22 December, 2014

ಒಂಟಿ ಬದುಕು...



ಮನಸೇ ಇಲ್ಲಿ ಒಂಟಿಯು ನೀನು
ಕನಸು ಇಲ್ಲದೇ,
ಉಸಿರೇ ಇಲ್ಲಿ ಒಂಟಿಯು ನೀನು
ಭಾವ ಇಲ್ಲದೇ.

ನಗುವೇ ಇಲ್ಲಿ ತಬ್ಬಲಿ ನೀನು
ಖುಷಿಯೂ ಇಲ್ಲದೇ,
ಕಣ್ಣುಗಳೇ ನೀವು ತಬ್ಬಲಿ ಇಲ್ಲಿ
ನಿದಿರೆ ಇಲ್ಲದೇ.

ಕೈಗಳೆ ನೀವು ಅನಾಥರೇ
ಕೈ ಹಿಡಿಯೋ ಸ್ಪೂರ್ತಿಯಿಲ್ಲದೇ,
ಕಾಲ್ಗಳೇ ನೀವು ಅನಾಥರು
ನಡೆಯೋ ದಾರಿ ಕಾಣದೇ.

ಹೃದಯವೇ ಇಲ್ಲಿ ಒಂಟಿಯು ನೀ
ಮಿಡಿತಾ ಇಲ್ಲದೇ,
ಭಾವವೇ ಇಲ್ಲಿ ತಬ್ಬಲಿ ನೀನು
ತುಡಿತಾ ಇಲ್ಲದೇ.

ಬದುಕೇ ನೀನು ತಬ್ಬಲಿಯೂ
ಭರವಸೆ ಇಲ್ಲದೇ,
ಓ ಜೀವವೆ ನೀನು ಅನಾಥ
ಬಂಧುಬಳಗ ಇಲ್ಲದೇ.

16 November, 2014

ಕರುಣಿಸು ಓ ಗುರುವೇ...



ಹಚ್ಚುವೆನು ನಾನಿಂದು ದೀಪಗಳ ಸಾಲು
ಮನದ ಕತ್ತಲೆಯ ಕರಗಿಸು ಓ ಗುರುವೇ,
ಬದುಕೆಂಬ ಬಂಡಿಗೆ ಸಾರಥಿಯು ನೀನೇ
ನಡೆಸು ಬಾ ನೀನೆನ್ನ ಬೆಳಕ ಕಡೆಗೆ.

ಮನದಿ ತುಂಬಿಹ ಅಂಧಕಾರವ ಅಳಿಸು
ಜ್ಞಾನದ ಸುಧೆಯನ್ನು ನೀನು ಹರಿಸು,
ಬೇಡುವೆನು ನಾನಿನ್ನ ಬದುಕ ಬೆಳಗಲು
ಕರುಣಾಳು ನೀನೆನ್ನ ಕೈ ಹಿಡಿಯು ಗುರುವೇ.

ಜಗದ ಕತ್ತಲೆಯ ಕಳೆಯೋ ಜ್ಯೋತಿಯು ನೀನು
ನಿನಗಾಗಿ ಹಚ್ಚಿಹೆನು ಹಣತೆಯೊಂದ ನಾನು,
ಜ್ಯೋತಿಯಾಗೆನ್ನ ಮನವನ್ನು ಬೆಳಗು
ದಾರಿಯೊಂದನು ತೋರಿ ಉಪಕರಿಸು ಗುರುವೇ.

ಭರವಸೆಯ ಕಿರಣವೊಂದ ನೀ ತೋರು ನನಗೆ
ನುಗ್ಗಿ ನಡೆವೆ ನಾನು ನೀ ತೋರಿದಂತೆ,
ಎದ್ದು ನಿಲ್ಲುವ ಛಲವ ಅನುಗ್ರಹಿಸು ನೀನು
ಮನದ ಭಯವನ್ನು ಪರಿಹರಿಸು ಗುರುವೇ.

ಜಗದ ಗುರುವೇ ಪಾಲಿಸು ನೀನೆನ್ನ
ಕರ್ಮಫಲಗಳ ಅನುಭವಿಸೋ ಶಕ್ತಿಯನು ನೀಡು,
ಕರಗಿಹೆನು ದಿನವೂ ಅಂಧಕಾರದಲಿ
ಶ್ರೀಗುರುವೇ ಕರುಣಿಸು ಬದುಕಿಗೆ ಬೆಳಕನ್ನು.

13 October, 2014

ನಗಬೇಕು...



ಇರುಳೊಳಗೆ ನೋವ ನುಂಗಬೇಕು
ಹಗಲಲ್ಲಿ ಖುಷಿಯ ಮೆರೆಸಬೇಕು
ನೋಡುಗರಿಗೆಂದೂ ನಾ ಹಸನ್ಮುಖಿಯಾಗಿರಬೇಕು.

ಅಳಬೇಕು ನಾನು ಮಳೆಯೊಳಗೆ
ನಗಬೇಕು ಬಿಸಿಲ ಬೇಗೆಯೊಳಗೂ
ಅತ್ತು ನಕ್ಕು ಮನವ ಹಗುರಾಗಿಸಬೇಕು.

ಯೋಚನೆಗಳ ಭಾರ ಮರೆಸಬೇಕು
ಮಾತಿನಲೇ ನಾನು ಮೂರು ಹೊತ್ತು
ಒಂಟಿಯೆನ್ನುವ ಭಾವ ಬಂಧಿಸಲಾರದಂತೆ.

ಕಾಡುವ ನೆನಪುಗಳ ಬಚ್ಚಿಡಬೇಕು
ಕನಸುಗಳು ಕೂಡಾ ಹುಡುಕದಂತೆ
ನಿದಿರೆಯಲಿ ನಾನು ಸುಖಿಯಾಗಿರಬೇಕು.

ನನ್ನದೆಲ್ಲಾ ಭಾವಗಳ ಹಂಚಬೇಕು
ನಾಳೆಗಳು ಎಂದೂ ಬರಿದಾಗದಂತೆ
ಒಂದಷ್ಟು ಹೃದಯಗಳು ನನ್ನ ನೆನೆಯುವಂತೆ.

ನಗಬೇಕು ನಾನು ನಗಿಸಬೇಕು
ಹಿಡಿ ಪ್ರೀತಿಯನ್ನು ಪಡೆಯಬೇಕು
ನಾಳೆಗಳು ಕೂಡಾ ಸುಂದರವಾಗಿರುವಂತೆ.

12 September, 2014

ಬಾರೇ ಸಖೀ...



ಆಷಾಢ ಮುಗಿದೋಯ್ತು
ಶ್ರಾವಣವು ಕಳೆದೋಯ್ತು
ಬರಲಿಲ್ಲಾ ಯಾಕೆ ನನ್ನ ಗೆಳತಿ.

ಊರ ಕೇರಿಯಲಿರುವ
ಗೆಳತಿಯರ ಜೊತೆಗೂಡಿ
ಮುಗಿದಿಲ್ಲವೇನೇ ನಿನ್ನ ಹರಟೆ.

ಕನವರಿಸೋ ಕನಸುಗಳಿಲ್ಲಾ
ನೀ ಜೊತೆಯಿರದ ದಿನಗಳಲಿ
ಎಲ್ಲಿ ಕಳೆದು ಹೋದೆ ಹೇಳೇ ಸಖಿ.

ಕನ್ನಡಿಯ ಮುಂದೆ ನಿಂತಾಗಲೆಲ್ಲಾ
ನಿನ್ನಾ ಕಿಲಕಿಲ ನಗುವಾ
ನೆನಪಿಸುತಿದೆ ಕನ್ನಡಿಯು ನೋಡೆ ಗೆಳತಿ.

ತುಸು ನಾಚಿ ಕೆಂಪಾಗೋ
ನಿನ್ನಾ ಕೆನ್ನೆಯಲಿ ಮೂಡೋ ಗುಳಿಯೊಂದ
ನಾ ನೋಡಬೇಕು ಬಾ ಗೆಳತಿ.

ಎದೆಗೊರಗಿ ಕಚಗುಳಿಯಿಡುವ
ನಿನ್ನಾ ಬೆರಳುಗಳ ಆಟ
ನಾ ಸವಿಯಬೇಕು ಬಾ ಗೆಳತಿ.

ವಿರಹಗಳ ಮರೆಸಿ
ಸಿಹಿ ನೆನಪುಗಳ ನೀಡುವ
ನಿನ್ನಾ ಸವಿ ಮಾತುಗಳು ಬೇಕು ಬಾ ಗೆಳತಿ.

05 September, 2014

**ಗುರುಭ್ಯೋನಮಃ**



ಜ್ಞಾನದ ಜ್ಯೋತಿಯ ಆಗರವೇ
ವಿನಯಕೆ ನೀನೇ ಸಾಗರವೂ,
ತ್ರಿಮೂರ್ತಿ ರೂಪೇ ಗುರುದೇವಾ
ನಿನ್ನಯ ಚರಣಕಮಲಗಳಿಗಿದೋ ನಮನ.

ಬುದ್ಧಿಯ ತಿದ್ದಿದ ಕಲೆಗಾರ
ವಿಧೇಯತೆ ಬೆಳೆಸಿದ ಗೆಣೆಕಾರ,
ಗುರಿಯನು ತೋರಿದ ನಾಯಕನೇ
ನಮೋ ನಮೋ ಓ ಗುರುದೇವಾ.

ಕಿಚ್ಚಿನ ಕಿಡಿಯನು ಹೊತ್ತಿಸಿದೆ
ಅರಿವಿನ ದೀಪವ ಬೆಳಗಿಸಿದೆ,
ಮಮತೆಯಿಂದಲೇ ನೀ ಹರಸಿದೆ
ನಮಿಸುವೆ ನಿನಗೆ ಓ ಆಚಾರ್ಯ.

ಮಣ್ಣಿನ ಮುದ್ದೆಯ ಮೂರ್ತಿಯಾಗಿಸಿದೆ
ಚೈತನ್ಯವ ತುಂಬಿದೆ ಜೀವನಕೆ,
ನಿಜ ಭಕ್ತಿಯ ಭಾವವ ಮೂಡಿಸಿದಾ
ಶ್ರೀಗುರುವೇ ನಿನಗೆ ವಂದಿಪೆನು.

ಜೀವನ ಪಾಠವ ಭೋಧಿಸಿದೆ
ಪ್ರೀತಿಯಲೇ ಜಗವ ತೋರಿಸಿದೆ,
ಮನುಕುಲ ಬೆಳಗುವ ಸದ್ಗುಣಧಾಮ
ನಮಿಪೆನು ನಿನಗೆ ಓ ಗುರುದೇವಾ.

ಓ ಸರ್ವಶಕ್ತ...



ದೇವಾ ನನ್ನೆದೆಯಾ ಭಕುತಿಯದು ಭಯವಂತೂ ಅಲ್ಲ
ನಿನ್ನೆಡೆಗೆ ನನಗಿರುವ ಒಲುಮೆಯಷ್ಟೇ
ಶಾಪ ಕೋಪಗಳ ಪರಿತಾಪವೆನಗಿಲ್ಲಾ .

ಪೂಜಿಪೆನು ನಾನು ಇಲ್ಲಿ
ನಿನ್ನ ಮೇಲಿನ ಪ್ರೀತಿಯಿಂದಷ್ಟೇ
ಋಣ ಸಂದಾಯದ ಭಾವವಂತು ಅಲ್ಲವೇ ಅಲ್ಲಾ.

ಕಂಡಿಲ್ಲ ನಾನು ನಿನ್ನನ್ನು ಎಂದೂ
ಪೂಜಿಪೆನು ನಾನು ಕರವ ಮುಗಿದು
ದರುಶನವ ನೀ ನೀಡುವೆಯೆಂಬ ಭ್ರಮೆಯಂತೂ ಇಲ್ಲ.

ಬ್ರಹ್ಮಾಂಡದ ಚಿಕ್ಕ ಕಣವಷ್ಟೇ ನಾನು
ಇದು ನಾನು ತಿಳಿದ ಜೀವನ ಸತ್ಯ
ಅದಕ್ಕೆಂದೇ ಪೂಜಿಪೆನು ದೇವ ನಿನ್ನಾ.

ನನ್ನೊಳಗೂ ಇರುವೆ ನೀನು
ಮಣ್ಣೊಳಗೂ ಇರುವೆ ಎಂಬುದದು ಸತ್ಯ
ಸದ್ಗುಣಗಳ ಕಾಯೋ ಎಂಬುದಷ್ಟೇ ಹರಕೆ.

ಹೆಸರೇಕೆ ನಿನಗೆ ಆದಿ ಅಂತ್ಯವಿಲ್ಲದವಗೆ
ನೀನಂತೂ ಸರ್ವವ್ಯಾಪಿ ಸರ್ವಶಕ್ತ
ನಾನೆಂದೂ ಇಲ್ಲಿ ಅಲ್ಪರಲಿ ಅಲ್ಪ.

ಪ್ರೀತಿಯಿಂದಲಿ ಜಗವು ಭಯವೇಕೆ ನನಗೆ
ನಿನ್ನೊಲುಮೆಯಿಂದಲಿ ನಗುವಿಹುದು ಜೊತೆಗೆ
ಧರ್ಮಮಾರ್ಗದಲಿ ನಡೆಸುವಾ ಬೆಳಕು ನೀನು.

ನಂಬಿಕೆಯು ನೀನು,ಜ್ಞಾನದೀವಿಗೆಯೂ ನೀನೇ
ಹುಟ್ಟು ಸಾವುಗಳ ಗುಟ್ಟ ತಿಳಿಯದಾ ಮೂಢ ನಾನು
ಅದಕ್ಕೆಂದೇ ನಿನ್ನ ನಂಬಿಹೆನು ಓ ಸರ್ವಾಂತರ್ಯಾಮಿ.

25 August, 2014

ಕರುಳಿನ ಕೂಗು...



ಅರಳುವ ಹೂಗಳು ನಾವು
ಕೀಳದಿರಿ ನೀವು ಮೊಗ್ಗುಗಳ,
ಸೃಷ್ಟಿಗೆ ಅರ್ಥವೇ ನಾವು
ಕೆಡಿಸದಿರಿ ನಮ್ಮಯ ನಾಳೆಗಳ.

ಪ್ರೀತಿಗೆ ಕಂಗಳು ನಾವೇ
ಮುಚ್ಚದಿರಿ ಈ ದೃಷ್ಟಿಯನು,
ಮಮತೆಯ ಮಡಿಲು ನಮ್ಮದು
ಬರಿದಾಗಿಸದಿರಿ ನೀವು ಸ್ವಾರ್ಥದಲಿ.

ಜೀವನ ಪಯಣಕೆ ಹೆಗಲಾಗುವೆವು
ಬರಿದಾಗಿಸದಿರಿ ನಮ್ಮಯ ಬದುಕನ್ನು,
ನಮಗೂ ನೂರು ಕನಸುಗಳಿವೆ
ಕಿತ್ತುಕೊಳ್ಳದಿರಿ ನೀವೆಮ್ಮಯ ಉಸಿರನ್ನು.

ಮಾಡದಿರಿ ನಮ್ಮಲಿ ಭೇದವನು
ನಮಗೂ ಬದುಕುವ ಹಕ್ಕು ಇದೆ,
ಸೌಂದರ್ಯವು ನಮಗೆ ವರದಂತೆ
ಮುಗಿಸದಿರಿ ನೀವದನು ಶಾಪದಲಿ.

ಪೂಜೆಯ ಮಾಡಿಹ ಕೈಗಳಲಿ
ಕೊರಳಿಗೆ ಪಾಶವ ಬಿಗಿಯದಿರಿ,
ಜರಿಯದಿರಿ ನೀವು ಹೆಣ್ಣೆಂದು
ಮರೆಯದಿರಿ ಬಾಳಿನ ಕಣ್ಣನ್ನೂ.

ಪೂಜೆಯು ನಮಗೆ ಬೇಕಿಲ್ಲಾ
ಪ್ರೀತಿಯು ಮಾತ್ರವೇ ಸಾಕೆಮಗೆ,
ಪ್ರತಿ ಹೆಣ್ಣಿನ ಮನಸಿನ ಕೂಗು ಇದು
ಅರಿತುಕೊಳ್ಳುವಿರೆಂಬ ಆಶೆಯಿದೆ.

16 August, 2014

ಹಬ್ಬ

ರಾಷ್ಟ್ರ ಹಬ್ಬದ ಶುಭಾಶಯಗಳು....

***************


ಬಾರೊ ಅಣ್ಣ ಬಾರೊ ತಮ್ಮ
ತಾಯಿ ಪೂಜೆಗೆ,
ಚೆಲುವೆ ಭಾರತಾಂಬೆಯ
ಪಾದ ಪೂಜೆಗೆ.

ಬಾರೆ ಅಕ್ಕ ಬಾರೆ ತಂಗಿ
ಹುಟ್ಟು ಹಬ್ಬಕೆ,
ಒಲವ ಭರತ ಮಾತೆಯ
ಸಿಂಧೂರ ಹಬ್ಬಕೆ.

ಮಕ್ಕಳೆಲ್ಲ ಹರುಷದಿ
ಕೂಡಿ ನಲಿವ ಹಬ್ಬಕೆ,
ಹಿರಿಯರೆಲ್ಲ ಹೆಮ್ಮೆಯಿಂದ
ಎದೆಯುಬ್ಬಿಸಿ ನಡೆವ ಜಾತ್ರೆಗೆ.

ಜಾತಿ ಧರ್ಮವಿಲ್ಲದ
ಏಕತೆಯ ಹಬ್ಬಕೆ,
ಬಡವ ಶ್ರೀಮಂತರೆಂಬ
ಭೇದವಿಲ್ಲದ ರಾಷ್ಟ್ರಹಬ್ಬಕೆ.

ವೀರ ಧೀರರನ್ನೇ ಹಡೆದಿಹ
ಮಾತೆಯ ಹುಟ್ಟುಹಬ್ಬಕೆ,
ವೀರತನದಿ ದಾಸ್ಯ ಕಳಚಿದ
ಸ್ವಾತಂತ್ರ್ಯದ ಹಬ್ಬಕೆ.

ವೀರರೆಲ್ಲ ಅಮರರಾದ
ಪುಣ್ಯದಿನಕೆ,
ಜೊತೆಯಾಗಿ ನಮಿಸುವ
ಬನ್ನಿ ತಾಯಿ ಪಾದಕೆ.

ಜೊತೆಗೆ ಇಹುದು ತ್ರಿವರ್ಣಧ್ವಜದಿ
ತಾಯ ರೂಪವೂ,
ಏರಿಸೋಣ ನಭದ ಎತ್ತರಕೆ
ಅವಳ ಕೀರ್ತಿಯಾ.

ಏನೇ ಬರಲಿ ಯಾರೇ ಬರಲಿ
ಜೊತೆಯಾಗಿ ನಿಲ್ಲುವಾ,
ತಾಯಿ ಭರತ ಮಾತೆಯಾ
ಸೇವೆಗೈಯ್ಯುತಾ.

11 August, 2014

ಮರೀಚಿಕೆ...



ಮೌಢ್ಯವೆಂಬುದು ನನಗೆ
ಜನ್ಮದ ಜೊತೆ ದೊರೆತ ಶಾಪ
ಮೀರಬಲ್ಲೆನೇ ನಾನು ಅದರ ಪಾಶವ.

ಜ್ಞಾನವೆಂಬ ಅಮೃತವು
ಜೀವನದ ಜೊತೆ ದೊರೆತ ವರ
ಹಂಚಬಲ್ಲೆನೇ ನಾ ಅದರ ಸವಿಯಾ.

ನನ್ನೊಳಗೇ ಇಹುದು
ಆರು ಘಟಸರ್ಪಗಳು
ಕಕ್ಕದಿರಬಲ್ಲೆನೇ ನಾನು ಆ ವಿಷವ.

ಸೃಷ್ಠಿಯ ಸೊಬಗದು ರಮಣೀಯ
ಕಣ್ತುಂಬಿಕೊಂಡೆನು ವೈಚಿತ್ರ್ಯಗಳ
ಅರಿಯಬಲ್ಲೆನೇ ಅದರ ಮೂಲವಾ.

ಬುದ್ಧಿಜೀವಿಯ ಪಟ್ಟ ನನಗೆ
ನನ್ನದೇ ಪ್ರಶಂಸಾಪತ್ರ
ಒಳಗಿಹ ಲದ್ದಿ ಕಂಡರೂ ಕಾಣದಂತೆ.

ಧರ್ಮವೆನಗೆ ಆಡಿಕೊಳ್ಳುವ ವಿಷಯ
ಅರ್ಥವೇ ತಿಳಿಯದೆ ಭಾಷ್ಯ ಬರೆದ ಮೂಢ
ಧರ್ಮವಾವುದೆಂದು ಹುಡುಕುತಿಹೆನು.

ದೇವರೆನಗೆ ನಿತ್ಯದ ಭೋಜನವಲ್ಲ
ಉಸಿರಿನ ಜೊತೆ ಬೆರೆತ ಗಾಳಿ
ಕಣ್ತುಂಬಿಕೊಳ್ಳಬಲ್ಲೆನೇ ನಾ ಅವನಿರುವಿಕೆಯಾ.

ಬೆಳದಿಂಗಳೂರಿಗೆ...



ಅಂಬರದ ಮನೆಗೆ
ಚಂದಿರನು ಕರೆದಿಹನು
ಬೆಳದಿಂಗಳೂಟಕೆ
ಹೋಗೋಣ ಬಾ ಗೆಳತಿ.

ಚಂದಿರನ ಅಂಗಳದಿ
ಚುಕ್ಕಿ ತಾರೆಗಳ ಹೊಳಪಿನಲಿ
ಕೂಡಿ ನಲಿಯೋಣ
ಬಾರೆ ಬಾ ಗೆಳತಿ.

ಜೊತೆಯಾಗಿ ಸೇರಿ
ಕುಣಿಯುತ್ತಾ ನಲಿಯುತ್ತಾ
ಚಂದಮಾಮನ ಜೊತೆಯಾಗಿ
ಬೆಳದಿಂಗಳೂಟವ ಸವಿಯೋಣ.

ಮೋಡಗಳ ಮರೆಯಲ್ಲಿ
ಕಣ್ಣಮುಚ್ಚಾಲೆ ಆಡುತ್ತಾ
ನಕ್ಕು ನಲಿಯುತ್ತಾ
ಬೆಳದಿಂಗಳಿಗೆ ಬಣ್ಣವ ಹಚ್ಚೋಣ.

ಚಂದಮಾಮನ ಕಥೆಗಳಿಗೆ
ಪಾತ್ರಗಳು ನಾವಾಗುತ್ತಾ
ಮುಗಿಲ ಊರಿಗೆ
ಪ್ರೀತಿಯ ಹಂಚೋಣ.

ತಾರೆಗಳ ತೊಟ್ಟಿಲಲಿ
ಅಂಬರದ ಕತ್ತಲಲಿ
ಪ್ರೀತಿ ಗೀತೆಯೊಂದ
ಹಾಡೋಣ ಬಾ ಗೆಳತಿ.

ಚಂದಮಾಮನ ಕೇಳಿ
ಮೇಘಗಳ ನಾಡಿಂದ
ಬೆಳದಿಂಗಳ ತಂದು
ಭುವಿಯೊಳಗೆ ನಾವು ಹಂಚೋಣ.

31 July, 2014

ಹುಟ್ಟು...ಸಾವು...



ಅಲ್ಲೊಂದು ಹುಟ್ಟು... ಇಲ್ಲೊಂದು ಸಾವು...
ಹುಟ್ಟೊಂದು ತೀರ ಸಾವೊಂದು ತೀರ
ನಡುವಲ್ಲಿ ಮೂರು ದಿನದ ಪಯಣ.

ಇಲ್ಲೊಂದು ಕನಸು ಅಲ್ಲೊಂದು ನನಸು
ದೇಹದಿ ಉಸಿರಿರುವ ತನಕ
ಉಸಿರು ನಿಂತ ಮೇಲೆ ಅದು ಬರೀಯ ದೇಹವಷ್ಟೆ ಮನಸೇ.

ಕನಸಿನ ಜೊತೆಗೆ ದೇಹದ ಪಯಣ
ಬರೀಯ ಎರಡು ದಿನವಷ್ಟೇ
ಉಸಿರು ನಿಂತ ಮೇಲೆ ಇಲ್ಲಿ ಬರೀಯ ಹೆಸರು ಮಾತ್ರ.

ಸಾವೊಂದು ಸತ್ಯ ಕೊನೆಯಂತೂ ಅಲ್ಲಾ
ಹಳೆ ಕನಸಿಗೆ ವಿದಾಯ ಹೇಳೋ ರೀತಿಯಿದುವಷ್ಟೇ
ಹೊಸ ಕನಸಿಗೆ ನಾಂದಿ ಒಳಗಿದ್ದ ಆತ್ಮಕ್ಕದುವೇ.

ಹುಟ್ಟಿಂದ ಶುರುವಾಯ್ತು ಈ ದೇಹದ ನಂಟು
ಇದು ಆತ್ಮ ದೇಹಗಳ ನಡುವಿನ ಒಪ್ಪಂದವಷ್ಟೇ
ಮರಳಿ ಮಣ್ಣಿಗೆ ನೀಡಲೇಬೇಕಿದೆ ಈ ಕಾಯವನ್ನು.

ಸಾವೊಂದು ಕೊನೆಯಲ್ಲ ಚಿಂತೆಯೇಕೆ ಮನವೇ
ಯಾವ ಜಾತಿಯು ಇಲ್ಲ ಯಾವ ಬಣ್ಣವೂ ಇಲ್ಲ ಆತ್ಮವದಕೇ
ಬಂಧನವ ಕಳಕೊಳ್ಳುವುದು ಅದು ತಾನು ತನ್ನಿಷ್ಟದಂತೇ.

ಆತ್ಮಕ್ಕಿದೆಯೆಂದೂ ಸಂಸ್ಕಾರ ಜನುಮಜನುಮದಿಂದ
ನೀಡಬೇಕಿದೆ ನೀನು ದೇಹಕ್ಕೊಂದು ಸಂಸ್ಕಾರವಿಲ್ಲಿಯಷ್ಟೇ
ಗಳಿಸಬೇಕಿದೆಯಿಲ್ಲಿ ಮೂರು ದಿನಗಳಲಿ ಬರೀಯ ಪ್ರೀತಿಯನ್ನಷ್ಟೇ.

ಆತ್ಮಕ್ಕಿಲ್ಲ ನಂಟು,ವೈಷಮ್ಯದಾ ಪರಿಯೂ
ದೇಹದ ಉಸಿರು ನಿಲ್ಲವವರೆಗೆ ಇವೆಲ್ಲವಷ್ಟೇ
ನಾನು-ನೀನು ಇದು ಬರೀಯ ಮೂರು ದಿನ,ಇದು ಇಲ್ಲಿ ಮಾತ್ರ ಅಷ್ಟೇ.

17 July, 2014

ನಾನೂ... ನನ್ನ ಕನಸು...



ಖುಷಿಯ ಹುಡುಕಿದೆ ನಾ ನನ್ನ ಕನಸುಗಳಲ್ಲಿ
ಸುಖದ ತೃಪ್ತಿಯು ಇತ್ತು ಕನಸಿನಾ ನೆರಳೊಳಗೆ,
ಕನಸುಗಳ ನಾ ಕಂಡೆ ನನಸಾಗಿಸಲೆಂದಲ್ಲಾ
ಮೂರು ದಿನದ ಪಯಣಕೆ ಜೊತೆಯಾಗಿರಬೇಕೆಂದು.

ಕಂಡ ಕನಸುಗಳೆಲ್ಲ ನನಸಾಗುವುದು ಇಲ್ಲ
ಹಠವಂತೂ ಇಲ್ಲವೇ ಇಲ್ಲ ಕನಸ ನಿಜವಾಗಿಸಲು,
ಆಸೆಯೊಂದಿತ್ತು ಏಕಾಂಗಿಯಾಗಿ ಬದುಕ ನೋಡಲು
ಕನಸುಗಳವು ಕಟ್ಟಿಕೊಟ್ಟವು ನಾ ನಡೆಯೋ ದಾರಿಯ.

ನಾಳೆಗಳ ಮರೆತು ಕನಸ ಬೆಳೆಸಿದೆ
ಕೈಹಿಡಿಯಿತು ಮನಸದುವೇ ಸ್ಪೂರ್ತಿಯಾಗಿ,
ನಗುವುದ ಕಲಿತೆ ನಾ ನನ್ನ ಕನಸಿನೊಳಗೆ
ನೂರು ಜಂಜಡಗಳ ನೋವ ಮರೆತು.

ಬೆಳೆದು ನಿಂತೆ ನಾ ಕಲ್ಪನೆಗಳ ಮೀರಿ
ತಟ್ಟಲೇ ಇಲ್ಲ ಯಾವ ಭಾವದ ಹಂಗು,
ಸ್ನೇಹವಾಯಿತು,ಪ್ರೀತಿಯಾಯಿತು ನನ್ನ ಕನಸು
ಮನಸು ತಾನು ನಲಿಯಿತು ಹರುಷ ಉಕ್ಕಿ.

ಕನಸುಗಳದುವೇ ನನ್ನ ಜೀವನಾಡಿ
ಕೆಡವಲಾರೆ ಅದ ನಾನು ಕಲ್ಪನೆಗಳ ರಾಶಿಯೊಳಗೆ,
ಜೀವನ ಪ್ರೀತಿಯಿತ್ತ ಕನಸು ನನ್ನದು
ಜೀವನವಿರುವರೆಗೆ ಉಳಿಯುವೆ ನಾ ಕನಸುಗಾರನಾಗಿ.

ಒಲವೇ ನಿನಗಾಗಿ...



ಕನಸೊಂದು ಶುರುವಾಗಿದೆ ನೀನಿಲ್ಲದೇ,
ಜೊತೆಯಾಗಿ ನೀ ಬೇಕೀಗ ಅದ ನನಸಾಗಿಸೆ.
ನಗುವೊಂದು ತಾನಾಗೇ ಹೊರಹೊಮ್ಮಿದೆ,
ಒಲವೇ ಕಾರಣ ನೀನಾಗಬೇಕೆಂದು ಮನ ಬಯಸಿದೆ.

ಭಾವವು ಚಿಗುರೊಡೆದಿದೆ ಹರುಷದಲೇ,
ನಿನ್ನೊಲುಮೆಯುಬೇಕಿದೆ ನಲಿವಾಗಿಸೇ.
ಪ್ರೀತಿಯ ಸುಮವೊಂದು ತಾನರಳಿದೆ,
ನಿನ್ನ ಆರೈಕೆಬೇಕೆಂದು ತಾ ಬೇಡಿದೆ.

ರಾಗವು ತಾನಾಗೆ ಅನುರಣಿಸಿದೆ,
ಪಲ್ಲವಿ ನೀನಾಗಬೇಕೆಂಬ ಹಂಬಲದೇ.
ನೆನಪುಗಳ ಮೆರವಣಿಗೆ ತಾ ಹೊರಟಿದೆ,
ಸಾರಥಿ ನೀನಾಗಬೇಕೆಂದು ಮನ ಹೇಳಿದೆ.

ದುಂಬಿಯು ಮನಸೀಗ ಖುಷಿಯಿಂದಲೇ,
ನಿನ್ನ ಪ್ರೀತಿಯ ಮಕರಂಧ ಬೇಕಾಗಿದೆ.
ಜೊತೆ ನೀಡು ಬಾ ಗೆಳತಿ ಒಲವಿಂದಲೇ,
ಕೈಹಿಡಿದು ನಾ ನಡೆಸುವೆ ಉಸಿರ ಕೊನೆವರೆಗೇ.

ಪುರ್ನಜನ್ಮ...



ಹುಟ್ಟು ಸಾವುಗಳ ಈ ಜಂಜಡದೊಳಗೆ
ತಿಳಿದಿಲ್ಲ ನಾನು ನಾಳೆಯನ್ನೇ,
ಹೇಗೆ ತಿಳಿಯಲಿ ಇನ್ನು
ಮುಂದೊಂದು ಜನ್ಮದಾ ರಹಸ್ಯವನ್ನು.

ನಂಬಿಕೆಯೇ ಜೀವನವೆಂದರು ಹಿರಿಯರು
ತಿಳಿದದನು ಬದುಕುತ್ತಿರುವೆ ಸಾಮಾನ್ಯನಂತೆ,
ಮುಂದೊಂದು ಜನ್ಮದಾ ಕಲ್ಪನೆಯಿದೆ ನನ್ನೊಳಗೂ
ನಂಬಿಕೆಯೇ ಹುಟ್ಟಿಸಿಹುದು ಅಂಥಹ ಆಸೆಯೊಂದ.

ಹಿಂದೊಂದು ಜನ್ಮವದು ಇತ್ತೋ ಗೊತ್ತಿಲ್ಲ
ಕೆದಕಲಾರೆ ನಾ ನನ್ನ ಪೂರ್ವವನ್ನು,
ಇಂದಿರುವುದು ಸತ್ಯವದು ತಿಳಿದಿಹುದು ನನಗೆ
ಮುಂದೊಂದು ಜನ್ಮವಿರಬಹುದೆಂಬ ಕಲ್ಪನೆಯೂ.

ಏಳು ಜನ್ಮಗಳ ಕನಸಿಲ್ಲ ನನಗೆ
ಮನುಜ ಜನ್ಮವ ಪಡೆದುದಕೆ ಹೆಮ್ಮೆಯಿದೆ ಜೊತೆಗೆ,
ಮತ್ತೊಂದು ಜನ್ಮವಿರುವುದಾದರೆ ಮತ್ತೆ ಹುಟ್ಟುವ ಹಂಬಲ
ಪಡೆಯಬೇಕು ನಾ ಮತ್ತೊಂದು ಜನ್ಮವ ಈ ಭುವಿಯೊಳಗೆ.

ಕರ್ಮಫಲಗಳ ಜೊತೆಗೆ ನಿರ್ಧಾರವಾಗುವುದಾದರೆ
ಆಗಲಿ ಇನ್ನೊಂದು ಜನ್ಮ ಪ್ರಾಣಿಯಾಗೇ,
ಮನುಜ ಜನ್ಮದಲಿಗೈದ ತಪ್ಪಿಗೆ ಪ್ರಾಯಶ್ಚಿತದಂತೇ
ಮತ್ತೆ ಹುಟ್ಟುವೆ ನಾನು ಈ ಬ್ರಹ್ಮಾಂಡದೊಳಗೆ.

ನನ್ನೊಳಗೂ ಒಂದು ಆಸೆಯಿದೆ ಮನುಜ ಜನ್ಮವದು ಸಾಕು
ಬೇಕೆನಗೆ ಶ್ರೇಷ್ಠ ಪ್ರಾಣಿಜನ್ಮವೊಂದು,
ಹೌದು ಹುಟ್ಟಬೇಕು ನಾ ಗೋಮಾತೆ ಗರ್ಭದಲೇ
ಜಗಕೆ ಎದೆಹಾಲ ಕುಡಿಸಿ ಮಾತೃತ್ವ ಮೆರೆಯಬೇಕು.

30 June, 2014

ಹವಿಸ್ಸು...



ಎಲುಬಿನ ಗೂಡಿಗೆ ಚರ್ಮದ ಹೊದಿಕೆಯ ಮಾಡಿಹ
ಪಂಚಭೂತಗಳಿಗೆ ಹವಿಸ್ಸನ್ನರ್ಪಿಸಬೇಕು,
ಅರಿಷಡ್ವರ್ಗಗಳ ದಮನಿಸೆ ನಾನು
ದೇಹವ ಯಜ್ಞಕುಂಡವಾಗಿಸಬೇಕು.

ಮನಸಿನ ಹಿಡಿತವ ತಪ್ಪಿಸುವ ಕಾಮವ
ಅಗ್ನಿಗೆ ಅರ್ಪಿಸಬೇಕು,
ಕಾಮದಹನ ಮಾಡುತ ಜೊತೆಯಲಿ
ಮನುಜತೆಯ ಪ್ರೀತಿಯ ಬೆಳಗಬೇಕು.

ಮನಸನು ಸುಡುವ ಕ್ರೋಧದ ಬೆಂಕಿಗೆ
ನೀರನು ಸುರಿಯಬೇಕು,
ಹೊತ್ತಿ ಉರಿಯುವ ಮನಸನು ಇಂದು
ಶಾಂತಗೊಳಿಸಬೇಕು.

ಮನಸಲಿ ಮಂಡಿಗೆ ತಿನ್ನುವ ಮದವನು
ಮಣ್ಣಲಿ ಹೂತು ಬಿಡಬೇಕು,
ಮತ್ತೆ ಚಿಗುರಿ ಬರದಿರುವಂತೆ
ಅಷ್ಟಬಂಧವ ಬಿಗಿಯಬೇಕು.

ಪರರ ನೋಡಿ ಕರುಬುವ ಮಾತ್ಸರ್ಯವ
ಗಾಳಿಯಲಿ ತೇಲಿ ಬಿಡಬೇಕು,
ಉಸಿರಿಗೂ ಸಿಗದ ಎತ್ತರಕೆ
ಅದರ ಕಳುಹಿಸಿಕೊಡಬೇಕು.

ಮನಸಲಿ ಕಳವಳಗೈಯ್ಯುತಲಿರುವ
ಲೋಭ ಮೋಹಗಳ ಆಕಾಶಕೆ ತೇಲಿಬಿಡಬೇಕು,
ದುರಾಸೆಯ ದೂರ ಸರಿಸುತಾ
ಮೋಹದ ಛಾಯೆಯಿಂದ ಪಾರಾಗಬೇಕು.

ನಿವೇದನೆ...



ನೀನೊಂದು ಯುಗಳದ ಗೀತೆ
ಪದವಾಗಬಹುದೇ ನಾ ನಿನ್ನೊಳು.

ಅರಿಯಲಾರೆ ನಾ ನಿನ್ನಂತರಂಗವ
ತುಂಬಬಹುದೇ ನಾನದನು ಭಾವದಿಂದಲಿ.

ಪ್ರೇಮಿಯಾಗಬಲ್ಲೆನು ನಾ ನಿನ್ನೊಲವಿಗೆ
ಜೀವ ತುಂಬಬೇಕಿದೆ ಪ್ರೀತಿಯೆದೆಯೊಳಗೆ.

ನೀನೊಂದು ಕಾವ್ಯಕನ್ನಿಕೆ
ಇಂದ್ರ ಚಂದ್ರನಾಗಬಲ್ಲೆನೇ ನಾ ನಿನ್ನೊಳಗೆ.

ಹೊತ್ತು ತರಬಲ್ಲೆ ನಾ ಮೇಘ ಸಂದೇಶ
ಬರಬಹುದೇ ಬಾಳಿನೊಳು ಪ್ರೀತಿ ಮುಂಗಾರು.

ಮೌನ ಮೆರೆದ ಗೆಳತಿಯೇ
ಕಲಿಸಬಹುದೇ ನಾನೀಗ ಪ್ರೀತಿಯ ಭಾಷೆಯ.

ನನ್ನೊಳು ಉಸಿರಾಗಿ ಬೆರೆತ ಮನಸೇ
ಬಂದು ಸೇರಬಹುದೇ ನಿನ್ನೊಲವಪ್ಪುಗೆಯಲಿ.

ಹೃದಯ ಮಂದಿರದಿ ವಿರಾಜಿಪ ಪ್ರೇಮ ದೇವತೆಯೇ
ಸಿಗಬಹುದೇ ನನಗಪ್ಪಣೆ ನಿನ್ನೊಲವ ಪೂಜೆಗೆ.

13 June, 2014

ಪುಣ್ಯಭೂಮಿಗೆ...



ಬೆಳಗೆದ್ದು ಮೊದಲ ನಮನ
ಈ ಪುಣ್ಯಭೂಮಿಗೆ,
ಮನುಜ ಜನ್ಮವನಿತ್ತ
ಈ ಕರ್ಮಭೂಮಿಗೆ.
ಪ್ರಕೃತಿಯಲಿ ದೇವರ ತೋರಿದ
ಪವಿತ್ರ ಭೂಮಿಗೆ,
ಕರವ ಜೋಡಿಸುವೆ ನಾನು
ಈ ದೇವ ಭೂಮಿಗೆ.
ಸಂಸ್ಕೃತಿಯ ತೊಟ್ಟಿಲು
ನನ್ನ ಮಣ್ಣಿದು,
ಜಗಕೆ ಬೆಳಕ ತೋರಿದ
ಪುಣ್ಯ ಭೂಮಿಯೂ.
ಋಷಿ ಪುಂಗವರ ತಪೋಭೂಮಿ
ನನ್ನ ನಾಡಿದು,
ಶಿರವ ಭಾಗಿ ನಮಿಸುವೆನು
ಈ ಭುವಿಯ ಸ್ವರ್ಗಕೆ.
ವೇದಗಳ ತವರು ಇದು
ಜ್ಞಾನ ಭೂಮಿಯೂ,
ಯೋಗ,ಆಯುರ್ವೇದಕೆ
ತವರು ನಾಡಿದು.
ಕೋಟಿ ದೇವರುಗಳ ಪೂಜಿಪ
ದೇವಮಂದಿರವೂ,
ಹೆಜ್ಜೆ ಹೆಜ್ಜೆಗೂ ನಮಿಪೆ
ಈ ಪುಣ್ಯಭೂಮಿಗೆ.
ವೀರ ಧೀರರಾಳಿದ
ಭರತ ಭೂಮಿಗೆ,
ಹೆಮ್ಮೆಯಿಂದ ನಮಿಸುವೆ
ಶೌರ್ಯ ಮೆರೆದ ಮಣ್ಣಿಗೆ.

ಹಾಗೇ ಸುಮ್ಮನೆ...



ಮಾಯೆಯಂಥ ಬದುಕಲಿ
ಮನಸಿಗೇನೋ ನೂರು ಹಂಬಲ,
ಬುದ್ಧನಾಗಲು ಬಿಡದ ಮನಸಲಿ
ಕನಸುಗಳ ಸಪ್ತ ಸಾಗರ.
ಭಾವ ರಾಗಗಳ ಮಿಲನದಿ
ಬದುಕೇ ಏನೋ ಸುಂದರ,
ಪ್ರಬುದ್ಧನಾಗಲು ಹಂಬಲಿಸುವ
ಮನಸಿಗಿಲ್ಲುಂಟು ನೂರು ಕಳವಳ.
ಬಿಡದೆ ಕಾಡುವ ಕನಸಿಗೂ
ಬಿಡುವು ಬೇಡಿದೆ ಮನಸೀಗ,
ನೆನಪುಗಳ ಜೊತೆಗಿನ ಪಯಣಕೆ
ಒಲ್ಲೆ ಎಂದಿದೆ ಬದುಕೀಗ.
ಹುಟ್ಟು ಸಾವಿನ ಅನಿವಾರ್ಯದಂತೆ
ಜೊತೆಯಾಗಿದೆ ಮನಸಿನ ತುಮುಲ,
ಯಾಕೋ ಏನೋ ತಿಳಿಯದಾಗಿದೆ
ಈ ಹೊಸ ಬಗೆಯ ತಳಮಳ.
ಭಾವ ಮರೆತ ಕಾವ್ಯವಾಗಿದೆ
ಮನಸು ತನ್ನ ಹಂಬಲಕೆ,
ವಿರಹ ತುಂಬಿದ ಕಾದಂಬರಿಯಂತೆ
ಕಾಡುತಿದೆ ಈ ಬದುಕು ಚಂಚಲ.
ಭರವಸೆ ಬೆರೆತ ಕನಸುಗಳು
ದೂರ ಸರಿದಿವೆ ಸುಮ್ಮನೆ,
ಬದುಕ ಬರೆಯುವ ಪ್ರೀತಿಗೂ
ಹೇಳಬೇಕಿದೆ ಕೈ ಹಿಡಿದು ಮುನ್ನಡೆಸಲು.

29 May, 2014

ಹುಡುಕಾಟ...


ಭಾವನೆಗಳು ಬತ್ತಿದೆದೆಯಲಿ
ಪ್ರೀತಿಯನರಸಿ ಹೊರಟಿರುವೆ
ಸತ್ತ ನರನಾಡಿಗಳಿಗೆ
ಮತ್ತೆ ಚೈತನ್ಯ ತುಂಬುವಾಸೆಯಲಿ.

ಅಘೋರಿಗಳ ಅಜ್ಞಾತವಾಸದಲಿ
ನಿರ್ವಿಕಾರಿ ನಿರ್ದಯಿಗಳೆದೆಗಳಲಿ
ಸತ್ತ ಭಾವನೆಗಳ ಬಡಿದೆಚ್ಚರಿಸುವ
ತುಂತುರು ಸಿಂಚನ ಈ ಪ್ರೀತಿಯ.

ನಂಬಿಕೆಗೆ ಗೋರಿ ಕಟ್ಟಿ
ಅಪನಂಬಿಕೆಯಲೇ ಬದುಕುತ್ತಿರುವ
ಅಜ್ಞಾನಿಗಳೆದೆಯಲ್ಲಿ
ವಿಶ್ವಾಸವ ಬೆಳೆಸುವ ಚಿರಸ್ಮರಣೀಯ ಪ್ರೀತಿಯ.

ದ್ವೇಷದಿಂದ ಕತ್ತಿ ಮಸೆಯುತಿರುವ
ರಕ್ತಕ್ಕಾಗಿ ಹಪಹಪಿಸುತಿರುವ
ಮೂಢ ಮನಸುಗಳಲಿ
ಸ್ನೇಹದಾ ಸಣ್ಣ ಚಿಲುಮೆಯೊಂದ.

ಜಾತಿ ಧರ್ಮಗಳ ಗೋಡೆಯ ಕಟ್ಟಿರುವ
ಮತಾಂಧ ಮನಸುಗಳೊಳಗೆ
ಮಾನವೀಯತೆಯ ತತ್ವ ಬೆಳಗುವ
ನಿತ್ಯ ನೂತನ ಜೀವನ ಪ್ರೀತಿಯ...

ಯಾರವಳು...



ಮನಸಿನೊಳಗಿನ ಭಾವವದು
ಹೇಳಿ ಹುಟ್ಟಲೇ ಇಲ್ಲ,
ಪ್ರೀತಿಯ ಅರ್ಥವದ
ತಾನು ಹುಡುಕುತಿತ್ತು.

ಭುವಿಗೆ ತಾಯಿಯ ಹೆಸರ
ಕೊಟ್ಟಿಹ ಮನಸದು,
ಮನಸ ಕೂಸಿಗೆ ಒಂದು
ಹೆಸರ ಹುಡುಕುತಿತ್ತು.

ಹೆಣ್ತನವ ತುಂಬಿದ ಭಾವವದು
ತನಗೊಂದು ಹೊಸ ಹೆಸರ ಹಂಬಲಿಸುತಿತ್ತು,
ಮನಸ ಆ ಪ್ರೀತಿಗೆ ನಾನು
ಅವಳ ಹೆಸರನ್ನೇ ಇಟ್ಟುಬಿಟ್ಟೆ.

ರೆಕ್ಕೆಬಿಚ್ಚಿ ಹಾರುವ
ಕನಸುಗಳವು ಹರಡಿದವು,
ಮನದಗಲ ಅವಳದೇ ಹೆಸರ
ಜೊತೆಯಲ್ಲಿ ಹೊತ್ತು.

ನಾನೆಂದೂ ಹುಡುಕಲಿಲ್ಲ
ಮನಸ ತುಂಬಿದ ಆ ಭಾವವ,
ಒಲುಮೆಯಾ ಹೆಸರೊಂದ ಬಿಟ್ಟು
ಜೊತೆಯಾಗ ಬಯಸುವ ಜೀವವೊಂದ.

ನನ್ನೊಳಗಿನ ಅವಳು ಅದು
ಬರೀಯ ಸ್ನೇಹವಷ್ಟೇ,
ಸಲುಗೆ ಮೀರದ ಅವಳು
ನನ್ನ ಮನಸ ಪ್ರೀತಿಯಷ್ಟೇ.

ಹುಡುಕಾಟ...


ಪ್ರೀತಿಯ ಮಕರಂ
ವ ಚೆಲ್ಲುತಾ
ನನಗಾಗಿ ಅರಳೋ ಸುಮವದು ಯಾವುದೋ

ತುಟಿಯಂಚಲಿ ಮಿನುಗುವಾ
ನಸುನಗೆಯದು ಯಾವುದೋ


ಕಣ್ಣಂಚಲಿ ನೂರುಭಾವವ ಬೆರೆಸಿದ
ಒಲವ ನೋಟವು ಯಾವುದೋ

ಸುಮ್ಮ ಸುಮ್ಮನೆ ನಗಿಸುವಾ
ನೆನಪ ಕಚಗುಳಿಯದು ಯಾವುದೋ

ನೋವಿಗೆ ನಗುವ ಬೆರೆಸಿ
ಹರಸೋ ಮನಸದು ಯಾವುದೋ

ಮನಸ ತುಂಬುವ ಕನಸಿಗೆ
ಸ್ಪೂರ್ತಿಯ ಸೆಲೆಯದುವು ಯಾವುದೋ

ಎನ್ನೆದೆಯಾ ಸಾಗರದ ಭೊರ್ಗರೆತವ ಮೀರಿ
ಒಡಲ ಸೇರುವ ನದಿಯದು ಯಾವುದೋ.

ದ್ವೇಷ...


ಮುಷ್ಟಿಯಗಲದ ಹೃದಯದೊಳಗೆ
ದ್ವೇಷದ ಬೀಜವ ಬಿತ್ತಿದವರಾರು,
ಹರಿಯುತಿದೆ ನರನಾಡಿಗಳಲಿ
ದ್ವೇಷದ ಬೆಂಕಿಯದು ಅಜ್ಞಾತವಾಗಿ.

ತಿನ್ನುವ ಅನ್ನವದು ಕಲಿಸಿತೆ ಮನುಜಗೆ
ಮಣ್ಣಿನ ಗುಣವದು ಇರಬೇಕಿತ್ತಲ್ಲಾ,
ಸತ್ತರು ಬಿಡದ ದ್ವೇಷದ ಬೆಂಕಿ
ಬೂದಿಯಾಗಬೇಕಿತ್ತು ಮಣ್ಣಿನ ಗುಣದೊಳು.

ಹರಿಯುವ ನೀರದು ಕುಡಿಸಿತೆ ವಿಷವ
ದ್ವೇಷವೆಂಬ ಅಜ್ಞಾನದ ಹಾಲಾಹಲ,
ಕುಂತರೂ ನಿಂತರೂ ಕುದಿಯುವ ಜ್ವಾಲೆಯು
ಆರಿ ಹೋಗಬೇಕಿತ್ತು ನೀರಿನ ಗುಣಕೆ.

ಉಸಿರಾಡೋ ಗಾಳಿಯು ಬೆರೆಸಿತೆ
ಮಂದ ಬುದ್ಧಿಯ ದ್ವೇಷದ ಭಾವವ,
ಹಿಂಸೆಯ ಹರಡುವ ಧೂರ್ತ ಬುದ್ಧಿಯನು
ತಂಪಾಗುವ ಗುಣ ಜೊತೆಗೇ ಇರಲು ಗಾಳಿಯು ತಾನು ಹೇಗೆ ಹರಡೀತು.

ಮಣ್ಣು ಅನ್ನ ನೀರು ಗಾಳಿ ಇವು ಯಾವುವು ಹರಡಲೇ ಇಲ್ಲ
ಮತ್ತೆ ಹೇಗೆ ತಾನೇ ಹರಡುತಿಹುದು ದ್ವೇಷದ ಜ್ವಾಲೆ,
ಮೂಢ ಮನುಜನ ಎದೆ ಎದೆಯೊಳಗೆ
ಪ್ರೀತಿಯ ಕೊರತೆಯ ಕಾರಣವಿದ್ದರೂ ಇರಬಹುದೇ.

28 April, 2014

ನನ್ನೆದೆಯಾ ಹಾಡು...



ಪ್ರತಿ ಕವನವ ಬರೆಯುವೆ
ನಿನ್ನ ಹೆಸರಿಗೆ ಗೆಳತಿ,
ಪದಗಳ ಹಂದರವಲ್ಲ ಅವು
ನನ್ನೊಳಗಿನ ಭಾವಸಂಗಮ.

ಪದಗಳ ಪೋಣಿಸುವ
ಚತುರ ನಾನಲ್ಲ ಹುಡುಗಿ,
ಕನಸುಗಳ ಬೆಸೆದಿರುವೆ
ನಾ ಪದಗಳ ಮರೆಯಲ್ಲಿ.

ಅಕ್ಷರಗಳ ಮಾಲೆ ಜೋಡಿಸಿರುವೆ
ನಿನ್ನ ಎದುರಲ್ಲೇ ಗೆಳತಿ,
ಬರಿಯ ಅರ್ಥವ ಹುಡುಕದಿರು
ನೀ ನನ್ನ ಕನಸುಗಳ ಗರ್ಭದೊಳಗೆ.

ಪ್ರಾಸಗಳ ನಿರೀಕ್ಷಿಸಬೇಡ ಗೆಳತಿ
ನೀ ಎನ್ನ ಕವನದೊಳಗೆ,
ಭಾವನೆಗಳ ಬಂಧಿಸಿರುವೆ
ಈ ಒಲವ ಭಾಷೆಯಲಿ.

ವಿಮರ್ಷಿಸಿ ನೋಡು ಈ ಕಾವ್ಯಗಳ
ಪ್ರೀತಿಯ ಪರಿಧಿಯೊಳಗೆ,
ಗೆಳತಿ ಕಂಡರೂ ಕಾಣಬಹುದು ನಿನಗೆ
ಈ ಜೀವದ ಒಲವ ಮೊರೆತವಿಹುದಲ್ಲಿ.

** ಒಲವಿನ ಭಾಷೆ **



ಮಾಸದ ಕಲೆಗಳಿಗೂ
ನಿನ್ನ ನೆನಪ
ನೆಪವನ್ನಿತ್ತಿದ್ದೇನೆ
ಗೆಳತಿ,
ಕಲೆಗಳೀಗ ಸುಂದರ
ಮನಸು ಮಾತ್ರ
ನಿನ್ನ
ನೆನಪುಗಳ ಹಂದರ.

**********

ನನ್ನ
ನೆನಪುಗಳ
ಮೆರವಣಿಗೆಗೆ
ನೀನು ಸಾರಥಿಯೂ,
ಜನುಮ ಜನುಮದ
ಪ್ರೀತಿಗೆ
ನೀನು ಒಲವಿನ
ಆರತಿಯೂ.

**********

ಪ್ರೀತಿಗಿದು
ಬಾಷ್ಯ
ನಿನ್ನ ಹೆಸರು,
ಒಲವಿಗಿದೆ
ಭಾಷೆ
ಅದೆನ್ನ ಉಸಿರು.

14 April, 2014

**ಹನಿ ಹನಿ ಪ್ರೀತಿಗೆ**



ನೀನೊಪ್ಪಿ
ಅಪ್ಪಿಕೊಂಡಾಗ
ಸ್ವರ್ಗಕ್ಕೆ ಮೂರೇ ಗೇಣು,
ಹೃದಯವದು
ಮಿಡಿಯುತ್ತಿತ್ತು
ಒಲವಿದುವೇ
ಪಂಚಮವೇದವೆಂದು.

**********

ಅಕ್ಷರಗಳ ಹೆಕ್ಕಿ
ಪದಗಳ ಪೋಣಿಸಿದೆ
ಒಲವಿನ ಹಾರವಿದು
ನಿನಗಾಗಿ ಕಾಯುತಿದೆ
ಧರಿಸಿ ನಸುನಗೆಯ ಬೀರು
ಓ ಒಲುಮೆಯ ಚಿಲುಮೆಯೇ.

**********

ಬರೆದಿದ್ದು
ನಿನ್ನ ಪ್ರೀತಿಗೆ
ಅರಳಿದ್ದು
ಮಾತ್ರ ನನ್ನ
ಭಾವ ಕುಸುಮ
ನಿನ್ನೊಲವ
ರಾಶಿ ಕನಸಿಗೆ.

ಹೆಣ್ಣೆಂದರೇ...



ಆದಿಶಕ್ತಿಯ ಅಂಶಯಿವಳು
ಯೋಗ ಮಾಯೆಯಾ ತಂಗಿಯಿವಳು
ಮಾಯೆಯೆಂದೇ ಮೊದಲು ಪೂಜಿಸುವೆ
ಓ ಸ್ತ್ರೀ ಶಕ್ತಿರೂಪಿಣಿಯೇ.

ತಾಯಿಯಾಗಿ ಜಗವ ಪೊರೆವೆ
ಮಮತಾಮಯಿ ನೀ ಓ ಪ್ರೀತಿಯ ಕಡಲೇ
ಕೋಟಿ ಕೊಟ್ಟರೂ ಕೊಳ್ಳಲಾಗದು ನಿನ್ನ ಒಲವನು
ಋಣವನೆಂದೂ ತೀರಿಸಲಾರೆ ಓ ಮಾತೃದೇವತೆಯೇ.

ಸಹೋದರಿಯಾಗಿ ಮತ್ತೆ ಜೊತೆಯಾಗುತ
ಪ್ರೀತಿಯಲಿ ಒಡಲ ತುಂಬುವೆ
ಮೊದಲ ಸ್ನೇಹಿತೆ ನೀನೇ ಎಂದಿಗೂ
ಈ ಮನುಜ ಜೀವಿಗೆ.

ಮಡದಿಯಾಗಿ ಕೈಯ ಹಿಡಿಯುವೆ ಯೌವನಕೆ
ತಾಯ ಪ್ರೀತಿಯ ತೋರಿ ನಿಲ್ಲುತಾ
ಬಾಳು ಬೆಳಗುವೆ ಉಸಿರಿಗೆ ಉಸಿರಾಗಿ
ಕೊನೆಯವರೆಗೂ ಜೊತೆಯಾಗಿ ನಿಲ್ಲುವಾ ವಾಗ್ದೇವಿಯಾಗುವೆ.

ಮಗಳಾಗಿ ಬರುವೆ ನೀನು ಮತ್ತದೇ ಪ್ರೀತಿಗೆ
ಕೊಟ್ಟ ಪ್ರೀತಿಯ ಮರಳಿ ಪಡೆಯುವಾ ಹಂಬಲದಂತೆ
ಮಗುವಾಗಿ ನಲಿದು ಗೆಳತಿಯಂತೆ ಜೊತೆಯಾಗಿ ನಿಲ್ಲುವೆ
ಮುಗ್ಧತೆಯಲಿ ಮೈ ಮರೆಸುತಾ ಜೀವನ ಪಾಠ ಕಲಿಸುವೆ.

ಸೃಷ್ಟಿಯ ಪೊರೆವ ಓ ದೈವ ಶಕ್ತಿಯೇ
ಪ್ರಕೃತಿಯಾಗಿ ಬಾಳ ಬೆಳಗುವ ನಿತ್ಯ ಚೇತನವೇ
ಮಾಯೆಯೆನ್ನದೆ ಹೇಗೆ ಹೊಗಳಲಿ
ಓ ದೈವಸ್ವರೂಪಿಣಿಯೇ.

** ಕಡಲು **



ಕಡಲೊಳಗೆ
ಹರಿಯುತಿವೆ
ಸಾವಿರ ನದಿಗಳು
ಗುಪ್ತಗಾಮಿನಿಯರಾಗಿ,
ಪ್ರತಿ ಹೆಣ್ಣಿನ ಮನಸೊಳಗೆ
ತಾಯ್ತನದ ಭಾವವದು
ಸುಪ್ತವಾಗಿರುವಂತೆ.

**********

ತವರು ತೊರೆದು
ಸಾಗರ ಸೇರಿದ
ಸಾವಿರ ನದಿಗಳ
ಕಣ್ಣೀರಿಗೆ
ಶರಧಿಯ
ಮಡಿಲಾಯ್ತು
ಉಪ್ಪು.

12 March, 2014

** ದ್ವಂದ್ವ **



ಮನಸ ಆವರಿಸಿದೆ ಯಾಕೋ
ಬುದ್ಧನ ಶಾಂತಿಯ ಮಂತ್ರ,
ನೆಲದ ಮಹಿಮೆಯೋ ಅರಿಯಲಾರೆ
ಆಗುತ್ತಿರುವೆ ನಾನೇತಕೋ ಅದಕೇ ಬದ್ಧ.

ಬುದ್ಧನಿದ್ದ ನಾಡಿನಲ್ಲಿ
ಜನಿಸಿದ ವಿವೇಕನು,
ಸ್ವಾಭಿಮಾನಿಯಾದ ಕಿಚ್ಚಿನ ಕಿಡಿಯಾದ
ಪುರುಷ ಸಿಂಹನವನು.

ಮೈಗೂಡಲಿಲ್ಲ ಏಕೋ ಕಾಣೆ
ಕಿಚ್ಚಿನ ಸ್ವಭಾವವದು ಜೊತೆಯಲ್ಲಿ,
ಕಿವಿಗಳವು ಕೇಳಿದರೂ
ಬಗ್ಗಲಿಲ್ಲ ಮನಸೇಕೋ ಸ್ವಾಭಿಮಾನದ ನುಡಿಗೆ.

ಬುದ್ಧನಾದರೂ ಸಿದ್ಧನಾಗಬೇಕಿದೆ
ನಾಳೆಯ ಬದುಕಿನ ಕಡೆಗೆ,
ಕಿಡಿಯೊಂದ ಹೊತ್ತಿಸಬೇಕಿದೆ
ಸ್ವಾಭಿಮಾನದ ನಡಿಗೆಗೆ.

ಬೇಕಿದೆ ಮನಸಿಗೀಗ
ಎಂದೂ ಆರದ ಗಾಯ,
ಸ್ವಾಭಿಮಾನದ ಕಿಚ್ಚು ಹಚ್ಚುವ
ನಿತ್ಯ ನಿರಂತರ ಭಾವ.

ಇದು ಹೃದಯದ ಮಾತು...



ಹೃದಯದ ಗೋಡೆಯ ತುಂಬಾ
ಪ್ರೀತಿಯ ಚಿತ್ರಗಳೇ,
ಮೂಡಿಸಿದೆ ಈಗ
ಮನಸ ಹಾಳೆಯ ತುಂಬಾ
ನೆನಪುಗಳ ಚಿತ್ತಾರ.

**********

ಹೃದಯದ ಗೂಡಿನ ಒಳಗೆ
ನೂರೆಂಟು ಭಾವನೆಗಳ ಕಲರವ
ಕನಸನು ಹೊಸೆದು ಪ್ರೀತಿಯ ಹಕ್ಕಿ
ಉಲಿಯಬಹುದೇ
ಒಲವಿನ ಕುಹೂ ಕುಹೂ.

**********

ಹೃದಯ ಮಂದಿರದಿ
ಢವ ಢವ ಘಂಟಾನಾದ
ಎದೆಗೆ ಕಿವಿಯಾನಿಸಿ ನೋಡು
ಕೇಳುತಿಹುದಲ್ಲಿ
ಪ್ರೀತಿಯ ಸುಮಧುರ ನಾದ.

ಅವಳ ಒಲವಿಗೆ...



ಬರೆಯುವೆ ನಾ
ಕವಿತೆಗಳ
ನಿನ್ನ ಹೆಸರಿಗೆ
ಕಾರಣವಿಷ್ಟೆ
ಅವಕ್ಕೂ ಬೇಕಿದೆ
ನಿನ್ನೊಲವು ಅಷ್ಟೆ.

**********

ಚಂದ್ರ ತಾನು
ಕರಗುತಿರುವ
ನಿನ್ನ ನೋವಿಗೆ
ಗೆಳತಿ,
ನೀನು ನಕ್ಕರೆ
ತಾನು ನಲಿವ
ಪೂರ್ಣ ಹೊಳಪಲಿ.

**********

ಕನಸುಗಳಿಗೆ
ನಾನು
ಕಾವಲಾಗುವೆ
ಹುಡುಗಿ,
ನೆನಪುಗಳಿಗೆ
ನೀನು
ಬೇಲಿಯಾಗುವೆಯಾದರೆ.

20 February, 2014

** ಅಂತಃಕಲಹ **



ನಿದಿರೆಯಿಲ್ಲದ ಕಂಗಳಿಗೆ
ಕನಸು ದೂರಾದಂತೆ
ನಿರಾಸೆ ತುಂಬಿದ ಮನಸೊಳಗೆ
ಭಾವನೆಗಳು ಮರೆಯಾಗುತಿವೆ.

**********

ಚಿಂತೆಯೊಂದು ಚಿತೆಯಾಗಿರಲು
ನೂರು ಕನಸುಗಳ
ಜೊತೆಯಿದ್ದರೇನು
ಉರುವಲುಗಳಾಗಿ
ಉರಿದು ಹೋಗುತಿಹವು
ಬದುಕ ಭರವಸೆಗಳೆಲ್ಲವೂ.

**********

ಮನಸು ಮನಸೊಳಗೆ
ದ್ವೇಷವದು ತುಂಬಿರಲು
ಹೂವು ಕೂಡ ಹಾವಾಗಬಹುದು
ನಂಬಿಕೆಯ ಮಾತೆಲ್ಲಿ ಬಂತು
ಅನುಮಾನದ ಬದುಕಲ್ಲಿ.

** ಚಂದ್ರಿಕೆ **



ಚಂದ್ರನು ಚೆಲ್ಲಿದ ಬೆಳದಿಂಗಳ
ಒನಪು ನನ್ನವಳು,
ಹನಿ ಹನಿ ಪ್ರೀತಿಯ ಸೇರಿಸುತಾ
ಸಾಗರವಾದವಳು.

ಬದುಕಲಿ ಸುಂದರ ಕನಸುಗಳ
ಪೋಣಿಸಿ ನಿಂದವಳು,
ಪ್ರೀತಿಯ ಭಾವವ ಚಿಮ್ಮಿಸುತಾ
ಅವ್ಯಕ್ತ ಭಾವನೆ ತಾನಾದವಳು.

ಉಸಿರಿಗೆ ಮಿಡಿಯುವ ಮನಸಾಗಿ
ಜೊತೆಯಲಿ ಬಂದವಳು,
ಉಲಿಯುವ ಪ್ರತಿ ನುಡಿಗಳಲೂ
ಪ್ರೀತಿಯಾಗಿ ಬೆರೆತವಳು.

ಕಾಮನಬಿಲ್ಲಿನ ಬಣ್ಣಗಳಿಗೂ
ಅರ್ಥವ ನುಡಿದವಳು,
ಮನಸಿನ ಭಾವವ ಬೆಳಗಿಸಿದ
ಕೋಲ್ಮಿಂಚು ನನ್ನವಳು.

ಯೋಗಿಗೆ ಪ್ರೀತಿಯ ಬೋಧಿಸಿದ
ಜೋಗತಿ ನನ್ನವಳು,
ಹೆಸರನು ಉಸುರದೆ ಜೊತೆಯಾದ
ಜೀವವು ನನ್ನವಳು.

ನೂರು ನೋವಲೂ ಸುಮ್ಮನೆ ನಗುವ
ಚಂದ್ರಿಕೆ ನನ್ನವಳು,
ನಾ ನಕ್ಕರೆ ಜೊತೆಯಾಗಿ
ಅರಳೋ ಸುಮ ಇವಳು.

ಅಭಿಮಾನಕ್ಕೊಂದು ಕವಿತೆ...



ನೀನೊಂದು ಸುಂದರ ಕಾವ್ಯ ಗೆಳೆಯಾ
ನಿನ್ನೊಳಗಿನ ಭಾವವಷ್ಟೇ ನಾನು,
ನೂರು ಪದಗಳ ಹಂದರ ನೀನು
ಪ್ರೀತಿಯ ಒಂದು ಪದವಷ್ಟೇ ನಾನು.

ಕವಿತೆಯಾಗಲಾರೆ ನಾನೆಂದೂ
ನಿನ್ನ ಒಲವ ಹೊರತಾಗಿ,
ನೀನೊಂದು ಕಥೆಯಾದರೂ ಸರಿಯೇ
ಜೊತೆಗಿರುವೆ ನಾ ನಿನ್ನೊಳಗೆ.

ಕವಿತೆಯಾಗಿದ್ದು ನಾನಲ್ಲ
ನಿನ್ನೊಳಗಿನ ಆ ಸುಂದರ ಭಾವ,
ನಿನ್ನೊಲವು ಜೊತೆಗಿರಲು
ಇನಿತು ನಾನೇ ಧನ್ಯ.

ನೀ ಎನ್ನ ಅಭಿಮಾನಿ
ನಾ ನಿನ್ನಯ ಪ್ರೇಮಿ
ಈ ಸ್ನೇಹದ ಬೆಸುಗೆಯಲಿ,
ಪ್ರೀತಿಯ ಹೆಸರಿಡಲೇ ಈ ಅನುಬಂಧಕೆ.

ಬಂಧನವಾಗದಿರಲಿ ಈ ಭಾವ
ಕವಿತೆಯಾದರೂ ಸರಿಯೇ,
ಕಾದಂಬರಿಯಾಗಿಸದಿರುನನ್ನ
ನಿನ್ನ ಪ್ರೀತಿ ಜೋಳಿಗೆಯಲಿ.

**ಮೂರು ಹನಿಗಳು**


ದೇಹವೆಂಬ ಗರ್ಭಗುಡಿಯೊಳು
ಆತ್ಮವೆಂಬ ದೇವನಿರುವನು,
ಆತ್ಮಸಾಕ್ಷಿಯೆಂಬುದೇ ನಿತ್ಯ ಪೂಜೆಯವಗೆ
ತಿಳಿಯೋ ಮೂಢ ಮನವೇ.

**********

ಸಂತನೆದೆಯೊಳಗೂ
ಒಲವು ತುಂಬಿದೆ ನೋಡ
ಅಂತಿಂಥ ಪ್ರೀತಿಯಲ್ಲವದು,
ನಾಳೆಯ ಭರವಸೆಯ ಜೀವನ ಪ್ರೀತಿ
ಜಗದ ಕತ್ತಲ ಕಳೆಯೋ ಜ್ಯೋತಿಯದು.

**********

ಕತ್ತಲ ಕೊಂದ ಸೂರ್ಯನಿಗೆ
ಪ್ರತಿದಿನ ಲೋಕ ಬೆಳಗುವ ಸಜೆ
ಇರುಳನು ತಂಪಾಗಿಸಿದ ಚಂದ್ರನಿಗೆ
ಅಮಾವಾಸ್ಯೆಯೆಂಬ ರಜೆ,
ನನ್ನೊಳಗೆ ಅನುಮಾನ
ಇರಬಹುದೇ ಕಾರಣ
ಸೂರ್ಯ ಕ್ರಾಂತಿಕಾರಿ
ಚಂದ್ರ ಮಂದಗಾಮಿ.

24 January, 2014

ತಾಯಿ ಭಾರತಿ ನಮೋಸ್ತುತೆ...



ಹಿಮಾಲಯವನೆ ಮುಕುಟವಾಗಿಸಿ
ಗಂಗೆ ತುಂಗೆಯನೆ ಧರಿಸಿಹ ಮಹಾಮಾಯೆ ನೀನು
ಜಗಕೆ ಶಕ್ತಿಯಾಗಿ ನಿಂತಿಹ ನಿನಗಿದೋ ಶರಣು.

ನೂರು ಭಾಷೆಗಳ ಒಡಲಲ್ಲಿ ತುಂಬಿ ನಿಂತಿಹೆ
ಹತ್ತಾರು ಧರ್ಮಗಳ ಜನನಿ ನೀನು
ಶಿರಬಾಗಿ ನಮಿಪೆನು ತಾಯಿ ಭಾರತಿಯೇ.

ಜಗದಗಲ ವಿಶ್ವ ಶಾಂತಿಯ ತೋರಿ
ಸೌಮ್ಯಭಾವದಿ ನಿಂತ ಮಹಾಮಾತೆ
ಕರಮುಗಿದು ನಮಿಸುವೆನು ಶಾಂತಿಧಾತೆಯೆ.

ಮಹಾಪುರುಷರ ಜನನಿ ನೀನು
ಮಹಾಕಾವ್ಯಗಳಿಗೆ ಗರ್ಭವೂ ನೀನು
ತುತ್ತರಸಿ ಬಂದವರ ಸಲಹಿದ ಮಹಾಮಾತೆಗಿದೋ ನಮನ.

ಕೋಟಿ ಸೂರ್ಯರ ಪ್ರಭೆಯು ನೀನು
ನೂರು ಚಂದ್ರರ ಶೀತಲತೆಯು ನೀನು
ಮಮತೆಯನು ಮೆರೆದ ವಿಶ್ವಮಾತೆಗಿದೋ ನಮನ.

ಕೋಟಿ ದೇವರುಗಳ ಹೊತ್ತವಳೆ ಮಾತೆ
ಮೇರುಗಿರಿ ಶಿಖರಗಳ ಉಟ್ಟವಳು ನೀನು
ಜಗದಾದಿ ವಂದ್ಯಳೇ ಆದಿಶಕ್ತಿಗಿದೋ ನಮನ.

ಓ ಮನುಜಾ...



ಬಣ್ಣವಿಲ್ಲದ ಹರಿಯುವ ನೀರಿಗೆ
ಅಂದ ಚಂದದಾ ಹೆಸರನ್ನಿಟ್ಟೆ,
ಬದುಕುವ ಒಂದೇ ಭುವಿಯಲಿ
ಈ ಗಡಿಗಳ ಯಾಕೆ ಕೊರೆದಿಟ್ಟೆ.

ಎಲ್ಲರು ಒಂದೇ ಎನ್ನುವ ನೀನು
ಮತ ಪಂಥಗಳ ಗೋಡೆಯನೇ ಕಟ್ಟಿಸಿದೆ,
ನಿನ್ನಲ್ಲೇ ಇರುವ ದೇವರುಗಳನು
ಕಲ್ಲು ಮಣ್ಣುಗಳಲಿ ಬಂಧಿಸಿದೆ.

ಜಾತಿಯಲೇನೊ ಒಡೆದಿಹೆ ನೀನು
ನಿನ್ನಯ ಸ್ವಂತ ಕುಲವನ್ನೇ,
ಭಾಷೆಯ ಮೇಲ್ಯಾಕೆ ಮತ್ತೆ ಒಡೆಯುವೆ
ನಿನ್ನಯ ಕರುಳು ಸಂಬಂಧಗಳ.

ಯಾರೂ ಅರಿಯದ ರೀತಿ ನೀತಿಗಳಲಿ
ನಿನ್ನಯ ನೀನೇ ಬಂಧಿಸಿದೆ,
ನಿನ್ನಯ ಅಹಂಮ್ಮಿನ ಕಾರಣಕೇನು
ಸೃಷ್ಟಿಯ ನೀನು ಹಂಗಿಸಿದೆ.

ಪ್ರಕೃತಿಯ ಹಂಗಲ್ಲಿ ನೀನು ಬದುಕಿರುವೆ
ತಿಳಿದುಕೋ ಮೊದಲು ಓ ಮನುಜ,
ಸ್ವಾರ್ಥದಿ ಏತಕೆ ಬಾಳುವೆ ಹೇಳು
ನಿನಗಿರುವುದು ಇಲ್ಲಿ ಮೂರೇ ದಿನ.

ಜೀವನ ಪ್ರೀತಿಯಾಗಬೇಕು...





ತುತ್ತು ಅನ್ನಕೆ ಪರದಾಡುವ
ಜನರ ಹಸಿವು ನೀಗಬೇಕು,
ಉಸಿರ ತುಂಬುವ ಅನ್ನಕೆ
ಬೆಳೆವ ಹೊಲವಾಗಬೇಕು.

ನೂರು ನೋವುಗಳಿಗೆ ಬಲಿಯಾಗಿಹ
ಜೀವಗಳ ಜೀವನಾಡಿಯಾಗಬೇಕು,
ಕರಗಿದ ಕನಸುಗಳಿಗೆ ಜೀವ ತುಂಬುವ
ಹೊಂಗನಸು ನಾನಾಗಬೇಕು.

ಅಜ್ಞಾನದ ಕೊಳೆ ಕಳೆಯಲು
ಸುಜ್ಞಾನದ ಬೆಳಕ ಹರಿಸಬೇಕು,
ಅಂಧಕಾರವ ದೂರಮಾಡುವ
ಪ್ರಣತಿಯ ಜ್ಯೋತಿಯಾಗಬೇಕು.

ತುಂಬಿತುಳುಕುತ್ತಿರುವ ಮೌಢ್ಯತೆಯ
ಕಸವ ಗುಡಿಸಬೇಕು,
ಮನದಂಗಳವ ಶುಚಿಯಾಗಿಸೆ
ವಿವೇಕದ ಬರಳು ನಾನಾಗಬೇಕು.

ಭಾವನೆಗಳೇ ಬರಿದಾದ ಎದೆಗಳಲಿ
ಮನುಜತೆಯ ಬೆಳಗಬೇಕು,
ಬದುಕ ರೂಪಿಸುವ ನಂಬಿಕೆಯಲಿ
ಜೀವನ ಪ್ರೀತಿ ನಾನಾಗಬೇಕು.

11 January, 2014

ಸ್ವಾರ್ಥದ ಪರಿಧಿಯ ಮೀರಿ...



ದೂರ ದಿಗಂತದಾಚೆ ಸರಿದು
ಚುಕ್ಕಿಗಳ ಲೋಕದಲಿ ಮಿನುಗುವಾಸೆ,
ಯಾರೂ ಇರದ ಆ ಲೋಕದಲಿ
ಪುಟ್ಟ ಗೂಡು ಕಟ್ಟುವಾಸೆ.

ಮತ್ತೆ ತಿರುಗಿ ನೋಡಿದರಲ್ಲಿ
ಸ್ವರ್ಗ ಸದೃಶ ಈ ಧರೆಯು,
ಹಿಂತಿರುಗಿ ಬರುವ ಆಸೆ ನನ್ನವರ ನೋಡಲು
ಮನಸೇಕೋ ಅಂಜುತಿದೆ ಇರುವ ಜಂಜಡಗಳ ನೆನೆದು.

ಏಕಾಂಗಿಯಾಗೇ ಇರಬಲ್ಲೆ ಉಸಿರು ಇರುವವರೆಗೂ
ಬೆರೆಯಲಾರೆ ನಾ ಸ್ವಾರ್ಥದಲೆಗಳ ನಡುವೆ,
ಏನೂ ಅರಿಯದ ಮುಗ್ಧತೆ ನನದಲ್ಲ
ಆದರೂ ಅಳುಕುತಿದೆ ಮನಸು ಗೋಮುಖ ವ್ಯಾರ್ಘಗಳ ನೆನೆದು.

ಸ್ವಾರ್ಥದ ಮನೆಯಂಗಳದೊಳು
ನಂಬಿಕೆಯ ಹೂವು ಅರಳಬಲ್ಲುದೇ,
ನಂಬಿಕೆಯಿಲ್ಲದ ಬದುಕು
ಸಿಹಿಯ ಫಲವ ನೀಡುವುದೇ.

ಚುಕ್ಕಿ ಚಂದ್ರಮರ ಮಂದ ಬೆಳಕೇ ವಾಸಿ
ಸ್ವರ್ಗಸದೃಶ ಭುವಿಯೊಳಗಿನ ನರಕಕ್ಕಿಂತ,
ಪ್ರೀತಿಯಿರದಿದ್ದರೂ ಸರಿಯೇ
ಸ್ವಾರ್ಥದ ನೆರಳಿಲ್ಲದ ಸಾರ್ಥಕತೆಯಿದ್ದರೆ ಸಾಕು.

ಹಂಗೇತಕೆ...



ಎದೆಹಾಲಲೇ ಪ್ರೀತಿಯಿತ್ತವಳು ಹೆತ್ತತಾಯಿ
ಶಾಂತಿಮಂತ್ರವ ಕಲಿಸಿದ ಮೊದಲಗುರು,
ಏತಕೆ ಬೇಕು ಬುದ್ಧ ಗಾಂಧಿಯ
ಶಾಂತಿ ಅಹಿಂಸೆಯ ತತ್ವದ ಹಂಗು.

ಹಸಿದ ಹೊಟ್ಟೆಗೆ ತುತ್ತು ನೀಡಿದ್ದು
ಅಪ್ಪನ ಬೆವರ ಹನಿ,
ಯಾತಕೆ ಬೇಕು ಹಸಿವು ನೀಗದ
ಜಾತೀಯತೆಯ ಹಂಗು.

ಪ್ರೀತಿಯನ್ನೇ ದೇವರಾಗಿಸಿಹೆನು
ಹೃದಯ ಮಂದಿರದಲ್ಲಿ,
ಕೋಟಿ ದೇವತೆಗಳ ಕರೆದು
ಅವಮಾನಿಸಲೇಕೆ ನಾನಿಲ್ಲಿ.

ಧರ್ಮ ಮಾರ್ಗದಲಿ ನಡೆಯಲು
ಸಂಸ್ಕೃತಿಯು ಜೊತೆಯಿರಲು,
ನೂರು ನಾಯಕರ ಮಾರ್ಗದರ್ಶನವಂತೆ
ಹಂಗೇತಕೆ ಬೇಕೆನಗೆ ಬಾಳಿ ಬದುಕೋಕೆ.

ಕಲ್ಲು ಬಂಡೆಯನೇ ಕರಗಿಸುವುದಂತೆ
ಈ ಜೀವನ ಪ್ರೀತಿ,
ಬರಿದಾದ ಎದೆಗಳಲಿ ಮನುಜತೆಯ ಬೆಳಗಲು
ಕ್ರಾಂತಿಯ ಹಂಗೇತಕೆ ಎನಗೆ.