30 July, 2012

ಸೂ(ರ್ಯ)ತ ಪುತ್ರನಾ.....?



ಎಲ್ಲರ ಹಾಗೆ ನಾನ್ಯಾಕೆ ಮುದ್ದಾಗಿ ಬೆಳೆಯಲಿಲ್ಲ,
ಎಲ್ಲೇ ಹೋದರೂ ನಾನ್ಯಾಕೆ ಶೋಷಿತನಾದೆ,
ಹೆತ್ತವಳು ಯಾರೋ ತಿಳಿಯದೆ ಸಲಹಿದವರಿಂದಲೇ ಗುರುತಿಸಿಕೊಂಡೆ ಅದೂ ಸೂತಪುತ್ರನೆಂದೇ...

ಯಾರಿಗೂ ಇಲ್ಲದ ತೇಜಸ್ಸು ನನಗ್ಯಾಕೆ ಬಂತು ಕಾಡಿತ್ತು ನನಗೆ ಸಂಶಯವಾಗಿ,
ಸಾಮಾನ್ಯ ಬೆಸ್ತರ ಹುಡುಗ ನನಗೇಕೆ ಕಾಡಿತ್ತು ಶಸ್ತ್ರ ವ್ಯಾಮೋಹ,
ಯುದ್ಧಾಭ್ಯಾಸ ಕಲಿಯುವ ಮನಸೇಕೆ ನನಗಾಯ್ತು...

ದ್ರೋಣರ ಕ್ಷತ್ರೀಯ ಪರ ನಿಲುವಿಗೆ ಧಿಕ್ಕಾರ ಹೇಳಿ ಹುಡುಕಿದ್ದೆ ಮಹಾಗುರು ಪರಶುರಾಮರ,
ಬ್ರಾಹ್ಮಣ ಕುವರನೆಂಬ ಸುಳ್ಳೇ ನನಗೆ ಮುಳುವಾಯ್ತೇ,
ನನಗೇನು ತಿಳಿದಿತ್ತು ಕ್ಷತ್ರೀಯ ರಕ್ತ ನನ್ನಲ್ಲಿದೆಯೆಂದು,
ನನಗೆ ತಿಳಿದಿದ್ದು ಇಷ್ಟೇ ನಾ ಸೂತಪುತ್ರ ರಾಧೇಯನೆಂಬುದು...

ಕಲಿತ ವಿದ್ಯೆಯು ಆಪತ್ಕಾಲಕ್ಕೆ ನೆರವಾಗದಿರಲೆಂಬ ಶಾಪದೊಂದಿಗೆ ಕೊನೆಯಾಗಿತ್ತು ನನ್ನ ಶಸ್ತ್ರ ವಿದ್ಯೆ,
ಮರಳಿದ್ದೆ ಮತ್ತೆ ವೀರ ಕರ್ಣನಾಗಿ ಕಹಿ ನೆನಪ ಹೊತ್ತು,
ಆ ಸೂರ್ಯದೇವನು ಕರಗಿರಬೇಕು ನನ್ನೊಡನೆ ವಿಧಿಯಾಡಿದ ಮೋಸದಾಟಕೆ...

ಅರ್ಜುನನ ಪೌರುಷಕೆ ಸಮನಾರು ಇಲ್ಲದ ಕುರುರಾಜ್ಯಕ್ಕೆ ಮರಳಿದ್ದೆ ಅಲ್ಲೂ ಸೂತಪುತ್ರನೆಂಬ ಅವಮಾನ,
ಅಪ್ರತಿಮ ವೀರನ ಗೆಳೆಯನಾಗಿ ಪಡೆದ ಖುಷಿ ಕೌರವಗೆ,
ಅಂಗ ರಾಜ್ಯಕೆ ದೊರೆಯಾಗಿಸಿ ಮರೆಸಿಬಿಟ್ಟ ಸೂತಪುತ್ರ ನೆಂಬ ಅವಮಾನದ ಗಾಯವ...

ಪ್ರಾಣಕ್ಕೆ ಪ್ರಾಣ ನೀಡುವ ಸ್ನೇಹ ನಮ್ಮದಾಗೋಯ್ತು,
ಪಾಂಡವರ ಅಪಮಾನ,ದ್ರೌಪದಿಯ ವಸ್ತ್ರಾಪಹರಣ ನೋಡಿಯೂ ಏನೂ ಹೇಳಲಾಗದ ಅಸಹಾಯಕನಾದೆ,
ಪಾಂಡವರ ಮೇಲೆ ಕೋಪವಿರಲಿಲ್ಲ ಆದರೆ ಅಹಂಕಾರಿ ಅರ್ಜುನನ ಸೊಕ್ಕು ಅಡಗಿಸಬೇಕಿತ್ತು...

ಕಣ್ ಮುಚ್ಚಿ ತೆರೆಯೋದರೊಳಗಾಗಿ ಏನೇನೋ ನಡೆದು ಹೋಗಿತ್ತು,ಕುರುಕ್ಷೇತ್ರ ಕಣ್ಣಮುಂದಿತ್ತು,
ಆಗ ಬಂದಿದ್ದ ಕೃಷ್ಣ ನೀನು ಪಾಂಡವರಗ್ರಜ ಕುಂತೀಪುತ್ರನೆನುತ,
ನೀನು ಬಂದಿದ್ದೆಯಲ್ಲಮ್ಮ ನಿನ್ನ ಪಾಂಡುಪುತ್ರರ ಉಳಿಸಿಕೊಳ್ಳೊದಕ್ಕೆ,ನನ್ನ ಮೇಲಿನ ಪ್ರೀತಿಯಿತ್ತೇ ಅಲ್ಲಿ?
ಕುಂತೀಪುತ್ರನೆಂಬ ಸತ್ಯದ ಅರಿವಾಗಿತ್ತು ಆದರೆ ಸ್ನೇಹಕ್ಕೆ ದ್ರೋಹಗೈಯಲಾರೆನಮ್ಮ,
ಊರೇ ಸೂತಪುತ್ರನೆಂದರೂ ಕರ್ಣನ ಮಾನವ ಕಾಪಾಡಿದ ಕೌರವ,ಈ ದೇಹವೂ ಅವನಿಗೇನೇ...

ಎಲ್ಲಾ ಮುಗಿದು ಹೋಗಿದೆಯಿಂದು ಸತ್ತು ಶವವಾಗಿ ಮಲಗಿರುವೆ ನಾನು ನೋಡಮ್ಮ,
ಕಾಡುತಿದೆ ನನಗಿಂದು ಸುಭದ್ರೆಯ ಶಾಪ,ಉತ್ತರೆಯ ರೋಧನೆ,ಅಭಿಮನ್ಯುವ ಮೋಸದಿ ಕೊಂದ ಬಗೆ,
ಆದರೂ ನನಗೆ ತೃಪ್ತಿಯಿದೆ ಕೊನೆಗೂ ಹೇಳಿದೆ ನೀನು ಸತ್ಯವ ಈ ಲೋಕಕೆ,
ಜನ್ಮ ರಹಸ್ಯ ತಿಳಿದ ಖುಷಿಯಿದೆ ಜೊತೆಗೆ,
ಕೌರವನ ಸ್ನೇಹಕ್ಕೆ ಪ್ರಾಣವನಿತ್ತ ತೃಪ್ತಿಯಿದೆಯಿಂದು ಆದರೂ ನಾನು ಸೂತಪುತ್ರನೇ...

ಪಿತಾಮಹ.....



ತಂದೆಯಾಸೆಯ ಪೂರೈಸೆ ಪ್ರತಿಜ್ಞೆಗೈದು ಭೀಷ್ಮನೆನೆಸಿದೆ,
ಇಚ್ಚಾಮರಣದ ವರವ ಪಡೆದ ಪರಾಕ್ರಮಿ ನೀನಲ್ಲವೇ ಗಾಂಗೇಯ...

ವಿಚಿತ್ರವೀರ್ಯಗೆ ಪಟ್ಟವ ಕಟ್ಟಿ ಸ್ವಯಂವರವ ಗೆದ್ದ ಧೀರ ನೀನು,
ಪಂದ್ಯ ಗೆದ್ದ ವೀರ ಹೆಣ್ಣಿನ ಮನಸನರಿಯುವಲ್ಲಿ ಸೋತು ಹೋದೆಯಾ?
ಅಂಬೆಯ ಪ್ರೀತಿಯ ಧಿಕ್ಕರಿಸಿ ಪ್ರತಿಜ್ಞೆಯ ಉಳಿಸಿಕೊಂಡ ಪರಮಯೋಗಿ ನೀನಾದೆ...

ಕುರುವಂಶಕೆ ಹಿರಿಯನಾದೆ,ತಂದೆಯಾದೆ,
ದೃತರಾಷ್ಟ್ರ,ಪಾಂಡು,ವಿಧುರರಿಗೆ ಗುರುವಾದೆ,
ಬೆಳೆಸಿದೆ ಕುರುವಂಶವ ಗುರುವಾಗಿ,ಹಿರಿಯನಾಗಿ,
ಕುರುವಂಶವೇನೊ ಚಿಗುರೊಡೆದಿತ್ತು ಒಂದೆರಡಲ್ಲ,ನೂರೈವರಾಗಿ...

ಪಾಂಡುವನ್ನ ಕಳೆದುಕೊಂಡ ತಬ್ಬಲಿ ಪಾಂಡು ಕುವರರ ಜೊತೆ,
ನೂರೊಂದು ಜನ ದುರುಳರ ಕೌರವ ಪಾಳಯಕ್ಕೆ ಪಿತಾಮಹನಾದೆ,
ಮುಂಬರುವ ಪ್ರಳಯದ ಮುನ್ಸೂಚನೆ ಅಲ್ಲೇ ನಿನಗಾಗಿತ್ತು ಅಲ್ಲವೇ...

ಮೋಸದ ಜೂಜಾಟಕ್ಕೂ ನಿನ್ನದು ದಿವ್ಯ ಮೌನ,
ಧುರ್ಯೊಧನನ ದುರುಳತೆಯ ತಡೆಯಲಾಗದ ಧರ್ಮ ಸಂಕಟ,
ಪಾಂಡವರ ಅರಗಿನ ಮನೆ ಸುಟ್ಟಾಗಲೂ ನೀನು ಎಚ್ಚರಗೊಳ್ಳಲಿಲ್ಲವೇ ಪಿತಾಮಹ...

ನಿನ್ನ ಕಣ್ಣೆದುರೇ ಕುರುಕುಲವು ಕಾಳಗಕ್ಕೆ ನಿಂತಾಗಲೂ ತಡೆಯಲಾಗಲಿಲ್ಲವೇ?
ಕೃಷ್ಣ ಲೀಲೆಗಳ ನೋಡಿ,ಕೇಳಿ ಆನಂದಿಸಿದವನು ನೀನು,ಅವನೇ ಸಂಧಿಗೆ ಬಂದಾಗಲೂ ಕೌರವನ ಅನ್ನದ ಋಣ ನಿನ್ನ ಮೂಕವಾಗಿಸಿತೇ...
ಎಲ್ಲವ ಬಲ್ಲ ವೀರ ನೀನು ಆದರೂ ಕರ್ಣನ ಪರಾಕ್ರಮವ ನಿಂದಿಸಿದೆಯೇನು?
ನೀನು ಧರೆಗುರುಳುವ ಮುನ್ನ ಯುದ್ಧಭೂಮಿಗೆ ಕಾಲಿಡಲಾರೆನೆಂಬ ಕರ್ಣನ ಮಾತು ನಿನ್ನೆದೆಯಾ ಚುಚ್ಚಿರಬೇಕಲ್ಲವೇ...

ಪಾಂಡವರ ವಿಜಯ ದುಂಧುಭಿ ನೋಡಿ ಪಾಂಡವರಲ್ಲೋರ್ವನ ಸಂಹರಿಸುವ ಪ್ರತಿಜ್ಞೆಗೈದೆ ಕುರುಕ್ಷೇತ್ರದಿ,ನೀನೇ ಸಲಹಿದ ಧರ್ಮ ಸಂಜಾತರೆನ್ನುವುದ ಮರೆತೆಯಾ?
ಕಣ್ಣ ಮುಂದೆಯೇ ಅಭಿಮನ್ಯುವ ಮೋಸದಿ ಕೊಂದರು,ಮೌನಿ ಯಾಕಾದೆ ಗಾಂಗೇಯ...

ನಿನ್ನ ಎದುರಿಸಿ ನಿಲ್ಲಬಲ್ಲ ಯೋಧನಿಲ್ಲ ಶಿಖಂಡಿಯ ಮುಂದಿರಿಸಿ ಯುದ್ಧಕ್ಕೆ ಬರ ಹೇಳಿ ನಿನಗೆ ನೀನೇಸೋತೆಯಾ?
ಶಿಖಂಡಿಗೆ ಪ್ರತಿಜ್ಞೆ ಪೂರೈಸಿದ ಸಂತೋಷವಿರಬಹುದು,ನಿನಗೆ ಧರ್ಮವನುಳಿಸಿದ ತೃಪ್ತಿಯೇ...

ಪರಮವೀರ ನೀನು,ಪರಮ ತ್ಯಾಗಿಯಾದೆ,ಕುರುಕುಲವ ಸಾಕಿ ಸಲಹಿದೆ,
ಕೊನೆಗೂ ಮಲಗಿದೆ ಶರಶಯ್ಯೆಯಲ್ಲೇ,ಮೌನದಿಂದಲೇ ಧರ್ಮವನುಳಿಸಿದ ತೃಪ್ತಿ ನಿನಗಿತ್ತೇ ಅಲ್ಲಿ ಪಿತಾಮಹ.....

23 July, 2012

ಕನಸುಗಳ ಚಿತ್ತಾರ.....




ಪ್ರೀತಿ ಬರೆದ ಈ ಹೊಸ ಭಾಷ್ಯಕೆ ಇಂದು ನೀನು ಹೆಸರಾದೆ,
ಈ ಒಲವ ಮುನ್ನುಡಿಗೆ ಹೊಸ ಕನಸ ಪೊಣಿಸಿದೆ...

ಪ್ರತಿ ಉಸಿರಿನ ಕಣ ಕಣವು ನಿನ್ನ ಕೂಗಿದೆ,
ಈ ತನುವಿನ ಅಣು ಅಣುವು ನಿನ್ನ ಸನಿಹ ಬೇಡಿದೆ...

ಜನುಮ ಜನುಮದ ಈ ನಂಟಿಗೆ ಮಾತು ಸೋತಿದೆ,
ಕಣ್ಣಂಚಿನ ಆ ಭಾವವು ಮೌನ ಮೆರೆಸಿದೆ...

ಒಲವ ರಾಗ ಶೃತಿಸೇರಿ ಮಧುರ ಗಾನವಾಗಿದೆ,
ನಿನ್ನಿರುವಿನಲ್ಲಿ ನನ್ನ ಮನಸು ಹಾರೊ ಚಿಟ್ಟೆಯಾಗಿದೆ...

ಎಲ್ಲೋ ಇದ್ದ ನೀನು ನನ್ನ ಮನದ ಗೂಡು ಸೇರಿದೆ,
ಈ ಕನಸುಗಾರನ ಹೊಸ ಕನಸಿಗಿಂದು ನಾಂದಿ ಹಾಡಿದೆ...

ಪ್ರೇಮಿಯ ಹೃದಯದ ವೀಣೆಯನ್ನು ನೀನು ಮೀಟಿದೆ,
ಕನಸುಗಾರನ ಕನಸುಗಳಿಂದು ಪ್ರೇಮಕಾವ್ಯವಾಗಿದೆ...

ನೂರು ವರುಷ ಬಾಳೊ ಆಸೆ ನನ್ನದಲ್ಲವೆ,
ನಿನ್ನ ಪ್ರೀತಿ ನನ್ನ ಮರೆಸೊ ಕ್ಷಣವು ಸಾಕದೆ...

ಬಣ್ಣ ಬಣ್ಣದ ಕನಸಿಗೆ ಹೊಸ ರಂಗು ನೀನಾದೆ,
ಕನಸುಗಳ ಚಿತ್ತಾರ ಬಿಡಿಸೊ ಕುಂಚವು ನಾನಾದೆ...

ಕಂಡ ಕನಸು ನನಸಾದ ಖುಷಿಯಿಂದು ನನಗಿರೆ,
ಕೇಳು ನೀನು ನನ್ನೇ ಕೊಡುವ ಪ್ರೀತಿಯಾಣೆ ಇಲ್ಲಿದೆ...

ಪ್ರತಿ ಕ್ಷಣವು ಜೊತೆಯಾಗಿರೊ ಆಶಯವಿಲ್ಲಿದೆ,
ಉಸಿರಲ್ಲಿ ಉಸಿರಾಗಿರೊ ಈ ಪ್ರೀತಿ ನಿನ್ನದೇ...


19 July, 2012

ಕನಸು ಮನಸುಗಳ ನಡುವೆ.....



ನೆನಪಿನಾಳಕ್ಕಿಳಿದರೆ ಕಣ್ಣೀರಧಾರೆ,
ಮುಗ್ಧ ಮನಸಿನ ಮೂಲೆ ಮೂಲೆಯಲೂ ಕಾಡುವ ನೂರು ಭಾವ,
ನಾಳೆಯದು ಹೇಗಿರುವುದೋ ಅನ್ನೊ ದುಗುಡ,
ನಿನ್ನೆಯನು ನೆನೆದು ಮೂಡೋ ಬೆವರ ಸಾಲು,
ಖುಷಿಯ ಜೊತೆಗೂ ಕಣ್ಣೀರ ಸಿಂಚನ,
ನೋವಿನ ಜೊತೆಗಿಷ್ಟು ಅಶ್ರುತರ್ಪಣ,
ನಿನ್ನೆಯದು ಭೂತವಾದರೆ ನಾಳೆಯದು ಬೇತಾಳದಂತೆ,
ಸತ್ತು ಹುಟ್ಟುವ ಮತ್ತೊಂದು ನೋವು,
ನೂರು ಕನಸುಗಳಿಗಿಲ್ಲಿಉತ್ತರ ಹುಡುಕುವ ಚಪಲ,
ನಿನ್ನೆ-ನಾಳೆಗಳ,ಭೂತ- ಭವಿಷ್ಯದ ಜೊತೆಗೆ ಇಂದು ಎಂಬುದು ಹಾಳು,
ಮನಸ್ಸಿನಾಟಕ್ಕಿಂದು ಕನಸುಗಳ ಲಗಾಮು,
ಗೋರಿ ಸೇರಿದ ಅದೆಷ್ಟೋ ಕನಸುಗಳಿಗಿಲ್ಲಿ ಮುಕ್ತಿ ನೀಡಬೇಕಿದೆಯಿಂದು,
ಪ್ರಶ್ನೆಗಳಿಗೆ ಪ್ರಶ್ನೆಗಳೇ ಉತ್ತರದಂತಿದೆ ಇಂದು,
ಪ್ರತಿ ಪದಗಳಿಗೂ ಅರ್ಥ ಹುಡುಕುವ ಕಾತರ ನಾಳೆಯದು ಬರುವ ಮುನ್ನ ಇಂದೆಂಬುದು ಕಳೆಯೋ ಮುನ್ನ...

ಮಳೆ ನಿಂತು ಹೋದ ಮೇಲೆ.....




ಹಸುರ ಸಿರಿಯ ಬೆಚ್ಚಗೆ ಹೊದ್ದು ಮಲಗಿರುವ ಭೂರಮೆ,
ಹೊತ್ತು ನೆತ್ತಿಗೇರಿದರೂ ಚೈತನ್ಯವಿಲ್ಲದ ನೇಸರ,
ನೀಲ ಮೇಘಗಳ ಕರಗಿಸಿ ಬಿಳುಪಾದ ಬಾನು,
ವೇಗವ ಮರೆತು ಬೀಸುತ್ತಿರುವ ಆ ವಾಯು,
ಹಕ್ಕಿಗಳ ಕಲರವದ ಸಂಗೀತವೂ ಇಲ್ಲದ ಸ್ಮಶಾನ ಮೌನ,
ಜಡಗಟ್ಟಿದ ಸೃಷ್ಟಿಯ ಸಂಕೇತವೋ..
ಮಡುಗಟ್ಟಿದ ಮನಸಿನ ಭಾವಾಂತರಂಗ ಸಮ್ಮಿಲನವೋ...
ತಣ್ಣಗಾಗಿದೆ ಯಾಕೋ ಇಂದು ಮನಸಿನಲೆಗಳ ಕೊರೆತ,
ಯೋಚನಾಲಹರಿಯ ಸುನಾಮಿಯ ಭೊರ್ಗರೆತದ ಭಯವೂ ಇಲ್ಲದೆ,
ನಾಳೆಗಳ ದೋಣಿಯ ಸಂಚಾರಕೆ ಸುಗಮವಾದಂತಿದೆ ಹಾದಿ,
ಕನಸಿನೂರಿನ ಪಯಣ ಬಿಡದೆ ಸಾಗಬೇಕಿದೆ ಇಲ್ಲಿ ಯಾವ ಹಂಗೂ ಇಲ್ಲದೇ...


ಕನಸು ಮಾತ್ರ ನನ್ನದೇ.....

ಒಂಟಿತನವ ಪ್ರೀತಿಸಿದ್ದೆ,
ಬಯಕೆಗಳಿಗೆ ಕಡಿವಾಣ ಹಾಕಿದ್ದೆ,
ನೆನಪುಗಳಿಗೂ ಬೇಲಿ ಹಾಕಿದ್ದೆ,
ಕನಸುಗಳ ಹೊಸ ಚಿತ್ತಾರ ಬಿಡಿಸಿದ್ದೆ ಬದುಕ ಪುಟದಲಿ,
ಶೂನ್ಯವಾದರೂ ಸರಿ ನೂರರಲ್ಲೊಂದಾಗಬಾರದೆಂದಿದ್ದೆ,
ಈ ಏಕಾಂಗಿಯ ತಪಸ್ಸನ್ನೆ ಹಾಳುಗೆಡವಿದೆಯಲ್ಲೆ ಹುಡುಗಿ ನೀನು ಕ್ಷಣ ಮಾತ್ರದಲ್ಲಿ...

ಕಡಿವಾಣ ಹಾಕಿದ್ದ ಬಯಕೆಗಳಿಂದು ಮೇರೆಮೀರಿವೆ,
ಬೇಲಿ ಹಾಕಿದ್ದ ನೆನಪುಗಳಿಂದು ನನ್ನನೇ ಮೇಯುತಿವೆ,
ಸೋತೆನಾ ಬದುಕಿನ ಪಂದ್ಯದಿ,ಪ್ರೀತಿಯ ಆಟದಿ,
ಗೆದ್ದು ಬೀಗುತಿರುವೆಯಲ್ಲೇ ನೀನು ಮರೆಯಾಗಿ ನಿಂತು...

ನಾನೀಗ ಏಕಾಂಗಿಯಲ್ಲ,ಭಾವನೆಗಳು ನನ್ನವಲ್ಲ ಹುಡುಗಿ,
ಆದರೂ ಸುಂದರ ಬದುಕಿನ ಕನಸು ಮಾತ್ರ ನನ್ನದೇ,
ಅದಕೆ ರೂಪುರೇಷೆ ನೀಡಬೇಕು ನೀನೀಗಲೇ...

**ಒಲವಿನ ಚಿಲಿಪಿಲಿ**



ಮನಸಂದು ಗಿರಕಿ ಹೊಡೆಯುತ್ತಲಿತ್ತು ಸ್ನೇಹ-ಪ್ರೀತಿಯ ಗುಂಗಿನಲಿ,
ಮೊದಲ ನೋಟದಲ್ಲೇ ಒಲವ ತುಂಬಿತ್ತು ಮನಸು ನಿನ್ನ ನೋಡಿಯಂದು,
ಒಲವ ಬಳ್ಳಿಯದು ಚಿಗುರೋ ಮುಂಚೇನೆ ಬಿದ್ದಿತ್ತು ಕಾಲದ ಚಡಿಯೇಟು,
ಒಲವ ಲತೆಯಲ್ಲಿ ಸ್ನೇಹದ ಮೊಗ್ಗು ಹೂವಾಗಿ ಅರಳಿತ್ತು.

ಇಷ್ಟವದು ಮನ ತುಂಬಿತ್ತು ಸ್ನೇಹರಾಗವಾಗಿ,
ಬೆರೆತೆವು ಸ್ನೇಹಿತರಾಗಿ ಮನಸಿನಂಗಳದಿ,
ನೊಡೋರ ಕಣ್ಣಿಗದು ಪ್ರೀತಿಯಾಯ್ತು,
ಎರಡು ಹೃದಯಗಳಿಗಷ್ಟೇತಿಳಿದಿತ್ತು ಅದು ಬರೀಯ ಸ್ನೇಹವೆಂದು.

ಮೌನವದು ಬೇಸರವ ತರಿಸುತಿತ್ತು ಮನಸುಗಳ ನಡುವೆ,
ಸರಸವೇ ತುಂಬಿತ್ತು ಸ್ನೇಹದ ಒಡನಾಟದಲಿ,
ಜಗಳವಾಡದ ಕ್ಷಣಗಳಿಲ್ಲ,ಮುನಿಸು ತಾರದ ಮಾತುಗಳಿಲ್ಲ,
ಆದರೂ ತುಂಬಿತ್ತು ಒಲವದು ಸ್ನೇಹ ಜ್ಯೋತಿಯಾಗಿ.

ನೆನಪಿದೆಯಾ ಗೆಳತಿ ನಿನಗೆ ರೇಗಿಸಿದರೆ ಮಾತು ಮುರಿಯುತ್ತಿದ್ದೆ ನೀನಂದು,
ನಕ್ಕು ಸುಮ್ಮನಾಗಿದ್ದೆ ನೀನೇಷ್ಟೇ ಸತಾಯಿಸಿದರೂ ನಾನಂದು,
ದಿನಗಳುರುಳಿ ವರುಷಗಳೇ ಕಳೆದರೂ ಈ ಸ್ನೇಹವಿದು ಮುಪ್ಪಾಗಲಿಲ್ಲ,
ಕಾಲವದು ದೂರಾಗಿಸಿದರೂ ಮನಸೇಕೊ ಕೊರಗಲಿಲ್ಲ.

ಸ್ನೇಹದಾ ಶರಧಿಯಲಿ ಸಾಗಿತ್ತು ಪಯಣ ಎಂದಿನಂತೆ,
ಬಿರುಗಾಳಿಯದು ಸುಳಿಯಲೇ ಇಲ್ಲ ನಮ್ಮ ಹಾದಿಯಲೆಂದು,
ನೂರು ಕಾಲಕೂ ಇಹುದು ಈ ಸ್ನೇಹದಾ ಬಂಧ ನನ್ನ ನಿನ್ನೊಳಗೆ,
ಬಾಳ ದಾರಿಯದು ಮುಗಿದು ಹೋದರೂ ಸ್ನೇಹಿತನಾಗೆ ಉಳಿದಿರುವೆ ನಾನು ನಿನಗೆಂದೂ...

**ಹೃದಯವೀಣೆ**



ಮೌನಿ ಹೃದಯ ಮಾತಾಡಿದಾಗ ನೂರು ಭಾವ ಚೆಲ್ಲಿತು,
ನೆನಪಿನ ಮೂಟೆಯದು ಹಿರಿದಾಗಿದೆ,
ಭಾವನೆಗಳು ಬತ್ತಲಾರವು ಇಲ್ಲೆಂದು.

ನೂರು ನೆನಪು,ಹತ್ತಾರು ಕನಸು ನಾಳೆಯೆಂಬ ಆಗಸದ ಹೊಳಪು,
ಕನಸಿನ ನಡುವೆಯೂ ಕಾಡೋ ನೆನಪುಗಳ ಕಲರವ,
ಕಹಿಯಾದರೂ ಸರಿ ಸಿಹಿಯಾದರೂ ಸರಿ ಇರುವುದೊಂದೆ ಉತ್ತರವು ತುಟಿಯಂಚಿನ ಮುಗುಳುನಗೆ.

ಪ್ರೀತಿಯಿದೆಯಿಲ್ಲಿ, ಸ್ನೇಹವಿದೆಯಲ್ಲಿ ಭಾವನೆಗಳ ಭರಪೂರ ಭಂಡಾರವೂ,
ಕುಗ್ಗದೆಂದಿಗು ಮನವು ಹಿಗ್ಗಿ ಹಿರಿದಾಗದು,
ನೋವುಗಳೆಲ್ಲ ನೋವುಗಳಲ್ಲ ಜೀವನದ ಪಾಠಗಳು,
ನಲಿವಿದು ಖುಷಿಯ ಕ್ಷಣವಲ್ಲ ಜೀವನದ ಜವಾಬ್ದಾರಿಯಿದು.

ಓಡುತ್ತಿರುವ ಕಾಲನ ಜೊತೆಗೆ ಕನಸಿನ ಪಯಣ,
ನಾಳೆಗಳ ನಾಳೆಯಲಿ ಉತ್ತರ ಹುಡುಕುವ ಯೋಚನೆ,
ಓಡೋ ಕಾಲಕೆ ಸಮನಾಗೊ ಹಂಬಲ,
ಕಾಲದ ಓಟದ ಜೊತೆಗೆ ಮರೆಯಲೇ ನಡೆದಿದೆ ಜೀವನ ನಿತ್ಯನೂತನ...

ಕನಸಿನ ಕವನ....

ಮನಸಿಂದು ಖಾಲಿ ಹಾಳೆಯಾಗಿದೆ,
ತುಂಬಬೇಕಿದೆ ಅದನಿಂದು,
ಭಾವಗಳ ಮೇಲೆ ಭಾವನೆಯ ಚೆಲ್ಲಿ.

ಬರೆಯಬೇಕಿದೆ ಇಂದು ಕನಸಿನ ಕವನ,
ಕನಸಿನ ಲೋಕದ ಜಾಡು ಹಿಡಿದು,
ಬದುಕಿನ ಪುಟದ ಸವಿ ನೆನಪುಗಳ ತೆಗೆದು.

ಮರೆಯಬೇಕಿದೆ ಇಂದು ನೋವಿನ ಕಥೆಯಾ,
ನಾಳೆಯ ಹೊಸತನದ ಬದುಕ ನೆನೆದು,
ನಾಳೆಗಳ ನಾಳೆಯ ಪ್ರೀತಿಸುತ್ತಾ...

ಬದುಕಬೇಕಿದೆ ಇಲ್ಲಿ ಸ್ನೇಹ ಬೆಳೆಸುತ್ತಾ,
ಜೀವನದ ಕನಸುಗಳ ಪೋಣಿಸುತ್ತಾ,
ಕನಸ ನನಸಾಗಿಸುವ ಹೆಜ್ಜೆಯಿಡುತ್ತಾ...

**ಮನಸಿಗೊಂದು ಕನಸು**




ಮನಸಿಂದು ತೊಳಲಾಡಿದೆ ಏನೂ ಹೇಳಲಾಗದೆ,
ಕನಸಿಂದು ಮಂಕಾಗಿದೆ ಮಾತನಾಡಲಾಗದೆ,
ಹಿಡಿದಂತಿದೆ ಗ್ರಹಣ ಈ ಮನೋತೇಜಗೆ,
ಆದರೂ ಏನೋ ಹಂಬಲ ಕನಸ ಕಾಣಬೇಕಿದೆ,
ಕನಸಿಗ್ಯಾವ ಬೇಲಿಯಿದೆ ಸುಮ್ಮನಿರೋಕೆ,
ಮನಸಿಗೇನೊ ತನ್ನದೇ ಲಕ್ಷಣರೇಖೆಯೊಂದಿದೆ,
ಮೇರೆಮೀರೊ ಮನಸಿಗೊಂದು ಪ್ರೀತಿಯ ಲಗಾಮು ಇದೆ,
ಆದರಿಲ್ಲಿ ಕನಸಿಗ್ಯಾರ ಭಯವೂಇಲ್ಲವೇ...
ನನ್ನ ಕನಸು ನನ್ನದು ಎಂದಿನಂತೆಯೇ,
ಅದರ ಹುಚ್ಚುಲೋಕಕೆ ಕೊನೆಯು ಇಲ್ಲದೆ...
ನಾಳೆಯಿದು ಯಾರದೋ ತಿಳಿಯದಂತಿದೆ,
ಬೇಕು ಎಂಬ ಆಸೆಗೆ ಕೊನೆಯೇ ಇಲ್ಲವೇ...
ಕಾಲವಿದು ಬದಲಾದರೂ ಕನಸಿಗೆಲ್ಲಿ ಕೊನೆಯಿದೆ?
ಕನಸುಗಾರ ನಾನು ಹುಚ್ಚುಹುಡುಗನಂತೆಯೇ,
ಕನಸು ಕಾಣೋ ಹುಡುಗ ಇಂದು ನೀನು ಪ್ರೇಮಿಯೇ...


**ಹೆಸರಿಲ್ಲದವರು**




ಮೊದಲ ಹನಿ ಧರೆಯ ಸೋಕಿದ ತರದಿ,
ಮೊದಲ ಸುಖದ ಮತ್ತಿನಲ್ಲಿ ಮೈಮರೆತಳಾಕಿ ತರುಣಿ,
ನಾಳೆಯದು ಹೇಗೆಂಬ ಮಾತದು ಮಾಯೆಯಾಗಿತ್ತು,
ಜೊತೆಯಾದವನು ಯಾರೋ, ದೋಚಿದ್ದ ಶೀಲವ ಸುಖದ ಜೊತೆಗೆ,
ಕತ್ತಲೆಯ ನಡುವಿನ ಬೆತ್ತಲೆಯ ಆಟ ಜಗವ ಮರೆಸಿತ್ತು,
ಹೆಸರೇ ಇಲ್ಲದ ಉಸಿರೊಂದು ಬಸುರಾಗಿತ್ತು,
ಲೋಕದ ದೃಷ್ಟಿಯಲಿ ಆಕೆಯದು ನೀತಿಗೆಟ್ಟ ಬದುಕು,
ಹುಟ್ಟುವ ಮೊದಲೇ ಪಾಪ ಹೊತ್ತ ಬದುಕು ಆ ಭ್ರೂಣಕೆ,
ತಾಯಿ ಗರ್ಭದಲೇ ಆವರಿಸಿತ್ತು ಕಂಡವರ ಶಾಪ ಹಸುಗೂಸಿಗೆ,
ಯಾವುದೋ ಉಸಿರು ಜೊತೆಗಿಲ್ಲ ಹೆಸರು,
ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಇದೂ ಒಂಥರಾ ಭಂಡ ಬಾಳು....


ಮನಸಾದೆ ನೀನು....

ಎಂದೋ ಬರೆದಾಯ್ತು ನಿನ್ನ ಹೆಸರ ನನ್ನೆದೆಯಾ ಗೂಡಲ್ಲಿ,
ಮನಸಾದೆ ನೀನು,ಕನಸಾದೆ ನೀನು ನನ್ನೊಲವೆ,
ನೀ ಕಾಡದ ಕ್ಷಣಗಳಿಲ್ಲ,ನನ್ನ ಮನಸೆಳೆಯದ ದಿನವಿಲ್ಲ,
ಸದಾ ಮೌನಿ ನೀನು ಆದರೂ ತುಂಟಿನೇ ದೂರಾನೇ ನಿಂತು ಮಾಡಿದೆಯಲ್ಲೇ ಮನಸ ಈ ಪರಿ
ನಿನಗಾಗಿ ಸೋಲಲಿಲ್ಲ ನಲ್ಲೇ ಸೋತೆ ನೀನು ಪ್ರೀತಿಸುವ ಪರಿಗೆ,
ಇನ್ನೆಷ್ಟು ದಿನ ನಿನ್ನ ಅಜ್ಞಾತವಾಸ?
ಬೇಗನೆ ಬಂದು ನನ್ನ ಸೆರೆಯಾಗಿ ನುಡಿಯಬಾರದೆ ನಲ್ಲ ನಾನಿಲ್ಲೇ ಇರುವೆನೆಂದು,
ಹಿಡಿದಿಟ್ಟೆ ನಾ ನಿನ್ನೆನ್ನ ಹೃದಯಮಂದಿರದಲ್ಲಿ ಮನಸ್ಸಿಂದು ಬಯಸಿಹುದು ನಿನ್ನೆನ್ನ ಬಾಹುಬಂಧನದಲ್ಲಿ...

ನೀ ಬಂದರೆ ಸಾಕೆನಗೆ.....

ಕಣ್ಣಲೇ ಸನ್ನೆ ಮಾಡಿ ನಿಂತ ನಿನ್ನ ನೋಟ ನನ್ನಾ ಮೋಡಿ ಮಾಡಿತ್ತೆ 
ಗೆಳತಿ ಮನಸ ಸೆಳೆದಿತ್ತು,
ಮೌನಿ ನೀನು ಮಾತಾಡದೇನೇ ಮನಸ ಕದ್ದೆಯಲ್ಲೇ ಹುಡುಗಿ,
ಸಂಜೆ ಸುರಿದ ತುಂತುರು ಮಳೆಯಲ್ಲೂ ನಿನ್ನ ಪ್ರೀತಿಯ ಕಂಪಿತ್ತು ಗೆಳತಿ ,
ಮನಸೇಕೊ ಹುಚ್ಚು ಆಸೆಯಿಂದ ಗರಿಗೆದರಿ ಕುಣಿಯಲು ಅಣಿಯಾಗಿತ್ತು 

ನಿನ್ನಾ ಅನುಪಸ್ಥಿತಿಯನರಿತು ವಿರಹ ಬೇಗೆಯಲಿ ಸುಮ್ಮನಾಗಿತ್ತು,
ನೀ ಜೊತೆಯಲಿ ಇಲ್ಲದಿದ್ದರೇನಂತೆ ಗೆಳತಿ 

ನಿನ್ನ ಮುಗುಳು ನಗೆಯೇ ಸವಿ ನೆನಪಾಗಿ ನನ್ನ ಕಾಡುತಿರುವಾಗ,
ಕನಸಿನ ಲೋಕದಿಂದ ಈ ಮನಸಿನಾಳಕೆ ನೀ ಬಂದರೆ ಸಾಕೆನಗೆ.


ಭಾವನೆಗಳ ಬಲೆಯೊಳಗೆ .....

ಭಾವನೆಗಳ ಬಲೆಯೊಳಗೆ ಸಿಲುಕಿ ಎಲ್ಲೋ ಕಳೆದೋಗಿರುವೆ ನಲ್ಲೇ,
ಬದುಕೆಂಬುದು ಬರೇ ಕನಸಾಗಿದೆಯಲ್ಲೇ,
ನೂರಾರು ಭಾವಗಳ ಚಿತ್ತಾರ ನನ್ನೆದೆಯಾ ಗೂಡಿನೊಳಗೆ 

 ಸಂಬಂಧಗಳ ತೊಳಲಾಟದಲ್ಲಿ ಮನಸೇಕೋ ಕಳೆದೊಗಿರುವುಲ್ಲೇ,
ಸ್ನೇಹಾನೋ,ಪ್ರೀತಿನೋ ನಾನರಿಯೆ

 ಆದರೂ
 ಮನಸ್ಸೆಲ್ಲೋ ಕಾತುರಿಸುತಿದೆ ನಿನ್ನ ನೋಡಲೆಂದೆ,
ಕನಸು ಮನಸುಗಳ ತೊಳಲಾಟದ ನಡುವೆ 

ನಾ 
ಕಳೆದೊಗುವ ಮೊದಲೆ ಬಂದುಬಿಡು ನೀನು ಈ ಪ್ರೇಮದೂರಿನೆಡೆಗೆ, 
ನನ್ನ ಹೃದಯದರಮನೆಯೊಳಗೆ.....

ನೆನಪಾಗಿ....

ಮರೆಯಬೇಕು ಎಂದಾಗಲೆಲ್ಲ ನೆನಪಾಗಿ ನನ್ನ ಸುತ್ತ ಸುಳಿದಾಡುವೆಯಲ್ಲೇ ಹುಡುಗಿ,
ದೂರದಿ ನಿಂತು ನಸುನಕ್ಕು ಬಲೆಯ ಬೀಸಬಂದೆಯಲ್ಲೆ,
ಬೇಡವೆಂದರೂ ಕೇಳದೀ ಹುಚ್ಚು ಮನವು,
ನನ್ನ ಮನಸ ಕದಿಯಲು ಬಂದ ಚಿತ್ತ ಚೋರಿ ನೀನು,
ಈ ಮನಸಿನಾಳವ ತಿಳಿಯಲಾರೆ ನೀನು ನೆನಪಾಗೆ ಇದ್ದುಬಿಡು ನೆನಪಿನಾಳದಲ್ಲೇ, ಕನಸಲ್ಲೂ ಕಾಡುತಿರುವೆಯಲ್ಲೇ,
ಕನಸೆಂದೂ ನನ್ನದು ಹುಡುಗಿ ಕಾಡಬೇಡ ನೀನಲ್ಲಿ ಬಂದು,
ಕನಸಿಗೂ ಬೇಲಿ ಹಾಕಿರುವೆ ನಾನು ದಾಟಿ ಬರಲಾರೆ ನೀ ಅದನೆಂದೂ...

ನಿನ್ನ ಮನಸಾಗಲೇನು....

ನನ್ನ ಕಲ್ಪನೆ ನೀನು
ನಿನ್ನ ಮನಸಾಗಲೇನು,
ಭಾವ ಮಂದಿರಕೆ ಭಾವ ಲಹರಿಯಾಗಲೇನು?

ನನ್ನ ಪ್ರೀತಿಯು ನೀನು
ನಿನ್ನ ಉಸಿರಾಗಲೇನು,
ಪ್ರತಿ ಉಸಿರಲ್ಲೂ ನಿನ್ನ ಬಿಗಿದಪ್ಪಿಕೊಳಲೇನು?

ಎದೆ ಬಡಿತವು ನೀನು
ಪ್ರತಿ ತುಡಿತವು ನೀನು,
ನಿನ್ನ ಭಾವಂತರಂಗದಲಿ ಬಂದಿಯಾಗಲೇನು?

ಸುಖಾನೋ, ದುಖಃನೋ
ನಿನ್ನ ಜೀವನವಾಗಲೇನು,
ಜೀವನವಿರೋ ತನಕ ಅಳಿಯದ ಪ್ರೀತಿಯ ನೀಡಲೇನು?...

ಓ ಮನಸೇ...

ಓ ಮನಸೇ...
ಮನಸೇ ನೀನೇಕೆ ಹೀಗೆ
ನಗಲಾರದೆ ನಕ್ಕು
ಅಳಲಾರದೆ ಅತ್ತು
ಪರಿ ಪರಿಯಾಗಿ ಕಾಡೊ
ನಿನಗೇನ ಹೇಳಲಿ ನಾ
ಬೀಸೊ ಗಾಳಿಯು ನೀನೇ
ನಿಂತ ನೀರಾಗೋದು ನೀನೇನೆ
ಒಲವದಾರೆಯಾಗುವೆ
ಮರುಕ್ಷಣ ಅದೇ ಮೌನಿ
ಓ ಮನಸೆ ನೀನೇಕೆ ಹೀಗೆ?

ಕರಗಿ ಹೋಗಲೇ ನೆನಪಿನಲೆಗಳಲಿ...


ದಟ್ಟ ಕಾನನದ ನಡುವೆ ಸುಶ್ರಾವ್ಯ ಸ್ವರವೊಂದು ಕೇಳಿ ಬರುತ್ತಿದೆ ಗೆಳತಿ,
ನನಗನಿಸುತಿದೆ ಯಾಕೋ ಅದು ನಿನ್ನದೇ ಎಂದೂ,
ನೀ ಮತ್ತೆ ಬರಲಾರೆ ಎಂಬ ಕಟುಸತ್ಯ ತಿಳಿದಿದ್ದರೂ...

ಕಗ್ಗತ್ತಲ ಕಾರಿರುಳಿನಲಿ ಕರಗಿ ಬಿಡಬಲ್ಲೆ,
ಭೊರ್ಗರೆವ ಸಾಗರದಲೆಗಳ ನಡುವೆ ಮುಳುಗೇಳಬಲ್ಲೆ,
ಬೀಸೋ ಗಾಳಿಗೆ ತಡೆಯಾಗಬಲ್ಲೆ ಗೆಳತಿ...

ನಿನ್ನ ನೆನಪುಗಳ ಹೊರತಾಗಿ ಹೇಗೆ ಬಾಳಲೇ ಹುಡುಗಿ,
ಮತ್ತೆ ಎದ್ದಿದೆ ನಿನ್ನ ನೆನಪುಗಳ ಸುನಾಮಿ ನನ್ನಂತರಂಗದಲ್ಲಿ ಇದ್ದು ಬಾಳಲೇ ಇಲ್ಲ ಕರಗಿ ಹೋಗಲೇ ನೆನಪಿನಲೆಗಳಲಿ...


ಏಕಾಂಗಿಯಲ್ಲ....


ಒಂಟಿತನವ ಪ್ರೀತಿಸಿದ್ದೆ,
ಬಯಕೆಗಳಿಗೆ ಕಡಿವಾಣ ಹಾಕಿದ್ದೆ,
ನೆನಪುಗಳಿಗೂ ಬೇಲಿ ಹಾಕಿದ್ದೆ,
ಕನಸುಗಳ ಹೊಸ ಚಿತ್ತಾರ ಬಿಡಿಸಿದ್ದೆ ಬದುಕ ಪುಟದಲಿ,
ಶೂನ್ಯವಾದರೂ ಸರಿ ನೂರರಲ್ಲೊಂದಾಗಬಾರದೆಂದಿದ್ದೆ,
ಈ ಏಕಾಂಗಿಯ ತಪಸ್ಸನ್ನೆ ಹಾಳುಗೆಡವಿದೆಯಲ್ಲೆ ಹುಡುಗಿ ನೀನು ಕ್ಷಣ ಮಾತ್ರದಲ್ಲಿ...

ಕಡಿವಾಣ ಹಾಕಿದ್ದ ಬಯಕೆಗಳಿಂದು ಮೇರೆಮೀರಿವೆ,
ಬೇಲಿ ಹಾಕಿದ್ದ ನೆನಪುಗಳಿಂದು ನನ್ನನೇ ಮೇಯುತಿವೆ,
ಸೋತೆನಾ ಬದುಕಿನ ಪಂದ್ಯದಿ,ಪ್ರೀತಿಯ ಆಟದಿ,
ಗೆದ್ದು ಬೀಗುತಿರುವೆಯಲ್ಲೇ ನೀನು ಮರೆಯಾಗಿ ನಿಂತು...

ನಾನೀಗ ಏಕಾಂಗಿಯಲ್ಲ,ಭಾವನೆಗಳು ನನ್ನವಲ್ಲ ಹುಡುಗಿ,
ಆದರೂ ಸುಂದರ ಬದುಕಿನ ಕನಸು ಮಾತ್ರ ನನ್ನದೇ,
ಅದಕೆ ರೂಪುರೇಷೆ ನೀಡಬೇಕು ನೀನೀಗಲೇ...


ಎದ್ದೇಳು ಓ ಮನಸೇ....


ಭ್ರಮೆಯ ಬದುಕು ನಿನಗಲ್ಲ,
ನೋವು ನಲಿವುಗಳ ಸಮ್ಮಿಲನವೀ ಬದುಕು,
ಪರಿತಪಿಸದಿರು ಕಳೆದು ಹೋದುದ ನೆನೆದು,
ಭರವಸೆಯ ನಾಳೆಯಲಿದೆ ನಿನ್ನಾ ಬದುಕು.

ಕೊರಗಿ ಮರುಗದಿರು ಗೆಳೆಯಾ,
ನಾಳೆಯ ಜೀವನಕೆ ನೀನಣಿಯಾಗು,
ಜೀವನವಿದು ಹೂವಿನ ಹಾಸಿಗೆಯಲ್ಲ,
ಕಲ್ಲಿಹುದು,ಮುಳ್ಳಿಹುದು ನೂರಾರು ಕಪಟವಿಹುದಿಲ್ಲಿ.

ಎದ್ದೇಳು ಹುಡುಗ ಈ ಮೌನ ತರವಲ್ಲಾ,
ನಿನ್ನದಲ್ಲದ ತಪ್ಪಿಗೆ ಪರಿತಪಿಸುವೆಯೇಕೆ,
ಜೀವನವಿದು ನಿನ್ನದೇ ಅಣಿಯಾಗು ನಾಳೆಗೆ,
ಸುಂದರ ಕನಸುಗಳ ಸಾಕಾರಗೊಳಿಸಲು.

ನಿನ್ನ ಸಹನೆಗಿದು ಪರೀಕ್ಷೆಯೂ,
ತಾಳ್ಮೆಗೆಡದಿರು ನೀನು ಈ ಬಾಳ ಪಯಣದಿ,
ಒಲವಿದು ನಿನ್ನದಾಗಲಿ,
ಛಲವಿಹುದು ನಿನ್ನಲಿ.

ಜೀವನವಿದು ಯಾತನೆಯಲ್ಲ,
ಹಾಸಿ ಹೊದ್ದುಕೊಳ್ಳುವ ರತ್ನಗಂಬಳಿಯೂ ಅಲ್ಲ,
ಮೂಕವೇದನೆ ನಿನಗೇತಕೋ ನಿನ್ನೆಯನು ನೆನೆಯುತಲಿ,
ಜಾರಿ ಹೋದ ಕಣ್ಣೀರಿಗಿಲ್ಲಿ ಬೆಳೆಯಿಲ್ಲವೋ ಹುಡುಗ.

ಎದ್ದೇಳು ಓ ಮನಸೇ ನೀನಿಂದು,
ನಿನ್ನೆಗಳ ಯಾತನೆಯ ಕಸವ ಗುಡಿಸಿ,
ನಾಳೆಗಳ ಕನಸನ್ನ ಮರು ಪೋಣಿಸಿ,
ಜೀವನವೆಂದೂ ನಿನ್ನದೇ ನಾಳೆಗಳ ನಾಳೆಯದು ಸರಿಯುತ್ತಲ್ಲಿದ್ದರೂ...


ನಮ್ಮೂರ ಮುಂಗಾರು....




ತುಂಬು ಬಸುರಿ ಈಗ ಭೂರಮೆಯು ಈ ಮುಂಗಾರು ಮಳೆಗೆ,
ಹಚ್ಚಹಸುರನೇ ಹೊದ್ದು ಕಂಗೊಳಿಸುತಿಹಳು ನವ ಮಾಸ ತುಂಬಿದ ನೀರೆಯಂತೆ...
ಮೇಘರಾಜನಿಗೂ ಅವಳ ಮುತ್ತಿಕ್ಕುವ ಆಸೆ ಮಳೆ ಹನಿಯಾಗಿ ಸುರಿದು,
ಜೊತೆಯಾಗೊ ಹಂಬಲ ಪುಷ್ಪಸಿಂಚನದಂತೆ ಆಗಾಗ ಸುರಿದು...
ನೇಸರನಿಗೂ ದಿಗಿಲು ಭೂರಮೆಯ ಈ ಪರಿಯ ಕಂಡು,
ಬೆಳಗಲಾರದೆ ಬೆಳಗುತಿರುವ ಕಾಂತಿಯ ಕಳೆದುಕೊಂಡು...
ಚಾಮರವ ಬೀಸುತಿಹನು ವರುಣದೇವನು ಜೊತೆಯಾಗಿ,
ಧರಣಿಯ ಸೊಬಗಿಗೆ ನಾಚುತ್ತಾ ತನ್ನನ್ನೇ ಮರೆತವನಂತೆ...
ಹಕ್ಕಿಗಳ ಕಲರವದ ಸರಿಗಮ ಸಂಗೀತವೂ ಜೊತೆಯಾಗಿದೆ,
ಮೈಮರೆಸಿದೆ ಸೋಬಾನೆಯಾಗಿ ಬಸುರಿ ಭೂಮಿ ತಾಯಿಗೆ...
ನಾಚುತ್ತಾ ಮೈಮರೆತು ಮಲಗಿಹಳು ಭೂದೇವಿ ಹಸಿರ ಹೊದ್ದು,
ಆದರೂ ಕಾಡುತಿದೆ ಆಷಾಡದ ವಿರಹವೇದನೆ ಮನಸ್ಸಲ್ಲಿ ಹೊತ್ತು.....

18 July, 2012

ಕಲ್ಲರಳಿ.....



ಪ್ರೀತಿಯರಮನೆಗಿಂದು ನೀರವ ಮೌನವಾವರಿಸಿದೆ,
ನಿನ್ನ ಕಿಲಕಿಲ ನಗುವಿನ ಸದ್ದಿಲ್ಲ ಅಲ್ಲಿ,
ಕೈಯ ಬಳೆಯ ನಾದವೂ ಇಲ್ಲ,
ಕಾಲ್ಗೆಜ್ಜೆಯ ದನಿಯಂತೂ ಮರೆತೇ ಹೋಗಿದೆ,
ಉಸಿರುಗಟ್ಟಿಸುತಿದೆ ಈ ಕರಾಳ ಮೌನ,
ನೀನೊಮ್ಮೆ ಬಂದು ಈ ನೋವ ಮರೆಸಬೇಕಿದೆ.
ಈ ಹೃದಯದರಮನೆ ನಿನ್ನದು ಅಲ್ಲಿ ಪ್ರೀತಿ ಹರಿಸಬಾರದೇ?
ಕಲ್ಲು ಹೃದಯ ನನ್ನದಲ್ಲವೇ ಗೆಳತಿ,ನನಗೂ ಪ್ರೀತಿಯ ಅರಿವಿದೆ,
ಮರುಮಾತಾಡದೇನೆ ಹೊರಟೇಬಿಟ್ಟೆಯಲ್ಲೆ ಈ ಮನಸಿನರಮನೆಯಿಂದ?
ಒರಟ ನಾನು ನಿಜ ಆದರೆ ಸ್ವಾರ್ಥಿ ನಾನಲ್ಲ,
ಪ್ರೀತಿಸೋಕೆ ಹೇಳಿಕೊಟ್ಟೆ ,ಕಲ್ಲು ಕರಗಿ ನೀರಾಗಿದೆ ನೋಡು,
ಜೀವನದ ಹೂದೋಟದಲ್ಲಿ ನೀನೇ ಬೆಳೆಸಿದ ಬಳ್ಳಿ ಹೂವ ಬಿಟ್ಟಿದೆ ನೋಡು,
ನಿನ್ನ ಸ್ಪರ್ಶಕೆ ಕಾದಿಹುದು ನೀ ಬಂದು ಮುಡಿಯಬಾರದೇ?
ಈ ಪ್ರೀತಿಗೆ ಧನ್ಯತೆಯ ನೀಡಬಾರದೇ?
ಕಲ್ಲರಳಿ ಹೂವಾಗಿದೆ,ಮನಸ್ಸಿಂದು ಮಗುವಾಗಿದೆ,
ನಿನ್ನ ಪ್ರೀತಿಗೆ ಕಾತರಿಸಿದೆ,ನೀ ಬಂದು ಸೇರಬಾರದೆ,
ಈ ವಿರಹ ತಣಿಸಿ ಪ್ರೀತಿಯರಮನೆಯ ಬೆಳಗಬೇಕಿದೆ...

ಪ್ರೀತಿಯ ಹೆಸರಿಡಲೇನು.....



ಅಂತರಂಗದ ಈ ಭಾವಕೆ ಒಲವೆಂದು ಹೆಸರಿಡಲೇನು...
ಈ ಮುಗ್ಧ ಮನಸಿನ ಕನಸನು ಪ್ರೀತಿಯೆಂದೆನಲೇನು...
ಭಾವನೆಯು ನನ್ನದು,ಭಾವವದು ನಿನ್ನದೇ,
ಕನಸುಗಳು ನನ್ನವು ಸ್ಪೂರ್ತಿಯ ಸೆಲೆಯದುವೆ ನಿನ್ನದು.
ಬಾನು ನೀನು ಭೂಮಿ ನಾನು ಆ ದಿನ,
ನೀನೇ ನಾನು,ನಾನೇ ನೀನು ಅನ್ನೋ ಭಾವ ಈ ಕ್ಷಣ,
ಗುಪ್ತಗಾಮಿನಿ ನೀನು ನನ್ನ ಹೃದಯಾಂತರಾಳದಲ್ಲಿ,
ಸುಪ್ತಗಾಮಿನಿ ನೀ ಎನ್ನ ಮನಸ ಪುಟದಲ್ಲಿ.
ಪ್ರೀತಿ-ಸ್ನೇಹಕೆ ಇಂದು ಹೊಸ ಭಾಷ್ಯವು ನೀನು,
ಜನ್ಮಜನ್ಮದ ಕನಸಿಗೆ ಸಾಕಾರವೂ ನೀನು,
ಈ ಒಲವಿಗೆ ಪ್ರೀತಿಯ ಹೆಸರಿಡಲೇನು,
ಪದಗಳಿಗೆ ಪದವಿಟ್ಟು
ಹೊಸ ಆಸೆಯ ಬರೆಯಲೇನು...
ಕನಸಿನ ಬದುಕಿಗೆ ಪ್ರೀತಿಯ ಕನ್ನಡಿ ಹಿಡಿಯಲೇನು,
ಬಾಳಿನ ಪಯಣದಿ ಹೆಜ್ಜೆಗೆ ಹೆಜ್ಜೆಯಿಟ್ಟು ಜೊತೆಯಾಗುವೆ ನಾನು...

**ಒಲವಿನ ತೇರು**



ಮರಳ ಮೇಲೆ ಬರೆದೆ ಹುಡುಗಿ ನಾನು ನಿನ್ನ ಹೆಸರ,
ಅಲೆಗಳವು ಕರಗಿಸಿದವು ನನ್ನ ಕೈಯ ಬರಹ...

ಕಲ್ಲ ಮೇಲೆ ಬರೆದುಬಿಟ್ಟೆ ನಾನು ನಿನ್ನ ಹೆಸರ,
ಮಳೆಯು ಸುರಿದು ಕರಗಿಸಿತ್ತು ಅಲ್ಲೂ ನಿನ್ನ ಹೆಸರ...

ಬಿಡದೆ ಛಲವ ಬರೆದೇಬಿಟ್ಟೆ ನನ್ನ ಹೃದಯದಲ್ಲಿಯೇ,
ಒಲವ ಬಿಡದ ಹುಡುಗ ನಿನಗೆ ತಥಾಸ್ತು ಎಂದ ವಿಧಾತನೇ...

ಕಾಯುತಿರುವೆ ಹುಡುಗಿ ಇಂದು ನಾನು ನಿನ್ನ ಒಲವ ಸಮ್ಮತಿಗೆ,
ಹೃದಯದ ಬಾಗಿಲಿದು ತೆರೆದೇ ಇಹುದು ಬಂದುಬಿಡು ನೀನಲ್ಲಿಗೆ.

ಪ್ರೀತಿಯಿದೆ,ಪ್ರೇಮವಿದೆ ಒಲವು ಕೂಡ ನಿನ್ನದಾಗಿದೆ,
ಮರೆತು ಕೂಡ ಮರೆಯಬೇಡ ಜೀವವಿದು ಕಾತರಿಸಿದೆ...

ಬೇಗ ಬಂದು ಸೇರಿಬಿಡು ಈ ಹೃದಯದೂರಿಗೆ,
ಜೊತೆಯಾಗಿ ಹೆಜ್ಜೆಯಿಟ್ಟು ಮುಂದುವರಿಸು ಈ ಒಲವ ಯಾತ್ರೆಯಾ...

ಜೀವನ ಜಾತ್ರೆಯಲಿ ನೀನೆ ನಾನು,ನಾನೇ ನೀನು ಅನ್ನೋ ಭಾವ ಮೂಡಿದೆ,
ತಡವೇಕೆ ಗೆಳತಿ ಒಲವ ಮನ್ನಿಸಿ ಮನಸ ಬೆರೆಸಿ ಜೊತೆಯಾಗು ಈ ಪ್ರೇಮ ರಥ ಯಾತ್ರೆಗೆ...

*** ನನ್ನಾಕೆ***


ಪದಗಳಿಗೆ ನಿಲುಕದ ಚೆಲುವೆಯಿವಳು,
ಪ್ರೀತಿಯಲಿ ತುಂಬು ಸಾಗರವೂ...

ನಗುವಿನಲಿ ಮರೆಸುವಳು ನೋವಭಾವವನೆಲ್ಲ,
ಕೊಂಕು,ಬಿಂಕವ ಬಿಟ್ಟ ಸರಳ ನೀರೆಯಿವಳು.

ಹುಡುಗಾಟದ ಹುಡುಗಿ ಬಾಳ ಸ್ನೇಹಿತೆಯಿವಳು,
ಮರುಕ್ಷಣವೇ ಪ್ರೇಮರಸಧಾರೆಯೆರೆವ ಪ್ರೇಯಸಿಯು.

ನಕ್ಕರೆ ನಾನು ಮನ ತುಂಬಿಕೊಳ್ಳುವಳು,
ಮೌನಿಯಾದರೆ ನಾನು ಕಣ್ತುಂಬಿಕೊಳ್ಳುವಳು.

ಅವಳ ಪ್ರೀತಿಯ ಮಡಿಲಲ್ಲಿ ಮಗುವು ನಾನು,
ನನ್ನ ನಗುವಲ್ಲೆ ಸುಖವ ಕಾಣುವಳವಳು.

ಅರೆಕ್ಷಣ ಮರೆಯಾದರೂ ಬೆದರಿದ ಹರಿಣಿಯಿವಳು,
ನಾ ಜೊತೆಯಾದರೆ ಪ್ರೇಮದೇವತೆಯಿವಳು.

ರೂಪರಾಶಿಯ ಹೊತ್ತ ಸಿಗ್ಧ ಚೆಲುವೆಯಿವಳು,
ಪ್ರೀತಿ ಸಾಗರವ ಹರಿಸೋ ಅಮೃತಧಾರೆಯಿವಳು.

ನನ್ನ ಬದುಕಿನ ಕಣ್ಣಾಗಿ ಜೊತೆಯಲೇ ಹೆಜ್ಜೆಯಿಡುವವಳು,
ನನ್ನ ಬಾಳಿನ ಭಾಗ್ಯಜ್ಯೋತಿಯಿವಳು...

ಅಭಿಮನ್ಯು



ಅಭಿಮನ್ಯು ನೀನಾಗಬೇಕು ಹುಡುಗ ಈ ಧರ್ಮ ಯುದ್ದದಲಿ,
ಧರ್ಮವೇ ನಿನ್ನ ರಥವಾಗಬೇಕು,
ಸತ್ಯವೇ ನಿನ್ನ ಸಾರಥಿಯು,
ನ್ಯಾಯನೀತಿಗಳೇ ನಿನ್ನ ರಥದ ಅಶ್ವಗಳಾಗಲಿ.

ಅನ್ಯಾಯ ಅನೀತಿಗಳ ಚಕ್ರವ್ಯೂಹವ ನೀನು ಭೇದಿಸಲೇಬೇಕು,
ಗೆದ್ದರೆ ವಿಜಯ ಸೋತರೆ ಸ್ವರ್ಗ ನಿನಗಲ್ಲವೋ ಗೆಳೆಯಾ,
ಕೃಷ್ಣನ ಚತುರತೆಯ ಬಲ ನಿನಗಿಲ್ಲ ನಿನಗೆ ನೀನೇಕೃಷ್ಣನೂ,
ಶಕುನಿಗಳ ನೂರು ತಂತ್ರವಿಹುದಿಲ್ಲಿ ಕುಗ್ಗದಿರು ನೀನೆಂದೂ,
ಕರ್ಣ ದ್ರೋಣರ ಪರಾಕ್ರಮವೂ ನಿನ್ನ ಮನೋಬಲಕ್ಕಿಂತ ಮಿಗಿಲಲ್ಲವೋ ಹುಡುಗ.


ಪ್ರೀತಿ ಪ್ರೇಮಗಳೇ ನಿನ್ನಾಸ್ತ್ರವಾಗಲಿ,
ಛಲವೇ ನಿನಗೆ ಬ್ರಹ್ಮಾಸ್ತ್ರವೂ,
ಬಿಡದೆ ಹೂಡಲೇಬೇಕು ನಿನ್ನ ತಂತ್ರಗಳ,
ನಿನ್ನ ಕೋಪತಾಪಗಳೇ ನಿನಗೆ ದಿವ್ಯಾಸ್ತ್ರವೂ.

ಮರುಗದಿರು ನೀನೆಂದೂ ಈ ಧರ್ಮಯುದ್ದದಲಿ,
ನೂರಾರು ಅಡೆತಡೆಗಳಿಹುದು ಈ ಚಕ್ರವ್ಯೂಹದಲಿ,
ಸೋಲೆಂದು ನಿನಗಿಲ್ಲ ಅದು ನಿನ್ನದೂ ಅಲ್ಲ,
ಛಲವ ಬಿಡದಿರು ನೀನು ನೋವೆಷ್ಟೇ ಬಂದರೂ.

ಮೋಸ ವಂಚನೆಯ ಕಪಟ ನಾಟಕಕೆ ಅಂತ್ಯ ಹಾಡಲೇಬೇಕು ನೀನಿಂದು,
ಸತ್ಯಾದ ವಿಜಯ ಸನಿಹವಿಹುದಿಂದು,
ಹಿಂತಿರುಗಿ ನೋಡದಿರು ಗೆಲುವೆಂದೂ ಮುಂದಿಹುದು ನೋಡು,
ಮನೋಬಲವಿಹುದುನಿನಗೆ ಅದೇ ನಿನ್ನಾಸ್ತಿಯು,
ಮೊಳಗಿಸು ವಿಜಯ ದುಂಧುಭಿ ಈ ಧರ್ಮಯುದ್ದದಲಿ....

**ಗೆಳೆಯ**



ಸ್ನೇಹಕ್ಕೆ ಹೆಸರು ನೀನು,
ಪ್ರೀತಿಗೆ ಅರ್ಥವೂ ನೀನು,
ಭಾವ ಸಿಂಧುವು ನೀನು,
ನನ್ನಂತರಾಳದ ನಲಿವು ನೀನು.

ಯಾವ ಜನ್ಮದ ಮೈತ್ರಿಯೋ,
ನಿನ್ನ ಪ್ರೀತಿ ಸ್ನೇಹದ ಬಂಧವೋ,
ಜನ್ಮ ಬಂಧುವು ನೀನು,
ಪೂರ್ವ ಜನ್ಮದ ಫಲವು ನೀನು.

ಸ್ನೇಹವಿದು ಬಂಧಿಸಿಹುದು ಕಾಲನ ಗರಡಿಯಲಿ,
ಪ್ರೀತಿಯಿದು ತೇಲಿಸಿಹುದು ಈ ದಿವ್ಯ ಮೈತ್ರಿಯಲಿ,
ದೂರದ ತೀರ ನೀನು, ದಡದಂಚಿನ ನೀರಾಗಲೇನು,
ನಿನ್ನ ಸ್ನೇಹದ ಕಡಲಿನ ಪಯಣಿಗ ನಾನಾಗಲೇನು.

ಪ್ರೀತಿಯಿಹುದು,ಸ್ನೇಹವಿಹುದು,ಜೊತೆಯಲೇ ಸಾಗುವ ಬಯಕೆಯಿಹುದು,
ಕನಸಿಗೆ ಜೀವ ತುಂಬಿದ ಚೇತನ ನೀನು,
ಸ್ನೇಹದ ಅನಂತ ಪರಿಧಿಯು ನೀನು,
ಆ ಸ್ನೇಹದ ಸಣ್ಣ ಬಿಂದುವಾಗಲೇನು.

ಸ್ವರ್ಗಲೋಕದ ಕನಸೆಲ್ಲಿಯದು ಗೆಳೆಯಾ,
ಸದಾ ನಿನ್ನ ಸ್ನೇಹದಾಮೃತವೊಂದಿರೆ ಸಾಕು,
ಈ ಜಗದಿ ನಿನ್ನ ಸ್ನೇಹಕೆ ಮಿಗಿಲಾದುದು ಯಾವುದು?
ಜನ್ಮ ಜನ್ಮಗಳಿಗೂ ನಿನ್ನ ಸ್ನೇಹದ ಸವಿಯೊಂದಿದ್ದರೆ ಸಾಕು ನನಗೆ.

ಪ್ರತಿ ಕನಸಲ್ಲೂ ನಿನ್ನ ಸ್ನೇಹವಿದೆ ಜೊತೆಗೆ,
ಪ್ರತಿ ಮಿಡಿತವೂ ತುಡಿಯುತಿದೆ ನಿನ್ನ ಹೆಸರ ನನ್ನಂತರಂಗದಲಿ,
ಜನ್ಮ ಜನ್ಮಾಂತರದ ಬಂಧುವಾಗು ನೀ,
ಈ ಸ್ನೇಹ ಸಾಗರದ ಬಿಂದುವಾಗಿರುವೆ ನಾನೆಂದೂ...