25 December, 2017

ಚಿಟ್ಟೆ...


ಚಿಟ್ಟೆ ನೀನು ಚಿಟ್ಟೆ
ಬದುಕೇ ನೀನು ಚಿಟ್ಟೆ,
ಬಣ್ಣಬಣ್ಣದ ಕನಸ ಕಟ್ಟಿ
ಮನಸಿನಿಂದ ದೂರ ಹಾರಿದೆ...

ಚಿಟ್ಟೆ ನೀನು ಚಿಟ್ಟೆ
ಓ ಒಲವೇ ನೀನು ಚಿಟ್ಟೆ,
ಪ್ರೀತಿ ಹಾಡ ಬರೆದು
ಕನಸಿಗಿಲ್ಲಿ ಅರ್ಥ ಕೊಟ್ಟೆ...

ಚಿಟ್ಟೆ ನೀನು ಚಿಟ್ಟೆ
ಓ ಮನಸೇ ನೀನು ಚಿಟ್ಟೆ,
ಪ್ರೀತಿ ಸ್ನೇಹ ಅಂತ ಮನಸ ಬಿಚ್ಚಿ ಇಟ್ಟೆ
ಅಲ್ಲಿ ಭಾವನೆಗಳ ಬಚ್ಚಿಟ್ಟೆಯೇ...

ಚಿಟ್ಟೆ ನೀನು ಚಿಟ್ಟೆ
ಓ ಕಾಲ ನೀನು ಚಿಟ್ಟೆ,
ಇಂದು ನಿನ್ನೆಗಳ ಬೆರೆಸಿ
ನಾಳೆಯೊಳಗೆ ಸೇರಿ ಬಿಟ್ಟೆಯೇ...






29 November, 2017

ಓ ಒಲವೇ...


ಚಂದಮಾಮನಾಗಲೇ ನಾ
ನಿನ್ನಾ ಪ್ರೀತಿಯಲಿ,
ಚುಕ್ಕಿ ತಾರೆ ನಾಚಲಿ
ನಮ್ಮಿಬ್ಬರ ಪ್ರೀತಿ ಹಾಡಿಗೆ...

ಬೆಳ್ಳಿ ಬೆಳದಿಂಗಳ ಹರಡುವೆ ನಾ
ಈ ಪ್ರೀತಿಯ ದಾರಿಯಲಿ,
ಹುಣ್ಣಿಮೆಯಾ ಬೆಳಕೆಂದೂ
ಕರಗದಂತೆ ಈ ಪ್ರೀತಿಯ ಪಾಲಿಗೆ...

ಕಾರ್ಮೋಡಗಳ ಮರೆಯಲಿ ನಾನು
ಮರೆತರೂ ಕೆಲವು ಕ್ಷಣ,
ಮರಳಿ ಬರುವೆ ನಾನೆಂದೂ
ನಿನ್ನ ಒಲವಿನ ಹಾಡಿಗೆ...

ಅಮವಾಸ್ಯೆಯ ಕತ್ತಲಲಿ
ನಾ ಕರಗಿ ಹೋದರೂ,
ಮತ್ತೆ ಹುಟ್ಟಿ ಬರುವೆ ನಾ
ನಿನ್ನ ಒಲವಾ ಬಲದಲ್ಲಿ...

ನಿನ್ನೊಲವ ಚಂದಿರ ನಾನು
ನನ್ನೊಳಗೆ ಚಂದವೂ ನೀನು,
ಇದು ಮುಗಿಯದ ಒಲವಿನ ಹಾಡು
ಇದು ಮನಸುಗಳ ಬೆಸೆದಿಹ ಪಾಡು...

20 November, 2017

ಭಾವಯಾನ...

ಪ್ರೀತಿ ನೀನು ಸನಿಹ ಬರುವವರೆಗೂ
ಬಾನ ಚಂದಿರ,
ಬದುಕ ಜೊತೆಗೆ ಸೇರಿದೊಡನೆ
ಮನಸು ಮೌನ ಮಂದಿರ...

ತುಸು ಕೋಪವಿಲ್ಲಿ,ಹುಸಿ ಮುನಿಸ ಜೊತೆಗೆ
ಬಾಳು ನಂದನ,
ಹಿತವಾದ ಮಾತು ತುಟಿಯಂಚ ನಗುವು ಕರಗೇ
ಬದುಕೇ ಕಾನನ...

ಸ್ನೇಹದ ಜೊತೆಗೆ ಪ್ರೇಮವ ಬೆರೆವ ಪರಿಗೆ
ಬದುಕಿಲ್ಲಿ ವಿಸ್ಮಯಾ,
ನಗುವಿನ ಲೋಕದೆ ನೋವನು ಮರೆಸುವ
ಭಾವವೇ ನೀನಿಲ್ಲಿ ಪುರಸ್ಕೃತ...

ಬದುಕಲಿ ಭಾವದ ಬವಣೆಯ ಹೆಣೆಯೋ
ಪ್ರೀತಿಯೇ ನೀನೊಬ್ಬ ಪರೀಕ್ಷಕ,
ಪ್ರೀತಿ ಪರೀಕ್ಷೆಯ ಪದೇ ಪದೇ ಪಡೆಯುವ
ಬದುಕೇ ನೀನಿಲ್ಲಿ ಪರೀಕ್ಷಿತ...




31 October, 2017

ಧಣಿ ನೀನು ದನಿಯಾಗು...

ಜನ ಮಾನಸದ ದನಿಯಾಗಬೇಕು
ಪ್ರೀತಿಯಲಿ ಎಂದೂ ಧಣಿಯಾಗಬೇಕು,
ಗುಣದಲ್ಲಿ ಅಪ್ಪಟ ಚಿನ್ನದ ಗಣಿಯಾಗಬೇಕು
ಓ ಗೆಳೆಯಾ ನೀನೆಂದೂ ಸ್ನೇಹಕ್ಕೆ ಋಣಿಯಾಗಿರಬೇಕು...

ಹೆತ್ತ ತಾಯಿಗೆ ಮುದ್ದಿನ ಮಗನಾಗಬೇಕು
ಹೊತ್ತ ತಾಯಿಯ ಚೊಚ್ಚಲ ಮಗನಂತಿರಬೇಕು,
ನಾಡು ನುಡಿಗೆ ನೀ ಕಾವಲಾಗಬೇಕು
ಓ ಗೆಳೆಯಾ ನೀನು ತಾಯಿನಾಡಿನ ಸೇವಕನಾಗಿರಬೇಕು...

ಸಂಸ್ಕೃತಿಯಾ ಪ್ರತಿಬಿಂಬದಂತಿರಬೇಕು
ಸಂಸ್ಕಾರಕೆ ನೀನು ಗುರುವಾಗಬೇಕು,
ಧರ್ಮ ರಕ್ಷಣೆಗೆ ನೀನು ದಂಡನಾಯಕಬೇಕು
ಓ ಗೆಳೆಯ ನೀನು ನ್ಯಾಯ ನೀತಿಗೆ ನಾಯಕನಾಗಬೇಕು...

ಗಿರಿ ಶಿಖರವಾಗು ಕಷ್ಟಗಳ ಜೊತೆಗೆ
ಗುರಿಯಿರಲಿ ಮನುಜತೆಯ ಕಡೆಗೆ,
ಹುಲ್ಲಾಗು ನೋವಿನ ಹೃದಯಗಳಿಗೆ
ಓ ಗೆಳೆಯಾ ನೀನಾಗು ದೀನ ಬಂಧು...













21 October, 2017

ಆರಂಭ...

ತಂಪಾದ ಬದುಕಿಲ್ಲಿ ಕೆಂಪಾಗೋ ಮುನ್ನ
ಹುಡುಕಬೇಕಿಲ್ಲಿ ಸಾರ್ಥಕತೆಯ ನೆಲೆಯಾ,
ಹಣ್ಣು ಎಲೆಯದುವು ಉದುರಿ ಹೋಗೊ ಮುನ್ನ
ಸಾರ್ಥಕ್ಯಗೊಳಿಸಿದಂತೆ ತನ್ನಿರುವನ್ನ...

ಆರಂಭವದು ಅಂತ್ಯವಾಗುವ ಮೊದಲು
ಸಂಪಾದಿಸಬೇಕಿದೆ ಸ್ವಲ್ಪ ಪುಣ್ಯವನ್ನ,
ಭಯದಿಂದಲ್ಲ ಭಕ್ತಿಯಿಂದಲ್ಲ
ಹುಟ್ಟಿದ್ದು ಮನುಜನಾಗಿ ಎಂಬ ಕಾರಣದಿ...

ದ್ವೇಷವೆಂಬ ಕಿಡಿ ಬೆಂಕಿಯಾಗುವ ಮುನ್ನ
ಹಚ್ಚಬೇಕಿದೆ ಪ್ರೀತಿಯೆಂಬ ದೀಪ,
ಆರಂಭವು ಅಂತ್ಯದೊಳು ಮರೆಯಾಗುವ ಮೊದಲು
ಬೆಳಕಾಗಬೇಕು ಜಗದ ಕತ್ತಲೆಗೆ...

ಆರಂಭಕ್ಕೊಂದು ಅಂತ್ಯವಿದೆ ಎಂಬುವುದಿಲ್ಲಿ ಸತ್ಯ
ಅಂತ್ಯವಿದು ಹೊಸ ಆರಂಭವಿಲ್ಲಿ ನಿತ್ಯ ಸತ್ಯ,
ಬದಲಾವಣೆ ಇದು ಜಗದ ನಿಯಮ
ಬದಲಾಗಬೇಕಿದೆ ಮನಸೇ ನಿನ್ನ ಬದುಕ ನಿಯಮವಿಲ್ಲಿ ಈಗ...





18 September, 2017

ಮನ್ವಂತರ...


ಮಳೆಯಾಗಿ ಸುರಿಯಬೇಕು ಓ ನೆನಪೇ
ಕಾರ್ಮೋಡವಾಗಿ ಕವಿಯದಿರು ನೀನು,
ಒಲವಿಂದ ಒಲವಿಗಾಗಿ ನೀ ಸುರಿಯಬೇಕು
ಬದುಕಿನ ಅಮೃತಧಾರೆ  ಓ ನೆನಪೇ...

ನೆನಪು ನೆನಪು ಓ ಸವಿ ನೆನಪೇ
ಮಕರಂಧವಾಗಬೇಕು ನೀನು ಬದುಕಲ್ಲಿ,
ತರುಲತೆಯಾಗಬೇಕು ನೀನು ಬದುಕ ಬನದಲ್ಲಿ
ನಲಿಬೇಕು ನಾನು ನಿನ್ನ ನೆರಳ ಮರೆಯಲ್ಲಿ...

ಅರಳು ಅರಳು ಓ ಕನಸೇ
ನೆನಪುಗಳ ತಳಿರು ತೋರಣದ ನಡುವೆ,
ಬದುಕಾಗಬೇಕು ಪ್ರೀತಿಯ ಹೊನಲು
ನಾಳೆಗಳ ಪಯಣ ನಗು ನಗುತಿರಲು...

ಉಸಿರಾಗಬೇಕು ನೀನು ಓ ಒಲವೇ
ನೆನಪುಗಳ ಪ್ರೀತಿಯ ತಂಗಾಳಿಯೊಳಗೆ,
ಪ್ರೀತಿಯಿಂದ ಮೈ ಸವರಬೇಕು ಕನಸೇ
ನೆನಪುಗಳ ಈ ಕಚಗುಳಿಯಾಟದೊಳಗೆ...

ಬಸಿರಾಗಬೇಕು ಓ ನನ್ನ ಕನಸೇ
ನೆನಪುಗಳ ಪ್ರೀತಿ ಪ್ರಣಯದೊಳಗೆ,
ಉಸಿರಾಗಿ ಬೆರೆವೆ ನಾನು ನೆನಪೇ
ಹೆಸರಾಗಿ ಬರುವೆ ಎಂದೂ ಜೊತೆಗೆ...


09 September, 2017

ಬದುಕೇ...

ಮೂರು ದಿನದ ಬದುಕೇ
ಮುನಿಸು ಇಲ್ಲಿ ಏಕೆ,
ಹುಟ್ಟು ಸಾವಿನೊಳಗೂ
ಕೊಳಕ ಹುಡುಕೋದ್ಯಾಕೆ...

ಸದಾ ಅರಳೋ ಮನಸೇ
ನಿನ್ನೊಳಗೆ ಈ ದ್ವೇಷವೇಕೆ,
ನಗುವ ತುಟಿಯ ಕೆಳಗೂ
ಅಡಗಿಸಿದೆ ಮಾತ್ಸರ್ಯವನೇಕೆ...

ದಿನಾ ಹುಟ್ಟುವ ಕನಸೇ
ನಿನಗಿಷ್ಟು ಆಸೆ ಏಕೆ,
ಆಸೆ ಕಂಗಳ ಜೊತೆಗೆ
ಪರರ ನಗುವ ಕದಿಯೋದೇಕೆ...

ಮೂರು ದಿನದ ಬದುಕೇ
ನಿನಗೆ ನೂರು ದಾರಿ ಏಕೆ,
ಸುಳ್ಳಿನ ಹಾದಿಯ ಮೇಲೆ
ನಿನಗೆ ಸದಾ ಒಲವು ಏಕೆ...

ಮನದ ತುಂಬೆಲ್ಲಾ ಮೌನ
ನೆರಳಂತೆ ಇಲ್ಲಿ ಅನುಮಾನ,
ಪ್ರೀತಿಯ ಹೆಸರಲ್ಲಿ ಅವಮಾನ
ಬದುಕೇ ನೀ ಮಾಗುವುದು ಯಾವಾಗ...















31 August, 2017

ಮನಸೇ...


ಕಡಲಿಗಿಂತಲೂ ಅಗಾಧ ಮನಸ ಪರಿಧಿ
ಭೋರ್ಗರೆವ ಭಾವಗಳು ಅಲೆಗಳಿಗಿಂತ ಭಾರಿ,
ಮನಸಿಲ್ಲಿ ಭೂಮಿ ಬಾನಿಗೂ ಎತ್ತರ
ಭಾವಗಳಿಲ್ಲಿ ಗುಡುಗು ಸಿಡಿಲಿನಂತೆ ಎಚ್ಚರ...

ಬಿರುಸಾಗಿ ಸುರಿವ ಮಳೆಯು ಕೂಡ
ತೊಳೆಯಲಾರದು ಕೊಳೆಯಾ,
ಜೋರಾಗಿ ಬೀಸೊ ಬಿರುಗಾಳಿ ಕೂಡ
ಹೊತ್ತೊಯ್ಯಲಾರದು ಮನಸ ಕೊಳೆಯಾ...

ಸುಡುವ ಸೂರ್ಯ ಕಿರಣಗಳಿಗೂ
ಕರಗಲಾರದು ಅಂಧಕಾರ,
ಭೂಮಿಯೇ ಬಾಯ್ತೆರೆದರು ಕೂಡ
ಮಣ್ಣಾಗದು ಮನಸ ವಿಷವೂ...

ತಂಪಾಗಿ ಬೀಸೊ ತಂಗಾಳಿ ಕೂಡ
ತಣಿಸಲಾರದು ಈ ಉರಿಯಾ,
ಮುತ್ತಂತೆ ಸುರಿವ ಮಂಜು ಕೂಡ
ಮಣಿಸಲಾರದು ಮನಸ ನಂಜನೂ...

ಆಗಸದೆತ್ತರದ ಮನಸ ಕಟ್ಟಿ ಹಾಕಬೇಕಿದೆ,
ಪ್ರೀತಿಯೆಂಬ ಜಗದ ಹುಣ್ಣಿಮೆಯ ಬೆಳಕಿನಿಂದ,
ತೊಳೆಯಬೇಕಿದೆ ಮನಸ ಕೊಳೆಯಾ
ಬೆಳಗಬೇಕಿದೆಯಿಲ್ಲಿ ಮನುಜತೆಯ ಜ್ಯೋತಿಯೊಂದ...







06 August, 2017

ಸ್ನೇಹವೆಂದರೇ...


ಬಣ್ಣ ಬಣ್ಣದ ಕಾಮನಬಿಲ್ಲು
ನೀನೇ ಸ್ನೇಹವೇ,
ಮೌನವಾದ ಕನಸಿಗೆ
ಜೀವ ಕೂಡ ನೀನೇ ಅಲ್ಲವೇ...

ಉಸಿರಿರೋ ತನಕ ಹೆಸರಾಗಿರುವ
ಬಂಧ ನೀನೇ ಅಲ್ಲವೇ,
ಉಸಿರಿನ ಜೊತೆಗೇ ಬೆರೆಯುವ
ಬಂಧು ನೀನೇ ಎಂದಿಗೂ...

ಪ್ರೀತಿಯೇ ನೀನು ಆದರೂ ಕೂಡ
ತ್ಯಾಗಕೆ ಹೆಸರು ನೀನೇ ಎಂದಿಗೂ,
ಮಮತೆಗೆ ನೀನು ಸಾಗರದಾಳ
ಬದುಕಿನ ಸ್ಫೂರ್ತಿ ಕಣ್ಣ್ತುಂಬುವ ಬಾನು....

ತಾಳ್ಮೆಗೆ ಹೆಸರೂ ನಿನಗೆ
ಎರಡನೇ ತಾಯಿಯ ಸ್ಥಾನಮಾನ,
ನೂರು ಸುಳ್ಳಿನ ಕಥೆಗಾರ
ಜೊತೆಗಿದೆ ನೋವ ಮರೆಸುವ ಭಾವ...

ಸದಾ ತರಲೆಯ ಗೂಡು
ಆದರೂ ಮನಸನು ಮುದಗೊಳಿಸೋ ಹಾಡು,
ನೀನೆಂದೂ ಜೀವನ ಚೈತ್ರ
ನೀನಿಲ್ಲಿ ಬದುಕಿನ ಭಾಷ್ಯ...







30 July, 2017

ಉಯ್ಯಾಲೆ...

ಉಯ್ಯಾಲೆ ಉಯ್ಯಾಲೆ
ಬದುಕಿಲ್ಲಿ ಉಯ್ಯಾಲೆ,
ವಿಧಿಯಿಲ್ಲಿ ಆಡಿಸುವ
ನೋವು ನಲಿವುಗಳ ಜೋಕಾಲಿ...

ಉಯ್ಯಾಲೆ ಉಯ್ಯಾಲೆ
ಬದುಕು ನೆನಪುಗಳ ಜೋಮಾಲೆ,
ಕಣ್ಣೀರು ಪನ್ನೀರು
ಬೆರೆತಂತ ನವ್ವಾಲೆ...

ಉಯ್ಯಾಲೆ ಉಯ್ಯಾಲೆ
ಇದು ಕನಸುಗಳ ಸುವ್ವಾಲಿ,
ಭಾವಗಳ ಬಂಧಿಸಿದ
ಬದುಕಿಲ್ಲಿ ಉಯ್ಯಾಲೆ...

ಉಯ್ಯಾಲೆ ಉಯ್ಯಾಲೆ
ಬದುಕಿಲ್ಲಿ ಉಯ್ಯಾಲೆ,
ಸಂಬಂಧಗಳ ಸುಳಿಯೊಳಗೆ
ಜೀವನದ ಜೊಕಾಲಿ...

ಉಯ್ಯಾಲೆ ಉಯ್ಯಾಲೆ
ಇದು ಕಾಲವು ತೂಗುವ ಉಯ್ಯಾಲೆ,
ಕ್ಷಣದಲ್ಲೇ ಬದಲಾಗೊ
ಕಾಲನ ಕೈಯೊಳಗನ ತೂಗುಯ್ಯಾಲೆ...






18 July, 2017

ಪ್ರೀತಿ...

ಮನಸಿನ ಭಾವ ಇದು
ಕನಸಿನ ಮಾತು ಇದು,
ಸೃಷ್ಟಿಗೆ ಜೀವ ಇದು
ಜೀವಿಯ ಮಿಡಿತ ಈ ಪ್ರೀತಿ...

ಸರಸಕೆ ಕಾರಣವೂ ಇದು
ವಿರಹದ ವಿರಾಟ ರೂಪನೂ,
ತ್ಯಾಗಕ್ಕೆ ಹೆಸರೂ ಇದು
ಸ್ವಾರ್ಥದ ಪೊರೆಯ ನೆರಳು...

ಬಾಳಿನ ಕಣ್ಣರೆಪ್ಪೆಯಿದು
ಭಾಗ್ಯದ ಬಾಗಿಲ ಬೀಗದಂತೆ,
ಅಂಧಕಾರಕ್ಕೆ ಬೆಳಕೂ ಇದು
ಮನಸ ಬೆಳಗೋ ದೀಪದಂತೆ...

ದೇಹಕ್ಕೆ ಉಸಿರಂತೆ
ಉಸಿರಿಗೂ ಹೆಸರಂತೆ,
ಆತ್ಮಕ್ಕೆ ಸಖನಂತೆ
ಬಾಳಿಗೆ ರವಿಕಿರಣ ಈ ಪ್ರೀತಿ...

ಮಮತೆಯ ಮಡಿಲು ಈ ಪ್ರೀತಿ
ಕರ್ತವ್ಯದ ಕರೆಯಂತೆ ಇದರ ರೀತಿ,
ಕೈ ಹಿಡಿದು ನಡೆಸುವಾ ಸಖನಂತೆ
ಸದಾ ಹಸಿರು ಈ ಪ್ರೀತಿ...

07 July, 2017

ನುಡಿ ನಮನ...

ತಾಯಿ ಭಾರತಿಯ ಮಗಳಿವಳು
ಈ ಕನ್ನಡತಿ,
ಮಕ್ಕಳ ಪಾಲಿಗೆ ಇವಳೆಂದೂ
ಜೈ ಭುವನೇಶ್ವರಿ...

ನಿತ್ಯ ನಿರಂತರ ಇವಳಿಗೆ ಇಲ್ಲಿ
ಅರಶಿನ ಕುಂಕುಮದ ಶೃಂಗಾರ,
ನಿತ್ಯವೂ ಪೂಜೆಯ ಪಡೆಯುತ ಇಲ್ಲಿ
ಕುಲದೇವತೆಯಾಗಿಹಳು ಶ್ರೀ ಚಾಮುಂಡಿ...

ಇವಳೆಂದೂ ಈ ಸೃಷ್ಟಿಯ ಶೃಂಗಾರ
ಇವಳ ಒಡಲಲ್ಲಿಹುದು ಜೊಗದ ವೈಯಾರ,
ಮಡಿಲಲ್ಲಿ ಬೆಳಗಿಹಳು ಶಿಲ್ಪ ಕಲೆಗಳ ಸಂಸ್ಕೃತಿಯಾ
ಮುಕುಟವಾಗಿಹವು ಇಲ್ಲಿ ಸಾಲು ಗಿರಿ ಶಿಖರ...

ದೇವಗಂಗೆ ಹರಿದಿಹಳು ಇಲ್ಲಿ ಕಾವೇರಿಯಾಗಿ
ತುಂಗೆ ಕೃಷ್ಣೆ ಮಾಡಿಹರು ಇವಳಿಗೆ ನಿತ್ಯ ಅಭಿಷೇಕ,
ತಂಪಿನ ಉಡುಗೆಯ ಹೊದಿಸಿದೆ ಮಡಿಕೇರಿಯ ಮಂಜು
ಹಸುರಿನ ಸೀರೆಯ ಶೃಂಗಾರ ಪಶ್ಚಿಮಘಟ್ಟಗಳ ಸಾಲು...

ಪಡುವಣದಿ ಜೊತೆಯಾಗಿದೆ ಕಡಲೂರಿನ ತೀರ
ಮೇಲೈಸಿವೆ ಭರತನಾಟ್ಯ ಯಕ್ಷಗಾನ ಕಲೆಗಳು ನೋಡ,
ಮಧುರ ಮಧುರವೀ ಕಲಿಗಳ ನಾಡು
ಮಧುರ ಮಧುರವೀ ಕವಿಗಳ ಬೀಡು...


02 July, 2017

ಪರಮಾತ್ಮ...

ಮೇಲೆ ಒಬ್ಬನಿರುವ
ಎಲ್ಲಾ ನೊಡುತಿರುವ,
ತಿಳಿದು ನಡೆಯೋ ಮನುಜ
ಬದುಕಿನಲ್ಲಿ ನೂಕುನುಗ್ಗಲೇತಕೋ...

ಮೂರು ದಿನದ ಸಮಯ
ಇದ್ದೇ ಇದೆ ಇಲ್ಲಿ ಎಲ್ಲರೀಗೂ,
ಅವಕಾಶ ಕೊಟ್ಟು ನೊಡುತಿರುವ
ಅವಸರವೇತಕೋ ಮುಂದೆ ಸಾಗಲು...

ಪ್ರೀತಿ ಸ್ನೇಹ,ಸಂಭಂಧವೆಲ್ಲಾ
ಅವನಾಟವಷ್ಟೇ ಇಲ್ಲಿ,
ಖುಷಿಯ ಕೊಟ್ಟು ನೋಡಿ
ಜಗವ ಮರೆಸುತಿರುವನಷ್ಟೆಯಿಲ್ಲಿ...

ಕಷ್ಟ,ನೋವುಗಳೆಲ್ಲಾ ಇಲ್ಲಿ
ಬರೀಯ ಪರೀಕ್ಷೆಯಷ್ಟೇ,
ಜಗದ ಪಯಣದೊಳಗೆ
ತನ್ನ ಇರುವ ತೋರಿಸುತಿರುವನಷ್ಟೆಯಿಲ್ಲಿ...

ಅವನಿರದ ಜಾಗವೆಲ್ಲೂ ಇಲ್ಲಾ
ಹುಡುಕಾಟವೇನೂ ಬೇಕಿಲ್ಲ,
ತೆರೆಯಬೇಕು ಮನಸ ಕದವ
ಅವನೊಲವು ಪಡೆದು ಧನ್ಯರಾಗಲು...





17 June, 2017

ಕನಸಿನ ಚಿತ್ತಾರ...

ಅರಳುವ ಹೂವುಗಳು
ಉದಯಿಸೋ ನಾಳೆಗಳು,
ಮೂಡುವ ಕನಸುಗಳು
ನಾಳೆಯ ದಾರಿ ದೀಪಗಳು...

ಚದುರಿವೆ ಮೋಡಗಳು
ಮನಸಿನ ಆಗಸದೀ,
ಭಾವದ ತರಂಗಗಳು
ಬಿಡಿಸಿವೆಯಲ್ಲಿ ಬಣ್ಣಗಳ ಚಿತ್ತಾರ...

ಇಲ್ಲಿ ನೋವಿನ ಹಂಗಿಲ್ಲಾ
ಇದು ಬರೀಯ ನಲಿವಿನ ಚಿತ್ತಾರ,
ಮೂಡುವ ನೆನಪುಗಳು
ಇಲ್ಲಿ ದಿನ ಬೆಳಗೋ ನೇಸರ...

ನೆನಪುಗಳ ಜಾತ್ರೆಯಿದು
ನೆಪವಿಲ್ಲಿ ಬೇಕಿಲ್ಲಾ,
ಮರೆವಿನ ಮರೆಯಲ್ಲಿ
ಮನಸಿಂದು ಮಂದಾರ...

ಅರಳುತಿರಲು ಹೂವುಗಳು
ನಾಳೆಗಳೆಲ್ಲಾ ಕಂಪಾಗಿಹುದಿಲ್ಲಿ,
ಖುಷಿಯಾ ಜೊತೆಯಲ್ಲಿ
ಬಾಳೆಲ್ಲಾ ತಂಪಾಗಿಹುದಿಲ್ಲಿ...






12 June, 2017

ಓ ಮನಸೇ...

ಅರಿಯೋ ಮನಸಿಗೆ
ಬೆರೆಯೋ ಗುಣವಿರಬೇಕು,
ಪ್ರೀತಿಸೋ ಮನಸಿಗೆ
ಮರೆಯೋ ಗುಣವಿರಬೇಕು...

ಖುಷಿಯ ಹುಡುಕೋ ಮನಸಿಗೆ
ದುಃಖಗಳ ಕಳೆಯೋ ಭಾವವಿರಬೇಕು,
ಸ್ನೇಹವ ಬಯಸೋ ಮನಸಿಗೆ
ಮನ್ನಿಸೋ ಭಾವ ಜೊತೆಯಿರಬೇಕು...

ಬೆಳದಿಂಗಳ ಹುಡುಕೋ ಮನಸಿಗೆ
ಚಂದಿರನಾಗೊ ಛಲವಿರಬೇಕು,
ಆಸೆಗೋಪುರ ಕಟ್ಟೋ ಮನಸಿಗೆ
ಕನಸು ಕಾಣುವ ಒಲವಿರಬೇಕು...

ಭಾವನೆಗಳ ಜಾತ್ರೆಯಲಿ
ಮಗುವಂತೆ ನಲಿಬೇಕು,
ಜೀವನದ ಲೆಕ್ಕಾಚಾರ
ಚೆನ್ನಾಗಿ ಅರಿತಿರಬೇಕು...

ಸಂತೋಷ ಪಡೆಯೋಕೆ
ನೋವುಗಳ ಭಾಗಿಸಬೇಕು,
ಮನುಜತೆಯ ಮೆರೆಸೋಕೆ
ಮನಸಿಗೆ ತ್ಯಾಗದ ಗುಣವಿರಬೇಕು...



20 May, 2017

ಪಯಣ...

ಬದುಕೋಕೆ ದಾರಿ ನೂರಾರಿದೆ
ಕಾರಣವು ಮಾತ್ರ ಒಂದೇ ಇದೆ
ಒಲವೆಂಬ ಹೆಸರು ಅದಕಿಲ್ಲಿದೆ...

ನಡೆಯೋ ಹಾದಿಯಲಿ ಆಸೆ ನೂರಿದೆ
ಬವಣೆ ನೂರಿದ್ದರೂ ಭರವಸೆಯೊಂದಿದೆ
ಪ್ರತಿಯೊಂದು ಆಸೆಗೂ ಕನಸ ನೆರಳಿಲ್ಲಿದೆ...

ನಲಿವಿಗೂ ಸಮಪಾಲು ಬದುಕಲ್ಲಿದೆ
ಕಣ್ಣೀರ ಹನಿಯಿಲ್ಲಿ ಕಥೆ ಹೇಳಿದೆ
ತುಟಿಯಂಚಿನ ನಗು ಮಾತ್ರ ಮೈ ಮರೆಸಿದೆ...

ಎಡವಿ ಬೀಳೋಕೆ ಕಾರಣವು ನೂರಾರಿದೆ
ಎದ್ದು ನಿಲ್ಲೋಕೆ ನೆರವೊಂದು ಬೇಕಾಗಿದೆ
ನಂಬಿಕೆಯ ಹೆಸರು ಅದಕ್ಕಿಲ್ಲಿದೆ...

ಬಾಳಲ್ಲಿ ಗುರಿಯೊಂದು ಬೇಕಾಗಿದೆ
ಗುರಿ ಸೇರೋಕೆ ಛಲವೊಂದೆ ಸಾಕಾಗಿದೆ
ಮನಸಿಲ್ಲಿ ಬದುಕಿಗೆ ಗುರುವಾಗಿದೆ...








16 May, 2017

ಭಾವ ಸಂಭ್ರಮ...

ಮಳೆಯಾಗಬೇಕು ನೆನಪೇ ನೀನು
ಈ ಮನದ ಬಾಂದಳದಿ,
ತುಸು ಹಸನಾಗಲಿ ಇಲ್ಲಿ
ಬದುಕ ಕನವರಿಕೆ...

ಇಳೆಯಾಗಬೇಕು ಬದುಕೇ ಇಲ್ಲಿ
ಕನಸ ಇಳುವರಿಗೆ,
ಮೃದುವಾಗಲಿ ಹೃದಯ
ಭಾವ ಸಂಭ್ರಮಕೆ...

ಮರವಾಗಬೇಕು ಮನಸೇ
ಬದುಕ ಬನದೊಳಗೆ,
ಗೂಡ ಕಟ್ಟಿ ನಲಿಯಲಿ ಅಲ್ಲಿ
ಪ್ರೀತಿ ಹಕ್ಕಿಗಳೆಲ್ಲಾ...

ಕಲ್ಲಾಗಲಿ ಹೃದಯ
ಕಷ್ಟಗಳ ಮಳೆ ಸುರಿಯೆ,
ಅನುಮಾನದ ಹುತ್ತ ಮೊಳಕೆಯೊಡೆಯದಿರಲಿ
ಬದುಕಿನ ಪಯಣದ ಸುತ್ತಾ...

ಹದವಾಗಲಿ ಬದುಕು
ಒಲವ ಸಮ್ಮಿಲನಕೆ,
ಹಿತವಾಗಿರಲಿ ಪಯಣ
ಇಂದು ನಾಳೆಗಳಲಿ...


30 April, 2017

ಕೊಳೆಯ ತೊಳೆಯಬೇಕು...

ಕೊಳೆಯ ತೊಳೆಯಬೇಕು
ಪಾಪದ ಕಲೆಯ ತೊಳೆಯಬೇಕು,
ಜ್ಞಾನದ ಸ್ನಾನ ಮಾಡಬೇಕು
ಮನಸಿನ ಕೊಳೆಯ ತೆಗೆಯಬೇಕು...

ಪೂಜೆ ಮಾಡಬೇಕು ಗುರು ಹಿರಿಯರ
ಪಾದ ಪೂಜೆ ಮಾಡಬೇಕು,
ಕೊಳೆಯ ತೊಳೆಯಬೇಕು
ನಾನು ನನ್ನದೆಂಬ ಅಹಂಕಾರವ ಬಿಡಬೇಕು...

ಸೇವೆ ಮಾಡಬೇಕು ತಂದೆ ತಾಯಿಯರ
ನಿತ್ಯ ಸೇವೆ ಮಾಡಬೇಕು,
ಕೊಳೆಯ ತೊಳೆಯಬೇಕು
ಬದುಕಿನ ಋಣವ ಕಡಿಮೆ ಮಾಡಿಕೊಳ್ಳಬೇಕು...

ಆಸೆಯ ಬಿಡಬೇಕು ಬದುಕಲಿ
ದುರಾಸೆಯ ಬಿಟ್ಟು ಬದುಕಬೇಕು,
ಕೊಳೆಯ ತೊಳೆಯಬೇಕು
ಬದುಕಿನ ಭಾರ ಕಡಿಮೆ ಮಾಡಬೇಕು...

ಪ್ರೀತಿ ಬೆಳೆಸಬೇಕು ಬದುಕಲಿ
ಶಾಂತಿ ಹರಡಬೇಕು,
ದ್ವೇಷ ಕಳೆಯಬೇಕು ಜಗದಲಿ
ಅಜ್ಞಾನದ ಅಂಧಕಾರ ತೊಲಗಬೇಕು...


23 April, 2017

ಬದುಕು...

ಬದುಕಿನ ಯಾತ್ರೆಯಿದು
ನೆನಪುಗಳ ಮೆರವಣಿಗೆ,
ಪ್ರೀತಿಯ ಜಾತ್ರೆಯಿದು
ಇಲ್ಲಿ ಎಲ್ಲರೂ ಪ್ರೇಮಿಗಳೇ...

ಬರುವಾಗ ಒಬ್ಬರೇ
ಆಮೇಲೆ ಎಲ್ಲರೂ ಬಂಧುಗಳೇ,
ನೂರೆಂಟು ಸುಳಿಯೊಳಗೆ
ನಾವಿಲ್ಲಿ ಬಂಧಿಗಳೇ...

ಕಣ್ಣಿರುವುದು ಎರಡಾದ್ರು
ಕನಸುಗಳಿಲ್ಲಿ ಹಲವಾರು,
ಮನಸು ಒಂದಾದ್ರು
ಮರೀಚಿಕೆ ಖುಷಿಯಿಲ್ಲಿ...

ಕಾಲದ ಓಟದಲಿ
ಕಳೆದು ಹೋದವರು ಹಲವಾರು,
ಕಾರಣ ಹೇಳದೆ
ಮರೆಯಾದರು ಹಲವರು..

ಜೀವನವೊಂದು ಪ್ರಶ್ನೆಯೂ
ಪರಿಹರಿಸೋಕೆ ಉತ್ತರ ಸಿಗದಿಲ್ಲಿ,
ಮರಣವೇ ಉತ್ತರವೂ
ಪ್ರಶ್ನಿಸಲಾಗದು  ಬದುಕಲ್ಲಿ...

15 April, 2017

ಭಾವಯಾನ...

ಕಾಣದ ಊರಿಗೆ ಹೇಳದೆ ಹೊರಟೆ
ಪ್ರೀತಿಯ  ಹುಡುಕುತ್ತಾ ನೀನು,
ಹತ್ತಿರವಿದ್ದರೂ ದೂರವೇ ನಿಂತೆ
ಈ ಪ್ರೀತಿಯ ಗುರುತಿಸದೇ ...

ಆಡದೆ ಉಳಿದವು ಮನಸಿನ ಮಾತವು
ಮೌನದ ಮರೆಯಲಿ ನೂರಾರು,
ತಿಳಿಯದ ದಾರಿಯ ಹುಡುಕುತಲಿರುವೆ
ಕೇಳಲು ಕಾರಣವೊಂದನ್ನು...

ಭರವಸೆಯಿಲ್ಲದೆ ದಾರಿಯ ಕಾಯುತಲಿರುವೆ
ಬರುವೆ ನೀನು ಇನ್ನೆಂದೂ,
ಭಾವಗಳೆಲ್ಲವು ಮಾತಾಗಿಹವು
ಹೇಳಲು ಕೇಳಲು ವಿಷಯವು ನೂರಾರು...

ನನ್ನಯ ಈ ಭಾವಯಾನದಲಿ
ನಿನ್ನಯ ನೆನಪದು ನೂರಾರು,
ನಿನ್ನೆಯ ಮರೆಯಲು ಕಾರಣವಿಲ್ಲಿದೆ ಹಲವಾರು
ಆದರೆ ಮನಸಿಗೆ ವಯಸ್ಸಿನ್ನೂ ಹದಿನಾರು...

ಕಣ್ಣಂಚಲಿ ಬತ್ತಿ ಹೋದ ಕಣ್ಣೀರೂ
ಕಥೆ ಹೇಳಿದೆ ಇಲ್ಲಿ ನೂರಾರು,
ಬದುಕಿಗೆ ಪಾಠವ ಕಲಿಸಿವೆಯಿಲ್ಲಿ
ಮುದುಡಿದ ಕನಸವು ಹಲವಾರು...






11 April, 2017

ಅವಳು...

ಅವಳೊಂದು ಸುಂದರ ಕವನ
ಪ್ರತಿ ನುಡಿಯಲ್ಲೂ ಅಂದದ ತನನ,
ಮನದಲ್ಲಿದೆ ಪ್ರೀತಿಯ ಹೂರಣ
ಜಗಕೆಲ್ಲಾ ಬದುಕುವ ಕಾರಣ...

ಅವಳೆಂದರೆ ಪ್ರೀತಿಯ ಕಥನ
ಪ್ರತಿ ಕ್ಷಣವು ತರಲೆಯ ಖಜಾನ,
ದಿನ ನೂರು ದೂರಿನ ತೇರು
ಅವಳಿಲ್ಲಿ ಜೊತೆ ನಿಲ್ಲೋ ಕಾವಲಿನವಳು...

ಅವಳಿಲ್ಲಿ ಸ್ನೇಹಕೆ ಭಾಷ್ಯ
ಪ್ರತಿ ಕ್ಷಣವೂ ನಗುವಿಗೆ ಸ್ಪೂರ್ತಿ,
ಅವಳಿಂದಲೇ ಕನಸಿಗೆ ಅರ್ಥ
ಪ್ರತಿ ಕ್ಷಣವೂ ನೂತನ ವರ್ಷ...

ಅವಳೆಂದರೆ ತ್ಯಾಗದ ಹೆಸರು
ಅವಳಿಂದಲೇ ಉಸಿರಿದು ಹಸಿರು,
ಅವಳಿಲ್ಲಿ ಮುಗಿಯದ ಬಾನು
ಅವಳೆಂದರೆ ಬಾಳಿನ ಭಾನು...


30 March, 2017

ಸ್ನೇಹಿತ...

ಓ ಸ್ನೇಹಿತ ಮನಸಿಗೆ ನೀನೇ ಹಿತ
ನೂರು ನೋವುಗಳ ಮರೆಸೋ ಜಾದುಗಾರ ನೀನು,
ಭಾವಗಳ ಸಂಗಮ ನೀ ಮಾಯಾಕಾರ ಕಣೋ
ಬಸವಳಿದ ಜೀವಕ್ಕೆ ಹೆಗಲು ನೀಡೋ ಮಹಾರಾಯ...

ಮನಸಿನ ಅಂಗಳದ ಮಲ್ಲೆ ಮೊಗ್ಗು ನೀನೇ
ಪರಿಮಳವ ಸೂಸುತ್ತ ಬಾಳೆಲ್ಲಾ ನಗುವೇ,
ಮನಸಿನ ಬಾಂದಳದ ಚಂದ್ರಮನು ನೀನೇ
ಕಷ್ಟಗಳ ಕತ್ತಲ ಕಳೆಯೋ ಬೆಳದಿಂಗಳಾಗುವೆ...

ಪ್ರೀತಿಯಲಿ ಪರಪಂಚ ನೀ ಪ್ರೀತಿಗೆ ಪರಪಂಚ
ಕಣ್ಣೀರ ಹನಿಯನ್ನೂ ಮುತ್ತಂತೆ ಕಾಪಾಡೋ ಧೀಮಂತ,
ಜನುಮ ಜನುಮದಾ ಬಂಧು ಪ್ರೀತಿಯಲಿ ಶ್ರೀಮಂತ
ಸ್ನೇಹಕ್ಕೆ ಉಸಿರಾಗೋ ಪ್ರೀತಿಯಾ ಸೇವಕ...

ಕನಸುಗಳ ಬೇಟೆಗಾರ ಕನಸಿಗೆ ಹೆಸರು ನೀನು
ಮನಸುಗಳ ಬೆಸೆಯೋ ನೀನು ಅಪ್ರತಿಮ ಕಲಾಕಾರ,
ಬದುಕಿನಾ ಭರವಸೆಯೇ ಚಂದಿರನಾ ತಂಪು ನೀನು
ಈ ಸ್ನೇಹದಾ ಒಡಲಲ್ಲಿ ಮತ್ತೆ ಮತ್ತೆ ಉದಯಿಸುವಾ ರವಿಯೂ ನೀನು...











18 March, 2017

ಸ್ನೇಹಲೋಕ...

ನಕ್ಷತ್ರಗಳೇ ಉದುರಿ ಮರು ಹುಟ್ಟುವವು ಈ ಭೂಮಿ ಮ್ಯಾಲಂತೆ,
ಮನುಜರು ಕೂಡ ಸತ್ತು ಮತ್ತೆ ನಕ್ಷತ್ರಗಳಾಗುವರಂತೆ,
ಯಾವುದು ನಿಜವೋ ತಿಳಿದಿಲ್ಲ ಎನಗೆ
ಮನಸೊಳಗೆ ಮಾತ್ರ ಈ ಸ್ನೇಹ ನಕ್ಷತ್ರ ಲೋಕವಾಗಿದೆ...

ಮಿನುಗೊ ತಾರೆಗಳು ಆ ಆಗಸದ ತುಂಬ
ಮೋಡಗಳೊಳಗೆ ಸೇರಿ ಆಡುವುದು ಅಂದ,
ಮನದ ಆಗಸದಿ ಸ್ನೇಹಿತರೆ ತುಂಬಾ ತುಂಬಾ
ನಗಿಸುತ್ತಾರೆ,ಅಳಿಸುತ್ತಾರೆ ತುಂಟಾಟದಿಂದ...

ಚಂದಮಾಮನ ಬಳಗ ಚುಕ್ಕಿತಾರೆಗಳೆ ಚೆಂದ
ಚಂದದೊಂದು ಬಳಗವಿರಲು ಬಾಳೆಲ್ಲಾ ಅಂದ,
ಪ್ರೀತಿಯಲಿ ಇಲ್ಲಿ ಕಾಲೆಳೆಯುವುದೇ ಚೆಂದ
ನೋವಿನಲಿ ಸೇರಿ ಹೆಗಲಾಗುವುದೇ ಆನಂದ...

ಕತ್ತಲೆಯಲ್ಲಿ ಮಿನುಗುತಾವೆ ಚುಕ್ಕಿ ತಾರೆಗಳು ಅಲ್ಲಿ
ಹೃದಯದಲಿ ಬೆಳಗುತಾವೆ ಪ್ರೀತಿಯಾ ದೀಪಗಳು ಇಲ್ಲಿ,
ಹಗಲು ರಾತ್ರಿಯ ಹಂಗಿಲ್ಲ ಸ್ನೇಹಲೋಕದ ಪಯಣದಲಿ
ಉಸಿರಿರುವವರೆಗೆ ಉಸಿರಾಗುತಾವೆ ಸ್ನೇಹದಾ ನಾಡಿಗಳಿಲ್ಲಿ...



13 March, 2017

ಒಂಟಿಯೆಂಬ ಭಾವ...

ಸಂತೆಯಲ್ಲಿ ನಿಂತರೂ ಒಂಟಿಯೆಂಬ ಭಾವ
ಕಾಡುತಿದೆ ಇಂದು ಮನದಲಿ,
ಮಾತಾಡು ಮನಸೇ ನೀ ಇಲ್ಲಿ
ಮತ್ತೆಲ್ಲೋ ಕಳೆದು ಹೋಗುವ ಮುಂಚೆಯೇ...

ಒಲವ ಗುಂಗಲಿ ಮರೆತ ಮನಸಿಗೆ
ಮತ್ತೆ ಮತ್ತೆ ಕಾಡಿದೆ ನಿರಾಸೆಯ ಭೂತ,
ಓಡುವ ಕಾಲವೂ ಕೂಡ ಮರೆತು ಹೋದಂತಿದೆ
ನಡೆಯುವ ಕಾಲು ಮತ್ತೆ ಮತ್ತೆ ಎಡವಿದೆ...

ಬದುಕೆಂಬ ಬಂಡಿಯಲಿ ಗೊಂದಲವು ನೂರು
ಕನಸುಗಳ ಮೂಟೆ ಕರಗಿ ನೀರಾಗುತಿದೆ ಇಲ್ಲಿ,
ಮನಸಿನ ಸುತ್ತ ನಾಲ್ಕು ಗೋಡೆಗಳು ಇಲ್ಲಿ
ಜೊತೆಯಲ್ಲಿರುವ ಮನಸುಗಳವು ಮಾತ್ರ ಅಸ್ಪಷ್ಟ...

ಪ್ರೀತಿಯೆಂಬುದು ಬರೀಯ ಮರೀಚಿಕೆಯಿಲ್ಲಿ
ಬರೀಯ ಕನಸುಗಳ ಕನವರಿಕೆಯಷ್ಟೇ,
ಕಲ್ಲಾಗದಿರು ಓ ಮನಸೇ ಬಾಳ ಪಯಣದಲಿ
ಒಂಟಿಯಾಗದಿರಲಿ ಬದುಕು ಈ ಭಾವಯಾನದಲಿ...

03 March, 2017

ಒಲವ ಲೀಲೆ...

ಪ್ರೀತಿಲಿ ಬೀಳೊಕೆ ಮುಂಚೆ
ಬದುಕೆಷ್ಟು ಸುಂದರ,
ಪ್ರೀತಿಲಿ ಬಿದ್ದ ಮೇಲೆ
ಮನಸಾಯ್ತು ನೂರು ಹಂದರ...

ಒಲವು ಮೂಡೋಕೆ ಮುಂಚೆ
ಮನಸು ತೆರೆದ ಆಗಸ,
ಒಲವು ಶುರುವಾದ ಮೇಲೆ
ಮನಸಾಯ್ತು ಮೋಡ ಕವಿದ ಬಾಂದಳ...

ಕನಸು ಕಾಣೋಕು ಮೊದಲು
ಹೃದಯ ಶಾಂತ ಸಮುದ್ರ,
ಕನಸು ಶುರುವಾದ ಮೇಲೆ
ಎದೆಯೊಳಗೆ ಏಕೋ ಡವ ಡವ...

ಆಸೆ ಹುಟ್ಟೋಕೆ ಮುಂಚೆ
ಬದುಕೆಲ್ಲಾ ಮಂದಾರ,
ಆಸೆಯೊಳಗೆ ಬಿದ್ದ ಮೇಲೆ
ಬದುಕಾಯ್ತು ಹರೋಹರ...

ಮಾತು ಹುಟ್ಟೋಕು ಮುಂಚೆ
ಮನಸಲಿ ನೂರು ಭಾವ ಕಲರವ,
ಮಾತು ಶುರುವಾದ ಮೇಲೆ
ಮನಸೊಳಗೆ ಮೌನ ರೋಧನ...

26 February, 2017

ಭಾರವಾಗದಿರಲಿ ಬದುಕು...

ಪ್ರತಿ ಜನುಮಕ್ಕೂ ಹಿಂದಿನ ಕಥೆಯೊಂದಿದೆ
ಪ್ರತಿ ಜೀವಿಯ ಬದುಕಲ್ಲೂ ವ್ಯಥೆ ನೂರಾರಿದೆ,
ಹೃದಯಕ್ಕೂ ಅದರದ್ದೇ ಮಿಡಿತಾ ಇದೆ
ಪ್ರತಿ ಮಿಡಿತಕ್ಕು ಕಾರಣವೂ ಬೇಕಾದಷ್ಟಿದೆ...

ಓಡುವಾ ಕಾಲಕ್ಕೂ ಅದರದ್ದೇ ನಿಯಮಾ ಇದೆ
ಆ ವಿಧಿಗೂ ಕೂಡ ಒಂದು ನಿಯತಿ ಇದೆ,
ಬೆಳಗೊ ಸೂರ್ಯನಿಗೂ ಒಮ್ಮೆ ಗ್ರಹಣಾ ಇದೆ
ಓ ಬದುಕೇ ನಿನಗಿಲ್ಲಿ ನೋವಿನಾ ಪಾಠ ಇದೆ...

ಬರೀ ಮೂರು ದಿನಗಳ ಓಟ ಬದುಕಲ್ಲಿದೆ
ಆಸೆಗಳ ಮೂಟೆ ಮಾತ್ರ ಕೊನೆ ಕಾಣದಷ್ಟಿದೆ,
ನಿರೀಕ್ಷೆಗಳ ಹೊರೆಯಂತೂ ತುಸು ಭಾರವಾಗಿದೆ
ಭಾರಗಳ ಹೊರಲಾರದೆ ಬದುಕಿಲ್ಲಿ ಚಡಪಡಿಸಿದೆ...

ಪ್ರೀತಿಯಿಲ್ಲದೆ ಬದುಕು ಬರಡಾಗಿದೆ
ಮನಸೊಳಗೆ ಒಲುಮೆಯಾ ಬೆಳೆ ಬೆಳೆಯಬೇಕಾಗಿದೆ,
ಹೃದಯದಾ ಕದವೀಗ ತೆರೆಯಬೇಕಾಗಿದೆ
ಬದುಕಿನಾ ಭಾರಗಳ ತುಸು ಇಳಿಸಬೇಕಾಗಿದೆ...

17 February, 2017

ಕನಸೇ...

ಅರಳು ಓ ಕನಸೇ
ನನ್ನೆದೆಯಾ ನೆಲದೊಳಗೆ,
ಹರಿಸಿ ಒಲವಿನ ಹರುಷ
ಹರಸು ಬಾ ಬದುಕನು...

ಮಿಂಚಾಗಿ ಬಾ ಬದುಕಲಿ
ತುಂತುರು ಸಿಂಚನವಾಗಲಿ ಮನಸಿಗೆ,
ಬರಡಾದ ಮನವೀಗ ಮೆದುವಾಗಲಿ
ನೂರು ಆಸೆಗಳ ಮತ್ತೆ ಕನವರಿಸಲಿ...

ಕಾರಣವು ಬೇಕೀಗ ಈ ನಗುವಿಗೆ
ಮಗುವಾಗಿ ನಲಿವಾಸೆ ಈ ಬದುಕಿಗೆ,
ನಗುವಲ್ಲೆ ಗೆಲುವಾಸೆ ಈ ಬದುಕಿಗೆ
ನಾಳೆಗಳ ನಲಿವಾಗು ನೀ ಬದುಕಿಗೆ...

ಹೃದಯದಾ ದನಿ ನೀನು ಓ ಕನಸೇ
ಪ್ರತಿ ಮಿಡಿತಕ್ಕೂ ಹೆಸರಿಲ್ಲಿ  ಕನಸಾಗಿದೆ,
ಉಸಿರಿಗೂ ಪ್ರೇರಣೆ ನೀನಲ್ಲವೇ
ನಿನ್ನೊಳಗೆ ಸುಂದರ ಬದುಕಿಲ್ಲಿದೆ...

ಬದುಕಲ್ಲಿ ಭರವಸೆಯು ನಿನ್ನಿಂದಲೇ
ಮನಸಿಲ್ಲಿ ಅಪೂರ್ಣ ನೀನಿರದಿರೆ,
ನಾಳೆಗಳ ನಗುವಾಗು ಓ ಕನಸೇ ನೀ
ಬದುಕಿಲ್ಲಿ ಪರಿಪೂರ್ಣ ನಿನ್ನೊಂದಿಗೆ...



10 February, 2017

ವಿಧಾತ...

ಹೇ ಭಗವಂತ ನೀ ಎಲ್ಲಿರುವೆ
ನಾನೊಮ್ಮೆ ನಿನ್ನ ನೋಡಬೇಕಿದೆ
ಬರಬೇಕು ನೀನು ನಾನಿರುವಲ್ಲಿಗೆ...

ಕೇಳಿಸದೆ ನಿನಗೀಗ ಈ ಮೊರೆಯೂ
ಕಣ್ಣಾರೆ ಒಂದು ಸಾರಿ ನಿನ್ನ ನೋಡಬೇಕಿದೆ
ಜಗವ ಪೊರೆಯಲು ನೀನಿಲ್ಲಿ ಬರಬೇಕಿದೆ...

ಕಣ್ಣುಗಳು ಕುರುಡಾಗಿಹವು ಕಷ್ಟಗಳ ಕಂಡು
ಜಗದ ದನಿಯಾಗಲು ಬಾಯಿಯಿಲ್ಲಿ ಮೂಕ
ಬಾ ಒಮ್ಮೆ ಇಲ್ಲಿ ನಿನ್ನ ಸೃಷ್ಟಿಯನು ನೋಡು...

ಕೇಳಿಸದೆ ನಿನಗಿಲ್ಲಿ ಈ ಆರ್ತನಾದ
ಕಿವಿಯಿಲ್ಲಿ ಕಿವುಡಾಗಿಹುದು ಆ ನೋವ ಕೇಳಿ
ಕೇಳಿದರೂ ಅರಿಯದಂತೆ ಈ ಮೌನವೇಕೆ...

ಬರಬೇಕು ನೀನೊಮ್ಮೆ ಈ ಭುವಿಗೆ
ತರಬೇಕು ಒಂದಿಷ್ಟು ಪ್ರೀತಿ ಮಮತೆಯನ್ನು
ಬದಲಿಸಬೇಕು ಜಗದ ಕೆಲವು ನಿಯಮಗಳನ್ನು...

ಅಳಿಸಿ ಬರೆಯಬೇಕು ಹಣೆಯ ಬರಹಗಳನ್ನ
ಬರಬೇಕು ನೀನಿಲ್ಲಿ ಈ ಕೂಡಲೇ
ಈ ಜಗದಿ ಬರೀ ನಗುವಷ್ಟೇ ನೋಡಬೇಕಿದೆ...





05 February, 2017

ಮನಸೇ ಓ ಮನಸೇ...

ಬಂಗಾರದಂಥ ಮನಸೇ
ಮುಂಗಾರಿನಂತ ಮುನಿಸೇಕೋ,
ಈ ಜೀವ ನಿನ್ನದಲ್ಲವೇ
ಭಾವಗಳ ಮರೆತೆಯೇತಕೆ...

ಮುದ್ದಾದ ಕನಸುಗಳ
ನೀ ಬಂದು ಹರಸಬೇಕಲ್ಲವೇ,
ನೂರೊಂದು ನೆನಪುಗಳಿಗೆ
ಸಾರಥಿ ನೀನಾಗಬೇಕಿದೆ...

ನೀನಿರದ ಬದುಕೊಳಗೆ
ಪದಗಳು ಗುಚ್ಚವಾಗಲಾರವು,
ನಿನ್ನೊಲವು ಮರೀಚಿಕೆಯಾದರೆ
ಕನಸುಗಳು ಕವನವಾಗಲಾರವು...

ಅರಿವಿಲ್ಲದ ಕನಸುಗಳೂ
ಮರೆವಿಲ್ಲದೇ ಒಲವ ತುಂಬಿವೆ,
ಮುತ್ತು ರತ್ನದಂಥ ಮನಸೇ
ಪ್ರೀತಿಲಿ ನೀ ವಜ್ರವಾಗಬಾರದೇ...

ಮಗುವಂಥ ಪೆದ್ದು ಮನಸೇ
ನೀನು ಜೀವದಾ ನಗುವಾಗಬಾರದೇ,
ಓ ಅಳುಮುಂಜಿ ಮನಸೇ
ಬದುಕಿಗೆ ನೀನು ಗುರುವಾಗಬೇಕಿದೆ...

27 January, 2017

ಓ ಬದುಕೇ...

ಸೋಲು ನೂರು ಎದುರಾದರೂ ಮರುಗದಿರು ಓ ಮನಸೇ
ಇಟ್ಟ ಹೆಜ್ಜೆಯನೆಂದೂ ಅನುಮಾನಿಸದಿರು ಇಲ್ಲಿ,
ನೋವು ತುಂಬಿದ ಪಯಣದಲಿ ಖುಷಿಯ ಹುಡುಕು
ಬದುಕಿದು ಹಗಲು ರಾತ್ರಿಯ ಪಯಣವಿಲ್ಲಿ ಕೇಳು...

ಜೀವ ತುಂಬಿ ಭಾವಗಳೇ ಈ ಮನಸಿಗೆ
ಕೋಲ್ಮಿಂಚಂತೆ ಬೆಳಕ ತೋರಿ ಓ ಕನಸುಗಳೇ,
ಬದುಕಲ್ಲಿ ಕಷ್ಟಗಳು ಕಾರ್ಮೋಡದಂತೆ ನೆರೆದಿಹುದು
ಓ ಮನಸೇ ನಗುವ ಚೆಲ್ಲು ಇಲ್ಲಿ ಜೀವ ತಂಪಾಗಲು...

ಅನುಮಾನಗಳ ಹುತ್ತ ಸುತ್ತುವರಿದಿಹುದು ಇಲ್ಲಿ
ಅವಕಾಶಗಳ ಬೀಗ ತೆರೆಯಬೇಕು ನೀನಿಲ್ಲಿ ಮನಸೇ,
ಘೋರ ಕಾನನದ ಅಂಧಕಾರವು ಕಣ್ಣಕಟ್ಟಿದೆ ಇಲ್ಲಿ
ಮನಸೇ ನೀನೊಂದು ದೀಪವಾ ಹಚ್ಚಬೇಕಿದೆಯಿಲ್ಲಿ...

ಆಸೆಗಳ ಬಯಲೊಳಗೆ ಕಷ್ಟಗಳ ಬೆತ್ತಲುಮಾಡು
ನಗುವೆಂಬ ವರದಿಂದ ನೋವನ್ನು ನುಂಗುತಾ,
ಬದುಕಬೇಕಿದೆಯಿಲ್ಲಿ ಮುಖವಾಡಗಳ ಕಳಚಿ
ಓ ಮನಸೇ ಪ್ರಭುವಾಗು ನಿನಗೆ ನೀನಿಲ್ಲಿ...

ಓಡಿ ಹೋಗುವ ತವಕವೆಂದಿಗೂ ಬೇಡ
ಬೆನ್ನು ಹಾಕುವ ಕೆಲಸವೆಂದೂ ಸಲ್ಲ,
ನಡೆ ನೀನು ಮುಂದೆ ಓ ಮನಸೇ ತಲೆಯ ಎತ್ತಿ
ಕನಸುಗಳ ರಥವೆಂದೂ ನಿನ್ನದೇ ಓ ಬದುಕೇ....

ಮಂಥನ....

ಬದುಕೇ ನಿನ್ನೊಳಗೆ ಈಗ ಪರ್ವಕಾಲ
ಮನಸ ಮಥಿಸಲು ಇದು ಪುಣ್ಯಕಾಲ,
ಒಳಗ ವಿಷವನು ಹೊರ ತೆಗೆಯಲಿಂದು ಸಕಾಲ
ಆತ್ಮಾವಲೋಕನಕೆ ಕೂಡಿ ಬಂದಿದೆ ಇಲ್ಲಿ ಕಾಲ...

ಸದ್ಗುಣ ದುರ್ಗುಣಗಳ ಎದುರು ನಿಲ್ಲಿಸಬೇಕಿದೆಯಿಲ್ಲಿ
ಯುದ್ಧಕ್ಕಲ್ಲ ಬರೀಯ ಮನದ ಮಂಥನಕೆ,
ಹೊರ ಬರಲೇಬೇಕು ನಾನು ನೀನೆಂಬ ಕಾರ್ಕೊಟಕ
ಪಡೆಯಲೇಬೇಕು ಶಾಂತಿಯೆಂಬ ಅಮೃತವಾ...

ಸಂಧಾನ ಮಾಡಿಕೊಳ್ಳಲೇಬೇಕು ಅಹಂಮ್ಮಿನ ಜೊತೆಗೆ
ಜೊತೆಗೆ ಸೇರಿಸಿ ನಡೆಯಲೇಬೇಕು ನಮ್ಮೆಲ್ಲಾ ಭಾವಗಳ,
ವಿಷಕಂಠರಾಗಬೇಕು ಇಲ್ಲಿ ನಮ್ಮೆಲ್ಲಾ ದ್ವೇಷ ಅಸೂಯೆಗಳಿಗೆ
ಮನಸ ಕಡಲೊಳಗಿನ ಅಮೂಲ್ಯ ರತ್ನಗಳ ಪಡೆಯಲು...

ನಡೆಯಲಿಲ್ಲಿ ಪ್ರತಿದಿನವೂ ಮನಸೊಳಗೊಂದು ಮಂಥನ
ಮನುಜತೆಯು ಬೆಳಗಲು ಮನಸಿಗೆ ಮಹಾಯಜ್ಞ,
ಬದುಕಾಗಲಿ ಸಾಕ್ಷಿ ಮನಸ ಮಂಥನಕೆ
ಪಡೆಯಲೇಬೇಕು ಪ್ರೀತಿ ಸ್ನೇಹಗಳ ಅಮೃತವಾ...

15 January, 2017

ಚಂದ್ರಿಕೆ.....

ಓ ಪ್ರೀತಿಯೇ ನೀನೆನ್ನ ಬಾಳ ಚಂದಿರ
ಕರಗದಿರು ನೀನೆಂದೂ ಈ ಬದುಕ ಬಾನಿನಲಿ,
ಕನಸುಗಳ ಮರೆತೂ ಮನ ನಿನ್ನ ಇಂದು ಬಯಸಿದೆ
ಮರೆಯಾಗದಿರು ನೀನೆಂದೂ ನನ್ನ ಮನದ ಅಂಗಳದಿ...

ನೂರೊಂದು ಕನಸುಗಳು ಕರಗಿ ಕಣ್ಣೀರಾಗಿವೆ
ಕಾರಣವೇ ತಿಳಿಯದೆ ಮನಸಿಂದು ಮಗುವಾಗಿದೆ,
ಭಾವಗಳ ಜಂಜಡದಿ ಮನಸಿಲ್ಲಿ ಸೋತಿದೆ
ಅರಳು ಓ ಪ್ರೀತಿಯೇ ಈ ಮನದ ಹೂವಾಗಿ...

ಭಾವಗಳ ಮರೆತು ಮನಸು ಮೌನವಾಗಿದೆ
ಒಲವಿನ ಒಲುಮೆಯೂ ಅದಕೀಗ ಬೇಕಾಗಿದೆ,
ಮಾತುಗಳು ಮರೆತೂ ಮನಸು ಮೌನವಾಗಿದೆ
ಬದುಕಿನ ಕನಸಿಗೆ ನಿನ್ನ ಪ್ರೀತಿಯ ಮಾತದು ಬೇಕಿದೆ...

ಕಾಲದ ತುಳಿತಕ್ಕೆ ಬದುಕಾಗಿದೆ ಬಲು ಬೇಸರ
ಓ ಪ್ರೀತಿಯೇ ಬೇಕಿದೆ ಇಲ್ಲಿ ನಿನ್ನಯಾ ಆಸರೆ,
ಮತ್ತೆ ಮತ್ತೆ ಕನವರಿಸಬೇಕಿದೆ ನಿನ್ನದೇ ಜೊತೆಯಲಿ
ಒಪ್ಪಿ ಅಪ್ಪಿಕೋ ನೀನೊಮ್ಮೆ ಓ ಪ್ರೀತಿ ಚಂದ್ರಿಕೆ...

05 January, 2017

ಪಯಣ....

ಹೊಸತೊಂದು ಪಯಣ ಶುರುವಾಗಿದೆ ಈಗ
ಹರಸು ಬದುಕೇ ನೀನೀಗ ಇಲ್ಲಿ,
ಹೊಸತೊಂದು ಕನಸು ಹಳೆಯ ಭಾವಗಳ ಜೊತೆಗೆ
ಜೀವನದ ಪಯಣ ದೂರ ತೀರದ ಕಡೆಗೆ...

ಒಲವಿಲ್ಲಿ ಇಂದು ಸಾರಥಿಯಾಗಿರೇ
ಬದುಕ ತೇರಲ್ಲಿ ಕಾಲವ ಮರೆತು,
ಕಾಲನ ಕರೆಗೂ ಓಗೂಡದು ಮನಸು
ಪ್ರೀತಿಯೆಂಬ ಅಮೃತವೂ ಜೊತೆಯಲ್ಲಿರೆ...

ಕನಸುಗಳು ನೂರು ಕನವರಿಸುತ್ತಿರೆ ಮನವೂ
ಒಂಟಿತನದ ಭಾವವಿಲ್ಲಿ ಶೂನ್ಯ,
ಬದುಕಿಲ್ಲಿ ಸರಿದಿದೆ ಸದ್ದಿಲ್ಲದೇ
ಜೊತೆಯಾಗೊ ಜೊತೆಗಾರರ ಅರಿವಿಲ್ಲದೇ...

ಅರಳೋ ನಾಳೆಗಳು ಸ್ವಾಗತಿಸಿವೆ ಕೈ ಬೀಸಿ
ಮರುಳು ಮನಸೀಗೆ ಸಂಕ್ರಾಂತಿಯೂ,
ನಿನ್ನೆಯನು ಮರೆತ ಮನಸೀಗ ನಿರ್ಮಲ
ನಾಳೆಗಳ ಮಡಿಲೊಳಗೆ ಜಾರಿ ಹೋಗುತಾ...

ಒಲವೊಂದು ಕನಸು ಈ ಬದುಕಲಿ
ಮನಸಿನ ಹರುಷಕ್ಕೆ ಕಾರಣವೂ,
ಒಲವ ಲೋಕದ ಪಯಣ ವಾಸ್ತವದ ಮೇರೆ ಮೀರಿ
ನಿನ್ನೆಗಳ ಮರೆಸಿ ನಾಳೆಗಳ ಮೆರೆಸುತ್ತಿದೆ ಬದುಕು...