16 December, 2020

ಪ್ರೀತಿನಾ...ಸ್ನೇಹನಾ...

ಹೃದಯದಿ ನಾ ಏನು ಗೀಚಲಿ ಹೇಳು
ಮೌನವಿಲ್ಲಿ ಮಾತಾಗಿಹುದಲ್ಲಾ,
ನಿನ್ನ ತುಂಟ ಪ್ರೀತಿಯು ಇಲ್ಲಿ
ಮತ್ತಾಗಿ ನಶೆ ಏರಿಸಿಹುದಲ್ಲಾ...

ಯಾವ ಸಂಬಂಧವ ನಾ ಬೆಸೆಯಲಿ ಈಗ
ಈ ಬಂಧವು ಸ್ನೇಹವಾಗಿರುವಾಗ,
ನಾ ನಿನ್ನ ಪ್ರೇಮಿಯು ಇಲ್ಲಿ
ನೀನೆನಗೆ ಹೃದಯವ ತೆರೆದಾಗಿನಿಂದ...

ಕಾಲ ಉರುಳಿ ನನ್ನೇ ಮರೆತರೂ ಕೂಡ
ನೀನೆನ್ನ ಮನದಲಿ ಕನಸಾಗಿರುವೆ,
ನೀನೆನಗೆ ಬಂಧುವು ಇಲ್ಲಿ
ನಿನ್ನ ಸ್ನೇಹದಲಿ ನಾ ಬಂಧಿಯೂ...

ಬಣ್ಣ ಬಣ್ಣದ ಕನಸುಗಳ ಸರದಾರ
ಪ್ರತಿ ಕನಸಲ್ಲೂ ಮೂಡಿಸುವೆ ಒಲವಿನ ಚಿತ್ತಾರ,
ಸ್ನೇಹದ ಕಡಲು ನಿನ್ನೊಲವು ಬದುಕಲ್ಲಿ
ಆ ಒಲವಿನ ಮಡಿಲಲಿ ನಗುವೆ ನಾನೆಂದೂ...

28 November, 2020

ಸಂಘರ್ಷ...

ಕರ್ಮಭೂಮಿಯಿದು ಇಳೆಯಿಲ್ಲಿ
ಕರ್ಮಯೋಗಿಗಳಾಗಬೇಕು ನಾವಿಲ್ಲಿ,
ಧರ್ಮ ಭೂಮಿಯಿದು ಈ ಜಗವೂ
ದಾರ್ಶನಿಕರಾಗಬೇಕಿದೆ ನಾವಿಲ್ಲಿ...

ಧರ್ಮ ಅಧರ್ಮಗಳ ಯುದ್ಧವಿದು
ನಮ್ಮ ಬದುಕು ಈ ಭುವಿಯೊಳಗೆ,
ಸತ್ಯ ಅಸತ್ಯಗಳ ಸಂಘರ್ಷವಿದು
ಕಾಲದ ಜೊತೆಗಿನ ನಮ್ಮೀ ಪಯಣವಿದು...

ನ್ಯಾಯ ಅನ್ಯಾಯಗಳ ನಡುವಿನ ಹೋರಾಟ
ಕರ್ಮಗಳ ಜೊತೆಗಿನ ಒಡನಾಟ,
ಸತ್ಯ ಅಸತ್ಯಗಳ ಜೊತೆಗೆ ಜೂಟಾಟ
ಮನದ ಒಳಗಿನ ಈ ಹೊಯ್ದಾಟ...

ಸತ್ಯ ಧರ್ಮಗಳ ಈ ಹಾದಿಯಲಿ
ಅನ್ಯಾಯ ಅನೀತಿಗಳ ಕಂದರವೂ,
ಕರ್ಮಯೋಗದ ಈ ಪಥದೊಳಗೆ
ಎಲ್ಲರೂ ಬಂಧಿಯಿಲ್ಲಿ ಕಾಲದ ಪರಿಧಿಯೊಳು...

08 November, 2020

ಕನ್ನಡ ಡಿಂಡಿಮ...

ಭರತ ಭೂಮಿಯ ಪುಣ್ಯದ ಮಣ್ಣೊಳು
ಮೆರೆಯುತಿರುವ ಗಂಧದ ಬೀಡು,
ಶ್ರೀಗಂಧದ ಗುಡಿಯಾ ಕನ್ನಡ ಕಂಪಲಿ
ಉಸಿರಾಡುತಿರುವ ಕೂಸು ನಾನಿಲ್ಲಿ...

ಪಂಪ ರನ್ನರ ಚಂದದ ನಾಡಲಿ
ಅಕ್ಕ ಬಸವರ ಭಾವೈಕ್ಯದ ಬೀಡಿದು,
ಬೇಲೂರಿನ ಶಿಲೆಗಳ ವೈಭವದಿ
ಅರಳ ಬಯಸುವ ಹೂವು ನಾ...

ಕನ್ನಡಮ್ಮನ ಜಾತ್ರೆಯಿಲ್ಲಿ ನಿತ್ಯವೂ
ಮಂತ್ರ ಘೋಷಗಳಿಲ್ಲದ ನುಡಿ ನಮನವೂ,
ಕನ್ನಡಮ್ಮನ ತೇರು ಎಳೆಯುವ ಹಾದಿಯಲಿ
ಹೂವಿನ ಹಾಸು ನಾನಾಗ ಬಯಸುವೆನಿಲ್ಲಿ ...

ಕಲ್ಪವೃಕ್ಷದ ನಾಡಲಿ ಕನ್ನಡಮ್ಮನಿಗೆ ಆರತಿ
ಕೋಟೆ ಕೊತ್ತಲುಗಳ ಬೀಡಲಿ ಅವಳದೇ ಕೀರುತಿ,
ಇತಿಹಾಸ ಬರೆದ ಸಾಮ್ರಾಜ್ಯಗಳ ಶೌರ್ಯದಿ
ಬೆಳೆಯಬೇಕು ನಾ ಈ ಕನ್ನಡಮ್ಮನ ಮಡಿಲಲಿ...


29 October, 2020

ಅಂತರಾಳ...

ಕಳೆದು ಹೋದ ಜಾಗದಲ್ಲೇ
ಮತ್ತೆ ಹುಡುಕಲಾರೆ ನಾ ಎಂದಿಗೂ,
ಓ ಮನಸೇ ಕೇಳು
ಪ್ರೀತಿಯಾದರೂ ಸರಿ ಅದು ಸ್ನೇಹವಾದರೂ...

ನಿಂತು ನಾನು ಕಾಯಲಾರೆ
ಮುಂದೆ ಬರುವ ಸಮಯಕೆ,
ನಿಂತ ನೀರಲ್ಲ ಬದುಕು ಇಲ್ಲಿ
ಓಡುತಲಿರಬೇಕು ಕಾಲಚಕ್ರದಿ...

ಕನಸುಗಳ ಮರೆತು ಬಿಡುವೆ
ವರ್ತಮಾನದ ಓಟದಿ,
ನೆನಪುಗಳಿಗೂ ವಿದಾಯ ಹೇಳಿಬಿಡುವೆ
ಧಕ್ಕೆ ಬರುವುದಾದರೆ ಸ್ವಾಭಿಮಾನಕೆ...

ಯುದ್ಧವಲ್ಲ ಬದುಕು ಇಲ್ಲಿ
ಬೆನ್ನು ತೋರಿಸಿ ಓಡಿ ಹೋಗಲು,
ಕಾಲವು ಕಲಿಸಿದೆ ಅನುಭವದ ಪಾಠ
ಎದ್ದು ಎದೆಯುಬ್ಬಿಸಿ ನಿಲ್ಲಲೂ...

15 October, 2020

ರಾಗ ತಾಳ...

ಒಲವೇ ನೀನು ವಸಂತ ಗೀತೆ
ಬದುಕ ದಾರಿ ಸವೆಸಲು,
ನಿನ್ನ ಪಲ್ಲವಿ ಚರಣದೊಳು
ಬಾಳ ಪಯಣವಿಲ್ಲಿ ಸರಿಗಮಪ...

ನೋವಿಗೊಂದು ರಾಗವೂ
ನಲಿವಿಗೊಂದು ತಾಳವೂ,
ಬದುಕ ಬನದಿ ತುಂಬಿದೆ
ಅನಂತ ರಾಗ ತಾಳಗಳ ಮೇಳವೂ...

ಬದುಕೇ ನಿನ್ನ ಮಡಿಲಲಿ
ಒಲವು ಮೀಟಿದೆ ಮೃದಂಗವಾ,
ಆದಿ ರಾಗವಿಲ್ಲಿ ನೋವು ನಲಿವದು
ಬಾಳ ವೀಣೆ ತಂತಿಯಲ್ಲಿ ಮಿಡಿದಿದೆ...

ಸ್ನೇಹವಿಲ್ಲಿ ಸಾಹಿತ್ಯವೂ 
ಒಲವೇ ನಿನಗದರ ಸಾಂಗತ್ಯವೂ,
ಕಾಲ ನುಡಿಸುವ ಸಂಗೀತಕೆ
ಇಲ್ಲಿ ನವರಸಗಳ ಝೇಂಕಾರವೂ...

29 September, 2020

ನಾಟಕ ಶಾಲೆ...

ಮರೆವುಗಳ ತೋಟದೊಳಗೆ
ಜೀವನವಿದು ಜೋಕಾಲಿ,
ನೆನಪುಗಳ ಮಾಳಿಗೆಯೊಳಗೆ
ಬದುಕು ಇದು ಕವ್ವಾಲಿ...

ಪ್ರೀತಿಯ ಮಾಯೆಯೊಳು
ಬದುಕು ಇಲ್ಲಿ ಬೃಂದಾವನ,
ಸ್ನೇಹದ ಬಂಧನದೊಳು
ಜೀವನವಿಲ್ಲಿ ನಂದನವನ...

ಆಸೆಗಳ ಪಯಣದೊಳು
ಜೀವನವಿಲ್ಲಿ ಚಾರಣ,
ಕನಸುಗಳು ತುಂಬಿಕೊಂಡು
ಬದುಕು ಇಲ್ಲಿ ಸಿಹಿ ಹೂರಣ...

ಬಣ್ಣದ ಬುಗುರಿ ಇಲ್ಲಿ
ಬದುಕು ಕಾಲದ ಕೈಯೊಳಗೆ,
ಜೀವನವಿದು ನಾಟಕ ಶಾಲೆ
ತೆರೆ ಎಳೆಯಲೇಬೇಕು ಪಾತ್ರಗಳು ಮುಗಿದಂತೆ...

14 September, 2020

ಆಟ ಪಾಠ...

ಬರೆದಂತೆ ಬದುಕು ನಡೆಯಲ್ಲ
ಕಥೆಯಂತೆ ಬದುಕು ಸಾಗಲ್ಲ,
ಬರೆದಿಡುವಂತೆ ಬದುಕಬಹುದಿಲ್ಲಿ
ಕಥೆಯೂ ಆಗಬಹುದು ಬಾಳಿಲ್ಲಿ...

ನೋವು ನಲಿವುಗಳು ಬಾಳ ಕೊನೆಯಲ್ಲ
ಬದುಕಿನ ತಿರುವುಗಳಷ್ಟೇ ನೋವು ನಲಿವುಗಳು,
ಕಷ್ಟ ಸುಖಗಳು ಇಲ್ಲಿ ಶಾಶ್ವತವಲ್ಲ
ಬರೀಯ ಬಾಳಪಯಣದ ಜೊತೆಗಾರರಷ್ಟೇ...

ಪ್ರೀತಿ ಸ್ನೇಹಗಳಿಲ್ಲಿ ಬದುಕು ಅಲ್ಲ
ಬದುಕಿನ ಪರಿಪೂರ್ಣತೆಗೆ ಸಾಕಾರವಷ್ಟೇ,
ಬದುಕು ಇಲ್ಲಿ ಹರಿಯುವ ತೊರೆಯಂತೆ
ಕಾಡುಮೇಡುಗಳ ಇಲ್ಲಿ ಅಲೆಯಬೇಕು...

ಬದುಕು ಇಲ್ಲಿ ಕತ್ತಲು ಬೆಳಕಿನ ಆಟ
ಬೆಳಕಿನಷ್ಟೇ ಅವಶ್ಯಕವಿಲ್ಲಿ ಕತ್ತಲ ಛಾಯೆ,
ಬದುಕು ಇಲ್ಲಿ ಹಾವು ಏಣಿಯ ಆಟ
ಸೋಲು ಗೆಲುವುಗಳೇ ಇಲ್ಲಿ ಜೀವನ ಪಾಠ...

31 August, 2020

ಓ ಹೃದಯ...

ನೂರೆಂಟು ನೋವುಗಳು ನಿನ್ನೊಳಗೆ
ಆದರೂ ಹೇಗೆ ನೀ ನಗುವೆ, 
ಕಣ್ಣೀರಲ್ಲಿ ಚೂರಾದರೂ ನೀನು
ಪ್ರೀತಿಯ ಎಲ್ಲರಿಗೂ ಮೊಗೆದಿಡುವೆ...

ಪುಟ್ಟದೊಂದು ಗೂಡು ನೀನಿಲ್ಲಿ
ಆದರೂ ನೂರಾರು ಭಾವಗಳ ಹೂಗುಚ್ಚ,
ಜಗದ ಎಲ್ಲಾ ಅನುರಾಗಗಳು
ನಿನ್ನಿಂದಲೇ ಜನ್ಮ ಪಡೆದಿವೆಯೆನೋ ಓ ಹೃದಯಾ...

ಪ್ರೀತಿಸುವ ಜೀವಗಳಿಗೆ ನೀನು ಗುಡಿಯಿಲ್ಲಿ
ನಿನ್ನ ಪ್ರತಿ ಬಡಿತವು ಆತ್ಮದ ಸಂಗೀತಾ,
ನಿನ್ನಾ ನೋವುಗಳಿಗಿಲ್ಲಿ ಕಣ್ಣೀರ ಅಭಿಷೇಕ
ನಿನ್ನ ನಲಿವಿಗೆ ಇಲ್ಲಿ ತುಟಿಯಂಚಿನ ಮಂದಹಾಸ...

ಓ ಹೃದಯಾ ನೀನಿಲ್ಲಿ ಪುಟ್ಟ ಕಿನ್ನರ
ಜಗವನ್ನೇ ಬಂಧಿಸಿಹೆ ನಿನ್ನ ಮುಷ್ಟಿಯಲೇ,
ಅದೃಶ್ಯ ಚೈತನ್ಯ ನೀನು ಬದುಕಲ್ಲಿ
ಆತ್ಮಸಖನೂ ನೀನೆಂದೂ ಬಾಳಲ್ಲಿ...

14 August, 2020

ಋಣ...

ನೂರೊಂದು ನೆನಪುಗಳುಂಟು
ನನ್ನೆದೆಯಾ ಈ ಗೂಡೊಳಗೆ,
ಪ್ರೀತಿಯಾ ಸವಿ ಕನಸುಗಳುಂಟು
ಆ ನೆನಪುಗಳ ಪ್ರತಿ ಪುಟಗಳಲೂ...

ಪ್ರೀತಿನೇ ಇಲ್ಲದೆ ಹೋದರೆ
ಈ ಜೀವಕ್ಕೆಲ್ಲಿ ಬೆಲೆಯುಂಟು,
ಕನಸುಗಳೇ ಇಲ್ಲದೆ ಹೋದರೆ
ಈ ಪ್ರೀತಿಗೆ ಎಲ್ಲಿ ಬೆಲೆಯುಂಟು...

ಹೃದಯದ ಒಳಗೆ ಹುಟ್ಟಿದ ಪ್ರೀತಿಗೆ
ಭೂಮಿಯ ಮೇಲೆ ಕೊನೆಯಿಲ್ಲ,
ಹುಟ್ಟಿದ ಜೀವ ಸತ್ತರೂ ಕೂಡ
ಪ್ರೀತಿಯ ಕಥೆಯೂ ಮುಗಿಯಲ್ಲ...

ಮನಸಿನ ಎಲ್ಲಾ ಭಾವಗಳಿಗೆ
ಪ್ರೀತಿಯ ಜೊತೆಗೆ ನಂಟುಂಟು,
ಭಾವಗಳ ಜೊತೆಗಿನ ಪಯಣದಲಿ
ಬದುಕಿಗೆ ಬಾಂಧವ್ಯದ ಋಣವುಂಟು...

26 July, 2020

ಅಂತರಾತ್ಮ...


ಜಗದ ಮಾಯೆಯಲಿ ಬಂಧಿ ನಾನು
ಭವದ ಬೇಗೆಯಲಿ ಬೆಂದೆನೂ,
ಕಾಯುವಾ ಶಕ್ತಿ ನೀನು
ನನ್ನ ಒಳ ಹೊರಗಲೂ...

ನೀನಿಲ್ಲಿ ಭಕ್ತಿ ನೀನಿಲ್ಲಿ ಶಕ್ತಿ
ನಿನ್ನಿಂದ ನಾನು ನನ್ನೊಳಗೆ ನೀನು,
ನೋವಿಗೆ ದನಿ ನೀನು
ನಲಿವಿಗೂ ಕಾರಣ ನೀನೇ...

ಆತ್ಮಸ್ಥೈರ್ಯವೂ ನೀನು
ನನ್ನೊಳಗೆ ಕನಸಾಗಿ,
ಕೈ ಹಿಡಿದು ನಡೆಸುವಾ
ಆತ್ಮ ಸಖನೂ ನೀನಲ್ಲವೇ...

ಜೀವನದ ದೋಣಿಗೆ ಅಂಬಿಗನು ನೀ
ತಪ್ಪು ಸರಿಗಳಿಗಿಲ್ಲಿ ನ್ಯಾಯಧೀಶ,
ಪರಮಾತ್ಮ ನೀನಿಲ್ಲಿ ನನ್ನೊಳಗೆ
ದೇಹವೆಂಬ ಗುಡಿಯೊಳು ಪೂಜೆಯಿಲ್ಲದೇ...

11 July, 2020

ಮಾಯೆ...

ಬದುಕಲಿ ಇದು ಸತ್ಯವೂ
ನಾಳೆಯೆಂಬುದು ಕನಸದೂ,
ನಾನು ನೋಡದ ನಾಳೆಯಾ
ಹೇಗೆ ನಂಬಲಿ ಕಾಲವೇ...

ಕನಸು ಎಂಬುದು ಸತ್ಯವೇ
ಮನಸು ಕೇಳಿದೆ ಪ್ರಶ್ನೆಯಾ,
ಇಂದು ಎಂಬುದು ನನ್ನದೇ
ಕಳೆದು ಹೋಗುತಿಹುದು ಕಾಲದೇ...

ಓ ಜೀವವೇ ನೀನು ಇಲ್ಲಿ ನಿತ್ಯವೇ
ಅಂತರಾತ್ಮ ಕೇಳಿದೆ ಮೆತ್ತಗೆ,
ಎಲ್ಲಿ ಹುಡುಕಲಿ ಉತ್ತರ
ಬದುಕು ಹೇಳು ನೀ ಸುಮ್ಮನೇ...

ಆತ್ಮ ನುಡಿದಿದೆ ಸತ್ಯವಾ
ಇಲ್ಲಿರುವೆ ನೀನು ಸುಮ್ಮನೇ,
ಇದು ನಾಲ್ಕು ದಿನಗಳ ಚಾರಣ
ಮುಗಿಸಬೇಕು ಸಂತೃಪ್ತಿಯಿಂದಲೇ...

ಕಾಲದ ಕೈ ಗೊಂಬೆಯೂ
ನಾಲ್ಕು ದಿನದ ಈ ಆಟವೂ,
ಆತ್ಮಕೇ ನೀನೊಂದು ಅಂಗಿಯೂ
ಬದಲಾಗುವುದು ಪ್ರತಿ ಪಯಣದೇ... 

28 June, 2020

ತಪಸ್ಸು...

ದಿನ ಮುಗಿಯೋ ಹೊತ್ತಿಗೆ
ಕಾಡುವವು ಕನಸುಗಳು ಮೆತ್ತಗೆ,
ಮನಸಿಲ್ಲಿ ನೆನಪುಗಳ ಕೊಟ್ಟಿಗೆ
ಬದುಕೀಗ ಮೌನಕೆ ಕರೆಕೊಟ್ಟಿದೆ...

ಕಾಲವು ಪ್ರಶ್ನೆಗಳ ಮುಂದೆ ಇಟ್ಟಿದೆ
ಬದುಕಿಲ್ಲಿ ಉತ್ತರವ ಹುಡುಕಿದೆ,
ಸಂಶಯಗಳು ಇಲ್ಲಿ ಬೆಟ್ಟದಷ್ಟಿವೆ
ಮನಸಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ...

ಅಗ್ನಿಯ ಗುಣವದುವೆ ಸುಡುವುದು
ತನ್ನೆದುರು ಬಂದ ವಸ್ತುಗಳ ನುಂಗುತಾ,
ಮನದೊಳಗಿನ ಅಗ್ನಿಯದು ಸುಡುವುದು
ಮನಸಿನ ಜೊತೆಯಲಿ ಬದುಕನು...

ನೆನಪುಗಳು ಗೀರಿದ ಬೆಂಕಿಗೆ
ಬದುಕು ಆಗಲೇಬಾರದು ಯಜ್ಞಶಾಲೆ,
ಅರ್ಪಿಸಲು ಹವಿಸ್ಸಲ್ಲ ಮನಸ್ಸು
ಬದುಕಿಲ್ಲಿ ಬರೀಯ ಒಂದು ತಪಸ್ಸು... 

10 June, 2020

ಆಯ್ಕೆ...

ಹುಟ್ಟು ನಮ್ಮಯ ಆಯ್ಕೆಯಲ್ಲ
ಬದುಕುವ ರೀತಿಯಿಲ್ಲಿ ಆಯ್ಕೆಯಷ್ಟೇ,
ಒಲವೇ ನೀನು ಮನಸಿನ ಆಯ್ಕೆ
ಜೊತೆಗಿರುವ ಸಮಯ ಕಾಲದ ನಿರ್ಧಾರವಷ್ಟೇ...

ಜೀವಕ್ಕೆ ಇಲ್ಲಿ ಹೆಸರಿದೆಯಷ್ಟೇ
ಬದುಕಿಗೆ ಇಲ್ಲಿ ಹೆಸರಿಲ್ಲಾ,
ಭಾವನೆಗಳಿಗೆ ಹೆಸರಿದೆಯಷ್ಟೇ
ಕನಸಿಗೆ ಇಲ್ಲಿ ಹೆಸರಿಲ್ಲಾ...

ಆಸೆಗಳಿಗೆ ಇಲ್ಲಿ ಆಯ್ಕೆಗಳಿಲ್ಲಾ
ಆಯ್ಕೆಗಳಿರುವುದು ಅವಕಾಶಗಳಲ್ಲಿ,
ಸಾಧನೆಗೆ ಹೆಸರಿದೆಯಿಲ್ಲಿ
ಶ್ರಮಕ್ಕೆ ಯಾವುದೇ ಹೆಸರಿಲ್ಲಾ....

ಬದುಕು ಇಲ್ಲಿ ನೀಲಿ ನೀಲಿ
ಆಯ್ಕೆಗಳ ಆಟದೊಳು,
ತೀರ ಕಾಣದ ಸಾಗರದಂತೆ
ಬದುಕು ಅದಮ್ಯ ಅವಕಾಶ...

26 May, 2020

ಕರ್ಮ...

ಪಾಪ ಪುಣ್ಯಗಳ ಪಯಣ
ಮನುಜ ನಿನ್ನ ಬದುಕು,
ಕೋಟಿ ಜೀವ ಧಾತುಗಳ ದಾಟಿ
ಆತ್ಮ ತೊಟ್ಟ ಹೊಸ ಅಂಗಿಯಂತೆ...

ಇದು ಪಾಪ ಪುಣ್ಯಗಳ ಗಂಟು
ಇಲ್ಲುಂಟು ಜನ್ಮ ಜನ್ಮಗಳ ನಂಟು,
ಈ ಜಗವು ಕರ್ಮ ಭೂಮಿಯಾಗಿರಲು
ಮನುಜ ನಿನಗಿಲ್ಲಿಹುದು ಕರ್ಮಗಳ ನಂಟು...

ಪಾಪ ಪುಣ್ಯಗಳ ಎಣಿಕೆ
ನಡೆಯುವುದು ಅವನ ಬಳಿಯಂತೆ,
ಕರ್ಮ ಫಲಗಳ ಸಂತೆ
ನಡೆಯುವುದು ಇಲ್ಲೇ ಜಗದ ಮುಂದೆ...

ಸತ್ಕರ್ಮಗಳ ಮಾಡಬೇಕು ಇಲ್ಲಿ
ಬೆನ್ನು ಬಿಡದ ಬೇತಾಳವಿಲ್ಲಿ ಕರ್ಮಫಲವು,
ನಿನ್ನೆಗಳ ಕರ್ಮಗಳಲ್ಲಿ ನಾಳೆಯ ಬದುಕು
ಬಾಳಬೇಕು ಇಲ್ಲಿ ಕರ್ಮಫಲಗಳ ಜೊತೆಗೆ...

10 May, 2020

ಕಲೆ...

ವಿಧಿಯು ಗೀಚಿದ ರೇಖೆಗಳ
ಕಲೆಯಾಗಿಸಬೇಕಿದೆ ಬದುಕಲಿ,
ನಮ್ಮದೇ ಬಣ್ಣಗಳ ಬಳಿದು
ಪ್ರಯತ್ನವೆಂಬ ಕುಂಚದಲಿ...

ಕಣ್ಣಿಗೆ ಕಾಣದ ರೇಖೆಗಳ
ಜೋಡಿಸಬೇಕಿದೆ ನಾಜೂಕಿನಲಿ,
ಸುಂದರ ಚಿತ್ರವೊಂದು ಬರಬೇಕಿದೆ
ರೇಖೆಗಳ ಜೊತೆಗಿನ ಆಟದಲಿ...

ಸೋಲು ಗೆಲುವಿನ ಮೆಟ್ಟಿಲುಗಳ
ಬರೆಯಬೇಕಿದೆ ನಾವಿಲ್ಲಿ,
ಕಾಣದ ನಾಳೆಗಳ ಬಯಲೊಳಗೆ
ಬಿತ್ತಬೇಕಿದೆ ಕರ್ಮದ ಬೀಜಗಳ...

ಮಾನ ಸಮ್ಮಾನಗಳ ಪತ್ರಗಳ
ತಯಾರಿಸಬೇಕಿದೆ ನಾವುಗಳೇ,
ಜಗವು ಕೊಡುವ ಬಿರುದುಗಳ
ಚಿತ್ರಿಸಲಾಗದು ಬದುಕಿನ ಪಟದೊಳಗೆ...

ಬದುಕಿನ ಕಲೆಯ ಅರಿತಾಗ
ಸುಂದರವದು ಕಾಣದ ರೇಖೆಗಳು,
ಕಾಣದ ಕಡಲಿಗೆ ಮನ ಹಂಬಲಿಸೇ
ಬದುಕಿನ ಪಟವದು ನೀಲ ಸಾಗರ...

29 April, 2020

ಹೊರೆ...

ಖಾಲಿ ಮನಸಿನ ತುಂಬಾ
ಇಲ್ಲಿ ಕನಸು ಹುಟ್ಟಲ್ಲಾ,
ಮನಸಿನ ತುಮುಲಗಳೆಲ್ಲಾ
ಹಾಡಿನ ಸಾಲು ಆಗಲ್ಲಾ...

ಬದುಕು ಇಲ್ಲಿ ಸಾಗಬೇಕು
ಚಿಂತೆಯಾ ಸಂತೆ ಮೇಲೆನೇ,
ಕಂಡರೂ ಕಾಣದ ಕನಸಿನ
ಮಾಯಾ ಲೋಕದಂತೆಯೇ...

ಕಣ್ಣ ಮುಚ್ಚಿ ನಡೆಯೋದ
ಮರೆತು ಬಿಡಲೇಬೇಕಿಲ್ಲಿ,
ಬದುಕಿನ ಬಂಡಿ ಓಡುತಲಿರಬೇಕು
ಕೃಷ್ಣ ಶುಕ್ಲ ಪಕ್ಷದ ರೀತಿಲಿ...

ಬದುಕಿನ ಭಾರವ ಕಳೆಯಬೇಕು
ಆಸೆಯೇ ನೀನಿಲ್ಲಿ,
ಮನಸಿನ ಭಾರವ ಹೊರಲೇಬೇಕು
ನಗುವೇ ನೀನಿಲ್ಲಿ...

08 April, 2020

ಮೆರವಣಿಗೆ...

ಬದುಕಿನ ಪಯಣದಲಿ ನೆನಪುಗಳೇ ಸಾಗರ
ಮತ್ತೆ ಮತ್ತೆ ಅಪ್ಪಳಿಸುವಾ ಭೋರ್ಗರೆವ ತೆರೆಗಳಂತೆ,
ಮರೆತರೂ ಮರೆಯದ ಮಾಣಿಕ್ಯದ ಗಣಿಯದು
ಕೊರೆದಷ್ಟು ಕೊನೆಯಿರದ ಹೊಳೆಯುವಾ ವಜ್ರಗಳು...

ನಿದ್ದೆಯಾ ಮರೆಸುವವು ನೋವಿನಾ ಕ್ಷಣಗಳು
ನಲಿವಾಗಿ ಮೆರೆಸುವವು ಖುಷಿಯಾ ನೆನಪುಗಳು,
ಕಾಲದ ಮಡಿಲಲ್ಲಿ ಪವಡಿಸಿವೆ ಮುದ್ದು ಮುದ್ದಾಗಿ
ಅವು ಎಚ್ಚೆತ್ತಾಲಾಗೆಲ್ಲ ಕಚಗುಳಿಯೇ ಬದುಕಲ್ಲಿ...

ಮೆರೆಸುವಾ ಕಾಲವೇ ಇಲ್ಲಿ ಎಲ್ಲವಾ ಮರೆಸಿಹುದು
ಮೈ ಮರೆತಾಗಳೆಲ್ಲಾ ಮಗುವಂತೆ ತಟ್ಟಿ ಎಬ್ಬಿಸುತ್ತಾ,
ನೋವಿನಾ ನೆನಪುಗಳಿಗೂ ನಗುವಿಲ್ಲಿ ಇಣುಕುವುದು
ನಲಿವಿನಾ ಕ್ಷಣಗಳಿಗೆ ಕಣ್ಣಂಚಲಿ ನೀರು ಜಿಣುಗುವುದು...

ಸರಿ ತಪ್ಪುಗಳ ದ್ವಂದ್ವಗಳು ಮುಗಿಯೋದಿಲ್ಲ ಬದುಕಲ್ಲಿ
ನೆನಪಿನಾ ಮೆಲುಕುಗಳ ಮರೆಯೋದಿಲ್ಲ ಬಾಳಿಲ್ಲಿ,
ನೋವೆಂದೂ ಹೋರಾಟ ಗೆಲುವಿಲ್ಲಿ ಹಬ್ಬದೂಟ
ನೆನಪುಗಳ ಮೆರವಣಿಗೆ ಇಲ್ಲಿ ನಾವೆಲ್ಲಾ ಚುಕ್ಕಿ ಚಂದ್ರಮ...

26 March, 2020

ಆತ್ಮ ಮಂಥನ...

ಮಂದಿರ ಮಸೀದಿ ಚರ್ಚುಗಳು
ಬಾಗಿಲು ನಿನಗೆ ಮುಚ್ಚಿದವೋ,
ಈಗಲಾದರೂ ಮನಸಿನ ಬಾಗಿಲು ತೆರೆ
ಈಶ್ವರ ಅಲ್ಲಾ ಯೇಸು ಅಲ್ಲಿ ನಿಂತಿಹರಲ್ಲೋ...

ಭುವಿಯೆಂಬ ಸ್ವರ್ಗವ ಮರೆಮಾಚಿ
ಮೇಲಿನ ಸ್ವರ್ಗವ ನೀ ಹುಡುಕುತಿರೆ,
ನಿನ್ನಯ ರೂಪದೆ ನಿಂತಿಹನು
ನೀನು ನಂಬಿರುವಾ ಆ ಭಗವಂತ...

ಕಾಲದ ಈ ಓಟದಲಿ
ನೀನೀಗ ಇಲ್ಲಿ ಬಂಧಿಯೂ,
ಅರಿತು ನೀನೀಗ ನಡೆದರೆ
ನಾಳೆಯ ದಾರಿ ಕಾಣುವುದು...

ಅಹಂಕಾರಕೇ ಇಲ್ಲಿ ನೀನೇ ನೀರು ಕುಡಿ
ಬೇರೆ ಔಷದಿ ಇಲ್ಲಿ ಇಲ್ಲಾ ನೋಡು,
ನಾಳೆಯ ಬೆಳಗು ನೀ ನೋಡಲು
ಅಹಮ್ಮಿನ ಪೊರೆಯಾ ಸರಿಸಿ ಬಿಡು...

ಕಾಲವ ಕೆಣಕುತ ನೀ ನಡೆದರೆ
ಕಾಲನೇ ಉತ್ತರಿಸುವಾ ನೋಡು ಬಾ,
ಪ್ರಕೃತಿಯಾ ನೀ ಅವಮಾನಿಸಿ
ಬದುಕೋದೆಲ್ಲೋ ಓ ಮನುಜಾ...

15 March, 2020

ಹೂವು...

ಬಾಳಬೇಕು ಬದುಕ ಇಲ್ಲಿ ಹೂವಿನ ತರಹ
ನೋವು ಇಲ್ಲ ಅಲ್ಲಿ ನಗುವು ಮಾತ್ರ ಇಲ್ಲಿ,
ದೇವರ ಮುಡಿಗೂ ಸ್ಮಶಾನದ ಹೆಣಕೋ
ದಿನದ ಬದುಕ ನೆನೆದು ಕೊರಗೂ ಇಲ್ಲ ಇಲ್ಲಿ...

ಮೇಲು ಕೀಳು ಇಲ್ಲಾ ಇಲ್ಲಿ
ಸುವಾಸನೆಯ ಹಂಗಂತೂ ಮೊದಲೇ ಇಲ್ಲಾ,
ಅರಳಿ ನಗುವುದಷ್ಟೇ ಕೆಲಸ
ದಿನದ ಕಡೆಯವರೆಗೂ ಇಲ್ಲಾ ಇಲ್ಲಿ ಚಿಂತೆ...

ಅಂದ ಚಂದಕಿಲ್ಲಿ ಜಂಭವೇನು ಇಲ್ಲಾ
ಮುದ್ದಾದ ನಗುವ ತುಂಬಾ ಕನಸುಗಳೇ ಇಲ್ಲಿ,
ನೂರಾರು ಬಣ್ಣ ಬಿನ್ನಾಣವಿದ್ದರೂನು
ಅಹಂಮ್ಮಿನ ಕೇಕೇಯಂತೂ ಇಲ್ಲಾ...

ಮೊಗ್ಗಾಗಿ ಮೂಡಿ ಹೂವಾಗಿ ಅರಳಿ
ಬಾಡಿ ಉದುರಿ ಹೋದರೂ ಇಲ್ಲಿ,
ಬರೀಯ ಪ್ರೀತಿಯ ಹಂಚಿ ನಗುತಾ
ಬಾಳೋದಷ್ಟೇ ಬದುಕು ಇಲ್ಲಿ...

29 February, 2020

ಕನಸೇ...

ಒಲವೇ ನಿನ್ನಯ ಬಣ್ಣವು ಯಾವುದೂ
ಅದರಲ್ಲಿಯೇ ನಾ ಕಾಣುವೇ ಕಾಮನಬಿಲ್ಲನು,
ಓ ಗೆಳತಿಯೇ ಹೇಳು ನೀನೀಗ
ನಾನೆಂದಿಗೂ ಪ್ರೇಮಿಯೇ ನಿನ್ನೊಲವಿಗೆ...

ಕರಗಲು ಕನಸದು ನಿನ್ನಾ ನೆನಪಲ್ಲೇ
ಕರಗುವೆ ನಾ ನಿನ್ನಾ ಒಲವಲ್ಲೇ,
ನಲ್ಲೇ ನಿನ್ನ ನೆನಪದು ಸುಂದರ ಕಾವ್ಯ
ಬರೆದಿಡುವೆ ಸವಿನೆನಪುಗಳ ನಾನಲ್ಲೇ...

ನಿನ್ನ ಮೌನವು ಹಿತವಾಗಿದೆ ಕನಸಲ್ಲಿ
ಬರಬಾರದೇ ಒಮ್ಮೆ ನೀನಿಲ್ಲಿ,
ಕರಗದ ಕನಸಾಗಿ ಕಣ್ಮುಂದೆ
ಒಲವೇ ಒಲವಿಂದ ಉಲಿಯುತ್ತಾ...

ಪ್ರತಿ ಹಗಲಲೂ ನೀನೇ ಬೆಳಗು
ಪ್ರತಿ ಇರುಳಲೂ ನೀನೊಂದು ಬೆರಗು,
ಚಂದದ ಚಂದಿರನ ಓ ಬೆಳದಿಂಗಳೇ
ಭಾವಗಳ ಮೋಡದೊಳಗೆ ನೀನೊಂದು ಮಾಯೆ...

21 February, 2020

ಮಹಾದೇವ ನಮಸ್ತುಭ್ಯಂ...

ಭಕ್ತರಿಗೆ ಭೋಲೆ ಶಂಕರ
ದುಷ್ಟರಿಗೆ ರುದ್ರ ಭಯಂಕರ,
ಸೃಷ್ಟಿಗಿವನು ಲಯಕಾರಕ
ದೇವಾದಿ ದೇವ ಶಂಕರ...

ತಲೆಯ ಮೇಲೆ ಗಂಗೆಯ
ಹೊತ್ತು ನಿಂತ ಗಂಗಾಧರ,
ಚಂದ್ರನನ್ನು ಮುಡಿದು ನಿಂತ
ಇವನು ಸೋಮಶೇಖರ...

ಕೊರಳ ಮಾಲೆ ವಾಸುಕಿ
ನಾಗಭರಣನಾದ ಶಂಕರ,
ಮೈಯ ಮೇಲೆ ವಿಭೂತಿಯೂ
ರುದ್ರಾಕ್ಷಿ ಇವಗೆ ಪ್ರೀಯವೂ...

ಉಮಾಪತಿಯೂ ಶಂಕರ
ಜಗಕೆ ಅರ್ಧನಾರೀಶ್ವರ,
ವೀರಭದ್ರನಿವ ಶಂಕರ
ಲಯಕಾರ್ಯ ನಡೆಸಲು ಆಡ್ವನಿಲ್ಲಿ ತಾಂಡವ...

ಆದಿ ಮಾಯೆ ಶಂಕರ
ಆದಿ ಯೋಗಿಯಿವನು ಶಂಕರ,
ಆದಿ ಅಂತ್ಯವಿಲ್ಲದ ನಿರಾಕಾರ ನಿರ್ಗುಣ
ಹೇ ನಂದಿವಾಹನ ನಮೋ ಶಿವ ಶಂಭುವೇ...

26 January, 2020

ಭಾರತ...

ಸಾವಿರಾರು ವೇಷ ಭಾಷೆ ಇದ್ದರೂ
ಬೆಳಗುತಿಹುದು ಭಾರತ,
ನೂರಾರು ಜಾತಿ ಧರ್ಮ ಇದ್ದರೂ
ಬೆಳೆಯುತಿಹುದು ನನ್ನ ಭಾರತ...

ಶಾಂತಿಯಿಂದ ಜಗವ ಗೆದ್ದ
ಬುದ್ಧನಿದ್ದ ಭಾರತ,
ಕ್ರಾಂತಿಯಿಂದ ದಾಸ್ಯ ಮುಕ್ತಗೊಳಿಸೇ
ವೀರರಿದ್ದ ನನ್ನ ಭಾರತ...

ಅಹಿಂಸೆಯಿಂದ ಮನವ ಗೆದ್ದ
ಬಾಪುವಿದ್ದ ಭಾರತ,
ಸ್ವಾತಂತ್ಯ್ರ ಕಹಳೆ ಮೊಳಗಿಸಿದ
ನೇತಾಜಿ ಇದ್ದ ನನ್ನ ಭಾರತ...

ರಾಮಕೃಷ್ಣ ಪರಮಹಂಸ ನಡೆದಾಡಿದ
ಪುಣ್ಯ ಭೂಮಿ ಭಾರತ,
ಜಗಕೆ ಸನಾತನದ ಮಹಿಮೆ ಸಾರಿದ
ವೀರಸಂತ ವಿವೇಕರಿದ್ದ ನನ್ನ ಭಾರತ...

ಇದು ಋಷಿ ಮುನಿಗಳ ಭಾರತ
ವೇದ ಮಂತ್ರಗಳ ಭೂಮಿಯೂ,
ಸತ್ಯ ಧರ್ಮಗಳ ಮಡಿಲು ಈ ಭಾರತ
ಅಧರ್ಮ ಅನ್ಯಾಯಗಳ ಮೆಟ್ಟಿ ನಿಲ್ಲೋ ಭಾರತ...

11 January, 2020

ನೆರಳು...

ಕತ್ತಲು ಬೆಳಕಿನ  ಆಟವಿದು
ಬದುಕೇ ನೀ ನಡೆಸುವ ರೀತಿಯದು,
ಬೆಳಕ ಕಾಣಲು ಮನ ಹಂಬಲಿಸೇ
ಮಗ್ಗಲು ಬದಲಿಸುವೆ ನೀ ಏತಕೇ...

ಕತ್ತಲೆಂದರೆ ಭಯವೇನು ಇಲ್ಲಾ
ನಕ್ಷತ್ರಗಳ ನೋಡುವ ತವಕವಿದೆ,
ನೀ ತೋರಿಸೋ ಕತ್ತಲೆಯಲಿ
ಕೆಲವೊಮ್ಮೆ ನಕ್ಷತ್ರಗಳು ಮಿನುಗುವುದೇ ಇಲ್ಲಾ...

ಖಾಲಿತನದ ಕತ್ತಲದು
ನೆರಳು ಕೂಡ ಜೊತೆಯಾಗುವುದೇ ಇಲ್ಲಾ,
ಏನೂ ಕಾಣದೆ ಭ್ರಮೆಯೊಳಗೆ
ಮನಸು ಬೆದರುವುದು ಸುಮ್ಮನೆ...

ನೀ ತೋರಿಸೊ ಬೆಳಕದುವೇ
ಮಳೆಗಾಲದ ಕೋಲ್ಮಿಂಚಂತೆ,
ದೃಷ್ಟಿ ಹಾಯಿಸೋ ಮುಂಚೆನೇ
ಕರಗಿ ಹೋಗುವುದು ಅಂಧಕಾರದೊಳು...

ಕತ್ತಲ ಒಳಗೂ ಇಲ್ಲಿ ಬೆಳಕಂತೆ
ಬೆಳಕಿನ ಸುತ್ತಾ ಕತ್ತಲೆಯೂ,
ಬದುಕೇ ನೀ ತೆರೆದಿಡುವ ವಿಸ್ಮಯಕೆ
ಹಗಲು ಇರುಳಿನ ನೆರಳಿಲ್ಲಾ...