28 December, 2015

ಏನೆಂದು ಹೆಸರಿಡಲಿ...


ಪ್ರೀತಿಗೆ ತಾಜಮಹಲನು ಕಟ್ಟಬಹುದು
ನೆನಪಿಗೆ ಗೋರಿಯಾ ಕಟ್ಟಬಹುದೇ,
ಉಸಿರಿಗೆ ನಿನ್ನಯಾ ಹೆಸರನು ಬರೆಯಬಹುದು
ಆತ್ಮಕೆ ಏನೆಂದು ಹೆಸರಿಡಲಿ.

ಕವಿತೆಯಾ ನಿನ್ನ ಹೆಸರಿಗೆ ಬರೆಯಬಹುದು
ಪ್ರೀತಿಯಿಲ್ಲದೆ ಪದಗಳನು ಜೋಡಿಸಬಹುದೇ,
ಕನಸಿಗೂ ಕಾರಣವೊಂದ ಕೊಡಬಹುದು
ಮನದ ಭಾವಕೆ ಏನೆಂದು ಹೆಸರಿಡಲಿ.

ನೆನಪಿಗೂ ಪ್ರೀತಿಯ ಹೆಸರಿಡಬಹುದು
ಸರಸಕೂ ನಿನ್ನಯಾ ಹೆಸರಿಡಬಹುದೇ,
ಮುನಿಸಿಗೂ ನೂರು ಕಾರಣ ಕೊಡಬಹುದು
ಮೌನಕೆ ಏನೆಂದು ಹೆಸರಿಡಲಿ.

ಬದುಕಿಗೂ ಬಂಧನದ ಹೆಸರಿಡಬಹುದು
ಖುಷಿಗೂ ಹೆಸರೊಂದ ಇಡಬಹುದೇ,
ನೋವಿಗೆ ಕಾರಣವ ಕೊಡಬಹುದು
ಬದುಕ ಹಂಬಲಕೆ ಏನೆಂದು ಹೆಸರಿಡಲಿ.

ಬಯಕೆಗೂ ಅಂತ್ಯವಾ ಹೇಳಬಹುದು
ನಿರಾಸೆಗೂ ಹೆಸರೊಂದ ಇಡಬಹುದೇ,
ಪ್ರೀತಿಗೂ ಕಾರಣವ ಕೊಡಬಹುದು
ನಾಳೆಗೆ ಏನೆಂದು ಹೆಸರಿಡಲಿ...

19 December, 2015

ಓ ಹೆಣ್ಣೇ ನಿನಗೆ ನಮನ...


ಪ್ರೀತಿಯಲಿ ಎಲ್ಲವು ಸಹಜ ಇಲ್ಲಿ
ತ್ಯಾಗವೇ ಮೆರೆಯುವುದು ಓ ಹೆಣ್ಣೇ ನಿನ್ನ ಬಾಳಲಿ
ಮಮತೆಗೆ ಉಸಿರು ನೀನು
ನಿಸ್ವಾರ್ಥಕೂ ನಿನ್ನದೇ ಹೆಸರು ಈ ಸೃಷ್ಟಿಯಲಿ.

ವನವಾಸ  ನಿನಗೆ ಖಾಯಮ್ಮು
ನೀ ರಾಮನ ಸೀತೆಯಾದರೆ,
ಸಹನೆಯಲಿ ನೀನು ಭೂಮಿಯಾದವಳು
ಬಚ್ಚಿಟ್ಟೆ ನೋವುಗಳ ತನ್ನವರ ಹಿತಕಾಯಲು.

ವಿರಹದ ನೂರು ನೋವು ಗ್ಯಾರಂಟಿ
ನೀನು ಮುರಳಿಯ ರಾಧೆಯಾದರೂ,
ಪ್ರೀತಿಯನು ಮೊಗೆ ಮೊಗೆದು ಕೊಡುವೆ
ನಾಲ್ಕು ಗೋಡೆಗಳ ನಡುವೆ ನೀ ನಿಂತರೂ.

ಕಲ್ಲಾಗಲೇಬೇಕು ನಿನ್ನ ಯ ಮನಸು
ನೀನು ಗೌತಮನ ಅಹಲ್ಯೆಯಾಗುವುದಾದರೆ,
ಸೃಷ್ಟಿಯ ಸೌಂದರ್ಯ ತನ್ನೊಳಗೆ ಬಚ್ಚಿಟ್ಟೆ
ಪ್ರಕೃತಿಯು ನೀನಾದೆ ಜಗ ಕಾಯಲು.

ಅವಮಾನಗಳ ಸಹಿಸಲೇಬೇಕು ನೀನು
ಧರ್ಮಜನ ಅರ್ಧಾಂಗಿಯಾದರೂ,
ನೋವು ಅವಮಾನಗಳ ನೀ ಮೆಟ್ಟಿ ನಿಂತೆ
ಈ ಜಗದ ಕಣ್ಣಾಗಲು...

12 December, 2015

ಮರೆವು ಕರುಣಿಸು...


ಬದುಕೇ ಒಮ್ಮೆ ನೂಕಿಬಿಡು ನೆನಪ ಮಡಿಲೊಳಗೆ
ಸಾಕೆನಿಸಿದೆ ಈಗ ಜಗದ ಜಂಜಾಟ,
ಮರೆಯಬೇಕು ನಾನು ಕಾಡೋ ನೂರು ನೋವುಗಳ
ಪಡೆಯಬೇಕು ಸುಖನಿದ್ದೆ ನೆನೆಪ ಮಡಿಲೊಳಗೆ.

ಕರುಣಿಸು ಬದುಕೇ ಮರೆವೆಂಬ ವರವ
ಕುದಿಯುತಿರುವ ಮನಸ ಶಾಂತಗೊಳಿಸಬೇಕು,
ಒಲವ ಸುಳಿಯಿಂದ ಮುಕ್ತವಾಗಿಸು ಎನ್ನ
ಜಾರಬೇಕಿದೆ ಈಗ ಮರೆವ ತೆಕ್ಕೆಯೊಳಗೆ.

ಹರಸಿದ್ದು ಸಾಕಿಲ್ಲಿ ಈ ಒಲವ ಯಾತ್ರೆಯಲ್ಲಿ
ಒಂಟಿ ಪಯಣ ಬೇಕೆನಿಸಿದೆ ಕರುಣಿಸು ಬದುಕೇ,
ಪ್ರೀತಿಯಿದು ಸುಂದರ ನೋಡೋ ನೋಟಕ್ಕಷ್ಟೇ
ಅನುಭವಿಸಲಾರೆ ನಾ ಅದರ ಆಳ ಅಗಲ.

ಬತ್ತಿ ಹೋದ ಕನಸುಗಳ ಮತ್ತೆ ಕರುಣಿಸು ಬದುಕೇ
ಚಂದ್ರ ತಾರೆಗಳ ಜೊತೆಗೂಡಿ ನಗಬೇಕು ನಾನು,
ನೋವ ಮರೆಸುವ ಕನಸುಗಳು ಬೇಕು ಬದುಕಿಗೆ
ಹರಸು ನೂರು ಹೊಸ ಕನಸುಗಳ ಬದುಕ ಕಟ್ಟೋಕೆ.

ಕನಸುಗಳಿರಲಿ ಬೆಚ್ಚಗೆ ಎದೆಯಾಳದೊಳಗೆ
ಪ್ರೇಮಿಯಾಗಿಸದಿರು ಎನ್ನ ಬದುಕ ಜಾತ್ರೆಯಲಿ,
ನಗಬೇಕು ನಕ್ಕು ಅಳುವ ಮರೆಯಬೇಕು
ಕರುಣಿಸು ಬದುಕೇ ನೆನಪುಗಳ ಚಿಂತೆ ಮರೆಸೋಕೆ.

02 December, 2015

ಮರೀಚಿಕೆ....



ಹುಟ್ಟುತ್ತಾ ಜೀವಿಯದು ದೈವೀ ಸ್ವರೂಪ
ಬೆಳೆಯುತ್ತಾ ಹೊದಂತೆ ಬೆಳದಿಂಗಳಾ ರೂಪ,
ಬುದ್ಧಿ ಬೆಳೆಯುವವರೆಗೆ ಸೃಷ್ಟಿಯ ಅದ್ಭುತ ರೀತಿ
ಎದ್ದು ನಿಂತ ಮೇಲೆ ಬದಲಾಯ್ತು ದಾನವನ ರೀತಿ.

ತಾಯಾದಳು,ಗುರುವಾದಳು ಪ್ರಕೃತಿಯು ಜೀವಿಗೆ
ಬದುಕುವ ಪಾಠವನ್ನಷ್ಟೇ ಹೇಳಿಕೊಡುವಳು ತಾನಿಲ್ಲಿ,
ಪ್ರಕೃತಿಯನೇ ದಂಡಿಸುವ ಗುಣವೆಲ್ಲಿಂದ ಬಂತು
ತನ್ನತನವನು ಮರೆವ ಧೂರ್ತ ಬುದ್ಧಿಯ ಹುಟ್ಟು.

ಉಸಿರು ನೀಡಿದ ವಾಯು ಬದುಕನ್ನು ಹರಸಿದಾ
ಉಸಿರ ಕೊಲ್ಲುವ ಗುಣವೆಲ್ಲಿಂದ ಬಂತು ಈ ಜೀವಿಗೆ,
ನೀರಡಿಕೆ ಇಂಗಿಸಿ ಪ್ರಾಣವನು ಉಳಿಸಿದಾ ವರುಣ
ವಿಷವಕಾರುವ ಬುದ್ಧಿಯಾ ಕಲಿಯಿತೆಲ್ಲಿ ಜೀವಿಯು.

ಬದುಕ ಚೈತನ್ಯಗೊಳಿಸುವ ಬಿಸಿಯನ್ನಷ್ಟೇ ನೀಡಿದನು ಅಗ್ನಿ
ಸುಡುವ ಗುಣವದುವು ಹೇಗೆ ಆವರಿಸಿತೋ ಒಮ್ಮೆಲೇ,
ಬದುಕುವ ಅನಂತ ಅವಕಾಶವ ತೋರಿತು ಆಗಸ
ಅಕಾಶವನೇ ಮೀರಿ ಬೆಳೆಯಿತು ತನ್ನೊಳಗಿನ ಅಹಂಕಾರವೇತಕೋ.

ಯಾರು ಕರುಣಿಸಲಿಲ್ಲ ದ್ವೇಷದಾ ಕಿಡಿಯ
ಹೊತ್ತಿ ಉರಿಯುತಿದೆ ಯಾಕೆ ಜೀವಿ ಜೀವಿಗಳ ನಡುವೇ,
ತಿಂದನ್ನ ಆಹಾರಗಳಲ್ಲಿ ಇರಲಿಲ್ಲ ವಿಷವೂ
ಮರೀಚಿಕೆಯಾಯ್ತಿಲ್ಲಿ  ಜೀವನದ ಗುಟ್ಟು.

27 November, 2015

ಮನದ ಮಾತು....


ಬನ್ನಿ ಕನಸುಗಳೇ ಬದುಕಿನೊಳು ನೀವು
ನೂರು ಆಸೆಗಳ ಹೊತ್ತು ತನ್ನಿ,
ಅರಳಿ ಭಾವಗಳೇ ನನ್ನೆದೆಯಾ ತೋಟದಲಿ
ಮುಗುಳುನಗೆಯಾ ಸವಿ ಜೇನಾಗಿ.

ಓಡದಿರಿ ನೆನಪುಗಳೇ ಮನದ ಅಂಗಳದಿಂದ
ಬಿದ್ದು ಮಾಡಿಕೊಂಡ ಗಾಯಗಳ ತೋರಿ ಬನ್ನಿ,
ಮರೆಯಾಗದಿರು ಓ ಎನ್ನ ಮುಗ್ಧತೆಯೆ
ಜಗವ ಪ್ರೀತಿಸಲು ಬೇಕೆನಗೆ ನಿನ್ನ ಸಂಗ.

ಬತ್ತಿ ಹೋಗದಿರು ನೀನು ತುಟಿಯಂಚಿನ ನಗುವೇ
ಬಾಳಪಯಣದಿ ಎಂದೂ ನೀನೆನ್ನ ಮಗುವೇ,
ಕರಗಿ ಹೋಗದಿರು ಓ ಮನಸ ಮರೆವೇ
ವರವೆನಗೆ ನೀನಿಲ್ಲಿ ನೂರು ದ್ವಂದ್ವ ಮರೆಸೋಕೆ.

ಕುಗ್ಗದಿರು ಓ ಎನ್ನ ಮನಸೇ ಸೋಲುಗಳ ಮುಂದೆ
ಎದ್ದು ನಿಲ್ಲಬೇಕು ನಾನೆಂದು ಸ್ವಾಭಿಮಾನಿಯಾಗಿ,
ಮುಗ್ಗರಿಸದಿರಿ ಕನಸುಗಳೇ ವ್ಯಾಮೋಹದೆದುರು
ಮಂಡಿಯೂರಲಾರೆ ನಾನೆಂದು ನಾಳೆಗಳ ಮುಂದೆ.

ಖುಷಿಯ ಕನವರಿಸು ಮನಸೇ ಪ್ರತಿಕ್ಷಣವೂ ನೀನಿಲ್ಲಿ
ಬರುವ ನಾಳೆಗಳ ಸ್ವಾಗತಿಸೋದಕ್ಕೆ,
ಒಲವನ್ನೇ ನೀ ಸುರಿಸು ಓ ಹೃದಯವೇ
ಜಗದ ನಾಳೆಗಳ ಸುಂದರಗೊಳಿಸೋಕೆ.


20 November, 2015

ಸಂಭವಾಮಿ ಯುಗೇ ಯುಗೇ...



ಎತ್ತೆತ್ತಲೀಗ ಕಗ್ಗತ್ತಲೀಗ ನೀನು ಬರುವೆ ಯಾವಾಗ
ಮನುಜನಿಂದು ಮೃಗವಾಗುತಾ ತನ್ನೆಲ್ಲ ಬುದ್ಧಿಯಾ ಮರೆತಿಹ,
ಶಾಂತಿದೂತರು  ಯಾರು ಇಲ್ಲ ಇಲ್ಲಿ ಈ ಸೃಷ್ಟಿಯಾ ಕಾಯಲು
ಉರಿವ ಬೆಂಕಿಗೆ ತುಪ್ಪ ಸುರಿಸುವಾ ಬರೀ ಧೂರ್ತರೇ ಎಲ್ಲೆಲ್ಲಿಯೂ.

ಇನ್ನೆಷ್ಟು ದಿನ ಈ ಕಲಿಯುಗ ಇನ್ನೆಂಥ ಘೋರವು ಕಾದಿದೆ
ವಾಮನ ರೂಪಿಯಾದರು ಸರಿ ಮೃಗವಾಗಿಯಾದರೂ ಸರಿ ನೀನು ಬೇಗ ಬಾ,
ಹೊತ್ತಿ ಉರಿಯುತಿದೆ ಧರೆಯು ನೋಡು ಈ ದ್ವೇಷ ಭಾವದಿ
ಧರ್ಮದ ಅಮಲು ನೆತ್ತಿಗೇರಿ ಮಾನವನಾಗಿಹ ದಾನವ.

ಸತ್ಯ ಧರ್ಮ ನ್ಯಾಯ ನೀತಿಗಳು ಬೆತ್ತಲಾಗುತಿವೆಯಿಲ್ಲಿ ನೋಡು ಬಾ
ಹೆಸರು ಹೇಳಿ ಕರೆಯಲಾರೆನು ನಾ ನಿನ್ನ ಓ ಸರ್ವಶಕ್ತನೇ,
ನಿನ್ನ ಸೃಷ್ಟಿಯಾ ತಾನೇ ಆಳುತಿಹ ಮನುಜನಿಂದು ಸ್ವಾರ್ಥದಿ
ದುಷ್ಟ ಸಂಹಾರವ ಮಾಡು ಬಾ ಪಂಚಭೂತಗಳಲಿ ಲೀನಗೊಳಿಸು ಬಾ.

ದ್ವೇಷದಾ ಕಿಡಿಯಿಂದ ಹಬ್ಬಿರುವ ಜ್ವಾಲೆಯಾ ನೀ ಆರಿಸು ಬಾ
ಮನುಜತೆಯ ಮರೆತ ಹೃದಯದೀ ಪ್ರೀತಿ ದೀಪವಾ ಹಚ್ಚು ಬಾ,
ಶಾಂತಿದೂತನಾಗಿಯಾದರೂ ಸರಿ ಪ್ರಚಂಡ ರೂಪಿಯಾದರೂ ಸರಿ ನೀ ಒಮ್ಮೆ ಬಾ
ಈ ಜಗವ ಕಾಯಲು ನ್ಯಾಯನೀತಿ ಹೇಳಲು ಗುರುವಾಗಿ ನೀ ಬಾ.

ಭೂಗರ್ಭದಿಂದಲಾದರೂ ಬಾ ಸಪ್ತಸಾಗರಗಳ ಒಡಲೊಳಗಿಂದಾದರೂ ಬಾ
ದಾನವತೆಯ ಮಟ್ಟ ಹಾಕಿ ಮಮತೆಯನ್ನು ತೋರು ಬಾ,
ಜಾತಿ ಧರ್ಮಗಳ ಅಮಲನು ನೀನು ಇಳಿಸು ಬಾ
ಜಗದೊದ್ಧಾರಕೆ  ನೀನು ಮತ್ತೆ ರೂಪ ತಾಳಿ ಬಾ.

10 November, 2015

ಬೆಳಗುತಿರಲಿ ದೀಪವೊಂದು....

ದೀಪಾವಳಿ ಹಬ್ಬದ ಶುಭಾಷಯಗಳೊಂದಿಗೆ...

ಜಗದ ಕತ್ತಲೆ ಕಳೆಯೆ ಇವೆಯಿಲ್ಲಿ
ಸೂರ್ಯ ಚಂದ್ರರ ಜೊತೆಗೆ ನೂರಾರು ದೀಪ,
ಮನದ ಕತ್ತಲೆಯಾ ಬೆಳಗೋಕೆ
ಹಚ್ಚಬೇಕಿದೆಯಿಲ್ಲಿ ಸುಜ್ಞಾನದಾ ದೀಪ.

ಮಾಡಬೇಕಿದೆ ಈಗ ತೈಲಾಭ್ಯಂಜನವ
ದೇಹದ ಕೊಳೆ ಕಳೆಯೋಕೆ ಅಲ್ಲಾ,
ಮನದ ಮೌಡ್ಯವ ತೊಳೆಯೋಕೆ
ಮಾಡಬೇಕಿದೆ ಇಲ್ಲಿ ಸತ್ಸಂಗದ ಸ್ನಾನ.

ಕರೆಯಬೇಕಿದೆ ಶ್ರೀಕೃಷ್ಣನ ಮನಸ ಮಂದಿರಕೇ
ನರಕನಂಥ ಅಸುರನ ವಧಿಸೋಕೆ ಅಲ್ಲ,
ನಮ್ಮೊಳಗಿನ ಮದ ಮಾತ್ಸರ್ಯಗಳ ಅಂತ್ಯಕ್ಕಾಗಿ
ಪಡೆಯಬೇಕಿದೆ ಆತ್ಮಬಲದಿಂದ ದೈವ ಸಾಕ್ಷಾತ್ಕಾರವನ್ನ.

ಹುಡುಕಬೇಕಿದೆ ಹರಿಯ ನಮ್ಮಂತರಂಗದೊಳಗೆ
ಬಲಿಯಂಥ ಬಲಾಡ್ಯನ ಎದುರಿಸೋಕೆ ಅಲ್ಲ,
ನಾನೆಂಬ ದುಷ್ಟ ರಕ್ಕಸನ ಮೆಟ್ಟಿನಿಲ್ಲೋಕೆ
ತ್ರಿವಿಕ್ರಮರಾಗಿ ನಿಲ್ಲಬೇಕಿದೆಯಿಲ್ಲಿ ಜಗವ ಬೆಳಗೋಕೆ.

ಹಚ್ಚಬೇಕಿದೆಯಿಲ್ಲಿ ಅರಿವಿನಾ ದೀಪವೊಂದ
ಜಗವ ಬೆಳಗುವಾ ನಿತ್ಯ ಜ್ಯೋತಿಯೊಂದಾ,
ನಮ್ಮೊಳಗಿನ ಅಂಧಕಾರವ ಅಳಿಸೋ ಹಣತೆಯೊಂದ
ಬೆಳಗಬೇಕಿದೆ ಜಗದ ನಾಳೆಯನ್ನ...




07 November, 2015

ಅವಳ ಪ್ರೀತಿಗೆ...


ಪಾಪ ಪುಣ್ಯಕೆ ನಾನು ಹೆದರಲಾರೆನೇ
ನಿನ್ನ ಬಿಟ್ಟು ಬಾಳುವ ಮನಸು ಇನ್ನು ಮಾಡಲಾರೆನು,
ಮನಸು ಕರಗಿ ಹೋಗಿದೆ ಹುಡುಗಿ ನಿನ್ನ ಹುಡುಕುತಾ
ನಿಂತಲ್ಲಿ ನಿಲ್ಲಲಾಗದೆ ತನುವು ಸೋತು ಹೋಗಿದೆ.

ದೂರ ನಿಂತರೆ ನಾನು ಸಹಿಸಲಾರೆನು
ಮನದ ಭಾವನೆ ನೀನು ಹೇಳಿಕೊಳ್ಳಬಾರದೆ,
ಪ್ರೀತಿ  ಹುಚ್ಚಿಗೆ ಮುಲಾಮು ಎಲ್ಲಿದೆ
ಮನದ ಗಾಯಕೆ ನೀನು ಆರೈಕೆ ಮಾಡಬಾರದೆ.

ನಿನ್ನ ನೋಡೊ ಬಯಕೆಯಾಗಿದೆ ಇಂದು ನನ್ನ ಕನಸಿಗೆ
ಸ್ನೇಹವಾಗಿದೆ ನನಗೆ ಇಂದು ನಿನ್ನ ನಗುವ ಜೊತೆಯಲಿ,
ಹುಚ್ಚು ಹಿಡಿದಿದೆ ಇಂದು ನನ್ನ ಕನಸಿಗೆ
ಮೂಕ ರೋಧನ ನಿನ್ನ ಕಣ್ಣ ತೆರೆಯದೆ.

ಜೊತೆಯ ಬೇಡಿದೆ ಬದುಕು ಮುಂದೆ ಸಾಗಲು
ನಿನ್ನ ಮುಗ್ಧ ಪ್ರೀತಿಯ ಸ್ಪರ್ಶ ಇನ್ನು ಬೇಕಿದೆ,
ನನ್ನ ಉಸಿರು ಇಲ್ಲಿದೆ ಹುಡುಗಿ ನಿನ್ನ ನಲಿವಿಗಾಗಿಯೇ
ನೋವು ಇಲ್ಲದಾ ಪ್ರೀತಿ ನಾನು ಹಂಚುವೆ.

ಈ ಕನಸು ನಿನ್ನವೇ ಹುಡುಗಿ ಒಮ್ಮೆ ನೋಡು ಬಾ
ನನ್ನ ಎದೆಯಲಿ ಪ್ರೀತಿ  ಲಾಲಿ ಕೇಳು ನೀ,
ಮುನಿಸು ಇಲ್ಲದಾ ಪ್ರೀತಿ ಜಗದಿ ಎಲ್ಲಿದೆ
ನೂರು ಜನುಮಕೂ ಒಲವ ಹಾಡು ನೀ ಹಾಡು ಬಾ.


30 October, 2015

ಪ್ರೀತಿನೇ ಎಲ್ಲಾ...ಪ್ರೀತಿಯೊಳಗೆ ಬೇವು ಬೆಲ್ಲ...


ಪ್ರೀತಿಯಲಿ ನೂರಾರು ನೆನಪಿದೆ
ಆ ನೆನಪಲಿ ಮನಸು ಮೈ ಮರೆತಿದೆ,
ಪ್ರೀತಿಗೆ ಸ್ನೇಹದಾ ನೆಪವಿದೆ
ನೆಪವಿಲ್ಲಿ ಸಂಭಂದವ ಹುಡುಕಿದೆ.

ಪ್ರೀತಿಗೂ ಒಂದು ಹೆಸರಿದೆ
ಆ ಹೆಸರ ಮನಸಿಲ್ಲಿ ಹುಡುಕಿದೆ,
ಪ್ರೀತಿಯಲೂ ಒಂದು ಬದುಕಿದೆ
ಆ ಬದುಕ ತುಂಬೆಲ್ಲಾ ನೂರು ಕನಸಿದೆ.

ಭೂಮಿಗೂ ಗಡಿಯಂಚಿನ ಹಂಗಿದೆ
ಪ್ರೀತಿಯಿಲ್ಲಿ ಗಡಿಯ ಮೇರೆಮೀರಿದೆ,
ಭಾಷೆಗೂ ಭಾವದಾ ಹಂಗಿದೆ
ಪ್ರೀತಿಯದು ಭಾಷೆಯಾ ಮರೆಸಿದೆ.

ಓಡೋ ಕಾಲಕೂ ತನ್ನದೆ ಸೂತ್ರವಿದೆ
ಪ್ರೀತಿಯಿದು ಕಾಲವನೇ ಬಂಧಿಸಿದೆ,
ನೋವಿಗೂ ಇಲ್ಲಿ ಔಷಧಿಯು ದೊರಕಿದೆ
ಪ್ರೀತಿಯಿಲ್ಲಿ ಮಾಯೆಯಾಗಿ ತಬ್ಬಿದೆ.

ಸೃಷ್ಟಿಗೂ ಸೌಂದರ್ಯದ ಮರುಳಿದೆ
ಪ್ರೀತಿಯೊಳು ರೂಪವೂ ಅಂಧವಾಗಿದೆ,
ಖುಷಿಗೊಂದು ಕಾರಣವು ಬೇಕಿದೆ
ಅದಕ್ಕಾಗೆ ಪ್ರೀತಿ ಭೂಮಿ ಮೇಲಿದೆ.


19 October, 2015

ನಲಿದಾಡು ತಾಯಿ ಶಾರದೆ...

ನವರಾತ್ರಿಯ ಶುಭಾಶಯಗಳೊಂದಿಗೆ....

ನಲಿ ನಲಿದಾಡು ಶಾರದೆ
ಎನ್ನ ನಾಲಿಗೆಯೊಳು ನೀನು,
ಒಳ್ಳೆಯ ಮಾತುಗಳನ್ನಾಡಿಸು ತಾಯೇ
ಕುಣಿ ಕುಣಿದಾಡು ಶಾರದೆ.

ನಲಿ ನಲಿದಾಡು ಶಾರದೆ
ಎನ್ನ ಎದೆಯೊಳಗೆ ನೀನು,
ಒಳ್ಳೆಯ ಭಾವನೆಗಳನರಳಿಸು ತಾಯೇ
ಕುಣಿ ಕುಣಿದಾಡು ಶಾರದೆ.

ನಲಿ ನಲಿದಾಡು ತಾಯಿ ಶಾರದೆ
ಎನ್ನ ಮಸ್ತಕದೊಳು ನೀನು,
ಒಳ್ಳೆಯ ಚಿಂತನೆಯ ರೂಪಿಸು ತಾಯೇ
ಕುಣಿ ಕುಣಿದಾಡು ಶಾರದೆ.

ಒಳ್ಳೆಯ ಕೆಲಸವ ಮಾಡಿಸು ತಾಯೇ
ಬ್ರಹ್ಮನ ರಾಣಿ ಸರಸ್ವತಿಯೇ,
ವಿದ್ಯಾಧಿದೇವತೆಯೇ ತಾಯಿ
ನಲಿ ನಲಿದಾಡು ಶಾರದೆ.

ಜ್ಞಾನದ ಜ್ಯೋತಿಯ ಬೆಳಗಿಸು ತಾಯೇ
ಎನ್ನ ಮಸ್ತಕದೊಳಗೆ ಶಾರದೆ,
ಬಾಳಜ್ಯೋತಿಯ ಬೆಳಗಿಸೇ ತಾಯಿ
ಕುಣಿ ಕುಣಿದಾಡು ಶಾರದೆ.

ನಲಿ ನಲಿದಾಡು ಶಾರದೆ
ಸಂಗೀತ ಸರಸ್ವತಿಯೇ ತಾಯಿ,
ಎನ್ನ ಹೃದಯ ಮಂದಿರದಲಿ ನೆಲೆಸಿ
ಕುಣಿ ಕುಣಿದಾಡು ತಾಯಿ ಶಾರದೆ.

ಅಹಂಕಾರದ ಕತ್ತಲೆಯಾ ಸರಿಸು
ಎನ್ನ ಕಂಗಳ ಪೊರೆಯಾ ಅಳಿಸು,
ಬ್ರಹ್ಮಾಂಡ ಜನನಿ ನೀನು
ಎನ್ನ ನಾಲಗೆಯೊಳು ನಲಿ ನಲಿದಾಡಬಾರದೆ.









14 October, 2015

ಕನವರಿಸೋ ಪ್ರೀತಿಗೆ...


ಚುಕ್ಕಿ ತಾರೆ ಮಿನುಗುತಿಹವು ನಿನ್ನ ದಾರಿ ಕಾಯುತಾ
ಚಂದ್ರ ತಾನು ಕರಗಿ ಹೋದ ಬೆಳಕನೀಯುತಾ,
ಮೌನ ಇಲ್ಲಿ ಮೆರೆದಿದೆ ಮನಸು ಮೂಕವಾಗಿದೆ
ನೂರು ಭಾವ ಜೊತೆಯು ಸೇರಿ ನಿನ್ನ ದಾರಿ ಕಾದಿದೆ.

ವಿರಹ ಇಲ್ಲಿ ನೂರು ತರಹ ಮನದ ಗೂಡು ಸೇರಿದೆ
ದಿನಗಳೆಲ್ಲ ಋತುಗಳಾಗಿ ಚಲಿಸದಂತೆ ನಿಂತಿವೆ,
ಬೀಸುತಿರುವ ಗಾಳಿ ಕೂಡ ಸ್ತಬ್ಧವಾಗಿ ನಿಂತಿದೆ
ಪ್ರೀತಿ ನೀನು ಬರುವ ದಾರಿಗಾಗಿ ಮನಸು ಇಲ್ಲಿ ಕಾದಿದೆ.

ಕಾಯುತಿರುವ ಕ್ಷಣಗಳೆಲ್ಲ ಉಸಿರು ಭಾರವಾಗಿದೆ
ನಿನ್ನ ನಗುವ ಕಾಣುವರೆಗೂ ಮನಸು ಹಗುರವಾಗದೆ,
ಕಣ್ಣ ರೆಪ್ಪೆ ಮುಚ್ಚಿದರೂ ನಿದಿರೆ ದೂರವಾಗಿದೆ
ನಿನ್ನ ದಾರಿ ನೋಡುತಲಿ ಕನಸು ಹತ್ತಿರವಾಗಿದೆ.

ಪ್ರೀತಿ ಎಂಬ ಮಾಯೆಯೊಳಗೆ ನನ್ನ ನಾನು ಮರೆತಿಹೆ
ಮಾಯೆಯಂಥ ಪ್ರೀತಿ ನೀನು ಎದುರು ಬಂದು ನಿಲ್ಲಬಾರದೆ,
ಕರಗಿ ಹೋದ ನೆನಪುಗಳು ಮತ್ತೆ ಮತ್ತೆ ಕಾಡಿವೆ
ನಿನ್ನ ಪ್ರೀತಿಗಾಗಿ ಮತ್ತೆ ಹೊಸ ಜೀವನವ ಬೇಡಿವೆ.

ಕೊರಗುತಿರುವ ಜೀವಕ್ಕಿಲ್ಲಿ ಧೈರ್ಯ ತುಂಬಬೇಕಿದೆ
ಮರುಗುತಿರುವ ಮನಸಿಗಿಲ್ಲಿ ಪ್ರೀತಿ ಪಾಠ ಬೇಕಿದೆ,
ಖುಷಿಯ ಹುಡುಕುತಿರುವ ಜೀವವಿಲ್ಲಿ ಜೊತೆಯನೊಂದ ಬೇಡಿದೆ
ಹೊಸ ಕನಸಿಗಿಲ್ಲಿ ಸ್ಪೂರ್ತಿಯಾಗಿ ನಿನ್ನ ಒಲವು ಸದಾ ಬೇಕಿದೆ.

09 October, 2015

ಬದಲಾಗು ಓ ಮನುಜಾ...


ಲೋಕದ ಡೊಂಕು ತಿದ್ದುವ ಮೊದಲು
ತಿದ್ದಿಕೋ ನಿನ್ನಾ ಓ ಮನುಜಾ,
ಕೆಡುಕಿಹುದು ನಿನ್ನಾ ಮನಸೊಳಗೆ
ಅರಿತುಕೋ ನೀ ಮೂಡ ಮನವೇ.

ನಾಣ್ಯಕೆ ಎರಡು ಮುಖವುಂಟು
ಸತ್ಯಕೂ ಅದರದೇ ಬಿಂಬವಿದೆ,
ನೀತಿಯ ಹೇಳೋ ಓ ಮನುಜಾ
ಯೋಚಿಸು ನೀನು ಎಡ ಬಲಗಳಲಿ.

ಪ್ರತಿ ಕೆಲಸದಿ ತಪ್ಪು ಇಹುದಿಲ್ಲಿ
ಬರೀಯ ತಪ್ಪನೇ ಹುಡುಕುವೆ ನೀ ಏಕಿಲ್ಲಿ,
ನೋಡುವ ಕಣ್ಣಲೇ ಪೂರ್ವಾಗ್ರಹವಿರಲು
ತಿಳಿಯದು ಎಂದೂ ನಿಜ ಸಂಗತಿಯೂ.

ಮೆರೆಯದಿರೂ ನೀ ಶ್ರೇಷ್ಟತೆಯಾ ಗುಂಗಿನಲಿ
ಸತ್ಯವ ಅರಿಯದೆ ಅಜ್ಞಾನಿಯಾಗದಿರು,
ಸಮರಸದಲಿ ಜೀವನವುಂಟು
ಕೆಡಿಸದಿರು ನೀ ಲೋಕದ ಶಾಂತಿಯನು.

ಹರಡದಿರು ಅಜ್ಞಾನದ ಕತ್ತಲೆಯಾ
ಸಾಧ್ಯವಾದರೆ ಬೆಳಗು ಜ್ಞಾನದ ಜ್ಯೋತಿಯನು,
ಬದಲಾಯಿಸು ನಿನ್ನಯ ನೋಟವನು
ಈ ಲೊಕವು ಸುಂದರ ತಾಣವು ನಿನಗಿಲ್ಲಿ.

30 September, 2015

ಹೇ ಸರ್ವಾಂತರ್ಯಾಮಿ...


ಜಗದಗಲ ವ್ಯಾಪಿಸಿಹ ಅಗೋಚರನೇ
ಪೂಜಿಪೆನು ನಾ ನಿನ್ನ ಪ್ರೀತಿಯಿಂದ,
ಮೂರ್ತರೂಪವ ಕೊಟ್ಟೆ ನಿನ್ನ ಪೂಜೆಗಾಗಿ
ಕ್ಷಮಿಸು ಓ ಗುರುವೇ ದೇವ ನಿರಾಕಾಯ.

ಪಂಚತತ್ವಗಳಲಿ ಬೆರೆತ ಓ ಪಾಂಚಜನ್ಯ
ಸಪ್ತ ಸಾಗರಗಳ ಶಕ್ತಿ ಕಾಯೋ ದೇವಾ,
ಕೋಟಿ ರೂಪವು ನಿನಗೆ ಸೂರ್ಯಕೊಟಿ ಪ್ರಭೆಯೇ
ಕರುಣೆಯಿಂದಲಿ ಕಾಯೋ ನೀ ಸರ್ವಶಕ್ತ.

ಅನಾದಿಯಾಗಿ ನಿಂತ ಅನಂತನೇ
ಅಂತ್ಯವಿಲ್ಲದೆ ಹರಸೋ ತ್ರಿವಿಕ್ರಮನೇ,
ಭಕ್ತಿಗೊಲಿಯುವ ದೈವ ನೀನು ಪರಮಾತ್ಮನೇ
ನಿಷ್ಕಾಮಕರ್ಮವ ಸತ್ಕರಿಸೋ ಶ್ರೀ ಗುರುವೇ.

ಧರ್ಮವನು ನೆಲೆಗೊಳಿಸೋ ಪುರುಷೋತ್ತಮನೇ
ಅನ್ಯಾಯವನು ಅಳಿಸುವಾ ವಾಮನಮೂರ್ತಿ,
ನ್ಯಾಯನೀತಿಯ ಉಳಿಸೋ ಮಂಗಳಮೂರ್ತಿ
ನಂಬಿಕೆಗೆ ಅಮೃತವೂ ಹೇ ಕರುಣಾಮಯಿ.

ಬ್ರಹ್ಮಾಂಡಪಾಲನೇ ನಿನಗೆ ನಮಿಪೆನು ಭಕ್ತಿಯಿಂದಾ
ಸೃಷ್ಟಿಯ ಮೂಲವೇ ಕಾಯೋ ಓ ವಿಶ್ವಗುರುವೇ,
ಲೋಕವನಾಳೋ ಶ್ರೀ ಓಂಕಾರ ರೂಪೆ
ಕೋಟಿ ಕೋಟಿ ನಮನಗಳು ನಿನಗೆ ಹೇ ಸರ್ವಾಂತರ್ಯಾಮಿ.

29 September, 2015

ಪ್ರೀತಿಯೆಂದರೇ....


ಮೂಕ ಮನಸು ಮಿಡಿಯುತಿದೆ ನೂರು ಭಾವ
ಸದ್ದಿಲ್ಲದೆ ಸಾಗುತಿದೆ ಕನಸಿನ ಪಯಣ,
ನಿದಿರೆಯಿಲ್ಲದ ಕಂಗಳಲೂ ತುಂಬು ಹೊಳಪು
ಓ ಪ್ರೀತಿಯೇ ನೀ ಮಿಡಿದಾ ಕ್ಷಣ.

ರೊಷವೆಲ್ಲಾ ಕರಗುತಿದೆ ಮನಸಿಲ್ಲಿ ನಿರ್ಮಲ
ಕೋಪವೆಲ್ಲಾ ತಣಿಯುವಂತಾ ಭಾವವೇ ಸುಂದರ,
ಪ್ರೀತಿ ನೀ ಮಾಯೆಯೋ ನಿನ್ನೊಳಗೂ ಮಾಯೆಯೋ
ಬದುಕ ಪುಟದಿ ಬರೆದಷ್ಟು ಮುಗಿಯದ ನಿನ್ನ ಚೈತನ್ಯವೂ.

ಕಾಡುತಿದೆ ಹಗಲೂ ಇರುಳೂ ಎದೆಯೊಳಗೆ ನೂರು ಕನಸು
ನೋವು ಇರದ ಬಾಳಿನಲಿ ಮೂಡಿದೆ ಭಾವ ನೂರು,
ಕನಸು ಹುಡುಕುತಿದೆ ಹೊತ್ತುತಂದ ಕಾರಣವಾ
ಓ ಪ್ರೀತಿಯೇ ಎಂತು ಹೇಳಲಿ ನಾ ನಿನ್ನ ಕಲರವ.

ನಲಿವ ಜೊತೆಗೆ ಸೇರಿ ಹೋಯ್ತು ನೀನು ಎಂಬ ಭಾವ
ಮರೆತೇಹೊಯ್ತು ಒಲವ ಹೊರಗೂ ನಾ ಎಂಬ ಭಾವ,
ಪ್ರೀತಿ ನೀನೇ ಚಂದ್ರಬಿಂಬ ಬದುಕ ಪರಧಿಯಲಿ
ಚುಕ್ಕಿತಾರೆ ಎಲ್ಲ ನೀನೇ ಈ ಮನಸ ಕನ್ನಡಿಗೆ.

ಒಲವ ಜಾತ್ರೆಯಲಿ ನೀನೇ ಆವರಿಸಿದೆ ನನ್ನೊಳಗೂ ಹೊರಗೂ
ಭಾವವಿಲ್ಲದೆ ಬಂಧಿಯಾಗಿದೆ ಮನಸು ಅನುಕ್ಷಣವೂ,
ಪ್ರೀತಿ ನೀನು ಜೊತೆಯಾದ ಕ್ಷಣದಿ ಕವಿತೆಯಿಲ್ಲಿ ನಾನು
ನನ್ನೊಳಗೆ ಹರಿವ ನೂರು ಭಾವದ ಸರಿಗಮ ನೀನು.




08 September, 2015

ಸ್ವರ್ಗ ನರಕಗಳ ನಡುವೆ....


ನದಿಯ ಮೂಲ ಋಷಿಯ ಮೂಲ
ಹುಡುಕ ಹೊರಟಿಹ ಮನುಜನೂ,
ಧರ್ಮದ ಮೂಲ ಹುಡುಕೋ ಭರದಲಿ
ಮರೆತ ತನ್ನತನವನೂ.

ಮೇಲೆ ಸ್ವರ್ಗ ಕೆಳಗೆ ನರಕವೆನ್ನುತ
ಹಾದಿ ಹಿಡಿದ ಹುಡುಕುತಾ,
ಸ್ವರ್ಗವದುವು ಮರೀಚಿಕೆಯಾಯಿತು
ನರಕವಿನ್ನು ಹತ್ತಿರವಾಯಿತು ತನ್ನ ಇಹದಲೇ.

ತನ್ನೊಳಗೆ ಇರುವ ದೈವತ್ವವ ಮರೆತ
ಸ್ವರ್ಗವನ್ನು ಕಾಣದಾದ ಹಗಲು ಇರುಳಿನಲೂ,
ಮನುಜತೆಯ ಮರೆತ ಮನುಜಗೇ
ದರ್ಶನವಾದರು ನರಕವಿಲ್ಲಿ ಗುರುತಿಸದಾದನು.

ನಂಬಿಕೆ ಮರೆತ ಮನುಜ ಮುಳುಗಿದ ಅಂಧಕಾರದಲಿ
ಜೊತೆಗೆ ಇರುವ ಜೀವಗಳ ಮರೆತ,
ಅಹಂಕಾರದಿ ಹೆಜ್ಜೆ ಹೆಜ್ಜೆಗೂ ಕಂಡ ನರಕವನೇ
ಭುವಿಯಲೇ ನರಕ ಸೃಷ್ಟಿಸಿ ಮೆರೆದಾ ಮನುಜನಿಲ್ಲಿ.

ಭುವಿಯೇ ಸ್ವರ್ಗ ಮನುಜಗಿಲ್ಲಿ
ಸೃಷ್ಟಿಯ ಅರಿತು ನಡೆವರೆಗೂ,
ತಾನು ತನ್ನದು ಎಂದು ನಡೆದರೆ ಭುವಿಯೇ ನರಕ 
ಅನ್ನುವ ಲೋಕ ಸತ್ಯವ ತಾ ಮರೆತ.


04 September, 2015

ಹೆಸರಿಲ್ಲದ ಪ್ರೀತಿಗೆ...


ವರವಾಗು ಪ್ರೀತಿಯೇ
ಉಸಿರಾಗು ಬದುಕಿಗೆ,
ಹೆಸರಾಗು ಉಸಿರಿಗೆ
ನೆಪವಾಗು ನೆನಪಿಗೆ.

ಬಾಳಿನ ಜ್ಯೋತಿಯೇ
ನಾಳಿನ ಕುಸುಮವೇ,
ನಗುವಿನಾ ಚಿತ್ತಾರವೇ
ಅರಳು ಬಾ ನಾಳೆಗೆ.

ಖುಷಿಗೊಂದು ಲಹರಿ ನೀ
ಒಂದೊಮ್ಮೆ ನೋವಿಗೂ,
ಮನಸಿನಾ ಪಾರಿಜಾತವೇ
ಹರಸು ನೀ ಅಮೃತಧಾರೆಯೇ.

ಮನಸಿನ ಜೋಕಾಲಿಯೇ
ಮನುಜತೆಯಾ ಜೀವವೇ,
ಕನಸಿಗೂ ಸ್ಪೂರ್ತಿ ನೀ
ಕಣ್ಣಂಚಿನ ಭಾಷೆಯೇ.

ಅಧರದ ಕಿರುನಗೆ
ಆಧರಿಸೋ ಬಂಧುವೇ,
ಹಸುರಾದ ಭಾವವೇ
ದೈವವಾಗು ನೀ ಬದುಕಿಗೇ...

31 August, 2015

ಲೈಫು ಇಷ್ಟೇನೇ....


ಕನವರಿಸೋಕೆ ಕನಸುಗಳಿಲ್ಲಾ
ಮನಸ ತುಂಬೆಲ್ಲಾ ಮೌನದ ಛಾಯೆ,
ಎದೆಯೊಳಗೆ ಆರದ ಗಾಯ
ನೋವಾದರೂ ಮುಲಾಮು ಹಚ್ಚುವಂತಿಲ್ಲ.

ತಡವರಿಸೋಕೆ ಭಾವನೆಗಳಿಲ್ಲಾ
ಖಾಲಿ ಪುಟಗಳ ತುಂಬಿಸೋಕೆ ಅಕ್ಷರಗಳಿಲ್ಲಾ,
ನೋವುಗಳೆಲ್ಲಾ ಪದಗಳಾಗೊದಿಲ್ಲ
ಕಣ್ಣೀರಿಗೂ ಕೂಡ ಕಾರಣ ತಿಳಿಯಲೇ ಇಲ್ಲ.

ಅಳುವ ಮನಸಿಗೆ ಲಾಲಿ ಹಾಡೊರಿಲ್ಲ
ನಗುವ ಮುಖವ ಮರೆಸುವಂತಿಲ್ಲಾ,
ಕೊರೆಯೋ ನೋವಿಗೂ ಕಾರಣವಿಲ್ಲ
ನೋವ ಭಾವವಾಗಿಸೋ ಜೊತೆಯೂ ಇಲ್ಲಾ.

ಸುಮ್ಮನಿದ್ದರೂ ಕೇಳುವರೆಲ್ಲಾ
ಎದೆಯೊಳಗಿನ ಕಳವಳ ಕಾಣಿಸೋದಿಲ್ಲಾ,
ಮರೆವಿಗೂ ಶಾಪವು ನೋವು
ನೆನಪುಗಳ ಅಭಿಶಾಪವಾಗಿದೆ ಬದುಕು.

ಕರಗುತಿದೆ ಕಲ್ಲು ಮನಸೂ ಇಲ್ಲಿ
ಮರೆಯಾಗುತಿದೆ ಮಿಡಿಯುವ ಭಾವ,
ಸೋತಿದೆ ಎದ್ದು ನಿಲ್ಲುವ ಛಲವೂ
ಮೆರೆಯುತಿದೆ ಸ್ಮಶಾನ ಮೌನ ಬದುಕ ಅಂಗಳದೊಳು.

24 August, 2015

ಅವಳಿಗೆ....



ಇಂದಿನ ಕನಸದು ನಾಳೆಯ ಬಯಸಿದೆ
ಹಿಂದಿನ ಕನಸದು ಇಂದು ಮೈ ಮರೆತಿದೆ,
ಬದುಕೇ ಕನಸಮ್ಮಾ ಬದುಕೊಳಗೆ ಕನಸಮ್ಮಾ
ನಿನ್ನ ಪ್ರೀತಿ ಪಡೆಯೊಕೆ ಪ್ರೇಮಿ ನಾನಮ್ಮಾ.

ದೂರದಿ ನಿಂತರೂ ಸರಿ ಹತ್ತಿರ ಆದರೂ ಸೈ
ನಾನು ನಿನ್ನವನಾಗೋಕೆ ನಿನ್ನಾ ನಗೆಯದು ಸಾಕಮ್ಮಾ,
ಪ್ರೀತಿ ಹೆಸರಲಿ ನನ್ನೆದೆಯ ದೀಪವು ನೀ
ಬೆಳಗು ನಿತ್ಯವೂ ನೀ ಎನ್ನ ಕನಸಾಗಿ.

ಉಸಿರು ನಿಂತರೂ ಸರಿ ನನ್ನೇ ಮರೆತರೂ ಸೈ
ನಾನು ನಿನ್ನವನು ಈ ಪ್ರೀತಿ ಪರಧಿಯಲಿ,
ಹರಸು ನೀ ಬಂದು ನನ್ನಾ ಕನಸುಗಳ
ನೀ ಬೇಕೇ ಬೇಕಮ್ಮಾ ನನ್ನಾ ಬದುಕಾ ನಾಳೆಯಲಿ.

ಮುನಿದು ನಿಂತರೂ ಸರಿ ಕಾದು ಕೂರುವೆ ನಾ
ಒಲಿದು ನೀ ಬರುವರೆಗೂ ಒಂಟಿಯೂ ನಾ ಬದುಕಲ್ಲಿ,
ಮುನಿಸನು ಕರಗಿಸು ಲಜ್ಜೆಯ ಮರೆಯಿಸು
ನಾನು ಎಂದೂ ನಿನ್ನವನು ನಿನಗಾಗೇ ಕಾಯುವೆನು.

ಪ್ರೀತಿಯ ನಗುವೇ ನೀ ಒಲವಿನ ಚಿತ್ತಾರವೇ
ಬದುಕಲಿ ಕನಸನು ಬೆರೆಸಲು ಬಾರೆಯಾ,
ಒಲವ ಹುಡುಗಿಯೇ ಪ್ರೀತಿಯ ದೇವತೇ
ಬಾಳು ಬೆಳಗೋಕೆ ಜೊತೆಯಾಗಿ ಬಾರೆ ನೀ.

17 August, 2015

ನಮೋ ನಮೋ ತಾಯಿ ಭಾರತಿ....


ತಾಯಿ ಭಾರತಿ ಲೋಕ ವಂದಿತೆ
ಜೀವದಾತೆ ನಮೋಸ್ತುತೆ,
ದೇವಮಾತೆಯೇ ಪುಣ್ಯದಾತೆಯೇ
ವಿಶ್ವ ಗುರುವೇ ನಮೋಸ್ತುತೆ.

ವೀರ ಪುತ್ರರ ಹಡೆದ ತಾಯಿಯೇ
ನಮಿಪೆನಮ್ಮಾ ಭಾರತಿ,
ಯೋಗ ಪುರುಷರ ಪಡೆದ ಮಾತೆಯೇ
ನಿನ್ನ ಚರಣ ಕಮಲಕ್ಕಿದೋ ವಂದನೆ.

ನಿತ್ಯ ಸಲಹೋ ಮಾತೆಯೇ
ವಿಶ್ವ ಶಾಂತಿಯ ಮೂರ್ತಿಯೇ,
ಸತ್ಯ ಅಹಿಂಸೆಯ ಜ್ಯೋತಿಯೇ
ತಾಯಿ ಭಾರತಿ ನಮೋಸ್ತುತೆ.

ರಾಮ ಕೃಷ್ಣಗೆ ಜನ್ಮ ನೀಡಿದ ಯೋಗ ಮಾಯೆಯೇ
ಭಕ್ತಿಯಿಂದಲಿ ಭಜಿಪೆನಮ್ಮಾ ತಾಯಿ ಭಾರತಿ,
ಋಷಿ ಸಂತರಿಗೆ ಜನ್ಮವಿತ್ತ ದಿವ್ಯ ಗರ್ಭವೇ
ಶಿರವ ಬಾಗಿ ನಮಿಪೆನಮ್ಮಾ ನಿನ್ನ ಪಾದಕೇ.

ಅಧರ್ಮವನ್ನಳಿಸೋ ದುರ್ಗೆಯೇ
ಸತ್ಯ ಧರ್ಮವ ಕಾಯೋ ವೈಷ್ಣವೀ
ವಿಶ್ವಕೆ ಬೆಳಕ ತೋರಿದ ಜ್ಞಾನದಾತೆ ಶಾರದೆ
ತಾಯಿ ಭಾರತಿ ನಮೋಸ್ತುತೆ

09 August, 2015

ಅನುಮಾನ...


ಗೊಂದಲದ ಹುತ್ತ ಮನಸು ಇಲ್ಲಿ
ಸಂಶಯದ ಹಾವು ಹೆಡೆಯಾಡುತಿದೆಯಲ್ಲಿ,
ವಿಷವೇ ವಿಷವೂ ಮನಸು ಮೈಯು ಈಗ
ಕಚ್ಚಬೇಕೆಂದೇ ಇಲ್ಲ ಭಾವನೆಗಳು ಸಾಯಲು.

ಹತ್ತಾರು ಬಣ್ಣ ಈ ಅನುಮಾನಕೇ
ಜಾತಿ ವರ್ಣಗಳು ಬೇಕು ಕಾರಣ ಹುಡುಕೋಕೆ,
ಧರ್ಮ ಅಧರ್ಮಗಳ ಅರಿವು ಇಲ್ಲದೆ
ಮನುಜತೆಯು ಸಾಯುತಿದೆ ಈ ವಿಷಬೀಜಕೇ.

ನೂರಾರು ಮುಖವಾಡ ಇಲ್ಲಿ ವಿಜ್ರಂಭಿಸುತಿದೆ
ಮನಸು ತನ್ನೊಳಗೆ ತಾನು ಕೊಳೆಯುತಿದೆ,
ಕಳೆಯುತ್ತಿದೆ ತನ್ನ ಪುಣ್ಯದಾ ಫಲವಾ
ತುಂಬುತ್ತಿದೆ ಮನಸಲ್ಲಿ ಪಾಪದಾ ಕರ್ಮಗಳಾ.

ಪ್ರೀತಿಯದು ಸಾಯುತ್ತಿದೆ ಅನುಮಾನಕೆ
ಮನಸೀಗ ಬೆತ್ತಲೆಯು ಸಂಶಯಕೆ,
ಉಸಿರ ಮರೆತ ಮನಸೀಗ ಕೊಲೆಯಾಗಿದೆ
ಹೊತ್ತಿಸುತ್ತಿದೆ ಅನುಮಾನದ ಕಿಡಿಯ ಜೀವಗಳೊಳಗೆ.

ಭಾವನೆಗಳು ಸತ್ತು ಇಲ್ಲಿ ನಾರುತ್ತಿವೆ
ರಣಹದ್ದುಗಳ ಕೇಕೆ ಮುಗಿಲು ಮುಟ್ಟುತ್ತಿದೆ,
ಸ್ವರ್ಗ ನರಕಗಳು ಬರೇಯ ಕಲ್ಪನೆಯಾಗದೆ
ಸುತ್ತಮುತ್ತಲೂ ಸೃಷ್ಟಿಯಾಗಿವೆ ಬದುಕಿನೊಳಗೆ.

31 July, 2015

ಗುರುವು ಇವನು...


ಬೆನ್ನ ಹಿಂದೆ ಗುರುವು ಇರಲು
ಬದುಕಿಗಿಲ್ಲಿ ಗುರಿಯು ಇಹುದು
ಬದುಕ ದಾರಿ ದೀಪ ಜೊತೆಗೆ ಇರಲು
ಸಾಗೊ ದಾರಿಗಿಲ್ಲ ಇಲ್ಲಿ ಕತ್ತಲೆ.

ಬುದ್ಧಿ ತಿದ್ಧಿ ತೀಡುವ ಗುರುವು ಒಬ್ಬ ಕಲಾವಿದ
ಅಂಧಕಾರ ತುಂಬಿದ ಮನಸ ಕೊಳೆಯ ಕಳೆಯುವ,
ಮಣ್ಣ ಮುದ್ದೆಯನ್ನ ಮೂರ್ತಿಯಾಗಿಸೋ ಶಿಲ್ಪಿಯೂ
ಬದುಕ ಪಯಣಕೆ ದಾರಿ ತೋರುವ ಇವನು ಒಬ್ಬ ನಾವಿಕ.

ಅಹಂಕಾರದ ಕಳೆಯ ಮುರಿದು ವಿನಯವನ್ನು ಬೆಳೆಸುವ
ತಿಳುವಳಿಕೆಯ ಪಸಲು ತೆಗೆವ ಇವನು ನೇಗಿಲ ಯೋಗಿಯು,
ಜ್ಞಾನ ಜ್ಯೋತಿ ಬೆಳಗಿಸಿ ಜಗವ ತಾನು ತೋರುವ
ಇವನು ನಿತ್ಯ ಯೋಗಿಯು  ಜಗದ ಕರ್ಮ ಯೋಗಿಯೂ.

ತ್ಯಾಗ ಸಹನೆ ಕಲಿಸುತ ಮನಸ ಪ್ರಬುದ್ಧಗೊಳಿಸುವ
ಪ್ರೀತಿ ಪಾಠ ಹೇಳುತ ಜಗವ ತಾನು ಮೆರೆಸುವ
ಶಾಂತಿ ಮಂತ್ರದಿಂದಲೇ ಭಾತ್ರುತ್ವವ ಕಲಿಸುವ
ಗುರುವು ಇವನು ನಿತ್ಯ ವಂದ್ಯನಾಗಿಹ.

ಜಗಕೆ ಜ್ಞಾನ ಹಂಚುತಾ ತನ್ನೇ ತಾನು ಮರೆಯುವ
ಕೋಟಿ ಕೋಟಿ ದೇವರ ಇವನು ತಾನು ತೋರಿದ,
ಜಗಕೆ ಬದುಕ ದಾರಿಯ ತೋರುತ
ಸ್ವತಃ ದೇವರುಗಳಿಂದಲೇ ಪೂಜನೀಯನಾಗಿಹ.





19 July, 2015

ಕಾಮನಬಿಲ್ಲು...


ಬದುಕೇ ನೀನು ಕಾಮನಬಿಲ್ಲು
ಬಣ್ಣ ಬಣ್ಣದಾ ಚಿತ್ತಾರ ನಿನ್ನ ತುಂಬೆಲ್ಲಾ,
ನಗುವಿಗೆ ಇಲ್ಲಿ ನೂರು ಬಣ್ಣ
ನೋವಿಗೆ ಇಲ್ಲಿದೆ ಬರೀಯ ಕಪ್ಪುಬಣ್ಣ.
ಕೋಪಕ್ಕೆ ಕೊಟ್ಟೆ ಕಡುಕೆಂಪು ಬಣ್ಣ
ಶಾಂತಿಯ ಜೊತೆಗಿದೆ ಶ್ವೇತವಣ೯,
ಪ್ರೀತಿಗೆ ಕೊಡಲಿ ಯಾವ ಬಣ್ಣ
ಬೆರೆಸಿಬಿಡಲೇ ನಿತ್ಯ ಸಂಮೃದ್ಧಿಯ ಹಸಿರು ಬಣ್ಣನಾ.
ಸ್ವಾಭಿಮಾನಕೆ ಬಳಿದೆ ಕೇಸರಿ ಬಣ್ಣ
ಮನಸ ವೇಗಕೆ ಬರೆದೆ ನೀಲಿಯ ವಣ೯,
ತ್ಯಾಗಕ್ಕೆ ಬರೆಯಲಿ ಯಾವ ಬಣ್ಣ
ಬರೆದು ಬಿಡಲೇ ಬೆಳಕಿನ ಬಣ್ಣ.
ಹುಸಿ ಮುನಿಸಿಗೆ ಬರೆದೆ ಕಂದು ಬಣ್ಣ
ತುಂಟತನಕೆ ಬಳಿದೆ ನಸುಗೆಂಪು ಬಣ್ಣ,
ಸ್ನೇಹಕ್ಕೆ ಕೊಡಲಿ ಯಾವ ಬಣ್ಣ
ಬೆರೆಸಿಬಿಡಲೇ ನೂರೆಂಟು ಬಣ್ಣ.
ಆಸೆಗೆ ಇಲ್ಲಿ ಹತ್ತಾರು ಬಣ್ಣ
ಒಲವಿಗೂ ಇಲ್ಲಿದೆ ಒಂದು ಬಣ್ಣ,
ಕನಸುಗಳಿಗೆ ಕೊಡಲಿ ಯಾವ ಬಣ್ಣ
ಚೆಲ್ಲಿಬಿಡಲೇ ಎಲ್ಲಾ ಬಣ್ಣಗಳನ್ನಾ...

12 July, 2015

ಮುಖವಾಡ...


ಸ್ನೇಹವೇ ಇಲ್ಲದೆ ನಗಬಹುದೇ
ಪ್ರೀತಿಯೇ ಇಲ್ಲದೆ ಬಾಳಬಹುದೇ,
ಮುಖವಾಡ ತೊಟ್ಟ ಓ ಮನಸುಗಳೇ
ಕಷ್ಟಕೆ ಇಲ್ಲಿ ನೆರವಾಗಬಹುದೇ.


ಬಿಚ್ಚಿಟ್ಟುಬಿಡಿ ಅತೃಪ್ತ ಆತ್ಮಗಳೇ ಈ ಮುಖವಾಡವ
ಕಳಚಿಬಿಡಿ ಒಮ್ಮೆ ಮನಸಿನಾ ಪೊರೆಯಾ,
ಸಂಭಂಧಗಳ ನೀವು ಬೆಳೆಸಬಹುದು
ಬದುಕು ಮಾತ್ರ ಅಧ೯ಸತ್ಯವಾಗಿಹುದು.

ನಿಮ್ಮ ನಗುವದು ನಗುವಲ್ಲಾ
ಅಮಾಯಕತೆಯ ಹರಾಜಿನ ಖುಷಿಯಷ್ಟೇ,
ನೋವ ಭಾವವದು ನಿಜವಲ್ಲ
ಬರೀಯ ಮೊಸಳೆಯ ಕಣ್ಣೀರು.

ನಾಣ್ಯಕ್ಕೆರಡು ಮುಖವುಂಟು ಇಲ್ಲಿ
ಕಾಲಕೂ ಅದರದೇ ಶಕ್ತಿಯಿಹುದು,
ಮುಖವಾಡವದು ಕಳಚಲೇಬೇಕು ಒಂದು ದಿನ
ಬಿಚ್ಚಿಬಿಡಿ ಮನಸುಗಳೇ ಬೆತ್ತಲಾಗುವ ಮುನ್ನ.

ಜಗವ ಬೆತ್ತಲಾಗಿಸುವ ಹಂಬಲವೇಕೆ
ಜಗವೆಂದೂ ಕತ್ತಲೆಯೇ ನಿಮ್ಮ ಮುಖವಾಡದೆದುರು,
ಕಳಚಿಬಿಡಿ ಮುಖವಾಡವ ನೀವು ಒಮ್ಮೆ
ಜಗದ ಕತ್ತಲೆಯೊಳು ಕರಗಿ ಹೋಗುವ ಮುನ್ನ.

ಧ್ಯೇಯವೊಂದೇ...


ನದಿಗಳು ಸಾವಿರ ಇರಬಹುದು
ಹರಿಯುವ ನೀರು ಒಂದೇನೇ,
ಧುಮ್ಮಿಕ್ಕುವ ವೇಗವು ಬೇರೆ ಇರಬಹುದು
ಕಾಣದ ಕಡಲನು ಸೇರುವ ಗುರಿಯೂ ಒಂದೇನೇ.


ನೂರಾರು ಬಣ್ಣಗಳಿರಬಹುದು ಅರಳೋ ಹೂವಿಗೆ
ನಕ್ಕು ನಗಿಸೋ ರೀತಿ ಒಂದೇನೇ,
ಸೂಸುವ ಪರಿಮಳ ಬೇರೆ ಇರಬಹುದು
ಮಧುವಾಗುವ ಮಕರಂಧ ಒಂದೇನೇ.

ಮರಗಳು ಸಾವಿರ ಇರಬಹುದು
ಕೊಡುವ ನೆರಳು ಒಂದೇನೇ,
ಫಲಗಳು ಬೇರೆ ಇರಬಹುದು
ಬದುಕುವ ಸಾಥ೯ಕ್ಯ ಒಂದೇನೇ.

ದೇವರು ಸಾವಿರ ಇರಬಹುದು
ಮನಸಿನ ಭಕ್ತಿಯು ಒಂದೇನೇ,
ಪೂಜಿಸೋ ರೀತಿಯು ಬೇರೆ ಇರಬಹುದು
ಅಪ೯ಣಾ ಭಾವವು ಒಂದೇನೇ.

ಮನಸುಗಳು ಸಾವಿರ ಇರಬಹುದು
ದೇಹದಿ ಹರಿಯುವ ರಕ್ತವು ಒಂದೇನೇ,
ಆಚಾರವಿಚಾರಗಳು ಬೇರೆ ಇರಬಹುದು
ಕೊನೆಯಲಿ ಸೇರುವ ಗಮ್ಯವು ಒಂದೇನೇ.

28 June, 2015

ಗೆಳೆಯಾ ನಿನಗಾಗಿ...


ಗೆಳೆಯಾ ನೀನು ನಗುತಿರಬೇಕು ಎಂದೂ ನನಗಾಗಿ
ಪ್ರತಿಕ್ಷಣವೂ ಅರಳುತಿರಬೇಕು ನನ್ನೆದೆಯಾ ಹೂವಾಗಿ,
ಚುಕ್ಕಿತಾರೆಗಳ ಬಾನಿನಲ್ಲಿ ಚಂದಿರ ನೀನಾಗು
ನಿನ್ನ ಪ್ರೀತಿಯ ಬೆಳದಿಂಗಳಲಿ ನಲಿವೆ ನಾನೆಂದೂ.

ನಂಜಿನ ಮಂಜನು ಕರಗಿಸೊ ಸೂರ್ಯನು ನೀನು ನನ್ನೆದೆ ಬಾನಿನಲಿ
ಸಂಚಿನ ಮೋಡವ ಕರಗಿಸಿ ನಗುತಿರು ನೀನು ಹಿತವಾಗಿ,
ಗ್ರಹಣವು ತಪ್ಪದು ಒಂದು ದಿನ ಚಿಂತೆಯಾ ಬಿಡು ಇಲ್ಲಿ
ನೋವುಗಳೆಷ್ಟೇ ಬಂದರೂ ಕೂಡಾ ಹೊಸ ಹುಟ್ಟಿದೆ ಪ್ರತಿದಿನವೂ.

ಹರಿಯುವ ನೀರು ನೀನಾಗು ಈ ಸ್ನೇಹದ ಕಡಲಲ್ಲಿ
ದಡವಾಗಿ ಜೊತೆಯಾಗುವೆ ನಾ ನಿನ್ನಾ ಪಯಣದಲಿ,
ಅಲೆಗಳ ರೂಪದಿ ಜೊತೆ ಸೇರು ನೋವು ನಲಿವ ಹಂಚೋಕೆ
ನಾನೆಂದೂ ನಿನ್ನ ಜೊತೆಯಾಗಿರುವೆ ನಿನ್ನ ಖುಷಿಯ ನೋಡೋಕೆ.

ಬೀಸುವ ಗಾಳಿಯು ನೀನಾಗು ಈ ಪ್ರೀತಿಯ ಪಯಣದಲಿ
ತಣ್ಣನೆ ಭಾವ ನಾನಾಗುವೆ ನಿನ್ನಾ ಜೊತೆಯಲ್ಲಿ,
ಬಂಧನವೆಂದೂ ನಿನಗಿಲ್ಲಾ,ಸಂಭಂಧಕೆ ಎಂದೂ ಹಂಗಿಲ್ಲಾ
ಹೃದಯತುಂಬಿ ನಗುತಿರು ಸಾಕು ಒಲವೇ ಇಲ್ಲಿ ನಿನಗೆಲ್ಲಾ.

ಕರಗದಿರು ಗೆಳೆಯಾ ನೀನು ಶಕುನಿಗಳ ಮೋಸದಾಟಕೆ
ನಿನಗೆ ನೀನು ನಾಯಕನಿಲ್ಲಿ ನೂರು ತಂತ್ರ ಭೇಧಿಸೋಕೆ,
ಭಾಷೆಯ ಕೊಡದಿರು ಗೆಳೆಯಾ ಜೀವನ ಇರುವರೆಗೂ
ನಗುತಲಿರು ಓ ಮುದ್ದಿನ ಗೆಳೆಯಾ ಎಂದೂ ನೀ ಹಿತವಾಗಿ.

19 June, 2015

ಮುಗಿಯದಾ ಪಯಣ...


ಮೂರು ದಿನದ ಬದುಕ್ಕಲುಂಟು ನೂರು ಚಿಂತೆಯಾ ಕಂತೆ
ಹುಡುಕಿದರೆ ಸಿಗದವಕೆ ಏನೂ ಕಾರಣವೂ,
ನೂರು ಬಯಕೆಗಳಿಲ್ಲಿ ನೂರು ಆಸೆಗಳಿಲ್ಲಿ ಮನಸಿಗೆ
ಅಜ್ಞಾತಲೋಕದಿ ಮನಸ ಪಯಣ ಎಂದೂ ಕೊನೆಕಾಣದೇ.


ಖುಷಿಯ ಹುಡುಕುತಾ ಮನಸು ಹೊರಟಿದೆ ಬಲು ದೂರ
ಇಲ್ಲೇ ಇರುವ ಪ್ರೀತಿಯ ಗುರುತಿಸದೆ ಮನಸದು ಎಂದೂ ಭಾರ,
ನಾನು ಎಂಬುದೇ ಮೊದಲ ಸತ್ಯವೂ ಮನಸ್ಸಿನಲ್ಲಿದೆ ಎಂದೂ
ನಾವು ಎನ್ನುವ ಭಾವವ ಮರೆತು ಮನಸ್ಸಾಗಿದೆ ಅಹಂಮ್ಮಿನ ಗೂಡು.

ಸಂಭಂಧಗಳಲಿ ತಪ್ಪು ಹುಡುಕುವುದೇ ಸಾಧನೆಯಾಗಿದೆ ಇಲ್ಲಿ
ಜೊತೆಗೇ ಇರುವ ಪ್ರೇಮಭಾವವದು ಅರಳುವುದಾದರೂ ಹೇಗೆ,
ಪ್ರೀತಿಯ ಹುಡುಕುತ ಸಾಗುವೆವಿಲ್ಲಿ ಸ್ವಾಥ೯ದ ಭಾವದೊಳಗೆ
ಸ್ವಾಥ೯ವು ಜೊತೆಯಲಿ ಇರಲು ಪ್ರೀತಿಯು ಮರೀಚಿಕೆ ಎಂಬುದ ಮರೆತು.

ಅಜ್ಞಾನವು ತುಂಬಿದ ಮನಸಲಿ ಉಂಟು ನೂರು ಕಲ್ಮಶಗಳು
ನೋಡುವ ದೃಷ್ಟಿಯು ಮಂಜಾಗಿರಲು ಕಾಣದು ದಾರಿಯು ಮುಂದೂ,
ಸ್ವಾಥ೯ದ ಜೀವನ ಸಾಗಿಸ ಹೊರಟಿದೆ ಹುಚ್ಚು ಮನಸದು ಇಲ್ಲಿ
ನಾಳೆಯ ಎಲ್ಲಾ ಕನಸುಗಳಿಗೂ ತಪ೯ಣ ಬಿಟ್ಟಂತಿದೆ ಇಂದು.

ಪ್ರೀತಿಯ ಹುಡುಕುವ ಮನಸಿಗೆ ಬೇಕು ತ್ಯಾಗದ ಬುದ್ಧಿಯು ಜೊತೆಗೇ
ಪ್ರೇಮದ ಪರಿಭಾಷೆಯ ಬರೆಯಲು ಮನಸಾಗಿರಬೇಕು ಶ್ವೇತಪರಧೆ,
ಚಿಂತೆಯು ಇಲ್ಲದೆ ಬದುಕಲುಬೇಕು ನಾಳೆಯು ನಮ್ಮದು ಎನ್ನುವ ಭಾವ
ಕಾರಣ ಹುಡುಕುವ ಮೊದಲು ತೆರೆದರೆ ಸಾಕು ಈ ಮನಸನ್ನೊಮ್ಮೆ...

ನನ್ನ ಚೆಲುವೇ...


ಚಂದ್ರವದನೆ ಚೆಲುವ ನಯನೆ
ಚಂದ್ರ ಕೂಡ ನಾಚಿ ಹೋದ ನಿನ್ನ ನಗುವಿಗೆ,
ಇಂದ್ರ ತಾನು ಮೈ ಮರೆತೇಹೋದ ನಿನ್ನ ಚೆಲುವಿಗೆ
ಮನುಜ ನಾನು ಪ್ರೇಮಿಯಾದೆ ನಿನ್ನ ನೋಟಕೆ.


ಮನಸಿನೊಳಗೆ ನೂರು ಕಲರವ ಅದು ನಿನಗಾಗೇ
ನೋಡೋ ಮುಂಚೆಯೆ ಮನಸು ಕಳೆದುಹೋಯಿತು,
ಮೊದಲ ನೋಟಕೆ ಒಲವು ಮೂಡಿದೆ ಪ್ರೇಮಿ ನಾ ನಿನಗೆ
ನೋಟ ಬೆರೆತ ಕ್ಷಣದಲ್ಲೇ ಮಾತು ಮರೆತು ಕವಿಯೇ ಆಗೋದೆ.

ಚೆಲುವಿಗಾಗಿ ಬಯಸಲಿಲ್ಲಾ ದೇವರಾಣೆ ನಾ ನಿನ್ನ
ಮುಗ್ಧ ಮನಸಿಗೆ ಸೋತು ಹೋದೆನು ಇಂದು ನಾ ಚಿನ್ನಾ,
ನಗುವಿನಲ್ಲೇ ಮರೆತುಬಿಟ್ಟೆ ನನ್ನ ತುಂಟತನವೆಲ್ಲಾ
ಜನುಮ ಜನುಮಕೂ ಜೊತೆಯಾಗಿ ಇರುವ ಭಾಷೆಯಿದೆಯಿಲ್ಲಿ.

ಚೆಲುವ ನಾನು ಬಣ್ಣಿಸಲಾರೆ ಕೇಳು ಓ ಹುಡುಗಿ
ನಿನ್ನ ಭಾವನೆಗಳಿಗೆ ಪದವ ನೀಡುವ ಕವಿಯು ನಾನಿಲ್ಲಿ,
ನಿನ್ನ ಮೌನಕೆ ಅಥ೯ವಾಗುವೆ ಬಾಳ ಪಥದಲ್ಲಿ
ಪ್ರೀತಿಗೆ ಪರಿಭಾಷೆಯಾಗು ಸಾಕು ನನ್ನೊಲವೆ ನೀನಿಲ್ಲಿ.

ಮಗುವಿನಂತೇ ಮುದ್ದಿಸೋ ಮನಸು ನನ್ನದು ಒಲವ ಕೂಸಾಗು
ನಿನ್ನ ನಗುವಲಿ ಎಂದೂ ನಾನೇ ಇರುವೆ ಚಿಂತೆಯ ಮರೆತುಬಿಡು,
ನಿನ್ನ ಕನಸುಗಳ ಬಿತ್ತಿಬಿಡು ನನ್ನೆದೆಯಾ ತೋಟದಲಿ
ಕಾವಲುಗಾರ ನಾನಾಗಿರುವೆ ಈ ಬಾಳಪಯಣದಲಿ.

06 June, 2015

ನಾನು...ನನ್ನ ಕನಸು...


ಹೊಸತೊಂದು ಬದುಕಿಗೆ ಮುನ್ನುಡಿ ಬರೆಯಬೇಕು
ಓ ಕನಸುಗಳೇ ಅದಕೆ ನಿಮ್ಮ ಕಾವಲು ಇರಬೇಕು,
ಹಗಲುಕನಸುಗಳಿಗೂ ಒಂದು ಬೇಲಿಯು ಇರಬೇಕು
ಅಲ್ಲಿ ಪ್ರತಿಕ್ಷಣವೂ ಪ್ರೀತಿಯು ನಗುತಿರಬೇಕು.


ಬದುಕ ತೋಟದಲ್ಲಿ ಭಾವವದು ಅರಳುತಿರಬೇಕು
ಓ ಕನಸುಗಳೇ ನೀವದಕೆ ಸಿಂಚನವಾಗಬೇಕು,
ಮರೆತು ಹೋದ ನೆನೆಪುಗಳಿಗೂ ಬಣ್ಣ ಹಚ್ಚಬೇಕು
ಸಿಹಿ ಕನಸುಗಳು ಮತ್ತೆ ಮತ್ತೆ ಮೇಲೈಸುತಿರಬೇಕು.

ಸ್ನೇಹದ ಪಯಣದಲ್ಲಿ ಒಲುಮೆ ತುಂಬಿರಬೇಕು
ಮನಸ ಆಗಸದಲ್ಲಿ ಕನಸುಗಳು ಮಿಂಚುತಿರಬೇಕು,
ಒಲವ ಮಾಗ೯ದಲಿ ಸಣ್ಣದೊಂದು ಹಣತೆಯಾಗಬೇಕು
ಓ ಕನಸುಗಳೇ ನೀವು ಬದುಕಿಗೆ ಆಸರೆಯಾಗಬೇಕು.

ಕನಸಲೋಕದಲ್ಲಿ ನನ್ನೇ ನಾನು ಮರೆಯಬೇಕು
ಒಲವ ತೊಟ್ಟಿಲಲ್ಲಿ ನಾನು ಮಗುವಾಗಿ ಮಲಗಬೇಕು,
ಮೊಗದ ತುಂಬಾ ಮುಗ್ಥ ನಗುವು ತುಂಬಿರಬೇಕು
ಓ ಕನಸುಗಳೇ ಅದಕ್ಕೆಂದೂ ನಿಮ್ಮ ಒಲವು ಜೊತೆಗಿರಬೇಕು.

ಓ ಕನಸುಗಳೇ ನೀವೆನ್ನ ಪ್ರೀತಿಯಾಗಬೇಕು
ಒಲವ ಪಯಣದಲಿ ನಾನೆಂದೂ ಕನಸುಗಾರನಾಗಿರಬೇಕು,
ಪ್ರತಿ ಕನಸಲೂ ನಾನು ಬದುಕ ಕಾಣಬೇಕು
ಬದುಕ ಪಯಣದಲಿ ನಾನೆಂದೂ ಪ್ರೇಮಿಯಾಗಿರಬೇಕು.

ಓ ಮನಸೇ...


ನೂರು ನೆನಪ ಹೊತ್ತುತರುವೆ
ಕವಿತೆಯಾಗು ಮುದ್ದು ಮನಸೇ,
ಭಾವ ಮರೆತು ಭ್ರಮೆಗೆ ಸರಿದ ಮನಸೇ
ಪ್ರೀತಿಯಾಗು ಈ ಬದುಕಿಗೆ.


ಬತ್ತಿಹೋದ ಭಾವಗಳನು ಹುಡುಕುತಿರುವೆ
ಬರಿದಾದ ಒಡಲಲ್ಲಿ ಆಸೆಯೊಂದ ಚಿಗುರಿಸು,
ಮರೆತ ಕನಸುಗಳಿಗೆ ಜೀವ ತುಂಬಿ
ಕಾವ್ಯ ಶಿಶುವಿಗೆ ಗಭ೯ಧರಿಸು ಮನಸೇ.

ಬದುಕಿಗೊಮ್ಮೆ ಆಸರೆಯಾಗು ಮನವೇ
ಪ್ರೇಮಲೋಕವ ನಾನು ತೆರೆದಿಡುವೇ,
ಕನಸ ನೀನು ಚಿಗುರಿಸು ಮನಸೇ
ಭಾವಗಳನು ನಾನು ತೆರೆದಿಡುವೇ.

ಕಾವ್ಯವಾಗಲಿ ನಿನ್ನೊಳಗಿನ ಪ್ರೀತಿ
ಪದವಾಗುವೆ ನಾನು ನಿನ್ನೊಳಗೆ,
ಭ್ರಮೆಯ ಸರಿಸಿ ಬದುಕ ಮೆರೆಸು ಮನಸೇ
ಭಾವವಾಗಿ ನಾ ನಿನ್ನೊಳಗೆ ಬೆರೆತುಬಿಡುವೆ.

ಅಜ್ಞಾನದ ಅಂಧಕಾರವ ಮರೆಸು
ವಾಸ್ತವದ ಕನ್ನಡಿಯ ಹಿಡಿ ಮನವೇ,
ಸೋತ ಭಾವಗಳಿಗೆ ಜೀವವಾಗಬೇಕು ನಾನು
ನನ್ನೊಳಗಿನ ಪ್ರೀತಿಯ ಮೆರೆಸು ಮನಸೇ.

16 April, 2015

ಬದಲಾಗು ಮನವೇ...


ಪರರ ಹಂಗಿಸಬೇಡ ಮೂಢ ಮನವೇ
ನಿನ್ನ ನಾಳೆಯನು ನೀನೇ ಕಾಣದಿರುವಾಗ,
ನಾಳೆಗೂ ಒಬ್ಬ ಒಡೆಯನಿಹುನು ಎಲ್ಲವಾ ತಾನು ನೋಡುತಿರುವ
ಪರರ ನೋಡಿ ನಗುವ ಮೊದಲು ನಿನ್ನ ನಾಳೆಯ ನೆನೆಸಿಕೋ.

ನೋವು ನಲಿವು ಶಾಶ್ವತವಲ್ಲ ಈ ಇಹದಲ್ಲಿ
ನಿನ್ನೆ ಇಂದು ಮುಗಿದಂತೆಲ್ಲಾ ಬದಲಾಗುವುದೆಲ್ಲಾ,
ಭಿಕ್ಷುಕ ಕೂಡ ಧನಿಕನಾಗುವ ಕಾಲದ ಮಹಿಮೆಯಲ್ಲಿ
ಯಾರೂ ಇಲ್ಲಿ ಕೇವಲರಲ್ಲ ತಿಳಿಯೇ ಮನವೇ ನೀನಿಲ್ಲಿ.

ಕಷ್ಟಕ್ಕೆ ಸ್ಪಂದಿಸುವ ಮನಸಾಗು ನೀನು
ಯಾರು ತಿಳಿದಿಹರು ನಾಳೆಯಾ ಕಥೆಯಿಲ್ಲಿ,
ಹಣೆಬರಹಕೆ ಇಲ್ಲಿ ಹೊಣೆ ಯಾರು ಇಲ್ಲಾ ಎಂಬುದ ತಿಳಿಬೇಕು ನೀನು
ಬದಲಾವಣೆಯಂತು ಬಂದೇ ಬರುವುದು ಇಂದಲ್ಲ ನಾಳೆಯಲಿ.

ಎಲ್ಲವೂ ಇದ್ದು ಕೊರಗುವರು ಇಲ್ಲಿ ನೆಮ್ಮದಿಗಾಗಿ
ಏನೂ ಇಲ್ಲದೆ ಸುಖಿಯಾಗಿರುವ ಲೋಕವು ಇಲ್ಲಿಹುದು,
ಕಾಣುವಾ ದೃಷ್ಟಿಗೆ ಪೊರೆ ಬರಬಹುದು ಓ ಮನಸೇ ಕೇಳು
ಮೇಲು ಕೀಳಿನ ಅಡ್ಡಗೋಡೆಗಳ ಒಡೆಯಬೇಕಷ್ಟೇ.

ಪ್ರೀತಿಗಿಂತ ಮಿಗಿಲಾದ ಭಾವವದು ಇಲ್ಲ ಈ ಜಗದಲ್ಲಿ
ಎಲ್ಲಾ ನಿನ್ನವರೇ ಪ್ರೀತಿಯಾ ಹಂಚು ಸುಖಿಯು ನೀನಿಲ್ಲಿ,
ಹಂಗಿಸ ಹೊರಟರೆ ಈ ಲೋಕವನು ಒಂಟಿಯಾಗಿಯೆ ಬಿಡುವೆ ನೀನಿಲ್ಲಿ
ಸತ್ತಾಗ ಹೊತ್ತೆಯ್ಯೊಲು ಬೇಕು ನಾಲ್ಕು ಜನ ಎಂಬ ಸತ್ಯವ ತಿಳಿ ಮನವೇ...

12 April, 2015

ಪ್ರೀತಿಗಾಗಿ...


ಭಾವಗಳು ಬರಿದಾಗಿ ಮಾತುಗಳು ಮರೆತು
ಬರೆಯೋಕು ಬರದೆ ಮೌನಿಯಾದೆ ನಾನು,
ಪ್ರೀತಿಯಲಿ ನೀನು ನನ್ನಾವರಿಸಿದಾಕ್ಷಣ
ಇದು ಎಂಥಾ ಮಾಯೆಯೋ ಓ ಹುಡುಗಿ.

ಬರೀಯ ಕತ್ತಲೆಯೇ ಇಲ್ಲಿ ಕನಸುಗಳು ಇಲ್ಲಾ
ಮನದ ಮೂಲೆಯಲ್ಲೆಲ್ಲಾ ನಿನ್ನ ನೆನಪುಗಳು ತುಂಬಿ,
ಯಾಕೆ ಹೀಗಾಯ್ತು ನಿನ್ನ ಕಂಡಾಕ್ಷಣ
ಮನಸ ಚಂದ್ರಿಕೆಯೇ ಗ್ರಹಣ ಹಿಡಿದಂತಿದೆಯಲ್ಲೇ.

ಕಲಿಯಬೇಕು ನಾನು ಪ್ರೀತಿ ಪಾಠ
ಭಾವಗಳ ಬೆರೆಸಿ ನಿನ್ನ ಮನಸ ಜೊತೆಗೆ,
ದೂರದಿ ನಿಂತು ನಕ್ಕು ಹಂಗಿಸಬೇಡ
ಸನಿಹಕೆ ಬಂದು ಹೊಸ ಕನಸೊಂದ ಸೃಷ್ಟಿಸು ಹುಡುಗಿ.

ಪ್ರೀತಿಯಲಿ ಎಲ್ಲಾ ಬಲ್ಲವರು ಇಲ್ಲಾ
ಎಲ್ಲವನು ಮರೆಸೋ ಪ್ರೀತಿ ಮಾಯೆಯಲ್ಲ,
ಹೃದಯದಲಿ ಹೊಸ ಕನಸೊಂದ ತುಂಬು
ಅದಕೆ ಬೇಕಿದೆ ನಿನ್ನ ಒಲವು ಎಂದೂ.

ಮನಸ ಕತ್ತಲೆಯ ಸರಿಸು ನಿನ್ನಾ ನಗುವಿನಿಂದಾ
ಆವರಿಸು ಪ್ರೀತಿಯಲಿ ನನ್ನ ತುಂಬಾ,
ಕನಸುಗಳು ಬೇಕು ನಿನ್ನೊಲವ ಜೊತೆಗೆ
ಪ್ರೀತಿಸಲು ಬೇಕು ನಿನ್ನ ಜೊತೆಯಂದೂ ನನಗೆ...

01 April, 2015

ಜ್ವಾಲಾಮುಖಿ...


ಮನಸ ಶರಧಿಯೊಳು ನೂರು ಭಾವಗಳ ಮೊರೆತ
ನೋವು ನಲಿವುಗಳ ಅಲೆಯ ಭೊಗ೯ರೆತ,
ಕಾಣದ ದಡಗಳವು ನಿನ್ನೆ ನಾಳೆಗಳು
ಪಯಣ ಸಾಗಿದೆ ಇಂದಿನ ದೋಣಿಯೊಳು.


ಶಾಂತ ಸಾಗರದಿ ಚಿಂತೆಗಳ ಬಿರುಗಾಳಿ
ಎದ್ದರೂ ಏಳಬಹುದು ಅಲ್ಲೊಂದು ಸುನಾಮಿ,
ಕೊಚ್ಚಿ ಹೋಗಬಹುದಿಲ್ಲಿ ಕನಸುಗಳ ಗೋಪುರ
ನಾಳೆಗಳ ದಡವದುವು ಕರಗಿ ಹೋಗುವ ಭೀತಿ.

ನಗುವ ಲೋಕದ ಹಿಂದಿದೆ ನೋವಿನಾ ನೆರಳು
ಸಿಡಿದೇಳಬಹುದು ಮನಸಲೊಂದು ಜ್ವಾಲಾಮುಖಿ,
ಉಕ್ಕಿಹರಿಯಬಹುದು ಭಾವನೆಗಳ ಲಾವಾರಸ
ಸುಟ್ಟು ಹೋಗಬಹುದಲ್ಲಿ ಸಂಭಂಧಗಳ ಕೋಟೆ.

ಮನಸೊಂದು ಶಿಲೆಯು ಕೋಪತಾಪಗಳ ಸಮ್ಮಿಲನದಿ
ಒತ್ತಡದಿ ಬಂಧಿಸಿದೆ ಸಂಭಂಧಗಳ ಜೊತೆಗೆ,
ತುಸು ಸಡಿಲವಾದರೂ ಭೂಕಂಪನವಿಲ್ಲಿ
ಬದುಕೇ ಬುಡಮೇಲು ಪ್ರೀತಿಯ ಅಸ್ತಿತ್ವವಿಲ್ಲದೇ.

ಬದುಕ ಪಯಣದಿ ನಾಳೆಯ ದಡ ಕಾಣುವ ತವಕ
ದಾಟಬಲ್ಲೆನೇ ಚಿಂತೆಗಳು ಸುನಾಮಿಯಾಗುವ ಮುನ್ನ,
ಹಿಡಿದಿಡಬಹುದೇ ಕುದಿವ ಲಾವಾರಸವ ಜ್ವಾಲಾಮುಖಿಯಾಗದಂತೆ
ತಡೆಯಬಲ್ಲೆನೇ ಭೂಕಂಪನವ ಪ್ರೀತಿಯ ಬಂಧವ ಬಿಗಿಯಾಗಿಸೀ...

29 March, 2015

ಕವಿತೆಯೊಂದು ಬರೆಯಬೇಕು...


ಮನಸ ಮಾತುಗಳ ಇಲ್ಲಿ ಬರೆದಿಡಬೇಕು
ಭಾವಗಳ ಬಿಚ್ಚಿ ಪದಗಳಲಿ ಕುಣಿಸಬೇಕು,
ಕನಸುಗಳ ಇಲ್ಲಿ ಕರೆತರಬೇಕು
ಒಲವಿನ ಪದಗಳಲಿ ಬಂಧಿಸಿಡಬೇಕು.


ನೋವು ನಲಿವುಗಳ ಬಿಚ್ಚಿಡಬೇಕು
ಹಸಿವೆಯಾ ದುಖಃವನು ಮರೆಸಬೇಕು,
ಬರಿದಾದ ಮನಗಳಲಿ ಒಲವನ್ನು ಬಿತ್ತಬೇಕು
ಸೋತ ಬದುಕಲಿ ಸ್ಥೈಯ೯ವ ತುಂಬುತಿರಬೇಕು.

ನಾಳೆಗಳ ಆಗಸವನು ಇಂದು ತೆರೆದಿಡಬೇಕು
ಆಸೆ ಕಂಗಳ ನಕ್ಷತ್ರಗಳು ಮಿನುಗುತಿರಬೇಕು,
ನಂಬಿಕೆಯ ಗೂಡನೂ ಮತ್ತೆ ಕಟ್ಟಬೇಕು
ಬದುಕ ಪ್ರೀತಿಗೆ ಮುನ್ನುಡಿ ಬರೆಯಬೇಕು.

ಅನುದಿನವು ಹೊಸತನವ ತೋರಬೇಕು
ಕಲ್ಲು ಹೃದಯಗಳಲೂ ಪ್ರೀತಿಯ ಹೂವು ಬೆಳೆಯಬೇಕು,
ದ್ವೇಷ ಅಸೂಯೆಗಳ ಕರಗಿಸಿ ನಗುತಿರಬೇಕು
ಕದನವಿಲ್ಲದ ಬದುಕ ಬರೆದುಬಿಡಬೇಕು.

ಸವಿನೆನಪುಗಳ ಇಲ್ಲಿ ಮೆರೆಸಬೇಕು
ಕಹಿನೆನಪುಗಳ ಮೆಟ್ಟಿ ನಿಲ್ಲಬೇಕು,
ಹೊಸ ಜೀವನಕೆ ಮುನ್ನುಡಿಯ ಬರೆಯಬೇಕು
ಬದುಕಿನ ಕವಿತೆಯೊಂದ ಬರೆಯಬೇಕು...

22 March, 2015

ಒಲವೊಂದೇ ಸಾಕು...


ಕಾರಣವಿನ್ನೂ ಬೇಕಿಲ್ಲಾ ಹುಡುಗಿ
ನಿನ್ನಾ ಮುಗ್ಧತೆಯೊಂದೇ ಸಾಕಲ್ಲ,
ಮನಸು ಮಿಡಿಯೋಕೆ, ತಕಧಿಮಿ ಕುಣಿಯೋಕೆ
ಕನಸು ಕಾಣೋಕೆ,ಒಲವು ಮೂಡೋಕೆ.
ಮಾತುಗಳಿನ್ನೂ ಬೇಕಿಲ್ಲಾ
ನಿನ್ನ ಮೌನದ ಪರಿಯಾ ನೋಡೋಕೆ,
ಮನಸು ಒಂದೇ ಸಾಕಿನ್ನೂ ನೂರು ಭಾವ ಮೂಡೋಕೆ
ನಿನ್ನ ಪ್ರೀತಿ ಮಾಡೋಕೆ,ಪ್ರೀತಿ ಅಂದ ಸವಿಯೋಕೆ.
ಚಂದದ ಹೂಗಳು ಬೇಕಿಲ್ಲಾ ಮಂತ್ರಮುಗ್ಧಗೊಳಿಸೋಕೆ
ನಿನ್ನ ನಗುವ ಪರಿಯೇ ಸಾಕಿನ್ನೂ,
ಜಗವ ಮರೆಸೋಕೆ,ಕನಸ ಮೆರೆಸೋಕೆ
ಒಲವ ತೊಟ್ಟಿಲಲಿ ಜಗವ ತೂಗೋಕೆ.
ತಂಗಾಳಿಯ ತಂಪು ಬೇಕಿಲ್ಲಾ ಮನಕೆ ಮುದವ ನೀಡೋಕೆ
ನಿನ್ನ ಮುಂಗುರುಳೇ ಸಾಕಿನ್ನೂ ನನ್ನೆದೆಗೆ ಕಚಗುಳಿಯಿಡೋಕೆ,
ನಿನ್ನ ಬಿಸಿಯುಸಿರ ಬುಗ್ಗೆಯೆಬೇಕು
ನನ್ನೆದೆಯಾ ತಣಿಸೋಕೆ,ಪ್ರೀತಿಯಲಿ ಜಗವ ಮರೆಸೋಕೆ.
ಮುಂಗಾರು ಮಳೆಯದುವೇ ಬೇಕಿಲ್ಲಾ ನಾ ತೋಯ್ದುಬಿಡಲು
ಪ್ರೀತಿಯ ಮುತ್ತದುವೇ ಸಾಕಿನ್ನು ನಾ ನೆನೆಯಲು
ನಿನ್ನ ಒಲವೆಂದೂ ಬೇಕು ನಾ ಪ್ರೇಮಿಯಾಗಿರಲು
ಜೊತೆಯೆಂದೂ ನೀನೇ ಬೇಕು ನಾ ಕನಸು ಕಾಣಲೂ...

ಧಮ೯ ಉಳಿಸು ತಾಯೇ...


ಭೂಮಿ ತಾಯಿಯೇ ಹೇಳಮ್ಮಾ
ಬರೀಯ ನೋವೇ ತುಂಬಿತೇ ನಿನ್ನ ಮಡಿಲಲ್ಲಿ,
ನ್ಯಾಯಕ್ಕೆ ನೆಲೆಯೇ ಕಳೆದೋಯ್ತೆ?
ಸತ್ಯಕ್ಕೆ ಬೆಲೆಯೇ ಇಲ್ಲವೇನಮ್ಮಾ.
ಕಂಸ,ಕೀಚಕರು ಮೆರೆಯುತಿಹರಮ್ಮಾ
ರಾಮ,ಕೃಷ್ಣರಿಗೇ ಜನ್ಮ ನೀಡಬಾರದೇ,
ಧಮ೯ದ ಅಥ೯ವೇ ಕಳೆದೋಯ್ತು
ಬದುಕಬೇಕೇ ಭಯದ ನೆರಳಿನಲಿ.
ರಾಕ್ಷಸರಾಳುತಿಹ ನಾಡಿನಲಿ
ನ್ಯಾಯನೀತಿಗೆ ಬೆಲೆಯೆಲ್ಲಿ,
ಭ್ರಷ್ಟ ದುಷ್ಟರ ಕೊನೆಗಾಣಿಸಿ
ಶಿಷ್ಟರ ಪೊರೆಯಲು ನೀನು ಬರಬಾರದೇ.
ಅಂಧಕಾರವೇ ಮೆರೆಯುತಿದೆ
ಮನುಜ ತತ್ವವ ಮರೆಸುತಿದೆ,
ದಾನವ ಗುಣವೇ ಮೇರೆ ಮೀರುತಿದೆ
ಜಗಜನನಿಯಾಗಿ ನೀ ಬರಬಾರದೇ.
ಕ್ರಾಂತಿಯ ಕಿಡಿಗೆ ನೀನು ಜನ್ಮ ನೀಡಬಾರದೇ
ಸತ್ಯ ಧಮ೯ಕೆ ನೆಲೆಯ ನೀಡಬಾರದೇ,
ಸಹನೆಯ ಸ್ವಲ್ಪ ನೀನು ಬದಿಗಿಡಬಾರದೇ
ಬಾಯ್ಬಿಟ್ಟು ದುಷ್ಟರ ದಮನ ಮಾಡಬಾರದೇ...

15 March, 2015

ಒಲವೇ...


ಕರಗಿಹೋದ ಕನಸಿಗೆ
ಬರೆಯಬೇಕು ಮುನ್ನುಡಿ,
ಮರೆತುಹೋದ ಭಾವಕೂ
ನೀಡಬೇಕಿದೆ ಜೀವನ.

ನೋವ ಪರದೆ ಸರಿದಿದೆ
ನಲಿವು ಕೈಯ ಹಿಡಿದಿದೆ,
ಮನದ ಕತ್ತಲೆಯ ಕರಗಿಸಿ
ಒಲವ ಬೆಳಕು ತುಂಬಬೇಕಿದೆ.
ಸುಟ್ಟುಹೋದ ಕನಸಿಗೆ
ಹೊಸ ಜನ್ಮವೊಂದು ಸಿಕ್ಕಿದೆ,
ಮನಸಿನಾಳದಿಂದ ತೆಗೆದ
ಹೊಸ ಉಡುಗೆಯೊಂದ ತೊಡಿಸಬೇಕಿದೆ.
ಸರಸ ವಿರಸದ ನಡುವಲಿ
ಕೊಚ್ಚಿಹೋದ ಭಾವಕೇ,
ಹೊಸ ಚೈತನ್ಯವ ತುಂಬಲು
ಸಂಭಂಧವೊಂದು ಬೇಕಿದೆ.
ಭಾವವದುವು ಚಿಗುರಲು
ಒಲವದುವು ಮತ್ತೆ ಮತ್ತೆ ಬೇಕಿದೆ,
ಕನಸುಗಳ ಮರುಹುಟ್ಟಿಗೆ
ನಿನ್ನೊಲವು ಸದಾ ಬೇಕಿದೆ...