆಮಾರುಗಳು,
ತಲೆ ಕಾಯಲಿಲ್ಲ ಮನುಜತೆಯ ಪ್ರೀತಿ
ನೋಡು ಬಾ ನೀನು ಇತಿಹಾಸಗಳ ವ್ಯಥೆಯಾ.

ನಿತ್ಯವೂ ನಡೆಯುತಿದೆಯಿಲ್ಲಿ ಹೊಸ ಇತಿಹಾಸಕೆ ಮುನ್ನುಡಿ
ರಕ್ತವರ್ಣದ ಅಧ್ಯಾಯವು ಮತ್ತೆ ಮತ್ತೆ ತೆರೆಯುತಾ,
ಮಾನವತೆಯ ಮರೆತ ಮನಸುಗಳೇ ಇಲ್ಲಿ ಮೇಳೈಸುತ
ನೋಡು ಬಾ ನೀನು ಮನುಜ ಕುಲದ ಅಧಃಪತನದ ಕತೆಯಾ.

11 January, 2016

ಪ್ರೀತಿಯ ಚಿತ್ತಾರ...


ಬದುಕ ಬಯಲಲ್ಲಿ ಚೆಲ್ಲಿದೆ ಪ್ರೀತಿ ಬೆಳ್ಳಿಬೆಳದಿಂಗಳು
ಅರಳಿವೆ ಮನದ ಅಂಗಳದಿ ನೂರಾರು ಕನಸುಗಳು,
ಬಯಕೆ ನೂರಿಲ್ಲಿ ಮನಸಿಗೆ ಒಲವಾ ಪಯಣದಲಿ
ಭಾವಗಳ ಬಣ್ಣದಲಿ ಮನಸು ಹಾಕಿದೆ ರಂಗೊಲಿ.

ಬದುಕ ಕಡಲಲ್ಲಿ ದೊರೆತಿದೆ ಒಲವ ಮುತ್ತೊಂದು
ಬಚ್ಚಿಟ್ಟಿದೆ ಮನಸಿಲ್ಲಿ ಎದೆಯಾಳದ ಗುಟ್ಟಂತೆ,
ಶುರುವಾಗಿದೆ ಎದೆಯೊಳಗೆ ಒಲವ ಕಚಗುಳಿಯೂ
ಪ್ರೀತಿ ಒಳಗೊಳಗೆ ಇಲ್ಲಿ ಬದುಕೇ ಪ್ರೀತಿ ಎದೆಯೊಳಗೆ.

ಮನಸಿಲ್ಲಿ ನಿರ್ಮಲ ಹರಿಯುವ ತೊರೆಯಂತೆ
ಮೂಡಿವೆ ಎಲ್ಲೆಲ್ಲೋ ಮನದಲಿ ಪ್ರೀತಿಯ ಬಿಂಬಗಳೇ,
ಮನಸ ನದಿಯೊಳಗೂ ನೂರಾರು ಕಲರವವೇ
ಪ್ರತಿ ಉಸಿರಿನ ಜೊತೆಯಲ್ಲಿ ಮೂಡಿದೆ ಒಲವ ಸಂಗೀತ.

ಮನಸೊಳಗೆ ಮನಸಂತೆ ಮನಸಿಗೂ ಒಂದು ಜೊತೆಯಂತೆ
ಕನಸೊಳಗೆ ಕನಸಂತೆ ಇಲ್ಲಿ ಕನಸಿಗೂ ಒಂದು ಜೊತೆಯಂತೆ,
ಭೂಮಿ ಬಾನನು ಬೆಸೆದಂತೆ ಇಲ್ಲಿ ಪ್ರೀತಿಯ ಚಿತ್ತಾರ
ಒಲವ ಕನಸಲ್ಲಿ ಮನಸಾಗಿದೆ ಭಾವನೆಗಳ ಭಂಡಾರ.

08 January, 2016

ಪ್ರೀತಿ ಜಾತ್ರೆ...



ನನ್ನೂರಲಿ ನಡೆಯುತ್ತಿದೆಯಲ್ಲಿ ದೇವರಾ ಜಾತ್ರೆ
ಇಲ್ಲಿ ನನ್ನೆದೆಯಲ್ಲಿ ನಡೆಯುತ್ತಿದೆ ನಿನ್ನ ನೆನಪುಗಳ ಯಾತ್ರೆ,
ಊರ ಹರಸುವ ದೇವನಲ್ಲಿ ರಥದೊಳಗೆ ವಿರಾಜಮಾನ
ಪ್ರೀತಿ ಸುರಿಸುವ ನೀನಿಲ್ಲಿ ನನ್ನ ಎದೆಯೊಳಗೂ.

ತೇರನೆಳೆಯುವ ಭಕ್ತರದು ಭಕ್ತಿಯಾ ಘೋಷ
ಇಲ್ಲಿ ನನ್ನೆದೆಯೊಳಗೆ ಮೊಳಗಿದೆ ಪ್ರೀತಿಯಾ ಘೋಷ,
ಭಕ್ತರಲ್ಲಿ ಸಂತೃಪ್ತ ಹರಸೋ ದೇವನನು ಕಂಡು
ನಾನಿಲ್ಲಿ ಸಂತೃಪ್ತ ಮನಸ ಪರದೆಯಲಿ ನಿನ್ನ ಬಿಂಬವನು ಕಂಡು.

ಬದುಕ ತೇರನೆಳೆವೆ ನಿನ್ನೊಲವ ಜಾತ್ರೆಯಲಿ
ಕನಸುಗಳಿಂದ ಸಿಂಗರಿಸುವೆ ಈ ಒಲವ ಯಾತ್ರೆಯನು,
ಭಾವ ತೋರಣವಿಹುದಿಲ್ಲಿ ನಿನ್ನಯಾ ಸ್ವಾಗತಕೆ
ನಗುವ ಚೆಲ್ಲುತಿರು ನೀನಿಲ್ಲಿ ಹೃದಯ ಮಂದಿರದೆ.

ಬದುಕಾಗಿದೆ ಎನಗಿಲ್ಲಿ ನಿತ್ಯವೂ ಜಾತ್ರೆ
ನಿನ್ನ ಪ್ರೀತಿಯದು ಪ್ರತಿ ಕ್ಷಣವೂ ಪುಣ್ಯ ಯಾತ್ರೆ,
ಮನಸ ಕನಸುಗಳಿಗಿಲ್ಲಿ ಸುಗ್ಗಿಯಾ ಕಾಲ
ಬದುಕಿಲ್ಲಿ ಹರಸಿದೆ ನಿತ್ಯ ವಸಂತ ಕಾಲ.